ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಭಾರತದ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ ಮುಂದುವರೆದಿದೆ. ಈ ಪ್ರತಿಭಟನೆ ಕರ್ನಾಟಕಕ್ಕೂ ವಿಸ್ತರಣೆಯಾಗುವುದರಿಂದ ಮುಂಜಾಗೃತಾ ಕ್ರಮವಾಗಿ ಬುಧವಾರ ರಾತ್ರಿಯಿಂದ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಸೆಕ್ಷನ್ 144 ಜಾರಿ ಮಾಡಲಾಗಿದೆ. ಇನ್ನು ಒಂದು ಜಿಲ್ಲೆಯಲ್ಲಿ ಮಾತ್ರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. 

ಬೆಂಗಳೂರು, [ಡಿ.18]: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಭಾರತದ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ ಮುಂದುವರೆದಿದೆ. ಈ ಪ್ರತಿಭಟನೆ ಪಶ್ಚಿಮ ಬಂಗಾಳಕ್ಕೂ ವಿಸ್ತರಣೆಯಾಗಿದ್ದು, ತೀವ್ರ ಸ್ವರೂಪ ಪಡೆದುಕೊಂಡು ಹಿಂಸಾಚರಕ್ಕೆ ತಿರುಗಿದೆ. 

Add Asianetnews Kannada as a Preferred SourcegooglePreferred

 ದೆಹಲಿ, ಅಸ್ಸಾಂ, ಪಶ್ಚಿಮ ಬಂಗಾಳಗಳಲ್ಲಿ ದೊಡ್ಡ ದೊಡ್ಡ ಪ್ರತಿಭಟನೆಗಳು ನಡೆಯುತ್ತಿವೆ. ಮತ್ತೊಂದೆಡೆ ಇಂದು [ಬುಧವಾರ] ಮಂಗಳೂರಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್, ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕಿತು. 

ಪೌರತ್ವ ಕಾಯ್ದೆ: 'ಬೆಂಗಳೂರಿನಲ್ಲಿ ನೋ ಪರ್ಮಿಷನ್..ನೋ ಪ್ರೊಟೆಸ್ಟ್'

ಇನ್ನು ಕರ್ನಾಟಕದಾದ್ಯಂತ ನಾಳೆ [ಗುರುವಾರ] ಪ್ರಗತಿ ಪರ ಸಂಘಟನೆಗಳು, ಸಿಐಟಿಯು, ಸಿಪಿಐ ಮತ್ತು ದಲಿತ ಸಂಘಟನೆಗಳು ಪ್ರತಿಭಟನೆ ಹಾಗೂ ಬಂದ್ ನಡೆಸುವುದರಿಂದ ಮುಂಜಾಗೃತಾ ಕ್ರಮವಾಗಿ ರಾಜ್ಯದ ಹಲವು ಜೆಲ್ಲೆಗಳಲ್ಲಿ ಆಯಾ ಜಿಲ್ಲೆಯ ಜಿಲ್ಲಾ ಪೊಲೀಸ್ ಅಧಿಕಾರಿಗಳು, ಜಿಲ್ಲಾಧಿಕಾರಿಗಳು 144 ಸೆಕ್ಷನ್ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. 

ಬಹುತೇಕ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಯಾವುದೇ ಪ್ರತಿಭಟನೆ, ಸಭೆ-ಸಮಾರಂಭಗಳನ್ನು ಮಾಡುವಂತಿಲ್ಲ. ಎಂದಿನಂತೆ ವಾಹನ ಸಂಚಾರ, ವ್ಯಾಪಾರ ವಹಿವಾಟುಗಳು ನಡೆಯಲಿವೆ. 

ಪೌರತ್ವ ತಿದ್ದುಪಡಿ ಕಾಯ್ದೆ ವಿವಾದ ಸೃಷ್ಟಿಸಿರುವುದು ಏಕೆ?

ಅವಳಿ ನಗರದಲ್ಲಿ 3 ದಿನ ನಿಷೇಧಾಜ್ಞೆ ಜಾರಿ
ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಮೂರು ದಿನ ನಿಷೇಧಾಜ್ಞೆ ಜಾರಿ ಮಾಡಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಆರ್.ದಿಲೀಪ್ ಆದೇಶಿಸಿದ್ದು, ಯಾವುದೇ ಮೆರವಣಿಗೆ, ಪ್ರತಿಭಟನೆಗಳಿಗೆ ಅವಕಾಶವಿಲ್ಲ ಎಂದು ಖಡಕ್ ಸೂಚನೆ ನೀಡಿದ್ದಾರೆ.

