ಸಂತೋಷ್ ಸ್ವಿಚ್ ಒತ್ತಿದ್ರೆ ನಳಿನ್ ಡ್ಯಾನ್ಸ್: ಸಿದ್ದರಾಮಯ್ಯ
ಸಂತೋಷ್ ಸ್ವಿಚ್ ಒತ್ತಿದ್ರೆ ನಳಿನ್ ಡ್ಯಾನ್ಸ್: ಸಿದ್ದು| ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಬಗ್ಗೆ ಸಿದ್ದರಾಮಯ್ಯ ವ್ಯಂಗ್ಯ| ಫೆಬ್ರವರಿಯೊಳಗೆ ರಾಜ್ಯದಲ್ಲಿ ಚುನಾವಣೆ; ಭವಿಷ್ಯ
ಮಂಗಳೂರು[ಅ.19]: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಒಲ್ಲದ ಶಿಶು ಆಗಿರುವ ಯಡಿಯೂರಪ್ಪರ ರಿಮೋಟ್ ಸ್ವಿಚ್ ಸಂತೋಷ್ ಕೈಯಲ್ಲಿದ್ದು, ಸಂತೋಷ್ ಸ್ವಿಚ್ ಒತ್ತಿದ್ರೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಡ್ಯಾನ್ಸ್ ಮಾಡ್ತಾರೆ’ ಎಂದು ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 34 ಜಿಲ್ಲೆಗಳಿವೆ ಎನ್ನುವ ನಳಿನ್ ಕುಮಾರ್ಗೆ ರಾಜ್ಯದ ಕುರಿತು ಜ್ಞಾನವೇ ಇಲ್ಲ. ಅಂಥವರು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ. ಜಿಲ್ಲೆ ಎಷ್ಟಿದೆ ಅನ್ನೋದೆ ಗೊತ್ತಿಲ್ಲ, ಇನ್ನು ತಾಲೂಕು ಎಷ್ಟಿವೆ ಅದನ್ನಾದರೂ ಸರಿಯಾಗಿ ಹೇಳಲಿ ಎಂದು ಕಾಲೆಳೆದರು.
ಸಿದ್ದರಾಮಯ್ಯ ಜ್ಞಾನಿ, ಪಂಡಿತ; ರಾವಣನೂ ಜ್ಞಾನಿಯಾಗಿದ್ದ: ಕಟೀಲ್ ವ್ಯಂಗ್ಯ
ಮಂಗಳೂರಿನ ಪಂಪ್ವೆಲ್ ಫ್ಲೈಓವರ್ ಕಾಮಗಾರಿ 10 ವರ್ಷದಿಂದ ನೆನೆಗುದಿಗೆ ಬಿದ್ದಿದ್ದರೂ ಈ ಸಂಸದರು ಪಾರ್ಲಿಮೆಂಟಲ್ಲಿ ಮಾತಾಡಲ್ಲ. ಕೇವಲ ಶ್ರೀರಾಮ, ಹಿಂದುತ್ವ ಇಷ್ಟೇ ಹೇಳಿಕೊಂಡು ತಾವೇ ದೊಡ್ಡ ದೇಶಭಕ್ತರಂತೆ ಬಿಂಬಿಸಿಕೊಳ್ತಿದ್ದಾರೆ ಎಂದು ಆರೋಪಿಸಿದರು.
ಇದೇವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, ‘ಬಿಜೆಪಿ ಸರ್ಕಾರ ಟ್ರಾನ್ಸ್ಫರ್ ದಂಧೆ ಬಿಟ್ಟರೆ ಒಂದೇ ಒಂದು ಅಭಿವೃದ್ಧಿ ಕೆಲಸ ಮಾಡಿಲ್ಲ. ಕನಿಷ್ಠ ಪಕ್ಷ ಪ್ರವಾಹದ ವೇಳೆ ಮುರಿದು ಬಿದ್ದ ಸೇತುವೆಗಳ ರಿಪೇರಿಯೂ ಆಗಿಲ್ಲ. ಮಾತೆತ್ತಿದರೆ ಯಡಿಯೂರಪ್ಪ ದುಡ್ಡಿಲ್ಲ ಅಂತಾರೆ. ಹಾಗಾದರೆ ಯಾಕ್ರೀ ಅಧಿಕಾರದಲ್ಲಿರ್ತೀರಿ? ಕೆಳಗಿಳೀರಿ, ನಾವು ಅಧಿಕಾರ ನಡೆಸಿ ತೋರಿಸ್ತೀವಿ’ ಎಂದು ಹರಿಹಾಯ್ದರು.
ಜನವರಿ, ಫೆಬ್ರವರಿಯಲ್ಲೇ ಚುನಾವಣೆ: ಯಡಿಯೂರಪ್ಪ ಸರ್ಕಾರ ಜನವರಿ, ಫೆಬ್ರವರಿವರೆಗೆ ಅಧಿಕಾರದಲ್ಲಿದ್ದರೆ ಅದೇ ಹೆಚ್ಚು. ಅಷ್ಟರೊಳಗೆ ಚುನಾವಣೆ ಬಂದೇ ಬರುತ್ತದೆ. ಬಿಜೆಪಿ ಬಡವರ ವಿರೋಧಿ ಎನ್ನುವುದು ಜನರಿಗೆ ಗೊತ್ತಾಗಿದ್ದು, ಹಿಂದಿನ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಜ್ಞಾಪಿಸಿಕೊಳ್ಳುತ್ತಿದ್ದಾರೆ. ಶೇ.100ರಷ್ಟುಕಾಂಗ್ರೆಸ್ ಸರ್ಕಾರ ಮರಳಿ ಅಧಿಕಾರಕ್ಕೆ ಬಂದೇ ಬರಲಿದೆ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದರು.
'ಕೇಂದ್ರದಲ್ಲಿ ಮೋದಿ-ಶಾ, ರಾಜ್ಯಕ್ಕೆ ಬಿಎಸ್ವೈ-ಕಟೀಲ್ ಕ್ಯಾಪ್ಟನ್'
ಸಬ್ಕಾ ವಿನಾಶ್: ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯವರು ಸಬ್ಕಾ ಸಾಥ್ ಎಂದರು, ಸಬ್ಕಾ ವಿಕಾಸ್ ಎಂದರು. ಈಗ ಸಬ್ಕಾ ವಿಶ್ವಾಸ್ ಅಂತಿದ್ದಾರೆ. ಈಗ ‘ಸಬ್ಕಾ ವಿನಾಶ್’ ಆಗಿದೆ ಎಂದು ಟೀಕಿಸಿದರು.