
ಹಾವೇರಿ(ಆ.03): ಕೊರೋನಾ ಹಿನ್ನೆಲೆಯಲ್ಲಿ ಈಗಾಗಲೇ ಆರಂಭವಾಗಿರುವ ಆನ್ಲೈನ್ ಶಿಕ್ಷಣ ಜಿಲ್ಲೆಯ ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ಹಲವು ಬಡ ಮಕ್ಕಳಿಗೆ ಗಗನ ಕುಸುಮವಾಗುತ್ತಿದೆ. ಶಾಲೆಗಳು ಬಂದ್ ಆಗಿರುವುದರಿಂದ ಮಕ್ಕಳು ಪಾಲಕರೊಂದಿಗೆ ಕೂಲಿಗೆ ಹೋಗುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.
ಆನ್ಲೈನ್ನಲ್ಲೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ
ನಗರ ಪ್ರದೇಶದ ಮಕ್ಕಳು ಪಾಲಕರ ನೆರವಿನಿಂದ ವಾಟ್ಸ್ಆ್ಯಪ್, ಇ-ಮೇಲ್, ಗೂಗಲ್, ಜೂಮ್ ಆ್ಯಪ್ನಂಥ ವಿಧಾನದ ಮೂಲಕ ಆನ್ಲೈನ್ ಕಲಿಕೆ ಶುರು ಮಾಡಿದ್ದಾರೆ. ಆದರೆ, ಗ್ರಾಮೀಣ ಭಾಗದ, ಅದರಲ್ಲೂ ಸರ್ಕಾರಿ ಶಾಲೆ ಮಕ್ಕಳು ಇವುಗಳಿಂದ ವಂಚಿತರಾಗಿ ಕೂಲಿಗೆ ಹೋಗುತ್ತಿದ್ದಾರೆ. ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಲಕ್ಷಕ್ಕೂ ಹೆಚ್ಚು ಮಕ್ಕಳ ಪಾಲಕರಲ್ಲಿ ಸ್ಮಾರ್ಟ್ಪೋನ್, ಟೀವಿ ಹೊಂದಿರುವವರು ಸುಮಾರು 50 ಸಾವಿರ ಮಂದಿ. ಹೀಗಾಗಿ ಯಾವುದೇ ಸೌಲಭ್ಯ ಇಲ್ಲದ ತೀರಾ ಹಳ್ಳಿಗಾಡಿನ ಮಕ್ಕಳಂತು ಬುತ್ತಿ ಗಂಟು ಕಟ್ಟಿಕೊಂಡು, ನೀರಿನ ಕೊಡ ತಲೆಮೇಲಿಟ್ಟುಕೊಂಡು ಪಾಲಕರೊಂದಿಗೆ ಹೊಲದತ್ತ ಹೆಜ್ಜೆ ಹಾಕುತ್ತಿದ್ದಾರೆ.
ಬಡಕುಟುಂಬದ ಮಕ್ಕಳ ಪಾಲಕರಲ್ಲೂ ಶಿಕ್ಷಣದ ಕುರಿತು ಹೇಳಿಕೊಳ್ಳುವ ಅರಿವಿರುವುದಿಲ್ಲ. ಹೀಗಾಗಿ ಕೃಷಿಕರ ಮಕ್ಕಳಲ್ಲಿ ಕೆಲವರು ಕುರಿ, ದನ ಕಾಯುತ್ತಿದ್ದರೆ, ಅನೇಕರು ಹೊಲದಲ್ಲಿ ಕಳೆ ಕೀಳುವುದರಲ್ಲಿ ನಿರತರಾಗಿದ್ದಾರೆ.
ಆನ್ಲೈನ್ನಲ್ಲೇ ಡಿಗ್ರಿ ಕಾಲೇಜಿಗೆ ಪ್ರವೇಶ ನಡೆಸಲು ಸರ್ಕಾರ ಸೂಚನೆ
ಈ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಎಲ್ಲ ತರಗತಿಗಳಿಗೆ ದೂರದರ್ಶನ ಚಂದನ ವಾಹಿನಿ ಮೂಲಕ ಬೋಧನೆಯೇನೋ ಶುರು ಮಾಡಿದೆ. ಆದರೆ, ಹಳ್ಳಿ ಮಕ್ಕಳು ಇದಕ್ಕೆ ಒಗ್ಗಿಕೊಳ್ಳುತ್ತಿಲ್ಲ ಎಂಬ ಆರೋಪವೂ ಇದೆ. ಬೆಳಗ್ಗೆದ್ದು ಮನೆಯಿಂದ ಹೊಲದತ್ತ ಹೋಗುವ ಮಕ್ಕಳು ಮತ್ತೆ ಮನೆ ಸೇರುವ ವೇಳೆಗೆ ಸಂಜೆಯಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಟೀವಿ ನೋಡುವುದು ಅಷ್ಟರಲ್ಲೇ ಇದೆ. ಇನ್ನು ಉಳಿದ ಮನೆಗಳಲ್ಲಿ ಟಿವಿ ಇದ್ದರೂ ವಿದ್ಯುತ್ ಸಮಸ್ಯೆಯಿಂದ ಪಾಠ ತಪ್ಪುತ್ತಿದೆ. ಹೀಗಾಗಿ ಟೀವಿ ಇದ್ದರೂ ನಾಲ್ಕೈದು ಸಾವಿರ ವಿದ್ಯಾರ್ಥಿಗಳು ಚಂದನವಾಹಿನಿಯಲ್ಲಿ ಬರುವ ಪಾಠ ಕೇಳುವುದರಿಂದ ವಂಚಿತರಾಗುತ್ತಿದ್ದಾರೆ ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು.
