'ನಾಜಿ ಲವರ್ಸ್'ಗಳಿಂದ ಕಣಿವೆ ಭೇಟಿ: ಮೋದಿ ವಿರುದ್ಧ ಒವೈಸಿ ಕಿಡಿ!
ಯೂರೋಪಿಯನ್ ಯೂನಿಯನ್ ಸಂಸದರು ನಾಜಿ ಲವರ್ಸ್ ಎಂದ ಒವೈಸಿ| ಐರೋಪ್ಯ ಒಕ್ಕೂಟ ನಿಯೋಗದ ಕಣಿವೆ ಭೇಟಿ ವಿರೋಧಿಸಿದ ಎಐಎಂಐಎಂ ಸಂಸದ| 'ಮುಸ್ಲಿಂ ವಿರೋಧಿ ಭಾವನೆಯ ವಿದೇಶಿಗರಿಗೆ ಮೋದಿ ಸರ್ಕಾರ ಕಣಿವೆ ಭೇಟಿಗೆ ಅವಕಾಶ ನೀಡಿದೆ'| ಐರೋಪ್ಯ ಒಕ್ಕೂಟ ನಿಯೋಗದ ಕಣಿವೆ ಭೇಟಿಗೆ ಪ್ರಿಯಾಂಕಾ ಗಾಂಧಿ ವಿರೋಧ| 'ವಿದೇಶಿ ಸಂಸದರಿಗೆ ಭೇಟಿಗೆ ಇರುವ ಅವಕಾಶ ಭಾರತೀಯ ಸಂಸದರಿಗೇಕಿಲ್ಲ?'
ನವದೆಹಲಿ(ಅ.29): ಯುರೋಪಿಯನ್ ಯೂನಿಯನ್ ನಿಯೋಗದ ಕಾಶ್ಮೀರ ಭೇಟಿಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ, ನಿಯೋಗದ ಭೇಟಿಗೆ ಅವಕಾಶ ನೀಡಿರುವ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಇಸ್ಲಾಮೊಪೊಬಿಯಾದಿಂದ ಬಳಲುತ್ತಿರುವ ಮುಸ್ಲಿಂ ವಿರೋಧಿಗಳು ಕಣಿವೆಗೆ ಭೇಟಿ ನೀಡಿದ್ದು, ಮೋದಿ ಸರ್ಕಾರ ಉದ್ದೇಶಪೂರ್ವಕವಾಗಿ ಈ ಭೇಟಿಯನ್ನು ಆಯೋಜಿಸಿದೆ ಎಂದು ಒವೈಸಿ ಗಂಭೀರ ಆರೋಪ ಮಾಡಿದ್ದಾರೆ.
ಕಣಿವೆ ನೋಡುವುದೇ ಸುಯೋಗ: ಕಣಿವೆಗೆ ಭೇಟಿ ನೀಡಿದ ಯೂರೋಪಿಯನ್ ನಿಯೋಗ!
ಮುಸ್ಲಿಂ ವಿರೋಧಿ ಭಾವನೆ ಹೊಂದಿರುವ ನಿಯೋಗ ಸಹಜವಾಗಿ ಮೋದಿ ಸರ್ಕಾರದ ಪರವಾಗಿ ವರದಿ ನೀಡಲಿದೆ ಎಂದು ಒವೈಸಿ ಹೇಳಿದ್ದು, ಯುರೋಪಿಯನ್ ಯೂನಿಯನ್ ನಿಯೋಗದ ಭೇಟಿ ಒಪ್ಪಲು ಸಾಧ್ಯವಿಲ್ಲ ಎಂದು ಕಿಡಿ ಕಾರಿದ್ದಾರೆ.
ಇನ್ನು ಕಣಿವೆಗೆ ಯೂರೋಪಿಯನ್ ಯೂನಿಯನ್ ಸಂಸದರ ಭೇಟಿ ವಿರೋಧಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಕಣಿವೆಗೆ ಹೊರ ದೇಶದ ಸಂಸದರು ಭೇಟಿ ನೀಡಬಹುದು ಆದರೆ ಭಾರತೀಯ ಸಂದರಿಗೆ ಅನುಮತಿ ಕೊಡುವುದಿಲ್ಲ ಎಂದು ಕೇಂದ್ರ ಸರ್ಕಾರವನ್ನು ದೂರಿದ್ದಾರೆ.
ಭಾರತೀಯ ಸಂಸದರು ಮತ್ತು ವಿಪಕ್ಷ ನಾಯಕರು ಕಣಿವೆಗೆ ಭೇಟಿ ನೀಡಿದರೆ ಅವರನ್ನು ವಿಮಾನ ನಿಲ್ದಾಣದಿಂದಲೇ ವಾಪಸ್ ಕಳುಹಿಸಲಾಗುತ್ತದೆ. ಆದರೆ ವಿದೇಶಿ ಸಂಸದರಿಗೆ ಕೆಂಪು ಹಾಸಿನ ಸ್ವಾಗತ ನೀಡಲಾಗುತ್ತದೆ ಎಂದು ಪ್ರಿಯಾಂಕಾ ಕಿಡಿಕಾರಿದ್ದಾರೆ.