ನನ್ನ ಕಡೆಗಣಿಸಿದ್ದಕ್ಕೆ ಚಾಕು ಇರಿದೆ ಎಂದ ದಿನಕರ್, ಪ್ರೀತಿ ನಿರಾಕರಣೆಗೆ ಬೇಸತ್ತಿದ್ದ ಪಾಗಲ್ ಪ್ರೇಮಿ, ಪೋಷಕರ ಮಾತಿಗೆ ಕಟ್ಟುಬಿದ್ದು ದೂರ ಉಳಿದ ಲೀಲಾ.
ಬೆಂಗಳೂರು(ಮಾ.02): ಇತ್ತೀಚಿಗೆ ನನ್ನ ಪ್ರೀತಿಯನ್ನು ಲೀಲಾ ಪವಿತ್ರಾ ಕಡೆಗಣಿಸಿದ್ದರಿಂದ ಬೇಸರಗೊಂಡು ಹತ್ಯೆ ಮಾಡಿದೆ ಎಂದು ವಿಚಾರಣೆ ವೇಳೆ ಆರೋಪಿ ದಿನಕರ್ ಹೇಳಿಕೆ ನೀಡಿದ್ದಾನೆ. ಪ್ರೇಮ ವೈಫಲ್ಯ ಹಿನ್ನೆಲೆಯಲ್ಲಿ ದೊಮ್ಮಲೂರಿನ ಸಮೀಪ ತನ್ನ ಪ್ರಿಯತಮೆ ಲೀಲಾಳನ್ನು 17 ಬಾರಿ ಇರಿದು ಭೀಕರವಾಗಿ ಮಂಗಳವಾರ ರಾತ್ರಿ ದಿನಕರ್ ಹತ್ಯೆ ಮಾಡಿದ್ದ. ಬಳಿಕ ಆತನನನ್ನು ಬಂಧಿಸಿದ ಜೀವನ್ ಬಿಮಾನಗರ ಠಾಣೆ ಪೊಲೀಸರು, ಆರೋಪಿಯನ್ನು ವಿಚಾರಣೆ ನಡೆಸಿದಾಗ ಹತ್ಯೆ ಹಿಂದಿನ ಸತ್ಯ ಬಾಯ್ಬಿಟ್ಟಿದ್ದಾನೆ.
‘ಆಂಧ್ರಪ್ರದೇಶ ರಾಜ್ಯದಲ್ಲಿ ಎಂಎಸ್ಸಿ ಓದುವಾಗ ನನ್ನ ಜ್ಯೂನಿಯರ್ ಆಗಿದ್ದ ಲೀಲಾ ಜತೆ ಆತ್ಮೀಯತೆ ಬೆಳೆಯಿತು. ಬಳಿಕ ಅದೂ ಪ್ರೇಮಕ್ಕೆ ತಿರುಗಿತು. ಐದು ವರ್ಷಗಳಿಂದ ನಾವು ಪ್ರೀತಿಸುತ್ತಿದ್ದೆವು. ನಮ್ಮ ನಡುವೆ ಯಾ ವುದೇ ಸಮಸ್ಯೆ ಇರಲಿಲ್ಲ. ಓದು ಮುಗಿದ ಬಳಿಕ ಇಬ್ಬರೂ ಬೆಂಗಳೂರಿನಲ್ಲಿ ಕೆಲಸಕ್ಕೇ ಸೇರಿದ್ದೆವು ಎಂದು ಆರೋಪಿ ಅಲವತ್ತುಕೊಂಡಿದ್ದಾನೆ.
ಇತ್ತೀಚಿಗೆ ತನ್ನ ಪೋಷಕರ ಮಾತು ಕೇಳಿ ನನ್ನಿಂದ ಲೀಲಾ ಅಂತರ ಕಾಯ್ದುಕೊಳ್ಳಲು ಯತ್ನಿಸಿದ್ದಳು. ಕಾಲ್ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಮೆಸೇಜ್ಗೆ ಪ್ರತಿಕ್ರಿಯಿಸುತ್ತಿರಲಿಲ್ಲ. ಕೊನೆಗೆ ನನ್ನ ಮೊಬೈಲ್ ನಂಬರ್ ಅನ್ನು ಬ್ಲಾಕ್ ಮಾಡಿದ್ದಳು. ದಿಢೀರನೇ ಆಕೆ ವರ್ತನೆ ಬದಲಾಗಿದ್ದು ನನ್ನಲ್ಲಿ ಸಿಟ್ಟು ತರಿಸಿತು. ಇದೇ ವಿಚಾರವಾಗಿ ಮಾತನಾಡಲು ದೊಮ್ಮಲೂರಿನಲ್ಲಿ ಆಕೆ ಕೆಲಸ ಮಾಡುತ್ತಿದ್ದ ಲ್ಯಾಬೋರೋಟರಿ ಬಳಿ ತೆರಳಿದ್ದೆ. ಆದರೆ ನಾನೆಷ್ಟೇ ಕನ್ವಿನ್ಸ್ ಮಾಡಿದರೂ ಆಕೆ ಕೇಳಿಸಿಕೊಳ್ಳದೆ ಕಡೆಗಣಿಸಿದ್ದಳು. ಇದರಿಂದ ಬೇಸರಗೊಂಡು ಆಕೆಗೆ ಚಾಕು ಇರಿದು ಹತ್ಯೆ ಮಾಡಿದೆ’ ಎಂದು ದಿನಕರ್ ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ದಿಶಾ ಮಧ್ಯಸ್ಥಿಕೆಯಲ್ಲಿ ಪರಿಹಾರ
ಇದಕ್ಕೂ ಮೊದಲು ಆಂಧ್ರಪ್ರದೇಶದಲ್ಲಿ ಮಹಿಳಾ ರಕ್ಷಣಾ ಸಮಿತಿ (ದಿಶಾ)ಗೆ ದಿನಕರ್ ವಿರುದ್ಧ ಲೀಲಾ ದೂರು ಸಹ ಕೊಟ್ಟಿದ್ದಳು. ದೂರಿನ ಮೇರೆಗೆ ಇಬ್ಬರನ್ನು ಕರೆಸಿ ಸಮಾಲೋಚಿಸಿ ಬುದ್ಧಿ ಮಾತು ಹೇಳಿ ದಿಶಾ ಅಧಿಕಾರಿಗಳು ಕಳುಹಿಸಿದ್ದರು. ಇದಾದ ನಂತರವು ಲೀಲಾಳನ್ನು ದಿನಕರ್ ಕಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.