ನಕ್ಸಲ್‌ ದಾಳಿಯಲ್ಲಿ ತಂದೆಯನ್ನ ಕಳಕೊಂಡಿದ್ದವಳೀಗ ವೈದ್ಯೆ

By Suvarna NewsFirst Published Jan 30, 2023, 5:29 PM IST
Highlights

ನಕ್ಸಲ್‌ ದಾಳಿಯಲ್ಲಿ ಡಾ.ಭಾರತಿ ತಂದೆ ಅಕಾಲಿಕ ಸಾವಿಗೆ ತುತ್ತಾಗಿದ್ದರು. ವೈದ್ಯರ ಸೇವೆಯಿಲ್ಲದೆ ಇಂತಹ ಅನರ್ಥಗಳು ಸಂಭವಿಸಬಾರದೆಂದು ವೈದ್ಯಕೀಯ ಶಿಕ್ಷಣ ಪಡೆದು ನಕ್ಸಲ್‌ ಪೀಡಿತ ತವರು ಪ್ರದೇಶದಲ್ಲೇ ಈಗ ಸೇವೆ ಸಲ್ಲಿಸುತ್ತಿದ್ದಾರೆ.

ನಕ್ಸಲ್‌ ದಾಳಿಯಲ್ಲಿ ಈಕೆಯ ತಂದೆ ಮಾಲು ಕೋಪ ಬೊಗಾಮಿ ಸಾವಿಗೀಡಾದಾಗ ಈಕೆಗಿನ್ನೂ 17ರ ಹರೆಯ. ಹಿಂದಿನ ದಿನವಷ್ಟೇ ಹೈಯರ್‌ ಸೆಕೆಂಡರಿ ಪರೀಕ್ಷೆ ಮುಗಿದಿತ್ತು. ಮಾರನೆಯ ದಿನ ಈ ಅವಘಡ ಸಂಭವಿಸಿಬಿಟ್ಟಿತ್ತು. ಆದರೆ, ಈ ದುರ್ಘಟನೆ ಈಕೆಯನ್ನು ಗುರಿಯಿಂದ ವಿಚಲಿತಳನ್ನಾಗಿ ಮಾಡಲಿಲ್ಲ. ಬದಲಿಗೆ ಇನ್ನಷ್ಟು ಸದೃಢಗೊಂಡಿತು. ಪರಿಣಾಮವಾಗಿ, ತಾನು ಹುಟ್ಟಿ ಬೆಳೆದ, ತನ್ನ ತಂದೆ ಮೃತರಾದ, ನಕ್ಸಲ್‌ ರೆಡ್‌ ಲೈಟ್‌ ಏರಿಯಾ ಎಂದು ಗುರುತಿಸಲ್ಪಟ್ಟ ಪ್ರದೇಶದಲ್ಲೇ ಈಗ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು, ಮಹಾರಾಷ್ಟ್ರದ ಗಡ್‌ ಚಿರೋಲಿ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಭಾರತಿ ಬೊಗಾಮಿ. ತಮ್ಮ ಪತಿ ಡಾ. ಸತೀಶ್‌ ತಿರಂಕರ್‌ ಅವರೊಂದಿಗೆ ನಕ್ಸಲ್‌ ಪೀಡಿತ ಬುಡಕಟ್ಟು ಪ್ರದೇಶದಲ್ಲಿ ಆರೋಗ್ಯ ಸೇವೆ ಸಲ್ಲಿಸುತ್ತಿದ್ದಾರೆ. ಕಷ್ಟಕಾಲದಲ್ಲಿ ಈಕೆಗೆ ಸಹಾಯ ಮಾಡಿ ಹಾಗೂ ಮನಸ್ಥೈರ್ಯ ತುಂಬಿದವರು ಬಾಬಾ ಅಂಪ್ಟೆ. ತಂದೆ ಸಾವಿಗೀಡಾದ ಬಳಿಕ ಎದುರಾದ ಹಣಕಾಸಿನ ಸಮಸ್ಯೆಗಳನ್ನೆಲ್ಲವನ್ನೂ ಎದುರಿಸಿದ ಭಾರತಿ ತಮ್ಮದೇ ಬುಡಕಟ್ಟು ಸಮುದಾಯಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ.

