ಮೋದಿ ಸರಕಾರದ ನೋಟ್ ಬ್ಯಾನ್ ಬಗ್ಗೆ ಮಾಜಿ ಆರ್'ಬಿಐ ಗವರ್ನರ್ ಹೇಳೋದೇನು?

By Suvarna Web DeskFirst Published Sep 3, 2017, 5:43 PM IST
Highlights

ರಘುರಾಮ್ ರಾಜನ್ ಅವರು ಆರ್'ಬಿಐ ಗವರ್ನರ್ ಆಗಿದ್ದಾಗಲೇ ನೋಟ್ ಬ್ಯಾನ್ ಕುರಿತು ಸರಕಾರದಲ್ಲಿ ಚಿಂತನೆ ನಡೆದಿತ್ತು. ಆದರೆ, ಅನಿರೀಕ್ಷಿತ ರೀತಿಯಲ್ಲಿ ದಿಢೀರನೇ ಘೋಷಣೆ ಮಾಡುವ ಯೋಜನೆ ಇರಲಿಲ್ಲ, ಅಥವಾ ಆ ನಿರ್ಧಾರವನ್ನು ಗೌಪ್ಯವಾಗಿ ಇಟ್ಟುಕೊಳ್ಳಲಾಗಿತ್ತು.

ನವದೆಹಲಿ(ಸೆ. 03): ಮೋದಿ ಸರಕಾರದ ಅತೀ ಜನಪ್ರಿಯ ಮತ್ತು ಅತೀ ವಿವಾದಿತ ಕ್ರಮಗಳಲ್ಲೊಂದೆನಿಸಿದ ನೋಟು ಅಪಮೌಲ್ಯೀಕರಣ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ? ನೋಟ್ ಬ್ಯಾನ್'ನ ಉದ್ದೇಶ ಈಡೇರಿತೇ? ಎಂಬ ಕುರಿತು ಚರ್ಚೆಗಳು ನಡೆಯುತ್ತಲೇ ಇವೆ. ಆದರೆ, ಸ್ಪಷ್ಟ ಉತ್ತರ ಸಿಕ್ಕಿಲ್ಲ. ನೋಟ್ ಬ್ಯಾನ್ ಆಗುವ ಸ್ವಲ್ಪ ಮುಂಚಿನವರೆಗೂ ಆರ್'ಬಿಐ ಗವರ್ನರ್ ಆಗಿದ್ದ ರಘುರಾಮ್ ರಾಜನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಡೀಮಾನಿಟೈಸೇಶನ್'ನಿಂದ ಆರ್ಥಿಕವಾಗಿ ಯಶಸ್ಸು ಸಿಕ್ಕಿರುವುದು ಸದ್ಯಕ್ಕಂತೂ ಕಾಣುತ್ತಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಇದರ ಪರಿಣಾಮ ಕಂಡುಬಂದರೂ ಬರಬಹುದು ಎಂಬುದು ಅವರ ಅಭಿಪ್ರಾಯವಾಗಿದೆ.

"ನೋಟ್ ಬ್ಯಾನ್'ನ ಉದ್ದೇಶ ಒಳ್ಳೆಯದೇ ಇತ್ತು. ಈ ದಿನ ನಿಂತು ನೋಡಿದಾಗ, ಅದು ಆರ್ಥಿಕವಾಗಿ ಯಶಸ್ವಿಯಾಗಿದೆ ಅಂತ ಅನಿಸೋದಿಲ್ಲ. ಆದರೆ, ಇದರ ಸಾಧಕ ಬಾಧಕವನ್ನು ಕಾಲವೇ ಉತ್ತರಿಸಬೇಕು," ಎಂದು ರಘುರಾಮ್ ರಾಜನ್ ಹೇಳಿದ್ದಾರೆ.

