ಗುರುಗಳಿಂದಲೇ ನೀನಿನ್ನು ಬರಬೇಡ ಎನಿಸಿಕೊಂಡಾಕೆ ಭಾಗವತೆಯಾಗಿ ಬೆಳೆದ ಕಥೆ

By Kannadaprabha NewsFirst Published Nov 22, 2021, 4:14 PM IST
Highlights

ಚಿಕ್ಕವಯಸ್ಸಿನಲ್ಲೇ ಅಪ್ಪನನ್ನು ಕಳೆದುಕೊಂಡು, ಅಜ್ಜಿಮನೆಯ ಬಡತನದ ನಡುವೆಯೇ ಶಾಲೆ ಕಲಿಯದೇ ಹಿಂದಿ ವಿಶಾರದ ಪರೀಕ್ಷೆಗಳನ್ನು ಪಾಸು ಮಾಡುತ್ತಾ, ಸಂಗೀತವನ್ನೂ ಕಲಿಯುತ್ತಾ, ಸಂಗೀತದಲ್ಲಿ ಹದ ಕಂಡುಕೊಳ್ಳುತ್ತಿರುವಾಗಲೇ ಗುರುಗಳಿಂದ ‘ಇನ್ನು ನೀನು ಬರುವುದು ಬೇಡ’ ಎಂದು ಹೇಳಿಸಿಕೊಂಡ ಹುಡುಗಿಗೆ ಮುಂದೆ ತಾನು ಬಹುದೊಡ್ಡ ಯಕ್ಷಗಾನ ಭಾಗವತೆಯಾಗಿ ಬೆಳೆಯುತ್ತೇನೆ ಅಂತ ಕನಸೂ ಬಿದ್ದಿರಲಿಕ್ಕಿಲ್ಲ

ಯಕ್ಷ ರಂಗದ ಮಹಿಳಾ ದನಿಯ ಎತ್ತರ ವಿಸ್ತಾರ, ಯಕ್ಷಗಾನ ಲೀಲಾವಳಿ

(ಯಕ್ಷಗಾನ ರಂಗದ ಪ್ರಥಮ ಮಹಿಳಾ ಭಾಗವತರಾದ ಲೀಲಾವತಿ ಬೈಪಡಿತ್ತಾಯ ಆತ್ಮಕಥನ)

ನಿರೂಪಣೆ: ವಿದ್ಯಾರಶ್ಮಿ ಪೆಲತ್ತಡ್ಕ, ಪ್ರ: ಅಭಿನವ ಪ್ರಕಾಶನ ಬೆಂಗಳೂರು

ಅದು ನಾಲ್ಕು ದಶಕಗಳ ಹಿಂದಿನ ಕಾಲ. ಇರುಳಿನ ನೀರವ ಮೌನದಲ್ಲಿ ಚೆಂಡೆ ಸದ್ದಿನೊಂದಿಗೆ ಹೊಸ ಹೆಣ್ಣು ದನಿಯ ಭಾಗವತಿಕೆಯೂ ಮಾರ್ದನಿಸತೊಡಗಿತ್ತು. ತನ್ನ ದನಿಗೆ ಕುತೂಹಲ, ಉಡಾಫೆ, ವ್ಯಂಗ್ಯ, ಮೆಚ್ಚುಗೆ ಏಕಕಾಲದಲ್ಲಿ ಕಿವಿಗೆ ಬಿದ್ದಾಗ ಗುಬ್ಬಚ್ಚಿಯಂತೆ ಮುದುಡಿ ಕೇಳಿಸಿಕೊಳ್ಳುತ್ತಿದ್ದ ಆ ಹೆಣ್ಣು ಜೀವ ಬಳಿಕ ಯಕ್ಷ ಜಗತ್ತಿನಲ್ಲಿ ಏರಿದ ಎತ್ತರ ಸಾಮಾನ್ಯದ್ದಲ್ಲ. ಭಾಗವತಿಕೆಯಲ್ಲಿ ತನ್ನದೇ ಶೈಲಿ ಸೃಷ್ಟಿಸಿ, ನೂರಾರು ಮಕ್ಕಳಿಗೆ ಯಕ್ಷಗಾನ ಕಲಿಸಿ ಆ ಪರಂಪರೆಯನ್ನು ಮುಂದುವರಿಸಿದ್ದು ಈ ಹೆಣ್ಮಗಳ ಹೆಗ್ಗಳಿಕೆ. ಯಕ್ಷ ಜಗತ್ತಿನಲ್ಲಿ ‘ಲೀಲಮ್ಮ’ ಅಂತಲೇ ಪ್ರಸಿದ್ಧರಾದ ಲೀಲಾವತಿ ಬೈಪಡಿತ್ತಾಯರ ಆತ್ಮಕಥನ ಪುಟಗಳನ್ನು ತಿರುವುತ್ತಾ ಹೋದರೆ ಯಾವುದೋ ಕಾಲಕ್ಕೆ ಹೋದಂತೆ ಭಾಸವಾಗುತ್ತದೆ. ಚಿಕ್ಕವಯಸ್ಸಿನಲ್ಲೇ ಅಪ್ಪನನ್ನು ಕಳೆದುಕೊಂಡು, ಅಜ್ಜಿಮನೆಯ ಬಡತನದ ನಡುವೆಯೇ ಶಾಲೆ ಕಲಿಯದೇ ಹಿಂದಿ ವಿಶಾರದ ಪರೀಕ್ಷೆಗಳನ್ನು ಪಾಸು ಮಾಡುತ್ತಾ, ಸಂಗೀತವನ್ನೂ ಕಲಿಯುತ್ತಾ, ಸಂಗೀತದಲ್ಲಿ ಹದ ಕಂಡುಕೊಳ್ಳುತ್ತಿರುವಾಗಲೇ ಗುರುಗಳಿಂದ ‘ಇನ್ನು ನೀನು ಬರುವುದು ಬೇಡ’ ಎಂದು ಹೇಳಿಸಿಕೊಂಡ ಹುಡುಗಿಗೆ ಮುಂದೆ ತಾನು ಬಹುದೊಡ್ಡ ಯಕ್ಷಗಾನ ಭಾಗವತೆಯಾಗಿ ಬೆಳೆಯುತ್ತೇನೆ ಅಂತ ಕನಸೂ ಬಿದ್ದಿರಲಿಕ್ಕಿಲ್ಲ.

