ಕ್ಯಾನ್ಸರ್‌, ಹೃದ್ರೋಗ ಔಷಧ ಸಿಗದೆ ಜನರ ಪರದಾಟ| ಸಿವಿಟಿ, ಅಸ್ತಮಾ, ಬೀಪಿ, ಕಿಡ್ನಿ ಸಮಸ್ಯೆಗೂ ಔಷಧಗಳ ಕೊರತೆ| ತಾಲೂಕು ಕೇಂದ್ರಗಳಲ್ಲಿ ಔಷಧವಿಲ್ಲ, ಹೊರಗೆ ಹೋಗಲು ಅನುಮತಿಯಿಲ್ಲ

ಬೆಂಗಳೂರು(ಏ.20): ರಾಜ್ಯದಲ್ಲಿ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬೆಂಗಳೂರೇತರ ನಗರ, ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಕ್ಯಾನ್ಸರ್‌, ಹೃದ್ರೋಗ ಸಮಸ್ಯೆ, ಸಿವಿಟಿ (ಮೆದುಳಲ್ಲಿ ರಕ್ತ ಹೆಪ್ಪುಗಟ್ಟಿರುವುದು) ಮುಂತಾದ ಗಂಭೀರ ಸಮಸ್ಯೆಯುಳ್ಳವರಿಗೆ ಔಷಧಗಳು ದೊರೆಯದೆ ತೀವ್ರ ತೊಂದರೆ ಉಂಟಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕ್ಯಾನ್ಸರ್‌, ಹೃದ್ರೋಗ ಸಮಸ್ಯೆ, ಸಿವಿಟಿ, ಅಸ್ತಮಾ, ಅಧಿಕ ರಕ್ತದೊತ್ತಡ, ಕಿಡ್ನಿ ಕಸಿ ಮತ್ತಿತರ ಸಮಸ್ಯೆಯುಳ್ಳವರು ನಿರಂತರವಾಗಿ ಔಷಧ ಸೇವನೆ ಮಾಡಬೇಕು. ಆದರೆ, ಕೆಲವೊಂದು ತಾಲೂಕು ಮಟ್ಟದ ಔಷಧಾಲಯಗಳಲ್ಲಿ ಮಧುಮೇಹ ಕಾಯಿಲೆಗೂ ಸಹ ಔಷಧಗಳು ದೊರೆಯದಂತಾಗಿದೆ.

ಬೆಂಗಳೂರು ಸುತ್ತಮುತ್ತಲಿನ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ರಾಮನಗರ, ಚಿತ್ರದುರ್ಗ ಮತ್ತಿತರ ಜಿಲ್ಲೆಗಳು ಮಾತ್ರವಲ್ಲದೆ ಉತ್ತರ ಕರ್ನಾಟಕದ ನಾಗರಿಕರು ಹೃದ್ರೋಗ ಸಮಸ್ಯೆಗೆ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಬರುತ್ತಾರೆ. ಇದೀಗ ಲಾಕ್‌ಡೌನ್‌ನಿಂದಾಗಿ ಒಂದೂವರೆ ತಿಂಗಳಾದರೂ ಮಾತ್ರೆಗಳನ್ನು ಕೊಳ್ಳಲು ಬರುವುದಕ್ಕೆ ಸಾಧ್ಯವಾಗಿಲ್ಲ.

ಕಿದ್ವಾಯಿಯಲ್ಲಿ ಚಿಕಿತ್ಸೆ ಪಡೆದಿರುವ ರೋಗಿಗಳು ಇಲ್ಲೇ ಬಂದು ಔಷಧ ತೆಗೆದುಕೊಳ್ಳಬೇಕು. ಸಾಮಾನ್ಯ ರೋಗಿಗಳಿಗೆ 2 ವಾರ ಔಷಧ ತಡವಾದರೂ ಸಮಸ್ಯೆ ಇಲ್ಲ. ಆದರೆ ಲಾಕ್‌ಡೌನ್‌ ದೀರ್ಘವಾಗಿರುವುದರಿಂದ ತುರ್ತು ಸಮಸ್ಯೆಯಿರುವ ರೋಗಿಗಳು ಹತ್ತಿರದ ಕ್ಯಾನ್ಸರ್‌ ತಜ್ಞರನ್ನು ಸಂಪರ್ಕಿಸಿದರೆ ಯಾವ ಬದಲಿ ಔಷಧ ನೀಡಬಹುದು ಎಂಬುದನ್ನು ನಾವು ಸಲಹೆ ನೀಡುತ್ತೇವೆ.

- ಡಾ.ಸಿ.ರಾಮಚಂದ್ರ, ನಿರ್ದೇಶಕ, ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