ಹಸುವಿನ ನೋವಿಗೆ ಮರುಗಿದ ಬಂಗಾರದ ಮನುಷ್ಯ

By Suvarna Web DeskFirst Published Feb 28, 2018, 10:52 AM IST
Highlights

ಇವರ ಬಳಿ ಇನ್ನೂರಕ್ಕೂ ಹೆಚ್ಚು ಹಸುಗಳಿವೆ. ಓಹ್ ಇನ್ನೂರು ಹಸುಗಳಿದ್ದರೆ ಒಳ್ಳೆಯ ಆದಾಯವೇ ಬರುತ್ತಿರುತ್ತದೆ. ಹಾಲಿಗೆ ಒಳ್ಳೆಯ ಬೆಲೆ ಇರುವ ಇಂದಿನ ದಿನಗಳಲ್ಲಿ ಇನ್ನೂರಕ್ಕೂ ಹೆಚ್ಚು ಹಸುಗಳನ್ನು ಹೊಂದುವುದು ಎಂದರೆ ತಮಾಷೆಯ ವಿಚಾರವೇ ಎಂದು ನೀವು ಕೇಳಬಹುದು. ಆದರೆ ಅಸಲಿ ಸಮಾಚಾರ ಏನಪ್ಪಾ ಎಂದರೆ ಈ ಇನ್ನೂರು ಹಸುಗಳಿಂದ ಅವರಿಗೆ ಆದಾಯದ ಬದಲಾಗಿ ಖರ್ಚೇ ಹೆಚ್ಚಾಗುತ್ತಿದೆ. ಅದಕ್ಕೆ ಕಾರಣ ಅವರು ಇದನ್ನು ಹೈನೋದ್ಯಮವಾಗಿ ಮಾಡುತ್ತಿಲ್ಲ. ಅದಕ್ಕೆ ಬದಲಾಗಿ ಯಾವುದೇ ಫಲಾಪೇಕ್ಷೆ ಇಲ್ಲದೇ ವಯಸ್ಸಾದ ಹಸುಗಳನ್ನು ನೋಡಿಕೊಳ್ಳುತ್ತಿದ್ದಾರೆ.

ಬೆಂಗಳೂರು (ಫೆ.28): ಇವರ ಬಳಿ ಇನ್ನೂರಕ್ಕೂ ಹೆಚ್ಚು ಹಸುಗಳಿವೆ. ಓಹ್ ಇನ್ನೂರು ಹಸುಗಳಿದ್ದರೆ ಒಳ್ಳೆಯ ಆದಾಯವೇ ಬರುತ್ತಿರುತ್ತದೆ. ಹಾಲಿಗೆ ಒಳ್ಳೆಯ ಬೆಲೆ ಇರುವ ಇಂದಿನ ದಿನಗಳಲ್ಲಿ ಇನ್ನೂರಕ್ಕೂ ಹೆಚ್ಚು ಹಸುಗಳನ್ನು ಹೊಂದುವುದು ಎಂದರೆ ತಮಾಷೆಯ ವಿಚಾರವೇ ಎಂದು ನೀವು ಕೇಳಬಹುದು. ಆದರೆ ಅಸಲಿ ಸಮಾಚಾರ ಏನಪ್ಪಾ ಎಂದರೆ ಈ ಇನ್ನೂರು ಹಸುಗಳಿಂದ ಅವರಿಗೆ ಆದಾಯದ ಬದಲಾಗಿ ಖರ್ಚೇ ಹೆಚ್ಚಾಗುತ್ತಿದೆ. ಅದಕ್ಕೆ ಕಾರಣ ಅವರು ಇದನ್ನು ಹೈನೋದ್ಯಮವಾಗಿ ಮಾಡುತ್ತಿಲ್ಲ. ಅದಕ್ಕೆ ಬದಲಾಗಿ ಯಾವುದೇ ಫಲಾಪೇಕ್ಷೆ ಇಲ್ಲದೇ ವಯಸ್ಸಾದ ಹಸುಗಳನ್ನು ನೋಡಿಕೊಳ್ಳುತ್ತಿದ್ದಾರೆ.

ಅವರ ಹೆಸರು ಗದಗ ಜಿಲ್ಲೆಯ ಗಜೇಂದ್ರಗಡದ ವ್ಯಾಪಾರಿಯಾಗಿರುವ  ರಿಕಬ್‌ಚಂದ್ ಬಾಗಮಾರ. ತಂದೆಯ ಕನಸನ್ನು ನನಸು ಮಾಡಬೇಕು. ಸಮಾಜಕ್ಕೆ ನಮ್ಮ ಕೈಲಾದಷ್ಟು ಸಹಾಯ ಮಾಡಬೇಕು ಎನ್ನುವುದನ್ನೇ
ಮೂಲ ಉದ್ದೇಶವಾಗಿಸಿಕೊಂಡು ದುಡಿಯುತ್ತಿದ್ದಾರೆ ಇವರು.

