Mukhtar Ansari Death: ಕಾಂಗ್ರೆಸ್‌ ಅಧ್ಯಕ್ಷ, ಸ್ವಾತಂತ್ರ್ಯ ಹೋರಾಟಗಾರನ ಮೊಮ್ಮಗ ಕ್ರಿಮಿನಲ್‌ ಆಗಿ ಬದಲಾಗಿದ್ದು ಹೇಗೆ?

Published : Mar 29, 2024, 11:59 AM IST
Mukhtar Ansari Death: ಕಾಂಗ್ರೆಸ್‌ ಅಧ್ಯಕ್ಷ, ಸ್ವಾತಂತ್ರ್ಯ ಹೋರಾಟಗಾರನ ಮೊಮ್ಮಗ ಕ್ರಿಮಿನಲ್‌ ಆಗಿ ಬದಲಾಗಿದ್ದು ಹೇಗೆ?

ಸಾರಾಂಶ

ಹೃದಯಾಘಾತದಿಂದಾಗಿ ಗ್ಯಾಂಗ್‌ಸ್ಟರ್‌ ಹಾಗೂ ಮಾಜಿ ಶಾಸಕ ಮುಖ್ತಾರ್‌ ಅನ್ಸಾರಿ ಗುರುವಾರ ಸಾವು ಕಂಡಿದ್ದಾನೆ. ಇದರ ಬೆನ್ನಲ್ಲಿಯೇ ಉತ್ತರ ಪ್ರದೇಶ ಸರ್ಕಾರ ಮ್ಯಾಜಿಸ್ಟ್ರೇಟ್‌ ತನಿಖೆ ಆರಂಭ ಮಾಡಿದೆ. ಕಾಂಗ್ರೆಸ್‌ ಅಧ್ಯಕ್ಷ ಹಾಗೂ ಸ್ವಾತಂತ್ರ್ಯ ಹೋರಾಟಗಾರನ ಮೊಮ್ಮಗನಾಗಿದ್ದ ಮುಖ್ತಾರ್‌ ಅನ್ಸಾರಿ ಕ್ರಿಮಿನಲ್‌ ಆಗಿ ಬದಲಾಗಿದ್ದು ಹೇಗೆ?  

ನವದೆಹಲಿ (ಮಾ.29): ಜೈಲು ಶಿಕ್ಷೆ ಅನುಭವಿಸುತ್ತಿದ್ದ ರಾಜಕಾರಣಿ ಹಾಗೂ ಗ್ಯಾಂಗ್‌ಸ್ಟರ್‌ ಮುಖ್ತಾರ್‌ ಅನ್ಸಾರಿ ಗುರುವಾರ ರಾತ್ರಿ ಹೃದಯಾಘಾತದಿಂದ ಬಂದಾ ಅಸ್ಪತ್ರೆಯಲ್ಲಿ ಅಸುನೀಗಿದ್ದಾನೆ. ರಂಜಾನ್‌ ಉಪವಾಸವನ್ನು ಅಂತ್ಯಗೊಳಿಸಿದ ಬೆನ್ನಲ್ಲಿಯೇ 60 ವರ್ಷದ ರಾಜಕಾರಣಿಯ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ತಕ್ಷಣವೇ ಈತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ ಈತ  ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಎಂದು ವೈದ್ಯಕೀಯ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ. ಉತ್ತರ ಪ್ರದೇಶ ಮೌ ವಿಧಾನಸಭಾ ಕ್ಷೇತ್ರದಿಂದ ಐದು ಬಾರಿ ಶಾಸಕನಾಗಿದ್ದ ಮುಖ್ತಾರ್‌ ಅನ್ಸಾರಿ ಮೇಲೆ 60ಕ್ಕೂ ಅಧಿಕ ಕ್ರಿಮಿನಲ್‌ ಕೇಸ್‌ಗಳಿವೆ. ಈತನನ್ನು 2005ರಿಂದ ಬಂದಾ ಜಿಲ್ಲಾಕಾರಾಗೃಹದಲ್ಲಿ ಇರಿಸಲಾಗಿತ್ತು.ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಆಳವಾದ ಬೇರುಗಳನ್ನು ಹೊಂದಿರುವ ಕುಟುಂಬದಲ್ಲಿ ಜನಿಸಿದ ಮುಖ್ತಾರ್‌ ಅನ್ಸಾರಿ, ಕ್ರಿಮಿನಲ್‌ ಚಟುವಟಿಕೆಗಳಿಗೆ ಇಳಿಯುವ ಮೂಲಕ ತಮ್ಮ ವಂಶಕ್ಕಿಂದ ಸಂಪೂರ್ಣ ಹೆಸರನ್ನು ಹಾಳು ಮಾಡಿದ್ದ.

