ಬೆಂಗಳೂರು ಟೆಕ್‌ ಸಮ್ಮಿಟ್‌-2020: ದೇಶದ ಡಿಜಿಟಲ್‌ ಕ್ರಾಂತಿಗೆ ಉಪಗ್ರಹಗಳ ನೆರವು

By Kannadaprabha NewsFirst Published Nov 20, 2020, 9:55 AM IST
Highlights

ಇ ಆಡಳಿತದಲ್ಲಿ ಉಪಗ್ರಹಗಳ ಬಳಕೆ ಹೆಚ್ಚು| ಡಿಜಿಟಲ್‌ ಇಂಡಿಯಾದಲ್ಲೂ ಮಹತ್ತರ ಪಾತ್ರ, ಆದರೆ ಮಿತಿಮೀರಿದ ಉಪಗ್ರಹ ಸಮಸ್ಯೆ ನಿಗ್ರಹ ಅಗತ್ಯ| ಟೆಕ್‌ ಶೃಂಗದಲ್ಲಿ ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್‌ ಮ್ಯಾರಿಸನ್‌ ಘೋಷಣೆ| 5ಜಿ, ಎಐ, ಬಾಹ್ಯಾಕಾಶ, ಕ್ವಾಂಟಂ ಕಂಪ್ಯೂಟಿಂಗ್‌ನಲ್ಲಿ ಸಂಶೋಧನೆ| 

ಬೆಂಗಳೂರು(ನ.20): ಜಗತ್ತಿನ ಹಲವು ರಾಷ್ಟ್ರಗಳು ಅಭಿವೃದ್ಧಿ ಪಥದಲ್ಲಿ ಸಾಗಲು ಬಾಹ್ಯಾಕಾಶ ತಂತ್ರಜ್ಞಾನ ಮಹತ್ವದ ಪಾತ್ರವಹಿಸಿದೆ. ಸಂವಹನ ಉಪಗ್ರಹ ಹಾಗೂ ಭೂ ಪರಿವೀಕ್ಷಣಾ ಉಪಗ್ರಹಗಳ ಕೊಡುಗೆ ಅಪಾರ ಎಂದು ಭಾರತೀಯ ತಂತ್ರಜ್ಞಾನ ಸಂಸ್ಥೆ ನಿರ್ದೇಶಕ ಡಾ.ಪ್ರಕಾಶ್‌ ಚವ್ಹಾಣ್‌ ಹೇಳಿದ್ದಾರೆ.

ಗುರುವಾರ ಬೆಂಗಳೂರು ಟೆಕ್‌ ಸಮ್ಮಿಟ್‌-2020 ವರ್ಚುವಲ್‌ ಮಾಧ್ಯಮದಲ್ಲಿ ‘ಉಪಗ್ರಹ ಮತ್ತು ಸಮಾಜ’ ವಿಷಯ ಕುರಿತು ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಉಡಾವಣೆಗೊಂಡಿರುವ ಸಂವಹನ ಉಪಗ್ರಹ ಹಾಗೂ ಭೂ ಪರಿವೀಕ್ಷಣ ಉಪಗ್ರಹಗಳು ವೈದ್ಯಕೀಯ, ಶಿಕ್ಷಣ, ಪರಿಸರ, ಭೂಮಿ, ಮೀನುಗಾರಿಗೆ ಹಾಗೂ ಜಲ ಸಂರಕ್ಷಣೆ ಕ್ಷೇತ್ರಗಳಿಗೆ ಕೊಡುಗೆ ನೀಡಿವೆ. ಸಾಮಾನ್ಯ ಜನರ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ಮಾಹಿತಿ ಸಂಗ್ರಹಿಸಲು ಸ್ಥಳೀಯ ಆಡಳಿತ ಸಂಸ್ಥೆಗಳು ಇವುಗಳ ಲಾಭ ಪಡೆಯುತ್ತಿವೆ ಎಂದರು.

