Asianet Suvarna News Asianet Suvarna News

ಗದಗ ಜಿಲ್ಲೆಯಲ್ಲಿ ಮತ್ತೆ ಕೊರೋನಾ ಹರಡುವ ಭೀತಿ: ಆತಂಕದಲ್ಲಿ ಜನತೆ..!

ಗದಗ ಜಿಲ್ಲೆಯಾದ್ಯಂತ ಜನಜೀವನ ಸಹಜ ಸ್ಥಿತಿಗೆ| ಜಿಲ್ಲೆಯ ರೋಣ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಹೆಚ್ಚಿದ ಆತಂಕ| ಕೃಷ್ಣಾಪುರ ಗ್ರಾಮದ ಗರ್ಭಿಣಿಗೆ ಕೊರೋನಾ ದೃಢ| ಕೊರೋನಾ ಪಾಸಿಟಿವ್‌ ಹಿನ್ನೆಲೆ ರೋಣ ಪಟ್ಟಣದಲ್ಲಿನ 2 ಖಾಸಗಿ ಆಸ್ಪತ್ರೆ ಸೀಜ್‌|

Gadag District People in anxiety for Coronavirus Positive Case in Ron
Author
Bengaluru, First Published May 6, 2020, 9:13 AM IST

ಗದಗ(ಮೇ.06): ಜಿಲ್ಲೆಯಾದ್ಯಂತ ದಿನ ಕಳೆದಂತೆ ಕೊರೋನಾ ಕಡಿಮೆಯಾಗುವ ಬದಲು ಹೆಚ್ಚಾಗುತ್ತಿದ್ದು, ಇದರ ಮಧ್ಯೆ ಅನ್‌ಲಾಕ್‌ ಆಗಿ 2ನೇ ದಿನವಾದ ಮಂಗಳವಾರ ಜನಜೀವನ ಸಹಜ ಸ್ಥಿತಿಗೆ ಮರಳಿದೆ.

ನಗರದಲ್ಲಿ ಈಗಾಗಲೇ 5 ಪ್ರಕರಣಗಳು ಪತ್ತೆಯಾಗಿ ಅವರಲ್ಲಿ ಒಬ್ಬರು ಮೃತಪಟ್ಟಿದ್ದು, ಇನ್ನೊಬ್ಬರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಸೋಮವಾರ ಸಂಜೆ ಈ ಪ್ರಕರಣಗಳು ಪತ್ತೆಯಾಗಿರುವ ಭಾಗದಿಂದಲೇ ಆರೋಗ್ಯದಲ್ಲಿ ತೀವ್ರ ಏರುಪೇರಾದ ಇಬ್ಬರನ್ನು ಆಸ್ಪತ್ರೆಗೆ ರವಾನಿಸಿದ್ದು ಮತ್ತೆ ಆತಂಕ ಶುರುವಾಗಿದೆ.

ರೋಣದಲ್ಲಿ ದೃಢಪಟ್ಟ ಮಹಾಮಾರಿ ಕೊರೋನಾ: ಹುಬ್ಬಳ್ಳಿಯಲ್ಲಿ ಆತಂಕ

ರೋಣ ತಾಲೂಕಿನ ಕೃಷ್ಣಾಪುರ ಗ್ರಾಮದ ಗರ್ಭಿಣಿಗೆ ಕೊರೋನಾ ದೃಢಪಟ್ಟ ಬೆನ್ನಲ್ಲಿಯೇ ಇಡೀ ತಾಲೂಕಿನಲ್ಲಿ ಕೊರೋನಾ ಭೀತಿ ಹೆಚ್ಚಿದೆ. ಸೋಂಕು ದೃಢಪಡುವ 5 ದಿನಗಳ ಮುಂಚೆ ತವರೂರಾದ ಕೃಷ್ಣಾಪುರ ಗ್ರಾಮಕ್ಕೆ ಬಂದಿದ್ದ ಗರ್ಭಿಣಿ ಅಲ್ಲಿ ಅನೇಕರ ಮನೆಗೆ ಊಟಕ್ಕೆ ಹೋಗಿದ್ದಳು. ಆಸ್ಪತ್ರೆಗೂ ತೆರಳಿದ್ದರಿಂದ ಗ್ರಾಮದ ಮನೆ ಮನೆಯಲ್ಲೂ ಕೊರೋನಾ ಭಯ ಕಾಡುತ್ತಿದೆ. ಈ ಗರ್ಭಿಣಿಯನ್ನು ನೋಡಿದ ವೈದ್ಯರು ರೋಣ ತಾಲೂಕಿನ ಅನೇಕರಿಗೆ ಚಿಕಿತ್ಸೆ ನೀಡಿದ್ದು ಈಗ ಅವರಿಗೆಲ್ಲಾ ಆತಂಕ ಶುರುವಾಗಿದೆ.

