
ನವದೆಹಲಿ(ಜೂ.20): ಕೊರೋನಾ ನಿಯಂತ್ರಿಸುವಲ್ಲಿ ಭಾರತ ಇಟ್ಟ ದಿಟ್ಟ ಹೆಜ್ಜೆಯನ್ನು ಬಹುತೇಕ ರಾಷ್ಟ್ರಗಳು ಅನುಸರಿಸಿದೆ. ಕೋವಿಡ್ ನಿಯಂತ್ರಣಕ್ಕೆ ಭಾರತ ಅನುಸರಿಸಿದ ಅತೀ ದೊಡ್ಡ ಹಾಗೂ ಅತ್ಯಂತ ಸವಾಲಿನ ಮಾರ್ಗ ವ್ಯಾಕ್ಸಿನೇಷನ್. ಭಾರತದ ಪ್ರತಿಯೊಬ್ಬರಿಗೆ ಲಸಿಕೆ ನೀಡುವ ಅತೀ ದೊಡ್ಡ ಲಸಿಕಾ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ. ಇದರ ಪರಿಣಾಮ ಭಾರತ 1.95 ಬಿಲಿಯನ್ ಡೋಸ್ ನೀಡಿದ ಹೆಗ್ಗಳಿಕೆಗೆ ಪಾತ್ರಾವಾಗಿದೆ. ಇಷ್ಟೇ ಅಲ್ಲ ಯೂರೋಪ್, ಅಮೆರಿಕ ಹಾಗೂ ಕೆನಾಡದ ಒಟ್ಟು ವ್ಯಾಕ್ಸಿನೇಷನ್ಗಿಂತ ಭಾರತ ಮುಂದಿದೆ.
ಲಸಿಕಾ ಅಭಿಯಾನದಲ್ಲಿ ಭಾರತ ಹೊಸ ಮೈಲಿಗಲ್ಲು ನಿರ್ಮಿಸಿದೆ. 2021ರ ಜನವರಿ 14 ರಿಂದ ಭಾರತ ಕೋವಿಡ್ ವಿರುದ್ಧ ಲಸಿಕೆ ನೀಡಲು ಅಭಿಯಾನ ಆರಂಭಿಸಿತು. ಹಂತ ಹಂತವಾಗಿ ಅಭಿಯಾನವನ್ನು ವಿಸ್ತರಿಸಿತು. ಇಷ್ಟೇ ಅಲ್ಲ ಪರಿಣಾಮಕಾರಿಯಾಗಿ ಲಸಿಕಾ ಅಭಿಯಾನವನ್ನು ಮುಂದುವರಿಸಿತು. ಇದರ ಪರಿಣಾಮ ವಿಶ್ವದಲ್ಲೇ ಗರಿಷ್ಠ ಡೋಸ್ ನೀಡಿದ, ಗರಿಷ್ಠ ಮಂದಿಯನ್ನು ಕೋವಿಡ್ನಿಂದ ದೂರ ಇರಿಸಿದ ಹೆಗ್ಗಳಿಗೆಗೆ ಪಾತ್ರವಾಗಿದೆ.
ಕೋವ್ಯಾಕ್ಸಿನ್ ಬೂಸ್ಟರ್ ಡೋಸ್ ಪಡೆದವರಿಗೆ ನೆಮ್ಮದಿಯ ಸುದ್ದಿ, ಅಧ್ಯಯನದಲ್ಲಿ ಬಯಲಾಯ್ತು ಅಚ್ಚರಿಯ ವಿಚಾರ!
ಅಮೆರಿಕ, ಯುರೋಪ್ ಹಾಗೂ ಕೆನಡಾ ಪಾಶ್ಚಿಮಾತ್ಯ ದೇಶಗಳ ಲಸಿಕೆ ಬಳಸುತ್ತಿದೆ. ಆದರೆ ಭಾರತ ತನ್ನದೇ ನೆಲದಲ್ಲಿ ಅಭಿವೃದ್ಧಿಪಡಿಸಿದ ಲಸಿಕೆ ನೀಡಿದೆ. ಇಷ್ಟೇ ಅಲ್ಲ ಹಲವು ರಾಷ್ಟ್ರಗಳಿಗೆ ಲಸಿಕೆಯನ್ನು ರಫ್ತು ಮಾಡಿದೆ. ಕೋವಿಡ್ ವಿರುದ್ಧ ಕೇಂದ್ರ ಸರ್ಕಾರದ ಲಸಿಕಾ ಅಭಿಯಾನ ವಿಶ್ವದಲ್ಲೇ ಅತೀ ದೊಡ್ಡ ಲಸಿಕಾ ಅಭಿಯಾನವಾಗಿದೆ.