ಪತಿಯೊಂದಿಗೇ ತವರು ಪ್ರದೇಶದಲ್ಲಿ ಸೇವೆ 
ವೈದ್ಯರಾಗಿ (Doctor) ನಗರ (City) ಪ್ರದೇಶದಲ್ಲಿ ತಮ್ಮದೇ ವೃತ್ತಿ (Professional) ಮಾಡಿಕೊಂಡು ಹಾಯಾಗಿ, ಸುರಕ್ಷಿತ ಬದುಕನ್ನು ಬಾಳುವ ಎಲ್ಲ ಅವಕಾಶವಿದ್ದಾಗ್ಯೂ ಭಾರತಿ ಅವರು ಬುಡಕಟ್ಟು ಪ್ರದೇಶದಲ್ಲಿ (Tribal Area) ನೆಲೆ ನಿಂತಿರುವುದು ಅಪರೂಪವೆನಿಸುತ್ತದೆ. ಮದುವೆಯಾದ (Marriage) ಬಳಿಕವೂ ಇವರ ಗುರಿ (Aim) ಬದಲಾಗಲಿಲ್ಲ. ಸಮುದಾಯಕ್ಕೆ ಸೇವೆ (Community Service) ಸಲ್ಲಿಸುವ ಉದ್ದೇಶಕ್ಕೆ ವೈವಾಹಿಕ ಬದುಕು ಅಡ್ಡಿಯಾಗಲಿಲ್ಲ. ತಮ್ಮೊಂದಿಗೆ ಪತಿಯನ್ನೂ (Husband) ಈ ಪ್ರದೇಶಕ್ಕೆ ಕರೆತಂದು ಇಬ್ಬರೂ ಜತೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಡಾ.ಭಾರತಿ ಅವರು ಬೀಡ್‌ (Beed) ಜಿಲ್ಲೆಯ ಡಾ. ಸತೀಶ್‌ ಅವರನ್ನು ವಿವಾಹವಾದರು. ಅಂದಿನಿಂದ ಇಬ್ಬರೂ ಗಢ್ ಚಿರೋಲಿ (Gadchiroli) ಜಿಲ್ಲೆಯ ಭಮ್ರಗಢ ತಾಲೂಕಿನ ಮರಕ್ನಾರ್ (Maraknar) ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ. ಇದು ಏಳು ಕುಗ್ರಾಮಗಳನ್ನು ಒಳಗೊಂಡ ಆರೋಗ್ಯ ಕೇಂದ್ರವಾಗಿದೆ. ವೈದ್ಯರಾದ ಮೇಲೆ ಎಲ್ಲಾದರೂ ಸೇವೆ ಸಲ್ಲಿಸುವುದು ಅನಿವಾರ್ಯ. ಆದರೆ, ಇವರು ಕುಗ್ರಾಮವನ್ನೇ ಆರಿಸಿಕೊಂಡು, ಸಮುದಾಯಕ್ಕೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಸುತ್ತಮುತ್ತಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಸೇವೆ ಸಮರ್ಪಕವಾಗಿಲ್ಲ. ಹೀಗಾಗಿ, ಈ ವೈದ್ಯ ದಂಪತಿ ಹೆಚ್ಚುವರಿ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. 

