Asianet Suvarna News Asianet Suvarna News

ಇಂದು ನೂತನ ಸಚಿವರಿಗೆ ಖಾತೆ ಹಂಚಿಕೆ: ಇಲ್ಲಿದೆ ಸಂಭಾವ್ಯ ಪಟ್ಟಿ

ಇಂದು ನೂತನ ಸಚಿವರಿಗೆ ಖಾತೆ ಹಂಚಿಕೆ: ಸಿಎಂ| ಉಮೇಶ್‌ ಕತ್ತಿಗೆ ಸಚಿವ ಸ್ಥಾನದ ಭರವಸೆ, ಆರಗ ಜ್ಞಾನೇಂದ್ರಗೆ ಸಚಿವ ಸ್ಥಾನ ಈ ಬಾರಿ ಅಸಾಧ್ಯ| ಖಾತೆ ಹಂಚಿಕೆ ಬಗ್ಗೆ ಹೈಕಮಾಂಡ್‌ ಮಾತು ಕೇಳುತ್ತಿಲ್ಲ ಎಂಬುದು ಕೇವಲ ಮಾಧ್ಯಮ ಸೃಷ್ಟಿ

Karnataka Politics CM BS yediyurappa To Assign Portfolio To The New Ministers Here Is The Probable List
Author
Bangalore, First Published Feb 10, 2020, 7:41 AM IST

ಶಿಕಾರಿಪುರ[ಫೆ.10]: ಸೋಮವಾರ ಬೆಳಗ್ಗೆ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದ್ದಾರೆ.

ಪಟ್ಟಣದ ಮಾಳೇರ ಕೇರಿಯಲ್ಲಿನ ತಮ್ಮ ಸ್ವಗೃಹದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಶನಿವಾರ ಮತ್ತು ಭಾನುವಾರ ರಜೆಯ ಕಾರಣ ಖಾತೆ ಹಂಚಿಕೆ ಸಾಧ್ಯವಾಗಿಲ್ಲ. ಸೋಮವಾರ ಖಾತೆ ಹಂಚಿಕೆ ನಡೆಯಲಿದೆ ಎಂದು ತಿಳಿಸಿದರು.

ಉಮೇಶ ಕತ್ತಿ ಅವರು ಇದೇ ವೇಳೆಯಲ್ಲಿ ಸಚಿವರಾಗಬೇಕಾಗಿತ್ತು. ಅನಿವಾರ್ಯ ಕಾರಣದಿಂದ ಆಗಿಲ್ಲ. ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಭರವಸೆ ನೀಡಲಾಗಿದೆ. ಉತ್ತರ ಕರ್ನಾಟಕ ಭಾಗದ ಪಕ್ಷದ ಮುಖಂಡರಾದ ಅವರನ್ನು ಸಚಿವರಾಗಿಸಲಾಗುವುದು ಎಂದು ತಿಳಿಸಿದರು.

ಡಿಕೆಶಿ ಬಳಿಯಿದ್ದ ಖಾತೆಯೇ ಬೇಕೆಂದು ಪಟ್ಟು: ಜಲಸಂಪನ್ಮೂಲ ಖಾತೆ ಜಾರಕಿಹೊಳಿಗೆ?

ಅರಗ ಜ್ಞಾನೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಹಲವರಿಗೆ ಸಚಿವರಾಗುವ ಅಪೇಕ್ಷೆ ಇದೆ. ಹೊರಗಿನಿಂದ ಬಂದವರಿಗೆ ಸಚಿವ ಸ್ಥಾನ ಕಲ್ಪಿಸಬೇಕಾಗಿದ್ದರಿಂದ ಅವಕಾಶವಿಲ್ಲವಾಗಿದೆ. ಅನಿವಾರ್ಯ ಕಾರಣದಿಂದ ಈ ಬಾರಿ ಅಸಾಧ್ಯ. ಅವರಿಗೆ ಬೇರೆ ಜವಾಬ್ದಾರಿ ವಹಿಸಲಾಗುವುದು. ಬಜೆಟ್‌ ನಂತರದಲ್ಲಿ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ನಡೆಯಲಿದೆ ಎಂದು ತಿಳಿಸಿದರು.

ಹೊರಗಿನಿಂದ ಬಂದವವರು-ಮೂಲ ಬಿಜೆಪಿಗರು ಎಂಬ ಗುಂಪುಗಾರಿಕೆ ಇದೆಯೇ ಎಂಬ ಪ್ರಶ್ನೆಗೆ, ಇದು ಮಾಧ್ಯಮದವರ ಸೃಷ್ಟಿ. ಬೆಳಗಿನಿಂದ ಸಂಜೆವರೆಗೆ ಜನತೆ ಟಿವಿ ನೋಡಬೇಕು ಎಂದು ಹೀಗೆ ಮಾಡುತ್ತೀರಿ. ಇದರಲ್ಲಿ ಸತ್ಯಾಂಶ ಇಲ್ಲ. ಸಚಿವ ಸಂಪುಟ ಅತಂತ್ರ, ದೆಹಲಿಯಲ್ಲಿ ಸಿಎಂ ಮಾತು ಕೇಳುತ್ತಿಲ್ಲ ಎಂದು ಹೇಳಿದಿರಿ. ಇದೀಗ ಖಾತೆ ಹಂಚಿಕೆ ಬಗ್ಗೆ ಹೈಕಮಾಂಡ್‌ ಮಾತು ಕೇಳುತ್ತಿಲ್ಲ ಎಂದು ಬಿಂಬಿಸಲಾಗಿದ್ದು, ಈ ಬಗ್ಗೆ ಹೆಚ್ಚು ಗಮನಹರಿಸುವುದಿಲ್ಲ ಎಂದರು.

