Asianet Suvarna News Asianet Suvarna News

ಪಾದರಾಯನಪುರ ಪುಂಡರು ಮತ್ತೆ ಬೆಂಗಳೂರಿಗೆ ಶಿಫ್ಟ್‌!

 ಪಾದರಾಯನಪುರ ಪುಂಡರು ಮತ್ತೆ ಬೆಂಗಳೂರಿಗೆ ಶಿಫ್ಟ್‌| ರಾಮನಗರ ಜೈಲಿಂದ ಹಜ್‌ ಭವನಕ್ಕೆ

Padarayanapura rioters shifted from ramanagara jail to bengaluru haj bhawan
Author
Bangalore, First Published Apr 25, 2020, 7:16 AM IST

ಬೆಂಗಳೂರು(ಏ.25): ಕೊರೋನಾ ಕ್ವಾರಂಟೈನ್‌ ಮಾಡಲು ತೆರಳಿದ್ದ ವೈದ್ಯರು ಮತ್ತು ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಜೈಲು ಸೇರಿದ್ದ ಪಾದರಾಯನಪುರ ಪುಂಡರ ಪೈಕಿ ಕೆಲವರಿಗೆ ‘ಕೊರೋನಾ’ ಸೋಂಕು ಇರುವುದು ದೃಢಪಟ್ಟಹಿನ್ನೆಲೆಯಲ್ಲಿ, ಸೋಂಕಿತರನ್ನು ಹೊರತುಪಡಿಸಿ ಇತರ 119 ಆಪಾದಿತರನ್ನು ರಾಮನಗರ ಜಿಲ್ಲಾ ಕಾರಾಗೃಹದಿಂದ ಬೆಂಗಳೂರಿನ ಹಜ್‌ ಭವನಕ್ಕೆ ಸ್ಥಳಾಂತರಿಸಲಾಗಿದೆ.

ಬಿಗಿ ಪೊಲೀಸ್‌ ಭದ್ರತೆಯಲ್ಲಿ 119 ಆರೋಪಿಗಳನ್ನು ಬೆಂಗಳೂರಿನ ಯಲಹಂಕ ಸಮೀಪದ ಹೆಗಡೆ ನಗರದಲ್ಲಿರುವ ಹಜ್‌ ಭವನಕ್ಕೆ ಶುಕ್ರವಾರ ಮಧ್ಯಾಹ್ನ ಸ್ಥಳಾಂತರ ಮಾಡಲಾಯಿತು. ಇನ್ನು ಈ ಶಂಕಿತರನ್ನು ಬೆಂಗಳೂರಿನ ಹೆಗಡೆ ನಗರದಲ್ಲಿರುವ ಹಜ್‌ ಭವನಕ್ಕೆ ಸ್ಥಳಾಂತರ ಮಾಡಿದ ಹಿನ್ನೆಲೆಯಲ್ಲಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ಈ ಹಿನ್ನೆಲೆಯಲ್ಲಿ ಹಜ್‌ ಭವನ ಸುತ್ತಮುತ್ತ ಸೆಕ್ಷನ್‌ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಭದ್ರತೆ ಒದಗಿಸಲಾಗಿದೆ.

ರಾಮನಗರದಲ್ಲಿ ಬಿಜೆಪಿ ಶಾಸಕರು ಇಲ್ಲ ಎಂಬ ಕಾರಣಕ್ಕೆ ಟಾರ್ಗೆಟ್‌: ಡಿಕೆಶಿ, ಎಚ್‌ಡಿಕೆ!

