ತಾನೇ ಕಟ್ಟಿದ ಕಂಪನಿ ಮಾರಿ ಕೃಷಿ ಆರಂಭಿಸಿದ ತರುಣ

By Suvarna Web DeskFirst Published Mar 26, 2018, 7:27 PM IST
Highlights

ತೀರ್ಮಾನ ಮಾಡಿದರೆ ಸಾಕಾಗುವುದಿಲ್ಲವಲ್ಲ. ಕೃಷಿ ಗೊತ್ತಿರಬೇಕು. ಆದರೆ ಸಾಂಪ್ರದಾಯಿಕ ಪದ್ಧತಿಯ ಕೃಷಿ ಅಜಯ್‌ಗೆ ಗೊತ್ತಿರಲ್ಲ. ಇದೇ ಹೊತ್ತಲ್ಲೇ ಅವರಿಗೆ ಪುಣೆಯಲ್ಲಿದ್ದ ಒಬ್ಬ ವ್ಯಕ್ತಿಯ ಕತೆ ತಿಳಿಯಿತು. ಆ ಪುಣೆಯ ವ್ಯಕ್ತಿ ಹೈಡ್ರೋಪೋನಿಕ್ ಪದ್ಧತಿಯಲ್ಲಿ ಕೃಷಿ ಮಾಡುತ್ತಿದ್ದ. 

ಆಧುನಿಕ ಯುಗದ ತರುಣ, ತರುಣಿಯರ ಆಲೋಚನೆಗಳನ್ನು ಊಹಿಸುವುದು ಕಷ್ಟ. ಒಂದ್ಸಲ ಅತ್ಯುತ್ತಮ ಸಂಬಳ ಸಿಗುವ ಕೆಲಸಬೇಕು ಅಂತ ಬಯಸುವವರೇ  ಮತ್ತೊಮ್ಮೆ ತಮ್ಮ ಪ್ಯಾಷನ್ ಇದಲ್ಲ ಎಂದು ಅರಿತುಕೊಂಡು ತಮ್ಮಿಷ್ಟದ ಕೆಲಸ ಮಾಡಲು ಹೊರಡುತ್ತಾರೆ.  ಅದರಲ್ಲಿ ಇಂಜಿನಿಯರಿಂಗ್ ಕಲಿತು ಬೇರೆ ಬೇರೆ ಕ್ಷೇತ್ರಗಳಿಗೆ ಹೋದವರ ಸಂಖ್ಯೆ ಜಾಸ್ತಿ. ಅಂಥವರ ಸಾಲಿಗೆ ಹೊಸ ಸೇರ್ಪಡೆ ಕಾರವಾರದ ಅಜಯ್ ನಾಯ್ಕ್.

ಕೃಷಿಗಾಗಿ ಕಂಪನಿ ಮಾರಾಟ  
ಕಾರವಾರ ಮೂಲದ ಅಜಯ್ ಇಂಜಿನಿಯರಿಂಗ್ ಕಲಿತು ಗೋವಾದ ಐಟಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿ ಕೆಲಸ ಮಾಡುತ್ತಿದ್ದ ವೇಳೆಯೇ ತಾನು ಮತ್ತಿನ್ನೇನಾದರೂ ಮಾಡಬೇಕಲ್ಲ ಅಂತ ಅನ್ನಿಸುತ್ತಿತ್ತು. ತನ್ನದೇ ಕಂಪನಿ ತೆರೆಯುವ ಆಸೆಯೂ ಇತ್ತು. ಆ ಆಸೆ ಅವರನ್ನು ಸುಮ್ಮನೆ ಕೂರಲು ಬಿಡಲಿಲ್ಲ. ಕೆಲಸವನ್ನು ಬಿಟ್ಟು ತಾನೇ ಒಂದು ಕಂಪನಿ ತೆರೆದರು. ಮೊಬೈಲ್ ಅಪ್ಲಿಕೇಷನ್‌ಗಳನ್ನು ತೆರೆಯುವ ಒಂದು ಕಂಪನಿ. ಆ ಕಂಪನಿಯ ಕೆಲಸದಲ್ಲೇ ಸಮಯ ಉರುಳುತ್ತಿತ್ತು. ಅಜಯ್‌ಗೆ ತನ್ನ ದಾರಿ ಇದಲ್ಲ ಅಂತನ್ನಿಸುವುದಕ್ಕೆ ಶುರುವಾಯಿತು. ಮತ್ತೆ ಯಾವುದು ತನ್ನ ದಾರಿ ಎಂದು ಮನಸ್ಸನ್ನು ಕೇಳಿಕೊಂಡಾಗ ಸಿಕ್ಕ ಉತ್ತರ ಕೃಷಿ. 