ರೋಣದ 2 ಆಸ್ಪತ್ರೆಗಳು ಸೀಜ್‌

ಕೃಷ್ಣಾಪುರ ಗ್ರಾಮದ 25 ವರ್ಷದ ಈ ಗರ್ಭಿಣಿ (ಪಿ-607) ಗೆ ಕೊರೋನಾ ಪಾಸಿಟಿವ್‌ ಆಗಿರುವ ಹಿನ್ನೆಲೆ ಜಿಲ್ಲೆಯ ರೋಣ ಪಟ್ಟಣದಲ್ಲಿನ 2 ಖಾಸಗಿ ಆಸ್ಪತ್ರೆಗಳನ್ನು ಜಿಲ್ಲಾಡಳಿತ ಸೀಜ್‌ ಮಾಡಿದೆ. ಸೋಂಕಿತ ಮಹಿಳೆ ಚಿಕಿತ್ಸೆ ಪಡೆದಿರುವ ರೋಣ ಪಟ್ಟಣದ 2 ಖಾಸಗಿ ಆಸ್ಪತ್ರೆಗಳನ್ನು ಸೀಜ್‌ ಮಾಡಿದ್ದು ವೈದ್ಯರು, ಲ್ಯಾಬ್‌ ಟೆಕ್ನಿಶಿಯನ್‌ ಸೇರಿದಂತೆ ಹಲವರನ್ನು ಕೊರಂಟೈನ್‌ ಮಾಡಲಾಗಿದೆ. ಪಿ-607 ದ್ವಿತೀಯ ಸಂಪರ್ಕ ಹೊಂದಿದ 40 ಜನರನ್ನು ಪತ್ತೆ ಮಾಡಿದ್ದು ಅವರ ಗಂಟಲು ದ್ರವ ಸ್ಯಾಂಪಲ್‌ ಪಡೆದಿದ್ದು ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ.

ವರದಿಯ ನಿರೀಕ್ಷೆಯಲ್ಲಿ ಜನತೆ:

ಜಿಲ್ಲೆಯಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿರುವ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕು ಢಾಣಕಶಿರೂರು ಗ್ರಾಮದ ನಿವಾಸಿ ಕೊರೋನಾ ಸೋಂಕಿತ ಗರ್ಭಿಣಿ ಮನೆಯ (ಗಂಡನ ಮನೆಯ) 9 ಜನರ ರಿಪೋರ್ಟ್‌ ಮಂಗಳವಾರ ಹೊರಬಂದಿದ್ದು ಎಲ್ಲವೂ ನೆಗೆಟಿವ್‌ ಆಗಿವೆ. ಮೇ 4 ರಂದು ಪ್ರಾಥಮಿಕ ಸಂಪರ್ಕ ಹೊಂದಿದ್ದ 120 ಜನರ ವರದಿಗಳು ಬುಧವಾರ ಬರುವ ನಿರೀಕ್ಷೆಯನ್ನು ಬಾಗಲಕೋಟೆ ಜಿಲ್ಲಾಡಳಿತ ಹೊಂದಿದೆ.

ಪಿ-607, 23 ವರ್ಷದ ಸೋಂಕಿತ ಗರ್ಭಿಣಿ ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಹಿಳೆ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಗುಣಮುಖರಾಗುತ್ತಿದ್ದಾರೆ. ಆದರೀಗ ಸೋಂಕು ತಗಲಿದ್ದು ಎಲ್ಲಿಂದ ಎನ್ನುವ ಆತಂಕ ಎಲ್ಲರಲ್ಲಿ ಮನೆ ಮಾಡಿದ್ದಲ್ಲದೇ ತವರು ಮನೆಯಾಗಿರುವ ಗದಗ ಜಿಲ್ಲೆಯ ರೋಣ ತಾಲೂಕಿನ ಕೃಷ್ಣಾಪುರದ ಕುಟುಂಬಸ್ಥರು ಹಾಗೂ ದ್ವಿತೀಯ ಹಂತದ ಸಂಪರ್ಕಗಳ ರಿಪೋರ್ಟ್‌ಗಳತ್ತ ಎಲ್ಲರ ಚಿತ್ತ ನೆಟ್ಟಿದೆ.
 

Follow Us:
Download App:
  • android
  • ios