ರಘುರಾಮ್ ರಾಜನ್ ಅವರು ಆರ್'ಬಿಐ ಗವರ್ನರ್ ಆಗಿದ್ದಾಗಲೇ ನೋಟ್ ಬ್ಯಾನ್ ಕುರಿತು ಸರಕಾರದಲ್ಲಿ ಚಿಂತನೆ ನಡೆದಿತ್ತು. ಆದರೆ, ಅನಿರೀಕ್ಷಿತ ರೀತಿಯಲ್ಲಿ ದಿಢೀರನೇ ಘೋಷಣೆ ಮಾಡುವ ಯೋಜನೆ ಇರಲಿಲ್ಲ, ಅಥವಾ ಆ ನಿರ್ಧಾರವನ್ನು ಗೌಪ್ಯವಾಗಿ ಇಟ್ಟುಕೊಳ್ಳಲಾಗಿತ್ತು. ಹೊಸ ನೋಟುಗಳನ್ನು ಚಲಾವಣೆಗೆ ತರುವುದರ ಕುರಿತು ರಾಜನ್ ಜೊತೆ ಚರ್ಚೆ ನಡೆಸಿತ್ತು. ನೋಟ್ ಬ್ಯಾನ್ ಮಾಡಿದರೆ ಆಗುವ ಸಾಧಕಗಳೇನು ಬಾಧಕಗಳೇನು ಎಂಬ ಕುರಿತೂ ಚರ್ಚೆ ನಡೆಸಲಾಗಿತ್ತು. ಆದರೆ, ನೋಟ್ ಬ್ಯಾನ್ ಯಾವಾಗ ಮಾಡಬೇಕೆಂದು ಎಲ್ಲಿಯೂ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ನೋಟ್ ಬ್ಯಾನ್ ಆದಾಗ ಸ್ವತಃ ರಘುರಾಮ್ ರಾಜನ್ ಅವರಿಗೇ ಅಚ್ಚರಿಯಾಗಿತ್ತು. ಆ ಕ್ಷಣಕ್ಕೆ ಅವರು ಮಾಧ್ಯಮಗಳಲ್ಲಿ ಏನು ಪ್ರತಿಕ್ರಿಯೆ ಕೊಡಬೇಕೆಂಬ ಗೊಂದಲದಲ್ಲಿ ಸಿಲುಕುವಂತಾಗಿದ್ದು ಸುಳ್ಳಲ್ಲ.

ಕಾಳಧನಿಕರನ್ನು ಹಿಡಿಯಲು ಈಗಲೂ ಸಾಧ್ಯವೇ?
ನೋಟ್ ಬ್ಯಾನ್ ಮಾಡಿದಾಗ ಸರಕಾರವು ಶೇ. 90ರಷ್ಟು ನೋಟುಗಳಷ್ಟೇ ವಾಪಸ್ ಬರಬಹುದೆಂದು ನಿರೀಕ್ಷಿಸಿತ್ತು. ಆದರೆ, ಶೇ.99ರಷ್ಟು ನೋಟುಗಳು ಸರಕಾರಕ್ಕೆ ಮರಳಿವೆ. ಇದು ನೋಟ್ ಬ್ಯಾನ್'ನ ಮೂಲ ಉದ್ದೇಶ ಸಫಲವಾಗಿಲ್ಲ ಎಂಬುದನ್ನು ಸೂಚಿಸುತ್ತದೆ. ಆರ್'ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಕೂಡ ಇದೇ ಮಾತು ಹೇಳುತ್ತಾರಾದರೂ, ಎಲ್ಲಾ ಹಣಗಳು ಬಂದಿರುವ ಹಿನ್ನೆಲೆಯಲ್ಲಿ ಕಾಳಧನಿಕರ ಹಣದ ಮೂಲವನ್ನು ಪತ್ತೆ ಮಾಡಲು ಸರಿಯಾದ ಸಮಯ ಇದಾಗಿರಬಹುದೆಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಅನುಮಾನಾಸ್ಪದವಾಗಿ ಹಣದ ಠೇವಣಿಯಾಗಿರುವ ಬ್ಯಾಂಕ್ ಖಾತೆಗಳ ಬಗ್ಗೆ ತನಿಖೆ ನಡೆಸಿದರೆ ಕಪ್ಪುಹಣವನ್ನು ಪತ್ತೆ ಹಚ್ಚಲು ಸಾಧ್ಯವಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೇ, ನೋಟ್ ಬ್ಯಾನ್'ನಿಂದ ಆಗಿರುವ ಇನ್ನೊಂದು ಒಳ್ಳೆಯ ಬೆಳವಣಿಗೆ ಎಂದರೆ ಕ್ಯಾಷ್'ಲೆಸ್ ವಹಿವಾಟು ಎಂದು ಅವರು ಹೇಳಿದ್ದಾರೆ.

click me!