ಜೆಡಿಎಸ್‌ ಬಿಟ್ಟವರೇ ಸ್ವಪಕ್ಷಕ್ಕೆ ಮುಳುವಾಗುವರೇ?

By Kannadaprabha NewsFirst Published Jan 20, 2023, 1:00 AM IST
Highlights

ಜೆಡಿಎಸ್‌ನಲ್ಲಿ ಕೆಲವು ಬದಲಾವಣೆಗಳು ನಡೆದಿದ್ದು ಟಿಕೆಟ್‌ ಘೋಷಣೆಯಾದ ನಂತರ ಟಿಕೆಟ್‌ ವಂಚಿತರಲ್ಲಿ ಕೆಲವರು ಪಕ್ಷವನ್ನು ತೊರೆದರೆ, ಮತ್ತೆ ಕೆಲವರು ಬಂಡಾಯವನ್ನು ಸಾರಿದ್ದಾರೆ. ಕೆಲವರು ಒಳಗೊಳಗೆ ಅಸಹಕಾರ ಧೋರಣೆ ಮೂಲಕ ಸ್ವಪಕ್ಷೀಯ ಅಭ್ಯರ್ಥಿಗಳ ಸೋಲಿಗೆ ಸಂಚು ರೂಪಿಸಿದಂತೆ ಕಂಡುಬರುತ್ತಿದ್ದಾರೆ.

ಮಂಡ್ಯ ಮಂಜುನಾಥ

ಮಂಡ್ಯ(ಜ.20): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿತರಾಗಿದ್ದವರು ಹಾಗೂ ಬಂಡಾಯ ಎದ್ದವರು ಆ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ತೊಡಕಾಗುವ ಸಾಧ್ಯತೆಗಳಿವೆ. ಚುನಾವಣೆ ಸಮೀಪಿಸುತ್ತಿದ್ದಂತೆ ಜಿಲ್ಲಾ ಜೆಡಿಎಸ್‌ನಲ್ಲಿ ಕೆಲವು ಬದಲಾವಣೆಗಳು ನಡೆದಿದ್ದು ಟಿಕೆಟ್‌ ಘೋಷಣೆಯಾದ ನಂತರ ಟಿಕೆಟ್‌ ವಂಚಿತರಲ್ಲಿ ಕೆಲವರು ಪಕ್ಷವನ್ನು ತೊರೆದರೆ, ಮತ್ತೆ ಕೆಲವರು ಬಂಡಾಯವನ್ನು ಸಾರಿದ್ದಾರೆ. ಕೆಲವರು ಒಳಗೊಳಗೆ ಅಸಹಕಾರ ಧೋರಣೆ ಮೂಲಕ ಸ್ವಪಕ್ಷೀಯ ಅಭ್ಯರ್ಥಿಗಳ ಸೋಲಿಗೆ ಸಂಚು ರೂಪಿಸಿದಂತೆ ಕಂಡುಬರುತ್ತಿದ್ದಾರೆ.