ಸಂವಹನ ಉಪಗ್ರಹ ಹಾಗೂ ಭೂ ಪರಿವೀಕ್ಷಣಾ ಉಪಗ್ರಹಗಳು ಇ ಆಡಳಿತದಲ್ಲಿ ಹೆಚ್ಚು ಬಳಕೆಯಾಗುತ್ತಿದೆ. ಇದು ಡಿಜಿಟಲ್‌ ಇಂಡಿಯಾ ಯೋಜನೆಯು ಯಶಸ್ವಿಯಾಗಲು ಸಹಕಾರಿಯಾಗುತ್ತಿದೆ ಎಂದ ಅವರು, ದೇಶದ ಶೇ.55ಕ್ಕಿಂತ ಹೆಚ್ಚು ಜನರಿಗೆ ಕೃಷಿಯೇ ಮೂಲಾಧಾರ. ಬೆಳೆ ವಿಮೆ ಕಂಪನಿಗಳಿಗೆ ಮಾಹಿತಿ ಸಂಗ್ರಹಿಸಲು, ನೆರೆ ಹಾವಳಿ, ಬೆಳೆ ಹಾನಿ ಮತ್ತು ಬರ ಪರಿಸ್ಥಿತಿ ಅವಲೋಕಿಸಲು ಬಾಹ್ಯಾಕಾಶ ತಂತ್ರಜ್ಞಾನ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ತಿಳಿಸಿದರು.

ಬೆಂಗ್ಳೂರಲ್ಲಿ ಐಟಿ ಕ್ಷೇತ್ರದ ಹೊಸ ತಿರುವಿಗೆ ವಾಜಪೇಯಿ, ಮೋದಿ ಕೊಡುಗೆ ಅಪಾರ..!

2015ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ಅಭಿವೃದ್ಧಿ ಕುರಿತು ನಡೆದ ಸಭೆಯಲ್ಲಿ ಸುಮಾರು 65 ಸಚಿವಾಲಯಗಳು ಪಾಲ್ಗೊಂಡಿದ್ದವು. ಇದು ಡಿಜಿಟಲ್‌ ಇಂಡಿಯಾ ಯೋಜನೆಗೆ ಪೂರಕವಾಗಿ ಅಭಿವೃದ್ಧಿ ಸಾಧಿಸಲು ಸಹಕಾರಿಯಾಗಿತ್ತು ಎಂದ ಅವರು, ಮುಂದಿನ ಐದು ಅಥವಾ ಹತ್ತು ವರ್ಷಗಳಲ್ಲಿ ಬಾಹ್ಯಾಕಾಶವು ಹೆಚ್ಚಿನ ಸಂಖ್ಯೆಯಲ್ಲಿ ಯುವ ಪೀಳಿಗೆಯನ್ನು ಸೆಳೆಯಲಿದೆ. ಅವರು ಬಾಹ್ಯಾಕಾಶ ಚಟುವಟಿಕೆ ಬಗ್ಗೆ ಸಂಪರ್ಕ ಸಾಧಿಸಲಿದ್ದಾರೆ. ನಮ್ಮ ಗ್ರಹದ ಸುಸ್ಥಿತ ಅಭಿವೃದ್ಧಿಗಾಗಿ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಹೆಚ್ಚಿನ ಚಟುವಟಿಕೆಗಳು ನಡೆಯಲಿವೆ ಎಂದರು.