ಅಜಯ್ ಕೃಷಿ ಮಾಡಬೇಕು ಅಂತ ನಿರ್ಧರಿಸಿಬಿಟ್ಟರು. ತೀರ್ಮಾನ ಮಾಡಿದರೆ ಸಾಕಾಗುವುದಿಲ್ಲವಲ್ಲ. ಕೃಷಿ ಗೊತ್ತಿರಬೇಕು. ಆದರೆ ಸಾಂಪ್ರದಾಯಿಕ ಪದ್ಧತಿಯ ಕೃಷಿ ಅಜಯ್‌ಗೆ ಗೊತ್ತಿರಲ್ಲ. ಇದೇ ಹೊತ್ತಲ್ಲೇ ಅವರಿಗೆ ಪುಣೆಯಲ್ಲಿದ್ದ ಒಬ್ಬ ವ್ಯಕ್ತಿಯ ಕತೆ ತಿಳಿಯಿತು. ಆ ಪುಣೆಯ ವ್ಯಕ್ತಿ ಹೈಡ್ರೋಪೋನಿಕ್ ಪದ್ಧತಿಯಲ್ಲಿ ಕೃಷಿ ಮಾಡುತ್ತಿದ್ದ. ಅದನ್ನು ನೋಡಿದ ಅಜಯ್ ತಾನೂ ಹೈಡ್ರೋ ಪೋನಿಕ್ ಪದ್ಧತಿಯಲ್ಲಿ ಕೃಷಿ ಮಾಡಬಹುದಲ್ಲ ಎಂದು ಯೋಚಿಸಿ ದರು. ಆಮೇಲೆ ತಡ ಮಾಡಲಿಲ್ಲ. ನೇರ ಪುಣೆಗೆ ಹೋಗಿ ಆ ವ್ಯಕ್ತಿಯ ಕೃಷಿ ವಿಧಾನವನ್ನೆಲ್ಲಾ ನೋಡಿಬಿಟ್ಟರು. ಹೇಗೆ ಏನು ಎತ್ತ ಅಂತೆಲ್ಲಾ ತಿಳಿದುಕೊಂಡು ಬಂದ ಅಜಯ್ ತಾನೂ ಹೈಡ್ರೋಪೋನಿಕ್ ವಿಧಾನದಲ್ಲೇ ಕೃಷಿ ಮಾಡುವ ತೀರ್ಮಾನಕ್ಕೆ ಬಂದು ಬಿಟ್ಟರು. ತಾನೇ ಕಟ್ಟಿದ ಕಂಪನಿಯನ್ನು ಕೃಷಿ ಪ್ರೇಮಕ್ಕಾಗಿ ಮಾರಿಬಿಟ್ಟರು.

ಏನಿದು ಹೈಡ್ರೋಪೋನಿಕ್?
ಇದೊಂದು ಆಧುನಿಕ ಕೃಷಿ ಪದ್ಧತಿ. ಈ ಪದ್ಧತಿಯಲ್ಲಿ ಮಣ್ಣೇ ಬಳಸದೆ ಹಣ್ಣು, ತರಕಾರಿಗಳನ್ನು ಬೆಳೆಸಲಾಗುತ್ತದೆ. ಬರೀ ನೀರು ಮತ್ತು ಗಿಡಗಳಿಗೆ ಬೇಕಾದ ಪೋಷಕಾಂಶಗಳು ಸಿಕ್ಕರೆ ಸಾಕು. ಸರಿಯಾಗಿ ನೀರಿನ ಲಭ್ಯತೆ ಇರಬೇಕು ಮತ್ತು ಟೆಂಪರೇಚರ್ ಒಂದೇ ರೀತಿ ಇರಬೇಕು. ಅದೆರಡು ಏರುಪೇರಾಗುವಂತಿಲ್ಲ. ಈ ವಿಧಾನಕ್ಕೆ ಜಮೀನು ಬೇಕು ಅಂತೆಯೂ ಇಲ್ಲ. ಬಿಲ್ಡಿಂಗಿನೊಳಕ್ಕೆ ಈ ಕೃಷಿ ಮಾಡಬಹುದು. ಮೂಲತಃ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಅಜಯ್ ನಾಯ್ಕ್ ಅವರಿಗೆ ಈ ಪದ್ಧತಿ ಬೇಗ ಅರ್ಥವಾಯಿತು. ಹಾಗಾಗಿ ಅವರು ಇನ್ನೂ ಒಂದು  ಹೆಜ್ಜೆ ಹೋಗಿ ವರ್ಟಿಕಲ್ ಹೈಡ್ರೋಪೋನಿಕ್ ಫಾರ್ಮ್ ಅನ್ನು ಸೃಷ್ಟಿಸಿದರು. 

