ಆಂಧ್ರ ದೇಗುಲ ಮಂಡಳಿಯಲ್ಲೂ ಮೀಸಲು ಜಾರಿ| ನಾಮ ನಿರ್ದೇಶಿತ ಹುದ್ದೆಗಳಲ್ಲಿ ಎಸ್‌ಸಿ/ಎಸ್‌ಟಿ, ಮಹಿಳೆಯರಿಗೆ ಶೇ.50 ಮೀಸಲು

ಅಮರಾವತಿ[ಸೆ.14]: ಸರ್ಕಾರದ ಅಧೀನದಲ್ಲಿರುವ ಎಲ್ಲಾ ಮುಜರಾಯಿ ದೇವಾಲಯಗಳು ಮತ್ತು ದತ್ತಿ ಸಂಸ್ಥೆಗಳ ಆಡಳಿತ ಮಂಡಳಿಯಲ್ಲಿನ ನಾಮನಿರ್ದೇಶಿತ ಹುದ್ದೆಗಳಲ್ಲಿ ಶೇ.50ರಷ್ಟುಮೀಸಲು ಕಲ್ಪಿಸುವ ಐತಿಹಾಸಿಕ ನಿರ್ಧಾರವನ್ನು ಆಂಧ್ರ ಪ್ರದೇಶದ ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ಸರ್ಕಾರ ಕೈಗೊಂಡಿದೆ.

Add Asianetnews Kannada as a Preferred SourcegooglePreferred

ಅಲ್ಲದೇ ಸಾಮಾನ್ಯ ಮತ್ತು ಮೀಸಲು ವಿಭಾಗದಲ್ಲಿ ದೇವಾಲಯದ ಆಡಳಿತ ಮಂಡಳಿಯ ಶೇ.50ರಷ್ಟುಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಅಂದರೆ, ತಿರುಮಲ ತಿರುಪತಿ ದೇವಾಸ್ಥಾನಂನ 25 ನಾಮನಿರ್ದೇಶಿತ ಸದಸ್ಯರ ಪೈಕಿ ಪರಿಶಿಷ್ಟಜಾತಿ ಹಾಗೂ ಹಿಂದುಳಿದ ವರ್ಗದವರು ಸೇರಿದಂತೆ 13 ಮಹಿಳೆಯರು ಸ್ಥಾನ ಪಡೆಯಲಿದ್ದಾರೆ.

ಆಂಧ್ರ ಪ್ರದೇಶದ ದತ್ತಿ ಹಾಗೂ ಹಿಂದೂ ಧಾರ್ಮಿಕ ಸಂಸ್ಥೆಗಳ ಕಾಯ್ದೆ- 1987ರ ಅಡಿಯಲ್ಲಿ ಮುಜರಾಯಿ ಇಲಾಖೆಯ ವಿಶೇಷ ಮುಖ್ಯ ಕಾರ್ಯದರ್ಶಿ ಈ ಆದೇಶ ಹೊರಡಿಸಿದ್ದಾರೆ. ಲಿಂಗ ಹಾಗೂ ಸಮುದಾಯ ಆಧಾರಿತ ಮೀಸಲನ್ನು ಆಂಧ್ರ ಪ್ರದೇಶದಲ್ಲಿ ಜಾರಿ ಮಾಡುತ್ತಿರುವುದು ಇದೇ ಮೊದಲು. ಸರ್ಕಾರದ ಈ ನಿರ್ಧಾರದಿಂದಾಗಿ ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ ದಲಿತರು ಸೇರಿದಂತೆ ಬ್ರಾಹ್ಮಣರೇತರರು ಸಹ ದೇವಸ್ಥಾನದ ಉನ್ನತ ಹುದ್ದೆಗೆ ಏರುವ ಅವಕಾಶ ಕಲ್ಪಿಸಿದಂತಾಗಿದೆ.