Asianet Suvarna News Asianet Suvarna News

ಮನೆ ಮನೆಗೆ ತಂತ್ರಜ್ಞಾನ: ಸರ್ಕಾರದ ಐಟಿ ಸಮ್ಮೇಳನ ಬದಲಿಸಲಿದೆ ಜೀವನ!

ದೇಶದ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಬೆಂಗಳೂರಿನದ್ದೇ ಸಿಂಹಪಾಲು. ದೇಶದ ಬೇರೆ ಯಾವ ನಗರಗಳೂ ಬೆಂಗಳೂರನ್ನು ಬೀಟ್ ಮಾಡುವುದು ಅಷ್ಟು ಸುಲಭವಲ್ಲ. ಹಾಗಂಥ ಇಲ್ಲಿ ಮಾಹಿತಿ ತಂತ್ರಜ್ಞಾನ ಅಭಿವೃದ್ಧಿಗೆ ಯಾವುದೇ ತೊಡಕಿಲ್ಲವೆಂದರ್ಥವಲ್ಲ. ಇರೋ ನೂರಾರು ತೊಡಕುಗಳನ್ನು ಹೋಗಲಾಡಿಸಿ, ನಗರವನ್ನು ಮತ್ತಷ್ಟು ತಂತ್ರಜ್ಞಾನ ಸ್ನೇಹಿಯನ್ನಾಗಿಸುವ ನಿಟ್ಟಿನಲ್ಲಿ ಸರಕಾರವೇ ಐಟಿ ಸಮ್ಮಿಟ್ ನಡೆಸುತ್ತಿದೆ. ಇದರು ರೂಪುರೇಷೆಗಳೇನು? ಇಲ್ಲಿದೆ ಮಾಹಿತಿ...

Tech Summit 2019 to be held in Palace Grounds Bengaluru
Author
Bengaluru, First Published Nov 15, 2019, 3:24 PM IST

ಬೆಂಗಳೂರು (ನ.15): ನಗರದ ಅನ್ವರ್ಥ ನಾಮವೇ ಸಿಲಿಕಾನ್ ಸಿಟಿ. ಇಲ್ಲಿ ಇರುವಷ್ಟು ಸ್ಟಾರ್ಟ್ ಅಪ್, ತಂತಜ್ಞಾನದ ಆವಿಷ್ಕಾರಗಳು ದೇಶದ ಬೇರೆ ಯಾವ ನಗರಗಳಲ್ಲಿಯೂ ನಡೆಯುವುದಿಲ್ಲ. ಇಲ್ಲಿ ಸಿಗುವ ಕೌಶಲ್ಯ ಇರೋ ಉದ್ಯೋಗಿಗಳು, ಸರಕಾರದ ಸ್ಪಂದನೆ ಜೊತೆ ಹವಾಮಾನವೂ ನಿವೃತ್ತರ ಸ್ವರ್ಗವಾದ ಬೆಂಗಳೂರು ಯುವಕರ ಅಚ್ಚು ಮೆಟ್ಟಿನ ಐಟಿ ಬಿಟಿ ಹಬ್ ಆಗುವಂತೆ ಮಾಡಿದೆ.

ಇಂಥ ಬೆಂಗಳೂರಲ್ಲಿ ತಂತ್ರಜ್ಞಾನದ ಪ್ರಗತಿಗೆ ಮತ್ತಷ್ಟು ಒತ್ತು ನೀಡಲು, ಇರುವ ಕಾನೂನು ತೊಡಕುಗಳಿಗೊಂದು ಪರಿಹಾರ ಕಂಡುಕೊಳ್ಳಲು, ಮತ್ತಷ್ಟು ಆವಿಷ್ಕಾರಗನ್ನು ಉತ್ತೇಜಿಸಲು ಕರ್ನಾಟಕ ಸರಕಾರ 'ಬೆಂಗಳೂರು ಟೆಕ್ ಸಮ್ಮಿಟ್' ನಡೆಸುತ್ತಿದೆ. ನ.18ರಿಂದ 20ರವರೆಗೆ ಅರಮನೆ ಮೈದಾನದಲ್ಲಿ ನಡೆಯುವ ಈ ಸಮ್ಮೇಳನದಲ್ಲಿ 20 ದೇಶಗಳ ಪ್ರತಿನಿಧಿಗಳು, ಸಚಿವರು ಸೇರಿ ಹಲವು ತಂತ್ರಜ್ಞರು, ರಾಯಭಾರಿಗಳು ಪಾಲ್ಗೊಂಡು ಜ್ಞಾನ ಹಂಚಿಕೊಳ್ಳುವ ಹಾಗೂ ನವೋದ್ಯಮಿಗಳಿಗೆ ಅಗತ್ಯ ನೆರವು ನೀಡಿ, ತಂತ್ರಜ್ಞಾನದಿಂದಲೇ ನಗರವನ್ನು ಮತ್ತೊಂದು ಪ್ರಗತಿಯ ಹಂತಕ್ಕೆ ಕೊಂಡೊಯ್ಯುವಂಥ ಕೆಲಸಕ್ಕೆ ಸರಕಾರ ಮುಂದಾಗಿದೆ. 