Latest Videos

ಕಳೆದ ಚುನಾವಣೆ ಸಮಯದಲ್ಲಿ ಜೆಡಿಎಸ್‌ ಪಕ್ಷದಲ್ಲಿದ್ದವರ ಪೈಕಿ ಕೆಲವರು ಆ ಪಕ್ಷದಿಂದ ಹೊರಬಂದಿದ್ದಾರೆ. ಮದ್ದೂರು ಕ್ಷೇತ್ರದ ಎಸ್‌.ಪಿ.ಸ್ವಾಮಿ, ಮಂಡ್ಯ ಕ್ಷೇತ್ರದಿಂದ ಕೀಲಾರ ರಾಧಾಕೃಷ್ಣ, ಡಾ.ಎಚ್‌.ಕೃಷ್ಣ, ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಎಲ್‌.ಆರ್‌. ಶಿವರಾಮೇಗೌಡ ಅವರು ಪಕ್ಷವನ್ನು ತೊರೆದಿದ್ದರೆ, ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಬಿ.ಎಲ್‌.ದೇವರಾಜು ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ ತಗ್ಗಹಳ್ಳಿ ವೆಂಕಟೇಶ್‌ ಬಂಡಾಯದ ಬಾವುಟ ಹಾರಿಸಿದ್ದಾರೆ.
ಜೆಡಿಎಸ್‌ನಿಂದ ಹೊರಬಂದಿರುವ ಎಸ್‌.ಪಿ.ಸ್ವಾಮಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಜ್ಜಾಗಿದ್ದರೆ, ಕೀಲಾರ ರಾಧಾಕೃಷ್ಣ ಅವರು ಕಾಂಗ್ರೆಸ್‌ನಿಂದ ಅಖಾಡ ಪ್ರವೇಶಿಸುವ ಉತ್ಸಾಹದಲ್ಲಿದ್ದಾರೆ. ಡಾ.ಎಚ್‌.ಕೃಷ್ಣ ಕೂಡ ಜೆಡಿಎಸ್‌ನಿಂದ ಹೊರಬಂದು ಕಾಂಗ್ರೆಸ್‌ನಲ್ಲಿ ನೆಲೆ ಕಂಡುಕೊಂಡಿದ್ದಾರೆ. ನಾಗಮಂಗಲ ಕ್ಷೇತ್ರದಿಂದ ಎಲ್‌.ಆರ್‌.ಶಿವರಾಮೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯವುದಾಗಿ ಘೋಷಿಸಿದ್ದಾರೆ. ಇನ್ನು ವಿಧಾನ ಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಕೂಡ ಜೆಡಿಎಸ್‌ನಿಂದ ಒಂದು ಕಾಲು ತೆಗೆದು ಕಾಂಗ್ರೆಸ್‌ನೊಳಗೆ ಇಟ್ಟಿದ್ದಾರೆ. ಈ ಬೆಳವಣಿಗೆಗಳು ಆಯಾ ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಲಿವೆಯೇ ಎಂಬ ಪ್ರಶ್ನೆ ಮೂಡಿದೆ.

Mandya: ಸಾಫ್ಟ್‌ವೇರ್ ಸಮಸ್ಯೆಯಿಂದ ಭತ್ತ, ರಾಗಿ ಖರೀದಿ ವಿಳಂಬ; ರೈತರು ಅತಂತ್ರ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏಳೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದನ್ನು ಬಿಟ್ಟರೆ ನಂತರ ನಡೆದ ಲೋಕಸಭಾ ಚುನಾವಣೆ, ಕೆ.ಆರ್‌.ಪೇಟೆ ವಿಧಾನಸಭೆ ಉಪ ಚುನಾವಣೆ, ಎರಡು ವಿಧಾನ ಪರಿಷತ್‌ ಚುನಾವಣೆಗಳಲ್ಲಿ ಜೆಡಿಎಸ್‌ಗೆ ಗೆಲುವಿನ ಸಿಹಿ ಸಿಗಲೇ ಇಲ್ಲ. ಹಿಂದಿನ ಚುನಾವಣೆ ಸಮಯದಲ್ಲಿ ಜಿಲ್ಲೆಯೊಳಗಿದ್ದ ಜೆಡಿಎಸ್‌ ಪರವಾದ ವಾತಾವರಣ ಈ ಬಾರಿ ಕ್ಷೀಣಿಸಿರುವಂತೆ ಕಂಡುಬರುತ್ತಿದೆ.

ಜೆಡಿಎಸ್‌ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಮಂಡ್ಯ ಜಿಲ್ಲೆಯಲ್ಲಿ ಪ್ರತಿ ಚುನಾವಣಾ ಸಂದರ್ಭದಲ್ಲೂ ಪಕ್ಷದೊಳಗೆ ಬಂಡಾಯ ಏಳುವುದು ಸಹಜವೇ ಆಗಿದ್ದರೂ ಈ ಬಾರಿ ಮೇಲುಕೋಟೆ ಕ್ಷೇತ್ರವನ್ನು ಹೊರತುಪಡಿಸಿದರೆ ಉಳಿದೆಲ್ಲಾ ಕ್ಷೇತ್ರಗಳಲ್ಲೂ ಬಂಡಾಯದ ಭೀತಿ ಎದುರಿಸುತ್ತಿದೆ.