ಆದರೆ ಯಥಾರ್ಥದಲ್ಲಿ ಅದು ಆಯಿತು. ತಾನು ಬಹಳ ಪ್ರೀತಿಸುತ್ತಿದ್ದ ಸಂಗೀತ ಕ್ಷೇತ್ರದಲ್ಲಿ ಯಕ್ಷಗಾನ(Yakshagana) ಭಾಗವತಿಕೆಗೆ ಇವರು ಇಳಿದದ್ದೇ ಅಚ್ಚರಿಯ ಬೆಳವಣಿಗೆ. ಚೆಂಡೆ ಮದ್ದಳೆ ವಾದಕರಾಗಿದ್ದ ಪತಿ ಹರಿನಾರಾಯಣ ಬೈಪಡಿತ್ತಾಯರ ಜೊತೆಗೆ ಸಂಜೆ ಮೇಲೆ ಸೈಕಲ್ಲೇರಿ ಆಟಗಳಿಗೆ ಹೋಗುತ್ತಿದ್ದದು, ಅಲ್ಲಿ ಇವರಿಗಾಗುತ್ತಿದ್ದ ಅನುಭವಗಳನ್ನೆಲ್ಲ ಈ ಕೃತಿಯಲ್ಲಿ ಆಪ್ತವಾಗಿ ನಿರೂಪಿಸಲಾಗಿದೆ. ಹೆಣ್ಣು ಜಗತ್ತು ದೂರವೇ ಉಳಿದಿದ್ದ ಯಕ್ಷಗಾನದಲ್ಲಿ ಲೀಲಾವತಿ ಬೈಪಡಿತ್ತಾಯರ ಹದವಾದ ದನಿ ಹರಿಯುತ್ತಲೇ ಹೋದದ್ದು, ಅದರ ವಿಸ್ತಾರ ಹೆಚ್ಚುತ್ತಲೇ ಹೋದ ಬಗೆಯನ್ನು ಓದುತ್ತಲೇ ತಿಳಿದರೆ ಚೆಂದ. ಅನೇಕ ಕಾರಣಗಳಿಗೆ ಓದಲೇ ಬೇಕಾದ ಪುಸ್ತಕವಿದು.