ಕೊರೋನಾ ಪತ್ತೆ ಕಾರಣ ಬೆಂಗಳೂರಿನ ಪಾದರಾಯನಪುರ ವಾರ್ಡ್‌ನ್ನು ಈಗಾಗಲೇ ಸಂಪೂರ್ಣವಾಗಿ ಲಾಕ್‌ಡೌನ್‌ ಮಾಡಲಾಗಿದೆ. ಕೊರೋನಾ ಶಂಕಿತರೊಂದಿಗೆ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್‌ ಮಾಡಲು ವೈದ್ಯರು ಮತ್ತು ಬಿಬಿಎಂಪಿ ಸಿಬ್ಬಂದಿ, ಪೊಲೀಸರೊಂದಿಗೆ ತೆರಳಿದ್ದರು. ಈ ವೇಳೆ ಆರೋಪಿಗಳು ವೈದ್ಯರು ಮತ್ತು ಪೊಲೀಸರ ಮೇಲೆ ಹಲ್ಲೆ ನಡೆಸಿ ದಾಂಧಲೆ ನಡೆಸಿದ್ದರು. ಪ್ರಕರಣ ಸಂಬಂಧ ಸುಮಾರು 121 ಮಂದಿಯನ್ನು ಪೊಲೀಸರು ಬಂಧಿಸಿ, ರಾಮನಗರ ಕಾರಾಗೃಹಕ್ಕೆ ಕಳುಹಿಸಿದ್ದರು.

ಇವರೆಲ್ಲರ ರಕ್ತ ಮತ್ತು ಗಂಟಲಿನ ದ್ರವ ಮಾದರಿಯನ್ನು ಪಡೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪೈಕಿ ಗುರುವಾರವೇ ಇಬ್ಬರಿಗೆ ಕೊರೋನಾ ಇರುವುದು ದೃಢಪಟ್ಟಿತ್ತು. ಮಧ್ಯರಾತ್ರಿಯೇ ಇಬ್ಬರು ಸೋಂಕಿತ ಆರೋಪಿಗಳನ್ನು ಆ್ಯಂಬುಲೆನ್ಸ್‌ ಮೂಲಕ ರಾಮನಗರ ಜಿಲ್ಲಾ ಕಾರಾಗೃಹದಿಂದ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಇತ್ತ ಒಂದು ಪ್ರಕರಣ ಇಲ್ಲದೇ ಇದ್ದ ಜಿಲ್ಲೆಯಲ್ಲಿ ಈ ಆರೋಪಿಗಳಿಂದ ಕೊರೋನಾ ಸೋಂಕು ಬಂದ ಕಾರಣ ಸರ್ಕಾರ ಹಾಗೂ ಪೊಲೀಸ್‌ ಇಲಾಖೆಯ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿತ್ತು.

ಅಲ್ಲದೆ, ಶುಕ್ರವಾರ ಇನ್ನೂ ಮೂವರಲ್ಲಿ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಎಲ್ಲ ಆರೋಪಿಗಳನ್ನು ರಾಮನಗರ ಜಿಲ್ಲಾ ಕಾರಾಗೃಹದಿಂದ ಬಿಬಿಎಂಪಿ ಸಿದ್ಧಪಡಿಸಿದ್ದ ಹಜ್‌ ಭವನಕ್ಕೆ ಸ್ಥಳಾಂತರ ಮಾಡಲಾಯಿತು. ಇನ್ನು ಹಜ್‌ ಭವನದಲ್ಲಿ ಕ್ವಾರಂಟೈನ್‌ ಮಾಡಲಾಗಿದ್ದ 37 ವಿದೇಶಿಗರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಖಾಸಗಿ ಹೋಟೆಲ್‌ಗಳಿಗೆ ಸ್ಥಳಾಂತರ ಮಾಡಲಾಯಿತು.

