ಹರೆಯದ ಮಕ್ಕಳನ್ನು ಜವಾಬ್ದಾರಿಯುತ ವ್ಯಕ್ತಿಯಾಗಿಸಲು ಕೆಲ ಟಿಪ್ಸ್

By Suvarna NewsFirst Published Jun 30, 2020, 5:26 PM IST
Highlights

ಮಕ್ಕಳು ಪರ್ಫೆಕ್ಟ್ ಆಗಿರಬೇಕೆಂದು ಬಯಸುವುದು ತಪ್ಪು. ಬದಲಿಗೆ ವಯಸ್ಸಿಗೆ ಸರಿಯಾಗಿ ಜವಾಬ್ದಾರಿಗಳನ್ನು ತೆಗೆದುಕೊಳ್ಳುವಂತಾಗಿದ್ದರೆ ಸಾಕು. ಅಂಥ ಗುಣಗಳನ್ನು ಅವರಲ್ಲಿ ಬೆಳೆಸಲು ಹೀಗೆ ಮಾಡಿ.

ಎಲ್ಲ ಪೋಷಕರಿಗೂ ತಮ್ಮ ಮಕ್ಕಳು ಟೀನೇಜ್ ಮುಗಿಯುವುದರೊಳಗೆ ಜವಾಬ್ದಾರಿಯುತವಾದ, ಸ್ವತಂತ್ರವಾದ ವ್ಯಕ್ತಿತ್ವ ಹೊಂದಬೇಕು ಎಂಬ ಬಯಕೆ ಇರುತ್ತದೆ. ಮನೆಗೆಲಸದಲ್ಲಿ ಸಹಾಯ ಮಾಡುತ್ತಾ, ಹೊರಗಿನ ಕೆಲ ಕೆಲಸಗಳಿಗೆ ಕೈಜೋಡಿಸುತ್ತಾ, ತಮ್ಮ ಎಲ್ಲ ಕೆಲಸಗಳನ್ನೂ ತಾವೇ ಮಾಡಿಕೊಳ್ಳುತ್ತಾ, ಉತ್ತಮ ಗೆಳೆಯರ ಸಹವಾಸದಲ್ಲಿ ಖುಷಿಯಾಗಿರಲಿ ಎಂದು ಬಹುತೇಕ ಎಲ್ಲ ಪೋಷಕರೂ ಬಯಸುತ್ತಾರೆ. ಆದರೆ, ನಿಜ ಜೀವನದಲ್ಲಿ ಎಲ್ಲವೂ ಇಷ್ಟೊಂದು ಪರ್ಫೆಕ್ಟ್ ಆಗಿರಲು ಸಾಧ್ಯವಿಲ್ಲ. 

ಅವರು ಪರ್ಫೆಕ್ಟ್ ಆಗಿರಬೇಕು ಎನ್ನುವುದಕ್ಕಿಂತ ವಯೋಸಹಜ ಜವಾಬ್ದಾರಿಗಳನ್ನು ನಿಭಾಯಿಸುವಂತಾಗಲಿ ಎಂದು ಬಯಸಿದರೆ, ಅವರನ್ನು ಹಾಗೆ ತಯಾರು ಮಾಡಲು ಪೋಷಕರೂ ಸ್ವಲ್ಪ ಶ್ರಮ, ಸಮಯ ಹಾಕಬೇಕಾಗುತ್ತದೆ. 