ತಂದೆಯ ಕನಸು ನನಸು: 
ಳೆದ 20 ವರ್ಷಗಳಿಂದ ನಿರಂತರವಾಗಿ  ಗೋವುಗಳ ರಕ್ಷಣೆಯಲ್ಲಿ ತೊಡಗಿರುವ ರಿಕಬ್‌ಚಂದ್ ಅವರ ತಂದೆ ಸುಖರಾಜ ಅವರಿಗೆ ಪ್ರಾಣಿ, ಪಕ್ಷಿ ಅದರಲ್ಲಿಯೂ ಗೋವುಗಳನ್ನು ಕಂಡರೆ ತುಂಬಾ ಪ್ರೀತಿ ಇತ್ತು. ಗೋವುಗಳ ರಕ್ಷಣೆಗಾಗಿ ಒಂದು ಗೋಶಾಲೆ ನಿರ್ಮಾಣ ಮಾಡಬೇಕು ಎನ್ನುವ ಆಸೆಯನ್ನೂ ಇಟ್ಟುಕೊಂಡಿದ್ದರು. ಆದರೆ ಇದನ್ನು ಈಡೇರುವ ಮುನ್ನವೇ ತಿಂದೆ ಸುಖರಾಜ ಕಾಲವಾಗುತ್ತಾರೆ. ತಂದೆ ಇಲ್ಲದಿದ್ದರೂ ಅವರ ಕನಸನ್ನು ನಾವೆಲ್ಲಾ ಸೇರಿ ನನಸು ಮಾಡಬೇಕು ಎಂದುಕೊಂಡು ಕುಟುಂಬ ಸದಸ್ಯರಿಗೆ ತಂದೆಯ ಆಸೆ ಈಡೇರಿಸಬೇಕು ಎಂದು ಮನವರಿಕೆ ಮಾಡಿಕೊಡುತ್ತಾರೆ. ಅದೇ ವರ್ಷ 11 ಜಾನುವಾರುಗಳ ಮೂಲಕ ಗೋಶಾಲೆ ಪ್ರಾರಂಭಿಸುತ್ತಾರೆ. ಅದೇ ಗೋಶಾಲೆ ಇಂದು ದೊಡ್ಡದಾಗಿ ಬೆಳೆದು ಸುಮಾರು ಇನ್ನೂರಕ್ಕೂ  ಹೆಚ್ಚು ಜಾನುವಾರುಗಳಿಗೆ ಆಧಾರವಾಗಿದೆ.

ಖರ್ಚಿನ ಲೆಕ್ಕವಿಟ್ಟರೆ ವ್ಯಾಪಾರವಾಗುತ್ತೆ:

ಎಲ್ಲಿಯೂ ಎಷ್ಟು ಖರ್ಚಾಯಿತು ಎನ್ನುವುದರ ಲೆಕ್ಕವಿಟ್ಟಿಲ್ಲ. ಅದು ನನಗೆ  ಅಗತ್ಯವೂ ಇಲ್ಲ. ಒಂದು ವೇಳೆ ಖರ್ಚಿನ ಲೆಕ್ಕವಿಟ್ಟರೆ ನಂತರ ಲಾಭ, ನಷ್ಟಗಳು ಎದುರಾಗುತ್ತವೆ. ಹಾಗಾದಾಗ ಅದು ವ್ಯಾಪಾರವಾಗುತ್ತದೆ. ನಾನು ಯಾರಿಗೂ ಲೆಕ್ಕ ಕೊಡುವ ಅಗತ್ಯವಿಲ್ಲದಿದ್ದರಿಂದ ಯಾವುದೇ ಲೆಕ್ಕ ಬರೆದಿಡುವ ಅಗತ್ಯವೂ ಬಂದಿಲ್ಲ’ ಎಂದು ಹೇಳುವ ರಿಕಬಚಂದ್ ಅವರು  ತಮ್ಮ ಸ್ವಂತ ಹಣದಲ್ಲಿಯೇ ಇದುವರೆಗೂ ಗೋಶಾಲೆಯನ್ನು  ನಡೆಸಿಕೊಂಡು ಬಂದಿದ್ದಾರೆ. ಇಂದು ಈ ಗೋಶಾಲೆ ಗಜೇಂದ್ರಗಡಕ್ಕೆ ಮಾತ್ರ ಸೀಮಿತವಾಗದೇ ಕೊಪ್ಪಳ, ರಾಯಚೂರು, ಧಾರವಾಡ, ಬಾಗಲಕೋಟ ಜಿಲ್ಲೆಗಳಿಗೂ ತನ್ನ  ಸೇವಾ ಕ್ಷೇತ್ರ ವಿಸ್ತರಿಸಿ, ಅಲ್ಲಿರುವ ವಯಸ್ಸಾದ ಜಾನುವಾರುಗಳನ್ನು  ತಂದು ನೋಡಿಕೊಳ್ಳುತ್ತಿದ್ದಾರೆ. ಮೂಲತಃ ಬಟ್ಟೆ ವ್ಯಾಪಾರಿಯಾದ ರಿಖಬಚಂದ ಅವರು ತಮ್ಮ ಆದಾಯದ ಒಂದು ಪಾಲನ್ನು ಈ ರೀತಿ ತಂದೆಯ ಕನಸಿಗಾಗಿ, ಆತ್ಮತೃಪ್ತಿಗಾಗಿ ವಿನಿಯೋಗ ಮಾಡುತ್ತಿದ್ದಾರೆ.
 