ಮೇಲಿಂದ ಮೇಲೆ ಮೂರು ಲೇಯರ್‌ನಲ್ಲಿ ಗಿಡಗಳನ್ನು ಬೆಳೆಸಲಾಗುತ್ತದೆ. ಹಾಗಾಗಿ ಈ ಕೃಷಿ ಪದ್ಧತಿಗೆ ತುಂಬಾ ಕಡಿಮೆ ಜಾಗ ಇದ್ದರೂ ಸಾಕಾಗುತ್ತದೆ.
ಅಜಯ್ ಈ ಕೃಷಿ ಮಾಡಬೇಕು ಎಂದುಕೊಂಡು ಕಂಪನಿ ಮಾರಿ ಸ್ವಲ್ಪ ಹಣ ಒಟ್ಟು ಮಾಡಿಕೊಂಡರು. ನಂತರ ಇಬ್ಬರು ಗೆಳೆಯರ ಜೊತೆ ಸೇರಿಕೊಂಡು ಈ ಫಾರ್ಮ್ ಅನ್ನು ಶುರು ಮಾಡಿದ್ದಾರೆ. ಸದ್ಯ ಸಣ್ಣದಾಗಿ ಆರಂಭ ಮಾಡಿದ್ದು ಮುಂದೆ ಈ ಫಾರ್ಮ್ ಅನ್ನು ದೊಡ್ಡದಾಗಿ ಬೆಳೆಸುವ ಆಲೋಚನೆ ಇದೆ.

ಕೃಷಿಯತ್ತ ತರುಣರು
ಅಜಯ್ ಈ ಫಾರ್ಮ್ ಕಟ್ಟಿದ್ದು ಗೋವಾದ ಕರಸವಾಡದಲ್ಲಿ. ಇವರ ಫಾರ್ಮ್‌ನಲ್ಲಿ ಸದ್ಯ ಆರು ಮಂದಿ ಕೆಲಸ ಮಾಡುತ್ತಾರೆ. ಅಜಯ್ ಮಾತ್ರ ತನ್ನ ಫಾರ್ಮ್ ಅನ್ನು ಬೆಳೆಸುವ ಯೋಚನೆಯಲ್ಲೇ ಇರುತ್ತಾರೆ. ಈಗ ಜನಸಂಖ್ಯೆ ಜಾಸ್ತಿಯಾಗಿದೆ, ನೀರಿನ ಲಭ್ಯತೆ ಕಡಿಮೆಯಾಗಿದೆ, ಹಾಗಾಗಿ ಮುಂದೆ ಹೈಡ್ರೋಪೋನಿಕ್ ಪದ್ಧತಿ  ಲಾಭದಾಯಕವಾಗಲಿದೆ ಅನ್ನುವುದು ಅಜಯ್ ಅಭಿಪ್ರಾಯ. 'ನಮ್ಮ ದೇಶದ ರೈತರು ಕೃಷಿಯಲ್ಲಿ ಟೆಕ್ನಾಲಜಿಯನ್ನು ಬಳಸಿಕೊಳ್ಳಲು ಹಿಂಜರಿಯುತ್ತಾರೆ. ಯಾಕೆಂದರೆ ಅವರು ಈಗಾಗಲೇ ಸೋತು ಸುಣ್ಣವಾಗಿರುತ್ತಾರೆ. ಆದರೆ ಟೆಕ್ನಾಲಜಿಯನ್ನು ಬಳಸಿಕೊಂಡು ಕೃಷಿ ಮಾಡಬಹುದು' ಎನ್ನುವ ಅಜಯ್ ತಮ್ಮ ಈ ಕೃಷಿ ಸಾಹಸದಿಂದ ಮತ್ತಷ್ಟು ಮಂದಿಯನ್ನು ಕೃಷಿಯತ್ತ ಸೆಳೆದಿದ್ದಾರೆ. ಒಟ್ಟಾರೆ ನೋಡುವುದಾದರೆ ಅಜಯ್ ಕೃಷಿಗೆ ಮರಳಿದ್ದು ತುಂಬಾ ಒಳ್ಳೆಯ ವಿಷಯ. ತರುಣ, ತರುಣಿಯರೆಲ್ಲಾ ಟೆಕ್ನಾಲಜಿ ಪ್ರಪಂಚಕ್ಕೆ ಪ್ರವೇಶಿಸಿ ಕೃಷಿಯಿಂದ ದೂರಾದ ಸನ್ನಿವೇಶದಲ್ಲಿ ಈ ಯುವಕ ಕೃಷಿಯನ್ನು ಬದುಕನ್ನಾಗಿಸಿಕೊಂಡಿದ್ದು ಸ್ಫೂರ್ತಿದಾಯಕ.
 

click me!