1960ರಲ್ಲಿ ಉತ್ತರ ಪ್ರದೇಶದ ಯೂಸೂಫ್‌ಪುರದಲ್ಲಿ ಜನಿಸಿದ್ದ ಮುಖ್ತಾರ್‌ ಅನ್ಸಾರಿ, ಅಪರಾಧದ ಗಲ್ಲಿಗಳಿಂದ ಅಧಿಕಾರದ ಕಾರಿಡಾರ್‌ಗಳಿಗೆ ಏರಿದ ಪ್ರಯಾಣ ವಿವಾದಾತ್ಮಕವಾಗಿಯೇ ಇತ್ತು. ಭಾರತದ ಸ್ವಾತಂತ್ರ್ಯ ಚಳುವಳಿ ಹಾಗೂ ಸ್ವಾತಂತ್ರ್ಯ ನಂತರದ ರಾಜಕೀಯದಲ್ಲಿ ಉತ್ತಮ ಕೊಡುಗೆ ನೀಡಿದ್ದ ಕುಟುಂಬದಲ್ಲಿ ಜನಿಸಿದ್ದ ಮುಖ್ತಾರ್‌ ಅನ್ಸಾರಿಯ ಅಜ್ಜ, ಮುಖ್ತಾರ್‌ ಅಹ್ಮದ್‌ ಅನ್ಸಾರಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಮುಖ ವ್ಯಕ್ತಿಯಾಗಿದ್ದರು. 1927ರಲ್ಲಿ ಅವರು ಕಾಂಗ್ರೆಸ್‌ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.  ಮುಖ್ತಾರ್ ಅಹ್ಮದ್ ಅನ್ಸಾರಿ ಅವರು ಮುಸ್ಲಿಂ ಲೀಗ್‌ನ ಭಾಗವೂ ಆಗಿದ್ದರು. ಆದರೆ, ಈ ಲೀಗ್‌ನ ಪ್ರತ್ಯೇಕತಾವಾದಿ ಅಜೆಂಡಾದ ಕಾರಣದಿಂದಾಗಿ ಅದರಿಂದ ದೂರುವುಳಿದುಕೊಂಡಿದ್ದರು. ಆ ಬಳಿಕ  ಜಾಮಿಯಾ ಮಿಲಿಯಾ ಇಸ್ಲಾಮಿಯಾ ಕುಲಪತಿಯಾಗಿಯೂ ಸೇವೆ ಸಲ್ಲಿಸಿದ್ದ ಇವರು 1936 ರಲ್ಲಿ ಅವರ ಮರಣದವರೆಗೂ ಈ ಸ್ಥಾನವನ್ನು ಹೊಂದಿದ್ದರು.

ತಾಯಿಯ ಕಡೆಯಿಂದ ಹೇಳುವುದಾದರೆ, ಬ್ರಿಗೇಡಿಯರ್ ಮೊಹಮ್ಮದ್ ಉಸ್ಮಾನ್, ಮುಖ್ತಾರ್ ಅನ್ಸಾರಿ ಅಜ್ಜ, ಭಾರತೀಯ ಸೇನೆಯಲ್ಲಿ ಶ್ರೇಷ್ಠ ಅಧಿಕಾರಿಯಾಗಿದ್ದ ವ್ಯಕ್ತಿ.  1948 ರಲ್ಲಿ ಪಾಕಿಸ್ತಾನದೊಂದಿಗಿನ ಸಂಘರ್ಷದ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದ ನೌಶೇರಾ ಸೆಕ್ಟರ್‌ನಲ್ಲಿ ಹುತಾತ್ಮರಾಗಿದ್ದರು. ಇದಕ್ಕಾಗಿ ಮರಣೋತ್ತರವಾಗಿ ಮಹಾವೀರ ಚಕ್ರವನ್ನು ಪುರಸ್ಕಾರ ಪಡೆದುಕೊಂಡಿದ್ದರು.

