ಕಾಂಗ್ರೆಸ್‌ ಕಾರ್ಯಕರ್ತರಿಂದ ಅಕ್ಕಿ ಮೂಟೆ ಪ್ರತಿಭಟನೆ: ಬಿಜೆಪಿ ಕಚೇರಿಗಳಿಗೆ ಮುತ್ತಿಗೆ

Jul 5, 2023, 11:09 PM IST

ಬೆಂಗಳೂರು (ಜು.05):  ಅಕ್ಕಿ ಕೊಡದ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕರ್ನಾಟಕ ಕಾಂಗ್ರೆಸ್‌ ಯುವ ಘಟಕದಿಂದ ಪ್ರತಿಭಟನೆ ಆರಂಭಿಸಲಾಗಿದೆ. ಕಾಂಗ್ರೆಸ್‌ ಯುವ ಘಟಕದ ಸುಮಾರು 500 ಕಾರ್ಯಕರ್ತರಿಂದ ಮಲ್ಲೇಶ್ವರದ ಬಿಜೆಪಿ ಕೇಂದ್ರ ಕಚೇರಿ ಮೇಲೆ ದಾಳಿ ಮಾಡಿ ಪ್ರತಿಭಟನೆ ಮಾಡಿದೆ.

ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್‌ ಕಾರ್ಯಕರ್ತರು ಕೇಂದ್ರದ ಸಂಸದರಾದ ತೇಜಸ್ವಿ ಸೂರ್ಯ, ಪ್ರತಾಪ್‌ ಸಿಂಹ, ಸದಾನಂದಗೌಡ ಸೇರಿ ವಿವಿಧ ಸಂಸದರ ಮುಖವಾಡಗಳನ್ನು ಧರಿಸಿ ಪ್ರತಿಭಟನೆ ಮಾಡಿದರು. ಈ ವೇಳೆ ಮಾತನಾಡಿದ ಕಾಂಗ್ರೆಸ್‌ ಯುವ ಘಟಕದ ರಾಜ್ಯಾಧ್ಯಕ್ಷ ಮೊಹಮ್ಮದ್‌ ನಲಪಾಡ್‌ ಮಾತನಾಡಿ, ರಾಜ್ಯದಿಂದ ಒಟ್ಟು 25 ಸಂಸದರನ್ನು ಬಿಜೆಪಿಯಿಂದ ಕೇಂದ್ರಕ್ಕೆ ಕಳಿಸಿಕೊಡಲಾಗಿದೆ. ಇವರೆಲ್ಲರೂ ಸೇರಿ ರಾಜ್ಯದ ಜನತೆಗೆ 5 ಕೆ.ಜಿ. ಅಕ್ಕಿ ಕೊಡಲು ಸಾಧ್ಯವಾಗುತ್ತಿಲ್ಲ. ರಾಜ್ಯ ಸರ್ಕಾರದಿಂದ ಉಚಿತವಾಗಿ ಅಕ್ಕಿ ಕೇಳುತ್ತಿಲ್ಲ, ಹಣ ಕೊಡುತ್ತೇವೆ ಕೊಡಿ ಎಂದರೂ ಅಕ್ಕಿ ಕೊಡುತ್ತಿಲ್ಲ. ರಾಜ್ಯದ ಎಲ್ಲ ಬಿಜೆಪಿ ಸಂಸದರ ಕಚೇರಿಗಳ ವಿರುದ್ಧ ಅಕ್ಕಿ ಕೊಡಿಸುವವರೆಗೂ ಪ್ರತಿಭಟನೆ ಮಾಡಲಾಗುವುದು ಎಂದು ನಲಪಾಡ್‌ ಹೇಳಿದರು.