ಎನ್‌ಆರ್‌ಸಿ ಜಾರಿಯಾದರೆ ಛತ್ತೀಸ್‌ಗಢದ ಅರ್ಧದಷ್ಟು ಜನರು ಖಾಲಿ| 2.8 ಕೋಟಿ ಜನಸಂಖ್ಯೆಯಲ್ಲಿ ಅರ್ಧದಷ್ಟುಜನರು ಪೌರತ್ವ ಸಾಬೀತುಪಡಿಸಲಾಗದು

ರಾಯ್‌ಪುರ[ಡಿ.22]: ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ಜಾರಿಯಾದರೆ ಛತ್ತೀಸ್‌ಗಢದ 2.8 ಕೋಟಿ ಜನಸಂಖ್ಯೆಯಲ್ಲಿ ಅರ್ಧದಷ್ಟುಜನರು ಪೌರತ್ವ ಸಾಬೀತುಪಡಿಸಲಾಗದು. ಏಕೆಂದರೆ ಅವರಿಗೆ ಜಮೀನು ಇಲ್ಲ ಮತ್ತು ಜಮೀನಿನ ದಾಖಲೆಗಳೂ ಇಲ್ಲ ಎಂದು ಮುಖ್ಯಮಂತ್ರಿ ಭೂಪೇಶ್‌ ಬಾಘೇಲ್‌ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ರಾಜ್ಯದ ಜನರ ಪೂರ್ವಜರು ಅನರಕ್ಷಸ್ಥರಾಗಿದ್ದರು. ಅವರು ವಿವಿಧ ರಾಜ್ಯಗಳು ಅಥವಾ ಗ್ರಾಮಗಳಿಗೆ ವಲಸೆ ಹೋದವರು. ಹೀಗಾಗಿ ಅವರ ಬಳಿ ನಾಗರಿಕತ್ವ ಸಾಬೀತುಪಡಿಸುವ ಯಾವುದೇ ದಾಖಲೆಗಳಿಲ್ಲ. 50-100 ವರ್ಷದ ಹಿಂದಿನ ದಾಖಲೆಗಳನ್ನು ಅವರು ಎಲ್ಲಿಂದ ತರುತ್ತಾರೆ? ಎಂದೂ ಅವರು ಪ್ರಶ್ನಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಆಫ್ರಿಕಾದಲ್ಲಿ ಬ್ರಿಟಿಷರು ಜಾರಿಗೆ ತಂದ ಗುರುತು ಯೋಜನೆಯನ್ನು ಮಹಾತ್ಮಾ ಗಾಂಧೀಜಿ ವಿರೋಧಿಸಿದ್ದರು. ಹೀಗಾಗಿ ಅದೇ ಮಾದರಿಯ ಎನ್‌ಆರ್‌ಸಿಯನ್ನು ನಾನು ವಿರೋಧಿಸುತ್ತಿರುವೆ’ ಎಂದು ಹೇಳಿದರು.

‘ಎನ್‌ಆರ್‌ಸಿ ಜಾರಿಯಾಯಿತು ಎಂದರೆ ನಾವು ಭಾರತೀಯರು ಎಂದು ಸಾಬೀತುಪಡಿಸಲೇಬೇಕು. ಸಾಬೀತುಪಡಿಸದೇ ಇದ್ದವರಿಗೆ ಎಲ್ಲಿ ಆಶ್ರಯ ನೀಡಲಾಗುತ್ತದೆ?’ ಎಂದೂ ಪ್ರಶ್ನಿಸಿದರು. ‘ಇದು ಜನರ ಮೇಲೆ ಅನಗತ್ಯ ಹೊರೆ ಹೊರಿಸುವ ಯೋಜನೆ. ಒಳನುಸುಳುಕೋರರನ್ನು ತಡೆದು ಕ್ರಮ ಜರುಗಿಸಲು ಅನೇಕ ಭದ್ರತಾ ಪಡೆಗಳಿವೆ. ಆದರೆ ಇದರ ನೆಪದಲ್ಲಿ ಜನಸಾಮಾನ್ಯರಿಗೆ ತೊಂದರೆ ನೀಡುವಂತಾಗಬಾರದು’ ಎಂದರು.