- ಆಕೆ/ಆತ ಎಷ್ಟು ಸ್ವಾತಂತ್ರ್ಯವನ್ನು ನಿಭಾಯಿಸಬಲ್ಲರು ಎಂದು ತೋರಿಸಲು ಅವಕಾಶ ಕೊಡಿ
ನಿಮ್ಮ ಮಕ್ಕಳು ಸ್ವತಂತ್ರ ಯುವಕ/ತಿಯಾಗಲು ಬೇಕಾದ ಕೌಶಲ್ಯಗಳನ್ನು ಹೊಂದಿದ್ದಾರೆಯೇ ಗಮನಿಸಿ. ಅವರು ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡಷ್ಟೂ ಅವರಿಗೆ ಹೆಚ್ಚು ಸ್ವಾತಂತ್ರ್ಯ ಕೊಡುವುದಾಗಿ ಸ್ಪಷ್ಟಪಡಿಸಿ. ಉದಾಹರಣೆಗೆ ಸಮಯಕ್ಕೆ ಸರಿಯಾಗಿ ಮನೆಗೆ ಬರುವುದು, ಉತ್ತಮರ ಸಂಗ ಮಾಡುವುದು, ತನ್ನೆಲ್ಲ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸುವುದು ಮಾಡಿದಾಗ ಅವರಿಗೆ ಇನ್ನೂ ಹೆಚ್ಚಿನ ಸ್ವಾತಂತ್ರ್ಯ ಕೊಡಿ. 
ಕೆಲವೊಂದು ಸಂಭಾವ್ಯ ಆತಂಕದ ಅಥವಾ ಸಮಸ್ಯಾತ್ಮಕ ಸನ್ನಿವೇಶ ಎದುರಾದಾಗ ಅವರು  ಅದನ್ನು ಹೇಗೆಲ್ಲ ಎದುರಿಸಬಹುದು ಎಂಬ ಬಗ್ಗೆ ಪ್ರಶ್ನಿಸಿ. ಅವರಿಗೇ ಮಾರ್ಗಗಳನ್ನು ಕಂಡುಕೊಳ್ಳಲು ಅವಕಾಶ ಕೊಡಿ. ಅವರ ಯೋಚನೆಗಳಲ್ಲಿ ತಪ್ಪಿದ್ದರೆ ತಿದ್ದಿ, ಅಂಥ ಸಂದರ್ಭದಲ್ಲಿ ಏನು ಮಾಡಬಹುದೆಂದು ವಿವರಿಸಿ. 

ಸೋಷಿಯಲ್ ಮೀಡಿಯಾ ಬಳಸಬೇಡಿರೆಂದು ಮಕ್ಕಳಿಗೆ ಬೈಯ್ಯುವ ಮುನ್ನ ಇದನ್ನು ಓದ ...


ಫ್ರೆಂಡ್ ಸಿಗರೇಟ್ ಸೇದಲು ಒತ್ತಾಯಿಸಿದರೆ ಏನು ಮಾಡುತ್ತಿ, ಯಾರಾದರೂ ಅಪರಿಚಿತರು ಮನೆ ಬಾಗಿಲು ಬಡಿದು ನಲ್ಲಿ ರಿಪೇರಿಗೆ ಬಂದಿರುವುದಾಗಿ ಹೇಳಿದರೆ ಏನು ಮಾಡುತ್ತಿ ಮುಂತಾದ ಪ್ರಶ್ನೆಗಳನ್ನು ಕೇಳಿ. 
ಎಲ್ಲರೂ ತಪ್ಪು ಮಾಡುತ್ತಾರೆ, ಆದರೆ, ಆ ತಪ್ಪನ್ನು ಒಪ್ಪಿಕೊಳ್ಳುವುದು, ಸರಿಪಡಿಸುವತ್ತ ಗಮನ ಹರಿಸುವುದು ಜವಾಬ್ದಾರಿ ಎನಿಸಿಕೊಳ್ಳುತ್ತದೆ ಎಂಬುದನ್ನು ತಿಳಿಸಿ ಹೇಳಿ. ಆಕೆ/ಆತ ತನ್ನ ತಪ್ಪುಗಳನ್ನು ಮುಚ್ಚಿಹಾಕಲು ಪ್ರಯತ್ನ ಪಡುತ್ತಿದ್ದರೆ ಅವರಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳುವ ಸಾಮರ್ಥ್ಯ ಇಲ್ಲವೆಂದು ಅರ್ಥ ಎಂದು ಹೇಳಿ. 

