ಕರ್ತಾರ್ಪುರ ಕಾರಿಡಾರ್ ಉದ್ಘಾಟನೆಗೆ ಡಾ.ಸಿಂಗ್ ಆಹ್ವಾನಿಸಿದ ಪಾಕ್| ಇದೇ ನವೆಂಬರ್ 9 ರಂದು ಕರ್ತಾರ್ಪುರ ಕಾರಿಡಾರ್ ಉದ್ಘಾಟನೆ| ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಮಾಹಿತಿ| ಪಾಕ್ ಆಹ್ವಾನ ತಿರಸ್ಕರಿಸಿದ ಮನಮೋಹನ್ ಸಿಂಗ್| ಯಾತ್ರಾರ್ಥಿಗಳಿಂದ 20 ಡಾಲರ್ ಹಣವನ್ನು ಸೇವಾ ಶುಲ್ಕವನ್ನಾಗಿ ಪಡೆಯುವ ಕ್ರಮ ಮರುಪರಿಶೀಲಿಸಲು ಭಾರತ ಆಗ್ರಹ|
ಇಸ್ಲಾಮಾಬಾದ್(ಸೆ.30): ಇದೇ ನವೆಂಬರ್ 9 ರಂದು ಕರ್ತಾರ್ಪುರ ಕಾರಿಡಾರ್ ಉದ್ಘಾಟನೆಯಾಗಲಿದ್ದು, ಈ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಪಾಕಿಸ್ತಾನ ಆಹ್ವಾನಿಸಿದೆ.
ಸಿಖ್ ಸಮುದಾಯವನ್ನು ಪ್ರತಿನಿಧಿಸುವ ಭಾರತದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ಆಹ್ವಾನಿಸುತ್ತಿರುವುದಾಗಿ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಹೇಳಿದ್ದಾರೆ.
ಕಾರಿಡಾರ್ ಉದ್ಘಾಟನಾ ಸಮಾರಂಭ ಗುರುನಾನಕ್ ದೇವ್ ಅವರ 550 ನೇ ಜನ್ಮ ದಿನಾಚರಣೆಯ ಮೂರು ದಿನಗಳ ಮೊದಲು ನಡೆಯಲಿದ್ದು, ಎರಡೂ ದೇಶಗಳನ್ನು ಬೆಸೆಯುವ ಆಶಾವಾದ ಮೂಡಿಸಿದೆ.
ಆದರೆ ಪಾಕ್ ಸರ್ಕಾರದ ಆಹ್ವಾನವನ್ನು ಸ್ಪಷ್ಟವಾಗಿ ತಿರಿಸ್ಕರಿಸಿರುವ ಡಾ. ಮನಮೋಹನ್ ಸಿಂಗ್, ಪಾಕಿಸ್ತಾನಕ್ಕೆ ಹೋಗಲು ಕಾಲ ಪಕ್ವವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಪಾಕಿಸ್ತಾನದ ಕರ್ತಾರ್ಪುರ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಂದ 20 ಡಾಲರ್ ಹಣವನ್ನು ಸೇವಾ ಶುಲ್ಕವನ್ನಾಗಿ ಪಡೆಯುವ ಪಾಕ್ ಕ್ರಮವನ್ನು ಮರುಪರಿಶೀಲಿಸುವಂತೆ ಭಾರತ ಸರ್ಕಾರ ಮನವಿ ಮಾಡಿದೆ.
ಆರಂಭದಲ್ಲಿ, ಭಾರತದಿಂದ ಪ್ರತಿದಿನ 5,000 ಯಾತ್ರಾರ್ಥಿಗಳಿಗೆ ಭೇಟಿ ನೀಡಲು ಅವಕಾಶವಿರುತ್ತದೆ ಆದರೆ ನಂತರ ದಿನಕ್ಕೆ 10,000 ಯಾತ್ರಾರ್ಥಿಗಳಿಗೆ ಅವಕಾಶ ನೀಡಲಾಗುವುದು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