2018ರ ಚುನಾವಣೆಯಲ್ಲಿ ಜೆಡಿಎಸ್‌ ಎಲ್ಲಾ ಶಕ್ತಿಗಳನ್ನು ಒಗ್ಗೂಡಿಸಿ ಭರ್ಜರಿ ಗೆಲುವು ಕಂಡಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಜೆಡಿಎಸ್‌ ಉತ್ಸಾಹವೂ ತಗ್ಗಿದಂತೆ ಕಂಡುಬರುತ್ತಿದೆ. ಕ್ಷೇತ್ರವಾರು ನಾಯಕತ್ವಕ್ಕೆ ಸೀಮಿತರಾಗಿರುವ ನಾಯಕರು ಜಿಲ್ಲಾ ನಾಯಕತ್ವ ವಹಿಸಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇದು ಜೆಡಿಎಸ್‌ ಹಿನ್ನೆಡೆಗೆ ಸಾಕ್ಷಿಯಾಗಿದೆ.

ಎಚ್‌ಡಿಕೆ ಸಿಎಂ ಆದ್ರೆ ರಾಜ್ಯದ ರೈತರ ಸಮಸ್ಯೆ ಇತ್ಯರ್ಥ: ಶಾಸಕ ಅನ್ನದಾನಿ

ಈಗಾಗಲೇ ಏಳೂ ಕ್ಷೇತ್ರಗಳಲ್ಲೂ ಟಿಕೆಟ್‌ ಘೋಷಣೆ ಮಾಡಿದ್ದು, ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಬಹಿರಂಗ ಬಂಡಾಯ ಎದ್ದಿದ್ದರೆ ಮಂಡ್ಯ ಕ್ಷೇತ್ರದೊಳಗೆ ಅಭ್ಯರ್ಥಿ ಬದಲಾವಣೆ ಕುರಿತಂತೆ ಚರ್ಚೆಗಳು ನಡೆಯುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಚುನಾವಣೆ ಕೊನೆಯ ಹಂತದ ವೇಳೆಗೆ ಜೆಡಿಎಸ್‌ ಒಳಗೂ ಮತ್ತು ಹೊರಗೂ ಸಾಕಷ್ಟುಬದಲಾವಣೆಗಳಾಗುವ ನಿರೀಕ್ಷೆಗಳಿವೆ.

ಜಿಲ್ಲೆಯ ಹಲವು ಕ್ಷೇತ್ರಗಳಲ್ಲಿ ಬಹಿರಂಗ ಬಂಡಾಯ ಪ್ರದರ್ಶನವಾಗುತ್ತಿದ್ದರೂ ಅದನ್ನು ಶಮನ ಮಾಡುವುದಕ್ಕೆ ದಳಪತಿಗಳು ಇದುವರೆಗೂ ಮುಂದಾಗಿಲ್ಲ. ಬಂಡಾಯಗಾರರಲ್ಲಿರುವ ಅತೃಪ್ತಿಯನ್ನು ಮಾತುಕತೆಯ ಮೂಲಕ ಶಮನಗೊಳಿಸುವುದರೊಂದಿಗೆ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಶ್ರಮಿಸುವಂತೆ ಮಾಡುವ ಪ್ರಯತ್ನಗಳೂ ನಡೆದಿಲ್ಲ. ಜೆಡಿಎಸ್‌ ವರಿಷ್ಠರ ನಡೆಯನ್ನು ನೋಡಿದರೆ ಅವರು ಈ ಬಂಡಾಯವನ್ನು ಗಂಭೀರವಾಗಿ ಪರಿಗಣಿಸಿದಂತೆ ಕಂಡುಬರುತ್ತಿಲ್ಲ. ಜೆಡಿಎಸ್‌ನೊಳಗಿರುವ ಆಂತರಿಕ ಹಾಗೂ ಬಹಿರಂಗ ಬಂಡಾಯ ಚುನಾವಣೆಯಲ್ಲಿ ಯಾವ ರೀತಿ ಪರಿಣಾಮವನ್ನು ಬೀರಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

click me!