ಮಿತಿ ಮೀರಿ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುತ್ತಿದ್ದರೆ ಬಾಹ್ಯಾಕಾಶ ಮುಂದೊಂದು ದಿನ ಕಸದ ಬುಟ್ಟಿಯಾಗಿ ಮಾರ್ಪಡುವ ಅಪಾಯವಿದೆ. ಅನುಪಯುಕ್ತವಾದ ಉಪಗ್ರಹಗಳು ತಮ್ಮ ಕಾರ್ಯಾಚರಣೆ ಅವಧಿ ಮುಗಿದ ಮೇಲೆ ಅಲ್ಲೇ ತ್ಯಾಜ್ಯಗಳಾಗಿ ಉಳಿಯುವ ಸಾಧ್ಯತೆ ಇದೆ. ಇದು ಮುಂದೆ ಸಮಸ್ಯೆಯಾಗಿ ಪರಿಣಮಿಸಲಿದ್ದು, ಅಂತಾರಾಷ್ಟ್ರೀಯ ಸಂಸ್ಥೆಗಳು ಈ ಸಮಸ್ಯೆಯನ್ನು ಹೇಗೆ ನಿಭಾಯಿಸಬೇಕೆಂದು ಮಾರ್ಗಗಳನ್ನು ಹುಡುಕುವ ಅವಶ್ಯಕತೆ ಇದೆ ಎಂದರು.
ವಿಚಾರ ಸಂಕಿರಣದಲ್ಲಿ ಯುನೈಟೆಡ್‌ ನೇಷನ್ಸ್‌ ಸ್ಪೇಸ್‌ ಅಪ್ಲಿಕೇಶನ್‌ ಮುಖ್ಯಸ್ಥ ಲೂಕ್‌ ಪಿಯರ್‌, ಲಾಕ್ಹೀಡ್‌ ಮಾರ್ಟಿನ್‌ ಮುಖ್ಯ ಎಂಜಿನಿಯರ್‌ ಡಾ.ಸ್ಟೀವ್‌ ಜಾಲಿ ಪಾಲ್ಗೊಂಡಿದ್ದರು.

ಜಂಟಿ ಐಟಿ ಸಂಶೋಧನೆಗೆ ಭಾರತ-ಆಸೀಸ್‌ ಒಪ್ಪಂದ

ಬಾಹ್ಯಾಕಾಶ ಸಂಶೋಧನೆ, ಕ್ರಿಟಿಕಲ್‌ ಮಿನರಲ್ಸ್‌, 5-ಜಿ, ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ (ಕೃತಕ ಬುದ್ಧಿವಂತಿಕೆ), ಕ್ವಾಂಟಮ್‌ ಕಂಪ್ಯೂಟಿಂಗ್‌ ಸೇರಿ ಮುಂದುವರಿದ ತಂತ್ರಜ್ಞಾನಗಳ ಜಂಟಿ ಸಂಶೋಧನೆಗಾಗಿ ಆಸ್ಪ್ರೇಲಿಯಾ ಹಾಗೂ ಭಾರತ ಮಹತ್ವದ ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲಿವೆ ಎಂದು ಆಸ್ಪ್ರೇಲಿಯಾ ಪ್ರಧಾನಮಂತ್ರಿ ಸ್ಕಾಟ್‌ ಮ್ಯಾರಿಸನ್‌ ಘೋಷಿಸಿದ್ದಾರೆ.

ಸಿಲಿಕಾನ್‌ ಸಿಟಿಗೆ ಬರಲಿದೆ ಆ್ಯಪಲ್: ಚೀನಾ ಬದಲು ಬೆಂಗಳೂರಲ್ಲೇ ಐಫೋನ್‌ ಉತ್ಪಾದನೆ

ಬುಧವಾರ ಉದ್ಘಾಟನೆಗೊಂಡ ‘ಬೆಂಗಳೂರು ತಂತ್ರಜ್ಞಾನ ಶೃಂಗಸಭೆ-2020’ ವರ್ಚುಯಲ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಸ್ಪ್ರೇಲಿಯಾ ಹಾಗೂ ಭಾರತ ದೇಶಗಳಿಗೆ ಬಾಹ್ಯಾಕಾಶ ಸಂಶೋಧನೆ, ಕ್ರಿಟಿಕಲ್‌ ಮಿನರಲ್ಸ್‌, 5-ಜಿ, ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌, ಕ್ವಾಂಟಮ್‌ ಕಂಪ್ಯೂಟಿಂಗ್‌ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜೊತೆಯಾಗಿ ಕೆಲಸ ಮಾಡಲು ಅನಿಯಮಿತ ಅವಕಾಶಗಳಿವೆ . ಹೀಗಾಗಿ ನಾವು ‘ಆಸ್ಪ್ರೇಲಿಯಾ-ಭಾರತ ಸೈಬರ್‌ ಹಾಗೂ ಸೈಬರ್‌ ಆಧಾರಿತ ತಂತ್ರಜ್ಞಾನ’ ಕುರಿತ ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಈ ಮೂಲಕ ಎರಡೂ ದೇಶಗಳು ಮುಕ್ತ, ಉಚಿತ, ಸುರಕ್ಷಿತ ಅಂತರ್ಜಾಲ ಸೇವೆಗಾಗಿ ಕೆಲಸ ಮಾಡಲಿವೆ ಎಂದು ಘೋಷಿಸಿದರು.