- ಹರೆಯದ ಮಕ್ಕಳೊಡನೆ ಸಮಯ ಕಳೆಯಿರಿ
ಟೀನೇಜ್‌ನಲ್ಲಿ ಮನಸ್ಸು ಸಮಸ್ಯೆಗಳ ಗೂಡು. ಎಲ್ಲ ಹದಿಹರೆಯದ ಮಕ್ಕಳಲ್ಲೂ ಹಲವಾರು ಗೊಂದಲಗಳು, ಭಯ ಮುಂತಾದವು ಇರುತ್ತವೆ. ಅವನ್ನೆಲ್ಲ ಸರಿಯಾಗಿ ಪರಿಹರಿಸಿಕೊಳ್ಳಲು, ನಿಭಾಯಿಸಲು, ಗೆಲ್ಲಲು ಅವರಿಗೆ ಮಾರ್ಗದರ್ಶನದ ಅಗತ್ಯ ಇರುತ್ತದೆ. ಆದರೆ, ಈ ಮಾರ್ಗದರ್ಶನ ಪಾಠದಂತಿರದೆ ಗೆಳೆಯರ ಮಾತಿನಂತಿರಬೇಕು. ಇದಕ್ಕಾಗಿ ಪ್ರತಿದಿನ ಕನಿಷ್ಠ ಒಂದು ಗಂಟೆಯಾದರೂ ನಿಮ್ಮ ಹರೆಯದ ಮಕ್ಕಳೊಡನೆ ಕಳೆಯಿರಿ. ಅವರ ದಿನಚರಿ ವಿಚಾರಿಸಿ. ನಿಮ್ಮ ದಿನಚರಿ ಬಗ್ಗೆ ಹೇಳಿ. ಎಲ್ಲ ಮಾತುಗಳನ್ನೂ ಆಡಬಹುದಾದ ಖುಲ್ಲಂಖುಲ್ಲಾ ವಾತಾವರಣ ಸೃಷ್ಟಿಸಿ. ನೀವು ನಿಮ್ಮ ಬದುಕನ್ನು ಅವರೆದುರು ತೆರದಿಟ್ಟಷ್ಟೂ ಅವರೂ ತಮ್ಮ ಬದುಕನ್ನು ನಿಮ್ಮೆದುರು ಹಂಚಿಕೊಳ್ಳಲು ಹಿಂಜರಿಕೆ ಬಿಡುತ್ತಾರೆ. ಈ ಸಂದರ್ಭದಲ್ಲಿ ಸಮಯ ನಿಭಾಯಿಸುವ ಕುರಿತು ಮಾತನಾಡಿ. ಅವರು ಹೋಂವರ್ಕ್, ಆಟಪಾಠ ಎಂದು ಎಲ್ಲದಕ್ಕೂ ಸಮಯ ನಿಭಾಯಿಸಲು ಸೋಲುತ್ತಿದ್ದರೆ ಅದನ್ನು ಹೇಗೆ ಸರಿಪಡಿಸಿಕೊಳ್ಳಬಹುದು ತಿಳಿಸಿಕೊಡಿ. 

- ಅವರ ಸಹಾಯವನ್ನು ಪ್ರೋತ್ಸಾಹಿಸಿ
ಕೆಲಸ ಮಾಡುವುದು ಜವಾಬ್ದಾರಿಯನ್ನು ತೋರಿಸುತ್ತದೆ. ಮನೆಗೆಲಸದಲ್ಲಿ ಸಹಾಯ ಮಾಡುವುದು ಇರಲೇಬೇಕು. ಅದಲ್ಲದೆಯೂ ಯಾವುದಾದರೂ ಸಕಾರಾತ್ಮಕ ಕಾರಣಕ್ಕೆ ವಾಲಂಟೀರ್ ಆಗುವುದು, ಸಾಮುದಾಯಿಕ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸುವುದು, ರಸ್ತೆಬದಿಯ ಅನಾಥ ನಾಯಿಗಳಿಗೆ ಮನೆ ಕಲ್ಪಿಸುವುದು, ಉತ್ತಮ ಕೆಲಸಕ್ಕಾಗಿ ಹಣ ಸಂಗ್ರಹಿಸುವುದು- ಮುಂತಾದ ಕೆಲಸಗಳನ್ನು ಪ್ರೋತ್ಸಾಹಿಸಿ. ಇಂಥ ಕೆಲಸಗಳು ಅವರನ್ನು ಹೆಚ್ಚು ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳುವಂತೆ ನೋಡಿಕೊಳ್ಳುತ್ತವೆ. ಸಮುದಾಯದ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದರಿಂದ ತಾನು ಮತ್ತೊಬ್ಬರ ಬದುಕಲ್ಲಿ ಬದಲಾವಣೆ ತರಬಲ್ಲೆ ಎಂಬ ಅರಿವು ಅವರಲ್ಲಿ ಮೂಡುತ್ತದೆ. ಇದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಜೊತೆಗೆ ಮುಂದಾಳತ್ವ ವಹಿಸುವ ಗುಣ ಬೆಳೆಯಲು ಸಹಾಯಕವಾಗುತ್ತದೆ. 