ಯೂರೋಪ್ ಇದುವರೆಗೆ 1.29 ಬಿಲಿಯನ್ ಡೋಸ್ ವ್ಯಾಕ್ಸಿನೇಷನ್ ನೀಡಿದೆ. ಇನ್ನು ಅಮರಿಕ ಇದುವರೆಗೆ 592.27 ಮಿಲಿಯನ್ ವ್ಯಾಕ್ಸಿನೇಷನ್ ನೀಡಿದೆ. ಕೆನಡಾ 8.91 ಮಿಲಿಯನ್ ವ್ಯಾಕ್ಸಿನೇಷನ್ ನೀಡಿದೆ. ಆದರೆ ಭಾರತ 1.95 ಬಿಲಿಯನ್ ವ್ಯಾಕ್ಸಿನೇಷ್ ಪೂರ್ಣಗೊಳಿಸಿದೆ. ಈಗಲೂ ಲಸಿಕಾ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ.
ಲಸಿಕಾ ಅಭಿಯಾನದ ವೇಗ ಹೆಚ್ಚಿಸಲು ಕೇಂದ್ರ ಸರ್ಕಾರ ಲಸಿಕಾ ಮೇಳಾ, ಮನೆ ಮನೆಗೆ ಲಸಿಕೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಜೂನ್ ತಿಂಗಳಿನಿಂದ ಮನೆ ಮನೆಗೆ ಲಸಿಕೆ ಅಭಿಯಾನದ 2ನೇ ಹಂತ ಆರಂಭಿಸಲಾಗಿದೆ. 60 ವರ್ಷ ಮೇಲ್ಪಟ್ಟವರ ಬೂಸ್ಟರ್ ಡೋಸ್ ಹಾಗೂ 12ರಿಂದ 14 ವರ್ಷದ ವಯಸ್ಸಿನ ಮಕ್ಕಳ ಲಸಿಕಾ ಅಭಿಯಾನ ಮಂದಗತಿಯಲ್ಲಿ ಸಾಗಿದೆ ಎಂದು ಅಂಕಿ ಅಂಶಗಳು ಹೇಳಿತ್ತು. ಹೀಗಾಗಿ ಸರ್ಕಾರ ಈ ಸೂಚನೆ ನೀಡಿತ್ತು.
10ಕ್ಕಿಂತ ಹೆಚ್ಚು ಮಕ್ಕಳಿಗೆ ಕೋವಿಡ್ ಬಂದರೆ ಶಾಲೆಗೆ ರಜೆ!
ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಎಲ್ಲ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಅಧಿಕಾರಿಗಳ ಜತೆ ಸಭೆ ನಡೆಸಿ, ‘ಈ ಹಿಂದೆ ನಡೆದ ‘ಮನೆ-ಮನೆಗೆ ಲಸಿಕೆ ಅಭಿಯಾನ’ದ 2ನೇ ಚರಣವನ್ನು ಜೂನ್-ಜುಲೈನಲ್ಲಿ ನಡೆಸಬೇಕು. ಜಿಲ್ಲೆ, ತಾಲೂಕು, ಹೋಬಳಿ ಹಾಗೂ ಗ್ರಾಮ ಮಟ್ಟದಲ್ಲಿ ಅಭಿಯಾನ ತೀವ್ರಗೊಳಿಸಬೇಕು. ಅರ್ಹರಿಗೆ ಮೊದಲ, ಎರಡನೇ ಹಾಗೂ ಮುಂಜಾಗ್ರತಾ ಡೋಸ್ ಅನ್ನು ಈ ವೇಳೆ ನೀಡಬೇಕು. ವೃದ್ಧಾಶ್ರಮಗಳು, ಶಾಲೆಗಳು ಹಾಗೂ ಕಾಲೇಜಿನ ಮೇಲೆ ಹೆಚ್ಚು ಗಮನ ಹರಿಸಬೇಕು. ಶಾಲೆಯಿಂದ ಹೊರಗುಳಿದು ಹೊಲ, ಅಂಗಡಿ, ಇತ್ಯಾದಿಗಳಲ್ಲಿ ಕೆಲಸ ಮಾಡುವ 12ರಿಂದ 18 ವರ್ಷದ ಮಕ್ಕಳನ್ನು ಹುಡುಕಿ, ಅವರಿದ್ದಲ್ಲಿಗೇ ಹೋಗಿ ಲಸಿಕೆ ನೀಡಬೇಕು’ ಎಂದು ನಿರ್ದೇಶಿಸಿದ್ದರು. ಇದರ ಪರಿಣಾಮ ಇದೀಗ ಮತ್ತೆ ಲಸಿಕಾ ಅಭಿಯಾನದ ವೇಗ ಹೆಚ್ಚಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