ಶ್ರೇಷ್ಠ ಕೌಟುಂಬಿಕ ಪರಂಪರೆಯ ಹೊರತಾಗಿಯೂ, ಮುಖ್ತಾರ್ ಅನ್ಸಾರಿ ಕ್ರಿಮಿನಲ್‌ ಮಾರ್ಗವನ್ನು ಹೆಸರು ಗಳಿಸಲು ಆರಿಸಿಕೊಂಡಿದ್ದ. 1980ರ ದಶಕದಲ್ಲಿ ಪೂರ್ವಾಂಚಲದಲ್ಲಿ ಆಗುತ್ತಿದ್ದ ಅಕ್ರಮ ವ್ಯವಹಾರಗಳಿಂದ ಈತನ ಕ್ರಿಇನಲ್‌ ವ್ಯವಹಾರ ಆರಂಭವಾಗಿತ್ತು.ಇಲ್ಲಿ ಮುಖ್ತಾರ್‌ ಅನ್ಸಾರಿ ವೇಗವಾಗಿ ಪ್ರಗತಿ ಕಂಡಿದ್ದ. ಇದು ಉತ್ತರ ಪ್ರದೇಶದಾದ್ಯಂತ ಉಗ್ರವಾದಕ್ಕೆ ಕಾರಣವಾಯಿತು. ಕೊಲೆ, ಕೊಲೆ ಯತ್ನ, ಗಲಭೆ ಮತ್ತು ವಂಚನೆ ಸೇರಿದಂತೆ ಮುಖ್ತಾರ್‌ ಅನ್ಸಾರಿಯ ಕ್ರಿಮಿನಲ್‌ ಕೇಸ್‌ಗಳು ಸಾಮಾನ್ಯವಾಗಿ ಹೋದವು. ಇದಕ್ಕಾಗಿ ಶಿಕ್ಷೆಗೂ ಒಳಗಾಗಿದ್ದ.

1988ರಲ್ಲಿ ಘಾಜಿಪುರದಲ್ಲಿ ನಡೆದ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸಚ್ಚಿದಾನಂದ ರೈ ಅವರ ಹತ್ಯೆಯೊಂದಿಗೆ ಅನ್ಸಾರಿಯ ಮೊದಲ ಗಂಭೀರ ಅಪರಾಧ ಎದುರಿಗೆ ಬಂದಿತ್ತು. ಪ್ರತಿಸ್ಪರ್ಧಿ ಮಾಫಿಯಾ ಬ್ರಿಜೇಶ್ ಸಿಂಗ್ ವಿರುದ್ಧ ಈತನ ಗ್ಯಾಂಗ್‌ ವಾರ್‌ ಸಾಕಷ್ಟು ಸುದ್ದಿಯಾಯಿತು.  ಏಪ್ರಿಲ್ 2009 ರಲ್ಲಿ ಕಪಿಲ್ ದೇವ್ ಸಿಂಗ್, ಆಗಸ್ಟ್ 2009 ರಲ್ಲಿ ಗುತ್ತಿಗೆದಾರ ಅಜಯ್ ಪ್ರಕಾಶ್ ಸಿಂಗ್ ಮತ್ತು ರಾಮ್ ಸಿಂಗ್ ಮೌರ್ಯ ಅವರ ಹತ್ಯೆಗಳಲ್ಲಿ ಭಾಗಿಯಾಗಿದ್ದ. ಈ ಅವಧಿಯು ಹಿಂಸಾತ್ಮಕ ಘಟನೆಗಳಿಗೆ ಕಾರಣವಾಯಿತು. 2002 ರಲ್ಲಿ ಇವನ ಬೆಂಗಾವಲು ಪಡೆಯ ಮೇಲೆ ಆದ ದಾಳಿಯಿಂದ 3 ಮಂದಿ ಸಾವು ಕಂಡಿದ್ದರು. ಇದು ಈ ಪ್ರದೇಶದಲ್ಲಿ ಇನ್ನಷ್ಟು ಹಿಂಸಾಚಾರಕ್ಕೆ ಕಾರಣವಾಯಿತು.