ಸಾಂಪ್ರದಾಯಿಕ ಇಡ್ಲಿಗೆ ಹೊಸ ರುಚಿ ನೀಡಿ ಆಸಕ್ತಿಕರವಾಗಿಸಿ

- ಜೀವನಕೌಶಲಗಳನ್ನು ಕಲಿಸಿ
ನಿಮ್ಮ ಮಗ ಹೋಂವರ್ಕ್ ಸರಿಯಾಗಿ ಮಾಡುತ್ತಾನೆಂದೋ, ಟೆನಿಸ್ ಸಖತ್ತಾಗಿ ಆಡುತ್ತಾನೆಂಬ ಕಾರಣಕ್ಕೋ ಆತ ಸ್ವತಂತ್ರವಾಗಿ ಜವಾಬ್ದಾರಿಗಳನ್ನು ನಿಭಾಯಿಸಬಲ್ಲ ಎಂದು ಯೋಚಿಸುವುದು ತಪ್ಪಾಗುತ್ತದೆ. ಬದುಕನ್ನು ಸ್ವತಃ ಎದುರಿಸಲು ಇನ್ನೂ ಹಲವು ಕೌಶಲಗಳು ಬೇಕಾಗುತ್ತವೆ. ಅಡುಗೆ ಮಾಡುವುದು, ಸ್ವಚ್ಛತೆ ನಿಭಾಯಿಸುವುದು, ಸರಿಯಾಗಿ ಐರನ್ ಮಾಡುವುದು, ಗಾರ್ಡನಿಂಗ್ ಮಾಡುವುದು, ಬ್ಯಾಂಕಿಂಗ್ ವ್ಯವಹಾರಗಳನ್ನು ನಿಭಾಯಿಸುವುದು, ಅಂಗಡಿಯಿಂದ ಸಾಮಾನು ತರುವುದು, ಬೆಲೆ ಸರಿಯಾಗಿದೆಯೇ, ಯಾವುದಕ್ಕೆ ಹೆಚ್ಚಿದೆ, ಯಾಕಾಗಿ ಹೆಚ್ಚಿದೆ ಮುಂತಾಗಿ ಯೋಚಿಸುವುದು- ಹೀಗೆ ಪ್ರಾಕ್ಟಿಕಲ್ ಕೌಶಲಗಳನ್ನು ಹೇಳಿಕೊಡಲು ಮಕ್ಕಳೊಂದಿಗೆ ಸಮಯ ಕಳೆಯಿರಿ. ಇದರೊಂದಿಗೆ ತಾಳ್ಮೆ, ಧೈರ್ಯ, ಕುತೂಹಲ, ನೆಮ್ಮದಿ ಕಂಡುಕೊಳ್ಳುವ ಮಾರ್ಗಗಳು, ಭಾವನಾತ್ಮಕ ಸನ್ನಿವೇಶಗಳನ್ನು ನಿಭಾಯಿಸುವ ಬಗೆಗಳನ್ನೂ ಹೇಳಿಕೊಡಿ. ಇದಕ್ಕಾಗಿ ಯೋಗ, ಧ್ಯಾನ, ಆಧ್ಯಾತ್ಮ ಮುಂತಾದವು ಸಹಾಯಕ್ಕೆ ಬರುತ್ತವೆ. 

- ಪರಿಣಾಮದ ಬಗ್ಗೆ ಯೋಚಿಸಲು ತಿಳಿಸಿ
ಮಕ್ಕಳು ತಪ್ಪು ಮಾಡುತ್ತಾರೆ. ಅವರಿಗೆ ಹಿಂದುಮುಂದಿನ ಯೋಚನೆ ಕಡಿಮೆ. ಹಾಗಾಗಿ ಮಾತನಾಡುವಾಗಲೂ ಯೋಚಿಸುವುದಿಲ್ಲ. ಅವರ ತಪ್ಪು ಆಯ್ಕೆಗಳಿಂದ ನಕಾರಾತ್ಮಕ ಸನ್ನಿವೇಶಗಳು ಎದುರಾಗುತ್ತವೆ ಎಂಬುದನ್ನು ಉದಾಹರಣೆ ಸಹಿತ ವಿವರಿಸಿ. ಹಾಗೆ ತಪ್ಪು ಮಾಡಿದಾಗ, ಪರಿಣಾಮದ ಕುರಿತು ಯೋಚಿಸದೆ ನಿರ್ಧರಿಸಿದಾಗ ಕೆಲ ಅನುಕೂಲಗಳನ್ನು ಕಡಿತಗೊಳಿಸಿ. ಇದರಿಂದ ಅವರು ಮುಂದಿನ ಬಾರಿ ಸಡನ್ ಆಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. 

click me!