ವಿದೇಶದಿಂದ ಬರೋರಿಗೆ ಫ್ರೀ, ಬಡ ಕಾರ್ಮಿಕರಿಗೆ ಟಿಕೆಟ್ ಶುಲ್ಕ: ವಿಪಕ್ಷಗಳ ಆಕ್ರೋಶ
ವಿದೇಶದಿಂದ ಬರೋರಿಗೆ ಫ್ರೀ; ಬಡ ಕಾರ್ಮಿಕರಿಗೆ ಟಿಕೆಟ್ ಶುಲ್ಕ| ಕೇಂದ್ರದ ನಿರ್ಧಾರದ ಬಗ್ಗೆ ವಿಪಕ್ಷಗಳ ಆಕ್ರೋಶ| ವಿದೇಶದಿಂದ ವಿಮಾನದಲ್ಲಿ ಉಚಿತವಾಗಿ ಜನರ ಕರೆತಂದಿದ್ದ ಸರ್ಕಾರ| ಊರಿಗೆ ಹೋಗುವ ಕಾರ್ಮಿಕರಿಂದ ರೈಲ್ವೆ ಟಿಕೆಟ್ ಚಾಜ್ರ್ ವಸೂಲಿ
ನವದೆಹಲಿ(ಮೇ.03): ಕೊರೋನಾ ವೈರಸ್ ಬಿಕ್ಕಟ್ಟು ಆರಂಭವಾದ ಮೇಲೆ ವಿದೇಶದಲ್ಲಿ ಸಿಲುಕಿದ್ದ ಭಾರತೀಯರನ್ನು ಉಚಿತವಾಗಿ ವಿಮಾನದಲ್ಲಿ ಸ್ವದೇಶಕ್ಕೆ ಕರೆದುಕೊಂಡು ಬಂದಿದ್ದ ಕೇಂದ್ರ ಸರ್ಕಾರ ಈಗ ಬಡ ಕಾರ್ಮಿಕರನ್ನು ಅವರ ರಾಜ್ಯಕ್ಕೆ ಕಳುಹಿಸಲು ರೈಲ್ವೆ ಟಿಕೆಟ್ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಬೇರೆ ಬೇರೆ ರಾಜ್ಯಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳುಹಿಸಲು ರಾಜ್ಯ ಸರ್ಕಾರಗಳ ಮನವಿಯ ಮೇಲೆ ರೈಲ್ವೆ ಇಲಾಖೆ ‘ಶ್ರಮಿಕ್ ಸ್ಪೆಷಲ್’ ರೈಲುಗಳನ್ನು ಓಡಿಸುತ್ತಿದೆ. ಈ ರೈಲುಗಳಲ್ಲಿ ಎಷ್ಟುಕಾರ್ಮಿಕರು ಪ್ರಯಾಣಿಸಬೇಕೆಂದು ಮೊದಲೇ ಸೂಚಿಸಿ ಅಷ್ಟುಟಿಕೆಟ್ಗಳನ್ನು ರಾಜ್ಯ ಸರ್ಕಾರಕ್ಕೆ ನೀಡುತ್ತಿದೆ. ರಾಜ್ಯ ಸರ್ಕಾರ ಆ ಟಿಕೆಟ್ಗಳನ್ನು ಕಾರ್ಮಿಕರಿಗೆ ನೀಡಿ, ಅವರಿಂದ ಟಿಕೆಟ್ ಹಣ ಸಂಗ್ರಹಿಸಿ, ಒಟ್ಟು ಹಣವನ್ನು ರೈಲ್ವೆ ಇಲಾಖೆಗೆ ಪಾವತಿಸಬೇಕು ಎಂದು ಸೂಚಿಸಿದೆ.
ಬೈಕ್ ಪೆಟ್ರೋಲ್ಗಿಂತ ವಿಮಾನ ಇಂಧನ ಶೇ.70ರಷ್ಟು ಅಗ್ಗ!
ಆದರೆ, ಕಳೆದ ತಿಂಗಳು ಚೀನಾ, ಇಟಲಿ, ಜಪಾನ್, ಇರಾನ್ ಮುಂತಾದ ದೇಶಗಳಿಂದ 1000ಕ್ಕೂ ಹೆಚ್ಚು ಭಾರತೀಯರನ್ನು ತೆರವುಗೊಳಿಸಿ ಕರೆತಂದಿದ್ದ ಏರ್ ಇಂಡಿಯಾ ಸಂಸ್ಥೆ ಯಾವುದೇ ಪ್ರಯಾಣಿಕರಿಂದ ಟಿಕೆಟ್ ಶುಲ್ಕ ವಸೂಲಿ ಮಾಡಿರಲಿಲ್ಲ. ಬದಲಿಗೆ ವಿದೇಶಾಂಗ ಇಲಾಖೆಗೆ ಬಿಲ್ ನೀಡಿದೆ. ಅಂದರೆ ಪ್ರಯಾಣಿಕರು ಉಚಿತವಾಗಿ ಸ್ವದೇಶಕ್ಕೆ ಆಗಮಿಸಿದ್ದಾರೆ.
ಆದರೆ, ಈಗ ಬಡ ಕಾರ್ಮಿಕರು ಸುಮಾರು 40 ದಿನಗಳ ಕಾಲ ಬೇರೆ ಬೇರೆ ನಗರಗಳಲ್ಲಿ ಸರಿಯಾದ ಊಟ, ವಸತಿಯಿಲ್ಲದೆ ಪರದಾಡಿ, ಕೊನೆಗೆ ಊರಿಗೆ ಹೋಗಿ ಸೇರಿಕೊಳ್ಳಲು ಹವಣಿಸುತ್ತಿರುವಾಗ ಅವರಿಂದ ರೈಲ್ವೆ ಇಲಾಖೆ ಏಕೆ ಟಿಕೆಟ್ ಶುಲ್ಕ ಕೇಳುತ್ತಿದೆ ಎಂದು ವಿಪಕ್ಷಗಳು ಪ್ರಶ್ನಿಸಿವೆ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ಕೂಡ ಕೇಂದ್ರದ ಈ ಕ್ರಮವನ್ನು ಟೀಕಿಸಿದ್ದಾರೆ. ಹಲವಾರು ಬಡ ಕಾರ್ಮಿಕರ ಬಳಿ ಟಿಕೆಟ್ಗೆ ಪಾವತಿಸುವಷ್ಟೂಹಣ ಇಲ್ಲದಿರುವುದರಿಂದ ಅವರಿಂದ ಹಣ ಕೇಳುವುದು ಹೇಗೆ ಎಂದು ರಾಜ್ಯ ಸರ್ಕಾರಗಳು ಇಕ್ಕಟ್ಟಿಗೆ ಸಿಲುಕಿವೆ.