10 ಸಾವಿರ ಮಕ್ಕಳ ಪಾಲಕರಲ್ಲಿ ಬೇಸಿಕ್ ಸೆಟ್
ಜಿಲ್ಲೆಯಲ್ಲಿ 1ರಿಂದ 10ನೇ ತರಗತಿವರೆಗಿನ 2.73 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ 1.53 ಲಕ್ಷ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಅವರಲ್ಲಿ 1 ಲಕ್ಷಕ್ಕೂ ಅಧಿಕ ಮಕ್ಕಳು ಗ್ರಾಮೀಣ ಪ್ರದೇಶದವರಾಗಿದ್ದಾರೆ. ಅವರಲ್ಲಿ ಟಿವಿ, ಸ್ಮಾರ್ಟ್ ಫೋನ್ ಇದ್ದವರು 50 ಸಾವಿರದಷ್ಟಿದ್ದರೆ, ಇನ್ನುಳಿದ 50 ಸಾವಿರ ಮಕ್ಕಳ ಪಾಲಕರು ಇವೆರಡರಲ್ಲಿ ಒಂದು ಸೌಲಭ್ಯ ಹೊಂದಿದ್ದಾರೆ. ಆದರೆ, ಕೆಲವರಲ್ಲಿ ಸ್ಮಾರ್ಟ್ ಫೋನ್ ಇದ್ದರೂ ಕೆಲವರು ಇಂಟರ್ನೆಟ್ ಸೌಲಭ್ಯ ಹೊಂದಿಲ್ಲ. ಇವೆಲ್ಲವನ್ನು ಹೊರತುಪಡಿಸಿದ ತೀರಾ ಬಡ ವರ್ಗದ ಸುಮಾರು 10 ಸಾವಿರ ಪಾಲಕರು ಬೇಸಿಕ್ ಮೊಬೈಲ್ ಹೊಂದಿದ್ದು, ಅವರ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಅಸಾಧ್ಯವಾದ ಮಾತು.
ಮಾಸ್ತರು ಶಾಲೆ ಶುರು ಮಾಡಿದ್ರ ಶಾಲೆಗೆ ಹೋಗಿ ಕಲೀತೀವಿ. ಅವರು ಮೊಬೈಲ್ದಾಗ ಹೇಳತಾರ. ಮೊಬೈಲ್ ತಗೋಳ್ಳೋಕೆ ನಮ್ಮತ್ರ ರೊಕ್ಕ ಇಲ್ಲ. ಶಾಲೆ ಚಾಲು ಮಾಡಿದ್ರ ಹೋಕ್ಕೀವಿ. ಇಲ್ಲಾಂದ್ರ ಅಪ್ಪ ಅವ್ವರ ಜೊತೀಗಿ ಕೂಲಿ ಹೋಗ್ತೇವ್ರಿ.
-ರವಿ ಕುಬ್ಸದ್, ಕೋಡಬಾಳ ಗ್ರಾಮ, ಹಾವೇರಿ
ಕೊರೋನಾ ಹೆಚ್ಚುತ್ತಿರುವುದರಿಂದ ಸರ್ಕಾರ ಇನ್ನೂ ಶಾಲೆ ಆರಂಭಿಸಿಲ್ಲ. ಆದರೆ, ಯಾವ ಮಗುವೂ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಗ್ರಾಮಗಳ ವಿಶಾಲವಾದ ಸ್ಥಳದಲ್ಲಿ ಸಾಮಾಜಿಕ ಅಂತರದಲ್ಲಿ ಮಕ್ಕಳನ್ನು ಕೂರಿಸಿ ಪಾಠ ಮಾಡಿಸುವ ಕುರಿತು ಚಿಂತನೆ ನಡೆಸಲಾಗಿದೆ. ಕೆಲ ಶಾಲೆ ಶಿಕ್ಷಕರು ಈಗಾಗಲೇ ಈ ರೀತಿ ಬೋಧನೆ ಆರಂಭಿಸಿದ್ದಾರೆ.
- ಅಂದಾನೆಪ್ಪ ವಡಗೇರಿ ಡಿಡಿಪಿಐ ಹಾವೇರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