ಥ್ಯಾಂಕ್ಸ್ ಹೇಳಿ:

‘ನನಗೆ ಇದ್ದದ್ದು ತಂದೆಯ ಕನಸನ್ನು ಹೇಗಾದರೂ ಮಾಡಿ ನನಸು ಮಾಡಬೇಕು ಎನ್ನುವ ಆಸೆ. ಅದಕ್ಕಾಗಿ ಕಾರ್ಯರಂಗಕ್ಕೆ ಇಳಿದಾಗ ಕೆಲವರು ಒಕ್ಕಲುತನ ಮಾಡುವವರೇ ಒಂದೆರೆಡು  ಹಸುಗಳನ್ನು ಸಾಕಲು ಹೆಣಗಾಡುತ್ತಿದ್ದಾರೆ. ಅಂತಹದರಲ್ಲಿ ನಿಮ್ಮಿಂದ ಹೇಗೆ ಇದೆಲ್ಲಾ ಸಾಧ್ಯವಾಗುತ್ತದೆ? ಗೋವುಗಳ ಸಾಕಣೆ ಅಷ್ಟು  ಸುಲಭವಲ್ಲ ಎಂದು ಭಯಪಡಿಸಿದ್ದರು. ಆದರೆ ತಂದೆಯ ಆಸೆಯನ್ನು  ಈಡೇರಿಸುವುದು ನನ್ನ ಕರ್ತವ್ಯ ಎಂದು ಧೈರ್ಯ ಮಾಡಿ ಮುನ್ನುಗ್ಗಿದ್ದರ ಪರಿಣಾಮ ಇಂದು 200 ದನಗಳು ಹಾಗೂ ಐದು ಕುದರೆಗಳು ಗೋ ಶಾಲೆಯಲ್ಲಿವೆ. ಅವುಗಳಿಗೆ ಯಾವುದೇ ತೊಂದರೆಯಾಗದ ಹಾಗೆ ನೋಡಿಕೊಳ್ಳುತ್ತಿದ್ದೇನೆ. ಗೋಶಾಲೆ ನಿರ್ವಹಣೆಗಾಗಿಯೇ ಹತ್ತಕ್ಕೂ  ಹೆಚ್ಚು ಮಂದಿ ನಿತ್ಯ ಕೆಲಸ ಮಾಡುತ್ತಿದ್ದಾರೆ. ಅವರೊಂದಿಗೆ ಬಿಡುವಿನ ವೇಳೆಯಲ್ಲಿ ನಾನೂ ಸೇರಿಕೊಳ್ಳುತ್ತೇನೆ. ನನ್ನ ಕುಟುಂಬ ನನ್ನ ಕಾರ್ಯಕ್ಕೆ  ಪೂರ್ಣವಾಗಿ ಬೆಂಬಲ ನೀಡುತ್ತಾ ಬಂದಿದ್ದಾರೆ’ ಎಂದು ಹೇಳುವ ರಿಕಬ್‌ಚಂದ್ ಬಾಗಮಾರ ಅವರ ಗೋ ಪ್ರೀತಿಗೆ ಒಂದು ಮೆಚ್ಚುಗೆ ಸೂಚಿಸಿ. ದೂ.    9449440044

click me!