ಬೆಳಗಾವಿಯಲ್ಲಿ 3 ದಿನ ನಿಷೇಧಾಜ್ಞೆ ಜಾರಿ
ಬೆಳಗಾವಿಯಲ್ಲಿ ಇಂದು [ಬುಧವಾರ] ರಾತ್ರಿಯಿಂದ ಡಿಸೆಂಬರ್ 21ರ ರಾತ್ರಿ 12ರವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈ ಬಗ್ಗೆ ಸುವರ್ಣ ನ್ಯೂಸ್‌ಗೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಲೋಕೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಕಲಬುರಗಿಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ 
ಗುರುವಾರ ಮುಂಜಾನೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರಗೆ ನಿಷೇದಾಜ್ಞೆ ಜಾರಿ ಕಲಬುರಗಿ ನಗರ ಪೊಲೀಸ್ ಆಯುಕ್ತ M.N.ನಾಗರಾಜ್ ಆದೇಶ ಹೊರಡಿಸಿದ್ದಾರೆ. ಅಷ್ಟೇ ಅಲ್ಲದೇ ಡಿ.19ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಶರತ್ ಬಿ ಆದೇಶಿಸಿದ್ದಾರೆ.

ಬೆಂಗಳೂರಲ್ಲೂ 3 ದಿನ ನಿಷೇದಾಜ್ಞೆ ಜಾರಿ 
ನಾಳೆ ಬೆಳಿಗ್ಗೆಯಿಂದ 144 ಸೆಕ್ಷನ್ ಜಾರಿಯಾಗಲಿದ್ದು, 21ರ ಮಧ್ಯರಾತ್ರಿ ವರೆಗೂ ನಿಷೇದಾಜ್ಞೆ ಜಾರಿ ಮಾಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದು, ಶಾಲಾ-ಕಾಲೇಜು., ಕಮರ್ಷಿಯಲ್, ಸಿಟಿ ಮಾರ್ಕೇಟ್, ಹೂವಿನ ಮಾರ್ಕೇಟ್, ಬಸ್ ಸ್ಟಾಂಡ್, ರೈಲ್ವೆ ನಿಲ್ದಾಣ, ‌ಓಲಾ, ಆಟೋಗಳಿಗೆ ಇದು ಅನ್ವಯಿಸಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ದಾವಣಗೆರೆಯಲ್ಲಿ 3 ದಿನ 144 ಸೆಕ್ಷನ್ 
ಇಂದು ರಾತ್ರಿ ಎಂಟು ಗಂಟೆಯಿಂದ ಡಿ 21, ಮಧ್ಯರಾತ್ರಿವರೆಗೆ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾದ್ಯಂತ ಕಟ್ಟೆಚ್ಚರವಹಿಸಿ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಆದೇಶ ಹೊರಸಿದಿದ್ದಾರೆ.

ಬಾಗಲಕೋಟೆಯಲ್ಲಿ 4 ದಿನ ನಿಷೇಧಾಜ್ಞೆ ಜಾರಿ
ಬುಧವಾರ ರಾತ್ರಿ 9ಗಂಟೆಯಿಂದ ಡಿಸೆಂಬರ್ 22ರ ಬೆಳಗಿನ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ 21ರ ಮಧ್ಯ ರಾತ್ರಿವರೆಗೂ ನಿಷೇದಾಜ್ಞೆ ಜಾರಿ
ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಬುಧವಾರ ರಾತ್ರಿಯಿಂದ ಡಿ. 21ರ ಮಧ್ಯ ರಾತ್ರಿವರೆಗೂ ನಿಷೇದಾಜ್ಞೆ ಜಾರಿ ಮಾಡಿ ಉಪವಿಭಾಗಾಧಿಕಾರಿ ರಘುನಂದನ್ ಆದೇಶ ಹೊರಡಿಸಿದ್ದಾರೆ.

ಶಿವಮೊಗ್ಗದಲ್ಲಿ ಡಿ.18ರ ರಾತ್ರಿಯಿಂದ ಸೆಕ್ಷನ್ 144 ಜಾರಿ 
ಡಿಸೆಂಬರ್ 18ರ ರಾತ್ರಿ 10ಗಂಟೆಯಿಂದ ಡಿ.21ರ ಮಧ್ಯರಾತ್ರಿವರೆಗೆ ಕಲಂ 144 ಅಡಿ ನಿಷೇದಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಶಿವ ಕುಮಾರ್ ಆದೇಶ.