ಕಿಂಗ್‌ಮೇಕರ್‌:

ಸಿದ್ದರಾಮಯ್ಯ, ಕುಮಾರಸ್ವಾಮಿ, ಹೊರಟ್ಟಿಅವರ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ. ರಾಜ್ಯದ ಅಭಿವೃದ್ಧಿ ಬಗ್ಗೆ ಮಾತ್ರ ಹೆಚ್ಚಿನ ಗಮನಹರಿಸಲಿದ್ದು ಮಾ.5 ರಂದು ಬಜೆಟ್‌ಗೆ ಸಿದ್ಧತೆ ಆಗುತ್ತಿದೆ. ರಾಜ್ಯಪಾಲರ ಬಾಷಣ ಬಗ್ಗೆ ಹೆಚ್ಚಿನ ಗಮನಹರಿಸುತ್ತಿದ್ದೇನೆ. ವಿರೋಧ ಪಕ್ಷದವರ ಟೀಕೆ ಸಹಜ ಎಂದು ಯಡಿಯೂರಪ್ಪ ಅವರು ಮಾಜಿ ಸಚಿವ ಬಸವರಾಜ ಹೊರಟ್ಟಿಅವರು ಎಚ್‌.ಡಿ. ಕುಮಾರಸ್ವಾಮಿ ಪುನಃ ಕಿಂಗ್‌ಮೇಕರ್‌ ಆಗಲಿದ್ದಾರೆ ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದರು.

ವಿಸ್ತರಣೆ ಮುಗಿದಿದ್ರೂ ಇದ್ದಕ್ಕಿದ್ದಂತೆ ಶಾ ಭೇಟಿ ಮಾಡಿದ ಶ್ರೀರಾಮುಲು, ಅಸಲಿ ಕಾರಣ ಏನು?

ಬಜೆಟ್‌ನಲ್ಲಿ ಜಿಲ್ಲೆಗೆ ಪ್ರಾಧಾನ್ಯತೆ ಬಗ್ಗೆ ಉತ್ತರಿಸಿದ ಅವರು, ವಿಮಾನ ನಿಲ್ದಾಣ, ನೀರಾವರಿ ಸಹಿತ ಈಗಾಗಲೇ ಎಲ್ಲಾ ರೀತಿಯ ಯೋಜನೆ ನೀಡಲಾಗಿದ್ದು ಹೊಸದಾಗಿ ನೀಡಲು ಏನೂ ಇಲ್ಲ, ಯೋಜನೆ ಪೂರ್ಣಗೊಳಿಸುವ ಬಗ್ಗೆ ಹೆಚ್ಚಿನ ಗಮನಹರಿಸಲಾಗುವುದು. ವಿಮಾನ ನಿಲ್ದಾಣ ಕಾಮಗಾರಿಗೆ ಹೆಚ್ಚುವರಿಯಾಗಿ ರು.220 ಕೋಟಿ ಹಣ ನೀಡಲಾಗಿದೆ. ಪೂರ್ಣಗೊಳಿಸಲು ಅಧಿಕಾರಿಗಳು ಹೆಚ್ಚಿನ ಗಮನ ಹರಿಸುವಂತೆ ಸೂಚಿಸಲಾಗಿದೆ. 6-8 ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂಬ ಅಪೇಕ್ಷೆ ಇದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸದ ರಾಘವೇಂದ್ರ, ಶಾಸಕ ಹರತಾಳು ಹಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್‌, ಕೆ.ಎಸ್‌. ಗುರುಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಸಂಭಾವ್ಯ ಖಾತೆಗಳು

- ರಮೇಶ್‌ ಜಾರಕಿಹೊಳಿ - ಜಲಸಂಪನ್ಮೂಲ

- ಎಸ್‌.ಟಿ.ಸೋಮಶೇಖರ್‌ - ಸಹಕಾರ

- ಗೋಪಾಲಯ್ಯ - ಸಣ್ಣ ಕೈಗಾರಿಕೆ ಮತ್ತು ಕಾರ್ಮಿಕ

- ಬೈರತಿ ಬಸವರಾಜು - ಪೌರಾಡಳಿತ

- ಶ್ರೀಮಂತ ಪಾಟೀಲ್‌ - ಸಕ್ಕರೆ ಮತ್ತು ಎಪಿಎಂಸಿ

- ನಾರಾಯಣಗೌಡ - ಸಣ್ಣ ನೀರಾವರಿ

- ಬಿ.ಸಿ.ಪಾಟೀಲ್‌ - ಅರಣ್ಯ/ ಇಂಧನ

- ಶಿವರಾಂ ಹೆಬ್ಬಾರ್‌ - ಕೃಷಿ/ಕೌಶಲ್ಯಾಭಿವೃದ್ಧಿ

- ಡಾ.ಕೆ.ಸುಧಾಕರ್‌ - ವೈದ್ಯಕೀಯ ಶಿಕ್ಷಣ

- ಆನಂದ್‌ ಸಿಂಗ್‌ - ಪ್ರವಾಸೋದ್ಯಮ

‘ಜಿಲ್ಲೆ ಬಿಜೆಪಿಯ ಭದ್ರಕೋಟೆಯಾಗಿ ಪರಿವರ್ತನೆಯಾಗಿದೆ’

Follow Us:
Download App:
  • android
  • ios