ಲಾಕ್ಡೌನ್ ಎಫೆಕ್ಟ್: ಅರಬಾವಿ ಕ್ಷೇತ್ರದ 76 ಸಾವಿರ ಕುಟುಂಬಕ್ಕೆ ದಿನಸಿ ಕಿಟ್
ಬಾಲಚಂದ್ರ ಜಾರಕಿಹೊಳಿಯಿಂದ 76258 ಕುಟುಂಬಕ್ಕೆ ಆಹಾರ ಕಿಟ್| ಕುಟುಂಬಗಳಿಗೆ ಕಿಟ್ ವಿತರಣೆ ಕಾರ್ಯ ಆರಂಭ| ಕೊರೋನಾ ವೈರಸ್ ಓಡಿಸಲು ಇರುವ ಒಂದೇ ಮಾರ್ಗ ಸಾಮಾಜಿಕ ಅಂತರ| ಲಾಕ್ಡೌನ್ ನಿಯಮ ಪ್ರತಿಯೊಬ್ಬರೂ ಪಾಲಿಸಬೇಕು| ಕೇಂದ್ರದ ಹಾಗೂ ರಾಜ್ಯ ಸರ್ಕಾರಗಳು ವಿಧಿಸಿರುವ ನಿಯಮ ಪಾಲನೆ ಮಾಡಬೇಕಾದುದ್ದು ನಮ್ಮೆಲ್ಲರ ಕರ್ತವ್ಯ|
ಮೂಡಲಗಿ(ಏ.26): ಬೆಳಗಾವಿ ಜಿಲ್ಲೆಯ ಅರಬಾವಿ ಕ್ಷೇತ್ರದ 76258 ಕುಟುಂಬಗಳಿಗೆ ಒಟ್ಟು ಹತ್ತು ದಿನಗಳಿಗೆ ಆಗುವಷ್ಟು ದಿನಸಿ, ದಿನ ಬಳಕೆ ವಸ್ತುಗಳನ್ನು ಅರಬಾವಿ ಕ್ಷೇತ್ರದ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೀಡುತ್ತಿದ್ದಾರೆ. ಶನಿವಾರ ಮೂಡಲಗಿಯಲ್ಲಿ ಕಿಟ್ ವಿತರಣೆ ಕಾರ್ಯ ಆರಂಭವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬಾಲಚಂದ್ರ ಜಾರಕಿಹೊಳಿ, ವಿಶ್ವವ್ಯಾಪಿಯಾಗಿ ಹರಡಿರುವ ಕೊರೋನಾ ವೈರಸ್ ಓಡಿಸಲು ಇರುವ ಒಂದೇ ಮಾರ್ಗ ಸಾಮಾಜಿಕ ಅಂತರ. ಮಾ.24ರಿಂದ ಜಾರಿಯಲ್ಲಿರುವ ಲಾಕ್ಡೌನ್ ನಿಯಮ ಪ್ರತಿಯೊಬ್ಬರೂ ಪಾಲಿಸಬೇಕು. ಕೇಂದ್ರದ ಹಾಗೂ ರಾಜ್ಯ ಸರ್ಕಾರಗಳು ವಿಧಿಸಿರುವ ನಿಯಮ ಪಾಲನೆ ಮಾಡಬೇಕಾದುದ್ದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 489 ಕ್ಕೆ ಏರಿಕೆ; ಇಂದು ಒಂದೇ ದಿನ 15 ಮಂದಿಗೆ ಸೋಂಕು
ಮೇ 3 ರ ವರೆಗೆ ಲಾಕ್ಡೌನ್ ಇರುವುದರಿಂದ ಪ್ರತಿಯೊಬ್ಬರು ಮನೆಯಲ್ಲಿದ್ದುಕೊಂಡು ಸುರಕ್ಷಿತವಾಗಿರಿ. ಕೊರೋನಾ ವಿರುದ್ಧ ಜಾಗೃತರಾಗಿರಿ. ಕಳೆದ ಒಂದು ತಿಂಗಳಿನಿಂದ ಲಾಕ್ಡೌನ್ ಸಂದರ್ಭದಲ್ಲಿ ನಾಗರಿಕರಿಗೆ ತೊಂದರೆಯಾಗುತ್ತಿರುವುದನ್ನು ಗಮನಿಸಿದ್ದೇನೆ. ಜನರ ಸಂಕಷ್ಟಕ್ಕೆ ಧಾವಿಸುವುದು ನನ್ನ ಕರ್ತವ್ಯ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಪ್ರತಿ ಕುಟುಂಬಕ್ಕೂ ಆಹಾರ ಧಾನ್ಯ ಹಂಚುತ್ತಿದ್ದೇನೆ. ಇದು ನಾನು ಮಾಡುತ್ತಿರುವ ಚಿಕ್ಕ ಅಳಿಲು ಸೇವೆ. ಎಷ್ಟುಮಾಡಿದರೂ ಕ್ಷೇತ್ರದ ಮತದಾರರ ಋುಣ ತೀರಿಸಲು ಅಸಾಧ್ಯ. ಆದ್ದರಿಂದ ನಾವೆಲ್ಲರೂ ಸರ್ಕಾರಗಳ ಆದೇಶ ಕಟ್ಟುನಿಟ್ಟಾಗಿ ಪಾಲಿಸೋಣ. ಕೊರೋನಾ ಸೋಲಿಸೋಣ ಎಂದು ಹೇಳಿದರು.
ಈಗಾಗಲೇ ಶಾಸಕರು ಕ್ಷೇತ್ರದ ಜನತೆಗೆ 2.50 ಲಕ್ಷ ಮಾಸ್ಕ್ ವಿತರಿಸಿದ್ದಾರೆ. ನಗರ ಪ್ರದೇಶದಲ್ಲಿರುವ ಸ್ಲಂ ಪ್ರದೇಶದ ನಿರ್ಗತಿಕ ಕುಟುಂಬಗಳಿಗೆ ಪ್ರತಿದಿನ ಒಂದು ಲೀಟರ್ನಂತೆ ಉಚಿತವಾಗಿ ನಂದಿನಿ ಹಾಲು ವಿತರಿಸುವ ಕಾರ್ಯ ಮಾಡುತ್ತಿದಾರೆ.