ಗರ್ಭಕಂಠದ ಕ್ಯಾನ್ಸರ್‌ನಿಂದ ಪ್ರತಿ ವರ್ಷ 74,000ಕ್ಕೂ ಹೆಚ್ಚು ಮಹಿಳೆಯರು ಸಾವು

ಮಲೇರಿಯಾ ಪ್ರಕರಣ ಹೆಚ್ಚು
ಗಢ್‌ ಚಿರೋಲಿ ಹಾಗೂ ಭಮ್ರಗಢ ಗ್ರಾಮಗಳು ಮಲೇರಿಯಾದಿಂದ (Malaria) ಬಸವಳಿದಿವೆ. ಮಲೇರಿಯಾ ಈ ಪ್ರಾಂತ್ಯದಲ್ಲಿ ಗರಿಷ್ಠ ಪ್ರಮಾಣದಲ್ಲಿ ಕಂಡುಬರುತ್ತದೆ. ಪ್ರತಿವರ್ಷ ಇಡೀ ಮಹಾರಾಷ್ಟ್ರ ರಾಜ್ಯದಲ್ಲಿ ಅತಿ ಹೆಚ್ಚು ಮಲೇರಿಯಾ ವರದಿಯಾಗುವುದು ಇಲ್ಲಿಂದಲೇ. ಹಾವು, ಚೇಳು ಕಚ್ಚುವ ಅವಘಡಗಳೂ ಇಲ್ಲಿ ಸಾಮಾನ್ಯ. ಬುಡಕಟ್ಟು ಜನರಿಗೆ ಹಾವು, ಚೇಳುಗಳು ಹೊಸದಲ್ಲ. ಆದರೆ, ಮೊದಲೆಲ್ಲ ಇಲ್ಲಿ ವೈದ್ಯರಿದ್ದರೂ ಸೇವೆ ಅಲಭ್ಯವಾಗಿತ್ತು. ಇದೀಗ, ಡಾ.ಭಾರತಿ ದಂಪತಿ ಈ ಭಾಗದಲ್ಲಿ ಅನುಪಮ ಸೇವೆ ಸಲ್ಲಿಸುವ ಮೂಲಕ ಮನೆಮಾತಾಗಿದ್ದಾರೆ. 

ನಾನು ಬದುಕೋದು ಆರೇ ತಿಂಗಳು, ಅಪ್ಪ ಅಮ್ಮನಿಗೆ ಹೇಳಬೇಡಿ ಪ್ಲೀಸ್, 6 ವರ್ಷದ ಬಾಲಕನ ಮಾತಿಗೆ ಡಾಕ್ಟರ್ ಕಣ್ಣೀರು!

ಮೂಲಸೌಕರ್ಯವಿಲ್ಲದ ಊರು
ಡಾ.ಭಾರತಿ ಮೂಲತಃ ಭಮ್ರಗಢ ತಾಲೂಕಿನ ಲಹೇರಿ (Laheri) ಗ್ರಾಮದವರು. 2011ರಲ್ಲಿ ಪುಣೆಯ ಬಿಎಸ್‌ ಡಿಟಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯ ಇಂಟರ್ನ್‌ ಷಿಪ್‌ ಮುಗಿಸುತ್ತಲೇ ತಮ್ಮ ತವರಿಗೆ (Home) ಮರಳಿದರು. ಮೊದಲು, ಆಶ್ರಮಶಾಲೆಗಳಿಗೆ ನಿಯೋಜನೆಗೊಂಡಿದ್ದರು. ಬಳಿಕ, ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದರು. ಇಲ್ಲಿಗೆ ಸರಿಯಾಗಿ ರಸ್ತೆಗಳಿಲ್ಲ, ಫೋನ್‌ (Phone) ಸಂಪರ್ಕವೂ ಕಷ್ಟ. ಎಂಥದ್ದೇ ಕಷ್ಟದ ಸ್ಥಿತಿಯಲ್ಲೂ ಇವರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು (Primary Health Centre) ಒಂದು ದಿನವೂ ಮುಚ್ಚಿಲ್ಲ. ದಂಪತಿಗೆ 5 ವರ್ಷದ ಮಗನಿದ್ದಾನೆ. ಕಳೆದ ವರ್ಷ ಸತೀಶ್‌ ಅವರ ತಂದೆ ನಿಧನರಾದರು. ಆಗ ಸತೀಶ್‌ ತಮ್ಮ ತಂದೆಯ ಕಾರ್ಯಕ್ಕೆ ತೆರಳಿದರೆ, ಡಾ.ಭಾರತಿ ಜನರ ಸೇವೆಯಲ್ಲಿ ಮಗ್ನರಾಗಿದ್ದರು. “ಬುಡಕಟ್ಟು ಮಹಿಳೆಯರು (Woman) ಸುಶಿಕ್ಷಿತರಾಗಬೇಕುʼ ಎನ್ನುವುದು ಭಾರತಿ ಅವರ ಆಶಯವಾದರೆ, “ಈ ಕುಗ್ರಾಮದಲ್ಲಿ ಮನಃಶಾಂತಿ (Peace) ಇದೆ. ಜನರ ಸೇವೆ ಸಲ್ಲಿಸುತ್ತಿರುವುದಕ್ಕೆ ತೃಪ್ತಿಯಿದೆʼ ಎನ್ನುತ್ತಾರೆ ಡಾ.ಸತೀಶ್.

click me!