ಭಾರತ ಹಾಗೂ ಆಸ್ಪ್ರೇಲಿಯಾ ನಡುವಿನ ಈ ಒಪ್ಪಂದ ಡಿಜಿಟಲ್‌ ಆರ್ಥಿಕತೆಯ ಹಸಿವು ನೀಗಿಸಲು ಪ್ರಥಮ ಹಾಗೂ ಪ್ರಮುಖ ಹೆಜ್ಜೆ ಆಗಲಿದೆ. ಜೊತೆಗೆ ಸದ್ಯದಲ್ಲೇ ಆಸ್ಪ್ರೇಲಿಯಾ-ಭಾರತ ನಡುವೆ ಸೈಬರ್‌ ಮತ್ತು ಕ್ರಿಟಿಕಲ್‌ ತಂತ್ರಜ್ಞಾನ ಸಹಯೋಗದ ಕಾರ್ಯಕ್ರಮವನ್ನೂ ಘೋಷಿಸಲಿದ್ದೇವೆ. ಈ ಮೂಲಕ ಆಸ್ಪ್ರೇಲಿಯಾ ಹಾಗೂ ಭಾರತದ ನಡುವಿನ ಸಂಬಂಧ ದಿನದಿಂದ ದಿನಕ್ಕೆ ಗಟ್ಟಿಯಾಗಲಿದೆ. ಶಾಂತಿ, ಸುರಕ್ಷತೆ ಹಾಗೂ ಸಮೃದ್ಧಿಯೇ ತಂತ್ರಜ್ಞಾನದ ಮುಖ್ಯ ಗುರಿಯಾಗಿ ಕೆಲಸ ಮಾಡಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆಸ್ಪ್ರೇಲಿಯಾದ 150 ಪ್ರತಿನಿಧಿಗಳು ಭಾಗಿ:

ಇದೇ ವೇಳೆ ಬೆಂಗಳೂರು ಟೆಕ್‌ ಸಮ್ಮಿಟ್‌ನಲ್ಲಿ ಆಸ್ಪ್ರೇಲಿಯಾದ 150 ಮಂದಿ ಪ್ರಬಲ ಪ್ರತಿನಿಧಿಗಳ ನೇತೃತ್ವ ವಹಿಸಲು ಹೆಮ್ಮೆ ಎನಿಸುತ್ತಿದೆ. ಟೆಕ್‌ ಸಮ್ಮಿಟ್‌ನಲ್ಲಿ ಆಸ್ಪ್ರೇಲಿಯಾದ ನೀತಿ ರೂಪಕರು, ಉದ್ಯಮಿಗಳು, ಸ್ಟಾರ್ಟ್‌ಅಪ್‌ ಹಾಗೂ ವಿಶ್ವದ ಮುಂಚೂಣಿ ಸಂಸ್ಥೆಗಳ ಪ್ರತಿನಿಧಿಗಳು ಸೇರಿ 150 ಮಂದಿ ಭಾಗವಹಿಸಿದ್ದಾರೆ. ಬೆಂಗಳೂರು ಭಾರತದ ಅತಿದೊಡ್ಡ ತಂತ್ರಜ್ಞಾನ ಕ್ಲಸ್ಟರ್‌. ಜೊತೆಗೆ ವಿಶ್ವದಲ್ಲೇ 4ನೇ ಅತಿದೊಡ್ಡ ಐಟಿ ಹಬ್‌. ಕನಿಷ್ಠ 25 ಆಸ್ಪ್ರೇಲಿಯಾ ಕಂಪೆನಿಗಳು ಅಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಹೀಗಾಗಿ ತಂತ್ರಜ್ಞಾನ ಶೃಂಗಸಭೆಯಲ್ಲಿ ಭಾಗವಹಿಸುವುದು ಖುಷಿ ತಂದಿದದೆ ಎಂದರು.
 

click me!