ವಾಯುಪಡೆ ಜಾಗ್ವಾರ್ ಯುದ್ಧ ವಿಮಾನಕ್ಕೆ ಡಿಕ್ಕಿ ಹೊಡೆದ ಹಕ್ಕಿ| ವಿಮಾನದ ಎಂಜಿನ್’ನಲ್ಲಿ ಸಿಕ್ಕ ಹಕ್ಕಿ| ಹೆಚ್ಚುವರಿ ಇಂಧನ ಟ್ಯಾಂಕ್‌, ತರಬೇತಿ ಬಾಂಬ್ ಹೊರಗೆ ಎಸೆದ ಪೈಲಟ್| ಪೈಲಟ್’ನ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ| ಸುರಕ್ಷಿತವಾಗಿ ವಿಮಾನ ಭೂಸ್ಪರ್ಶ ಮಾಡಿಸಿದ ಪೈಲೆಟ್| ಹರಿಯಾಣದ ಅಂಬಾಲಾ ವಾಯುನೆಲೆಯಿಂದ ಹಾರಾಟ ನಡೆಸಿದ್ದ ಜಾಗ್ವಾರ್‌ ಯುದ್ಧ ವಿಮಾನ|

ಚಂಡೀಗಢ್(ಜೂ.27): ಭಾರತೀಯ ವಾಯುಪಡೆಯ ಜಾಗ್ವಾರ್‌ ಯುದ್ಧ ವಿಮಾನಕ್ಕೆ ಹಕ್ಕಿಯೊಂದು ಡಿಕ್ಕಿಯಾದ ಪರಿಣಾಮ, ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ. ಪೈಲಟ್‌ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿಹೋಗಿದ್ದು, ವಿಮಾನವೂ ಸುರಕ್ಷಿತವಾಗಿ ಭೂ ಸ್ಪರ್ಶ ಮಾಡಿದೆ.

Add Asianetnews Kannada as a Preferred SourcegooglePreferred

ಹರಿಯಾಣದ ಅಂಬಾಲಾ ವಾಯುನೆಲೆಯಿಂದ ಹಾರಾಟ ನಡೆಸಿದ್ದ ಜಾಗ್ವಾರ್‌ ಯುದ್ಧ ವಿಮಾನಕ್ಕೆ ಹಕ್ಕಿಯೊಂದು ಡಿಕ್ಕಿ ಹೊಡೆದಿದ್ದು, ಹಕ್ಕಿ ಇಂಜಿನ್’ನಲ್ಲಿ ಸಿಕ್ಕ ಪರಿಣಾಮ ತುರ್ತು ಭೂಸ್ಪರ್ಶ ಮಾಡಲಾಗಿದೆ. ಆದರೆ ಪೈಲಟ್’ನ ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ ಎಂದು ವಾಯುಸೇನೆ ತಿಳಿಸಿದೆ.

ಹಕ್ಕಿ ಎಂಜಿನ್’ನಲ್ಲಿ ಸಿಲುಕೊಳ್ಳುತ್ತಿದ್ದಂತೇ ಪೈಲಟ್‌ ವಿಮಾನದ ಹೆಚ್ಚುವರಿ ಇಂಧನ ಟ್ಯಾಂಕ್‌ ಮತ್ತು ತರಬೇತಿಗೆ ಇಡಲಾಗಿದ್ದ ಸಣ್ಣ ಪ್ರಮಾಣದ ಬಾಂಬ್‌ಗಳನ್ನು ಹೊರಗೆ ಎಸೆದಿದ್ದಾರೆ. ಬಳಿಕ ಸುರಕ್ಷಿತವಾಗಿ ವಿಮಾನವನ್ನು ಭೂಸ್ಪರ್ಶ ಮಾಡಿಸಿದ್ದಾರೆ. 

ಪೈಲಟ್‌ ಎಸೆದ ಬಾಂಬ್‌ಗಳು ಜನ ವಸತಿ ಪ್ರದೇಶದಲ್ಲಿ ಬಿದ್ದರೂ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿ ಪರಿಹಾರ ಕ್ರಮ ತೆಗೆದುಕೊಂಡಿದೆ.