ವಿಷಪ್ರಾಶನದ ಆರೋಪದ ಬೆನ್ನಲ್ಲೇ ಮುಖ್ತಾರ್‌ ಅನ್ಸಾರಿ ಸಾವಿನ ತನಿಖೆ ಶುರು, ಇಲ್ಲಿಯವರೆಗೂ ಆಗಿದ್ದೇನು?

ತನ್ನ ಕುಖ್ಯಾತಿಯ ಹೊರತಾಗಿಯೂ, ಅನ್ಸಾರಿ ರಾಜಕೀಯಕ್ಕೆ ಇಳಿಯುವ ತೀರ್ಮಾನ ಮಾಡಿದ್ದ. 1996 ರಲ್ಲಿ ಆರಂಭಗೊಂಡು ಐದು ಬಾರಿ ಮೌ ಕ್ಷೇತ್ರದಿಂದ ಶಾಸಕರಾಗಿ (ಎಂಎಲ್‌ಎ) ಅಧಿಕಾರ ಪಡೆದಿದ್ದ, ಮೌ ಕ್ಷೇತ್ರದ ಜನ ಈತನ ರಾಜಕೀಯದ ಕುರಿತಾಗಿಯೇ ಭಿನ್ನ ನಿಲುವನ್ನು ಹೊಂದಿದ್ದರು. ಕೆಲವರು ಈತನನ್ನು ರಾಬಿನ್‌ ಹುಡ್‌ ರೀತಿಯಲ್ಲಿ ಕಂಡರೆ, ಇನ್ನೂ ಕೆಲವರು ಅಪರಾಧಿಯಾಗಿ ಕಂಡಿದ್ದರು. ಬಹುಜನ ಸಮಾಜವಾದಿ ಪಕ್ಷ ಈತನನ್ನು ಬಡವರ ನಾಯಕ ಎನ್ನುವಂತೆ ಚಿತ್ರಿಸಿತ್ತು. ಬಿಎಸ್‌ಪಿಯಿಂದ ಹೊರಹಾಕಲ್ಪಟ್ಟ ನಂತರ ಈತ ಸಹೋದರರೊಂದಿಗೆ ಕ್ವಾಮಿ ಏಕತಾ ದಳ (ಕ್ಯೂಇಡಿ) ರಚನೆ ಮಾಡಿದ್ದ.

ಜೈಲು ಶಿಕ್ಷೆಯಲ್ಲಿದ್ದ ಗ್ಯಾಂಗ್‌ಸ್ಟರ್, ರಾಜಕಾರಣಿ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ನಿಧನ!

ಮುಖ್ತಾರ್ ಅನ್ಸಾರಿಯ ಅಧಿಕಾರಾವಧಿ  ಕೋಮು ಹಿಂಸಾಚಾರವನ್ನು ಪ್ರಚೋದಿಸುವ ಮತ್ತು ವೈಯಕ್ತಿಕ ಲಾಭಕ್ಕಾಗಿ ಧಾರ್ಮಿಕ ಭಾವನೆಗಳನ್ನು ಬಳಸಿಕೊಳ್ಳುವ ಆರೋಪಗಳಿಂದ ಕೂಡಿತ್ತು. ಸೆರೆವಾಸದ ಹೊರತಾಗಿಯೂ, ಪೂರ್ವ ಉತ್ತರ ಪ್ರದೇಶದ ರಾಜಕೀಯದ ಮೇಲೆ ಅನ್ಸಾರಿ ಪ್ರಭಾವಿ ನಾಯಕನಾಗಿದ್ದ. ಈತನ ಪುತ್ರ ಅಬ್ಬಾಸ್ ಅನ್ಸಾರಿ ಸೇರಿದಂತೆ ಅವರ ಕುಟುಂಬ ಸದಸ್ಯರು ಈತನ ಕ್ರಿಮಿನಲ್‌ ಪರಂಪರೆಯನ್ನೇ ಮುಂದುವರಿಸಿದ್ದಾರೆ ಎನ್ನಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
Viral Video: ಮಾಜಿ ಸಿಜೆಐ ಬಿಆರ್‌ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್‌ ಕಿಶೋರ್‌ಗೆ ಕೋರ್ಟ್‌ನಲ್ಲೇ ಚಪ್ಪಲಿಯಿಂದ ಹಲ್ಲೆ!