ಕೊರೋನಾದಿಂದ ಗುಣಮುಖ: ಸೋಂಕಿತ ಕಿಮ್ಸ್‌ನಿಂದ ಡಿಸ್ಚಾರ್ಜ್‌

ಏಳು ಬಸ್‌- ತಲಾ 19 ಮಂದಿ:

ಇನ್ನು ಶಂಕಿತರನ್ನು ಸ್ಥಳಾಂತರ ಮಾಡಲು ರಾಮನಗರ ಡಿಪೋ ಸೇರಿದ ಏಳು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಬಳಸಿಕೊಳ್ಳಲಾಯಿತು. ಏಳು ಬಸ್‌ಗಳಲ್ಲಿ ತಲಾ 17 ಮಂದಿಯಂತೆ 121 ಮಂದಿಯನ್ನು ಕರೆ ತರಲಾಯಿತು. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಆರೋಪಿಗಳ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು ಮತ್ತು ಕೆಎಸ್‌ಆರ್‌ಟಿಸಿ ಚಾಲಕರು ಪಿಪಿಇ ಕಿಟ್‌ ಧಸಿದ್ದರು. ಸಿಎಆರ್‌, ಕೆಎಸ್‌ಆರ್‌ಪಿ ತುಕಡಿಯ ಭದ್ರತೆಯಲ್ಲಿ ಎಲ್ಲಾ ಆರೋಪಿಗಳನ್ನು ಕರೆ ತರಲಾಯಿತು.

ಹಜ್‌ ಭವನದ 1 ಕೊಠಡಿಯಲ್ಲಿ ಇಬ್ಬರು

‘ರಾಮನಗರ ಜಿಲ್ಲಾ ಕಾರಾಗೃಹದಿಂದ ಯಲಹಂಕದ ಹೆಗಡೆ ನಗರದಲ್ಲಿನ ಹಜ್‌ಭವನ ಒಂದು ಕೊಠಡಿಯಲ್ಲಿ ತಲಾ ಇಬ್ಬರನ್ನು ಇಡಲಾಗಿದೆ’ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.

ಒಂದು ಕೊಠಡಿಯಲ್ಲಿ ಎಂಟು ಬೆಡ್‌ಗಳಿವೆ. ಹೆಚ್ಚಿನ ಕೊಠಡಿಗಳು ಇರುವ ಕಾರಣ ಇಬ್ಬಿಬ್ಬರಂತೆ ಕೊಠಡಿಯಲ್ಲಿರಿಸಲಾಗಿದೆ. ಪ್ರತಿಯೊಬ್ಬರಿಗೂ ಇಲ್ಲಿಯೇ ಚಿಕಿತ್ಸೆ ನಡೆಯಲಿದೆ. ಹಜ್‌ ಭವನದಲ್ಲಿನ ಸಿಬ್ಬಂದಿಯೇ ನಿತ್ಯ ಆಹಾಯ ಸಿದ್ಧಪಡಿಸಿ ಆರೋಪಿಗಳಿಗೆ ಕೊಡುತ್ತಾರೆ. ನಿತ್ಯ ಇಡ್ಲಿ, ಪೊಂಗಲ್‌, ಆಹಾಲು ನೀಡುತ್ತಾರೆ. ಮಧ್ಯಾಹ್ನ ತರಕಾರಿ ಸಂಬಾರು ತಯಾರಿಸಿ ನೀಡಲಾಗುತ್ತದೆ.

ಬಿಗಿ ಭದ್ರತೆ:

ಇನ್ನು ಸ್ಥಳದಲ್ಲಿ ಸಿಎಆರ್‌, ಕೆಎಸ್‌ಆರ್‌ಪಿ ಹಾಗೂ ಈಶಾನ್ಯ ವಿಭಾಗದ ಪೊಲೀಸರು ಸೇರಿ 150ಕ್ಕೂ ಹೆಚ್ಚು ಮಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇದರಲ್ಲಿ ಆರು ಮಂದಿ ಜೈಲು ಸಿಬ್ಬಂದಿ ಕೂಡ ಇದ್ದಾರೆ. ಎಲ್ಲರಿಗೂ ಎಚ್ಚರಿಕೆ ನೀಡಲಾಗಿದೆ. ವೈದ್ಯರ ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸಬೇಕು. ಇಲ್ಲದಿದ್ದರೆ, ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

Follow Us:
Download App:
  • android
  • ios