ಶಂಕರ್‌ - ಜೈಕಿಶನ್‌ ಜೀವನ ದರ್ಶನ, ಅಮರ ಸಂಗೀತಗಾರ ಜೋಡಿ ಶಂಕರ್‌-ಜೈಕಿಶನ್‌

ಲೇ: ವಿ ಜಿ ಭಟ್ಟ,  ಪ್ರೇಮ ಪ್ರಕಾಶನ ಮೈಸೂರು

ಹಿಂದಿ ಚಿತ್ರರಂಗದ ಶಂಕರ್‌ ಹಾಗೂ ಜೈ ಕಿಶನ್‌ ಹೆಸರು ಕೇಳದವರು ಕಡಿಮೆ. ಈ ಜೋಡಿಯ ಸಂಗೀತ ಜೀವನ, ಅದ್ಭುತ ಕಾರ್ಯಗಳ ಬಗೆಗೆ ಬೆಳಕು ಚೆಲ್ಲುವ ಕೃತಿ ‘ಅಮರ ಸಂಗೀತಗಾರ ಜೋಡಿ ಶಂಕರ್‌ ಜೈಕಿಶನ್‌’. ರಾಜ್‌ಕಪೂರ್‌ ಅವರಿಂದ ಮೊದಲ ಬಾರಿ ಸಂಗೀತ ನಿರ್ದೇಶನಕ್ಕಿಳಿದ ಶಂಕರ್‌ ಜೈ ಕಿಶನ್‌ ಜೋಡಿ ಮುಂದೆ ಯಾವೆಲ್ಲ ಬಾಲಿವುಡ್‌(Bollywood) ಸಿನಿಮಾಗಳಿಗೆ ಸಂಗೀತ ನೀಡುತ್ತಾ ಹೋದರು, ಅವರ ಸಂಗೀತ ನಿರ್ದೇಶನದ ಚಿತ್ರಗಳಿಗೆ ಹಾಡಿದವರೆಲ್ಲ ಯಾವ ಎತ್ತರಕ್ಕೆ ಏರಿದರು ಅನ್ನುವ ವಿವರಗಳಿವೆ. ಈ ಜೋಡಿಯಿಂದ ಹೊರಬಂದ ಪ್ರಸಿದ್ಧ ಹಾಡುಗಳ(Song) ವಿವರಗಳೂ ಇವೆ. ಕೇವಲ ವಿವರಗಳು ಮಾತ್ರವಲ್ಲ, ಅಲ್ಲಲ್ಲಿ ಘಟನೆಗಳನ್ನೂ ಸೇರಿಸುತ್ತಾ, ಇವರಿಬ್ಬರ ಸಂಗೀತ(Music) ಸಂಯೋಜನೆಯ ವಿಶೇಷತೆಗಳನ್ನು ವಿವರಿಸುತ್ತಾ ಆಸಕ್ತಿ ಹೆಚ್ಚುತ್ತಾರೆ. ಸಾಮಾನ್ಯವಾಗಿ ನಟ ನಟಿಯರ ತಾರಾ ಬದುಕಿನ ವಿವರಗಳು ನಮಗೆ ಅಲ್ಲಲ್ಲಿ ಕೆಲವೊಮ್ಮೆ ಸಮಗ್ರವಾಗಿ ಸಿಗುತ್ತಾ ಹೋಗುತ್ತವೆ. ಆದರೆ ಸಂಗೀತ ನಿರ್ದೇಶಕರು ಎಷ್ಟೇ ಪ್ರಸಿದ್ಧರಾದರೂ ಅವರ ಬಗೆಗಿನ ಅಪರೂಪದ ವಿವರಗಳು ಸಿಗುವುದೂ ಅಪರೂಪವೇ. ಈ ಕೃತಿ ಆ ಕೊರತೆಯನ್ನು ನೀಗಿಸುತ್ತದೆ. ಈ ಕೃತಿಯ ಆಯ್ದ ಭಾಗ ಶಂಕರ್‌-ಜೈಕಿಶನ್‌ ಹಾಗೂ ಇತರ ಪ್ರಸಿದ್ಧ ಸಂಗೀತ ನಿರ್ದೇಶಕರ ಹೃದಯ ವೈಶಾಲ್ಯತೆಗೆ ಸಾಕ್ಷಿಯಂತಿದೆ.

Yakshagana : 2 ವರ್ಷಗಳ ಬಳಿಕ ಯಕ್ಷಗಾನ ಮೇಳಗಳ ತಿರುಗಾಟ ಆರಂಭ

‘ಒಮ್ಮೆ ಸಂಗೀತ ನಿರ್ದೇಶಕ ಸಚಿನ್‌ ದೇವ್‌ ಬರ್ಮನ್‌ ಅವರು ವಿದೇಶಕ್ಕೆ ಹೋಗಿದ್ದರು. ಮುಂಜಾನೆಯ ವಾಯುವಿಹಾರದಲ್ಲಿದ್ದಾಗ ಒಂದು ಹೊಲದಲ್ಲಿ ಓರ್ವ ರೈತ ‘ಆವಾರಾಹೂ’ ಎಂಬ ಹಾಡನ್ನು ಅವನ ಭಾಷೆಯಲ್ಲಿ ಗುಣಗುಣಿಸುತ್ತಿದ್ದದ್ದನ್ನು ಕಂಡು ಆನಂದಿತರಾದರು. ವಾಪಾಸ್‌ ಬಂದೊಡನೆ ಎಸ್‌ ಡಿ ಬರ್ಮನ್‌ ಅವರು ಈ ವಿಷಯವನ್ನು ಶಂಕರ್‌ ಅವರೊಂದಿಗೆ ಪ್ರಸ್ತಾಪಿಸಿ ತುಂಬಾ ಪ್ರಶಂಸಿಸಿದರು. ರಾಹುಲ್‌ ದೇವ ಬರ್ಮನ್‌ ಸಂಗೀತ ನೀಡಿದ ‘ತೀಸ್ರಿ ಮಂಜಿಲ್‌’ ಚಿತ್ರ ಯಶಸ್ವಿಯಾದಾಗ ರಾಹುಲರನ್ನು ಕಂಡು ಪ್ರಥಮತಃ ಅಭಿನಂದಿಸಿದ ಸಂಗೀತಗಾರರೆಂದರೆ ಜೈ ಕಿಶನರು.’

click me!