ವಿಜ್ಞಾನ, ತಂತ್ರಜ್ಞಾನ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಈ ಬಗ್ಗೆ ಕನ್ನಡ ಪ್ರಭ, ಸುವರ್ಣ ನ್ಯೂಸ್ ಹಾಗೂ ಸುವರ್ಣನ್ಯೂಸ್.ಕಾಮ್ ಸಿಬ್ಬಂದಿಯೊಂದಿಗೆ ಮಾಹಿತಿ ಹಂಚಿಕೊಂಡ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್, ರಾಜ್ಯದ ಆರ್ಥಿಕ ಪ್ರಗತಿ ಹಾಗೂ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಈ ಸಮ್ಮೇಳನದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ, ಎಂದರು.

ಆರೋಗ್ಯ ಕ್ಷೇತ್ರ, ಹೊಟೇಲ್ ಉದ್ಯಮ, ಸಾರ್ವಜನಿಕ ಆಡಳಿತ ಸೇರಿ ಪ್ರತಿಯೊಂದೂ ಕ್ಷೇತ್ರಗಳಲ್ಲಿಯೂ ತಂತ್ರಜ್ಞಾವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ, ಆಡಳಿತದಲ್ಲಿ ಪಾರದರ್ಶಕತೆ ತಂದು ಮತ್ತಷ್ಟು ಜನ ಸ್ನೇಹಿಯನ್ನಾಗಿಸಲು ಸರಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಆವಿಷ್ಕಾರಗಳು ನಡೆಯುವ ಅಗತ್ಯವಿದೆ. ಅದಕ್ಕಿರುವ ತೊಡಕುಗಳಿಗೆ ಪರಿಹಾರ ಕಂಡುಕೊಂಡು, ಮತ್ತಷ್ಟು ಅನ್ವೇಷಣೆಗಳು ನಡೆಯುವಂಥ ವಾತಾವರಣ ಕಲ್ಪಿಸುವ ಸಲುವಾಗಿ ಸರಕಾರ ಕರ್ನಾಟಕ ರೆಗ್ಯುಲೇಟರಿ ಸ್ಯಾಂಡ್ ಬಾಕ್ಸ್‌ನಂಥ ಪ್ರಾಧಿಕಾರ ರಚಿಸಲಿದೆ. ಮಾಹಿತಿ ತಂತ್ರಜ್ಞಾನದ ಅಭಿವೃದ್ಧಿಗೆ ಅಗತ್ಯ ನಿಯಮಗಳನ್ನು ಜಾರಿಗೊಳಿಸಿ, ರಾಜ್ಯದ ಜಿಡಿಪಿಗೆ ಶೇ.25ರಷ್ಟು ಕೊಡುಗೆ ನೀಡುತ್ತಿರುವ ತಂತ್ರಜ್ಞಾನದ ಅಭಿವೃದ್ಧಿಗೆ ಪೂರಕ ವಾತಾವರಣ ಕಲ್ಪಿಸಲಾಗುತ್ತದೆ, ಎಂಬ ಭರವಸೆ ನೀಡಿದ್ದಾರೆ. 

2ನೇ ಹಂತದ ನಗರಗಳ ಅಭಿವೃದ್ಧಿಗೆ ಒತ್ತು:
ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿ, ಎರಡನೇ ಹಾಗೂ ಮೂರನೇ ಹಂತದ ಯಾವ ನಗರಗಳಲ್ಲಿಯೂ ಮಾಹಿತಿ ತಂತ್ರಜ್ಞಾನ ಅಭಿವೃದ್ಧಿಗೆ ಒತ್ತು ನೀಡುತ್ತಿಲ್ಲ ಎಂಬ ಕೂಗು ಕನ್ನಡಿಗರದ್ದು. ಇದನ್ನು ಹೋಗಲಾಡಿಸಿ ರಾಜ್ಯದ ಇನ್ನೊಂದು ನಗರವನ್ನು ತಾಂತ್ರಿಕವಾಗಿ ಅಭಿವೃದ್ಧಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದರು. 

ಗುಣಮಟ್ಟ ಹೆಚ್ಚಿಸಲು ಆದ್ಯತೆ:
ತಂತ್ರಜ್ಞಾನದ ಗುಣಮಟ್ಟ ಹೆಚ್ಚಿಸಿ, ಮಾನವ ಸಂಪನ್ಮೂಲದ ಕೌಶಲ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರ ಐಟಿ, ಬಿಟಿ Incubation center ಆರಂಭಿಸುತ್ತಿದೆ. ಈ ಕಾರ್ಯಕ್ರಮದಡಿ ಉದ್ಯಮಗಳು ಹಾಗೂ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಪ್ರತಿಭಾನ್ವೇಷಣೆಗೆ ಸರಕಾರ ಒತ್ತು ನೀಡಲಿದೆ. ಉದ್ಯೋಗಿಗಳ ಕೌಶಲ್ಯ ಅಭಿವೃದ್ಧಿಗೆ ಅಗತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ವಿವರಿಸಿದರು. 

ಕರ್ನಾಟಕ ಆವಿಷ್ಕಾರ ಪ್ರಾಧಿಕಾರ ರಚನೆ: 
Global Innovative Alliance ಎಂಬ್ ಟ್ಯಾಗ್‌ಲೈನ್ ಅಡಿಯಲ್ಲಿ ಸಮ್ಮೇಳನ ನಡೆಯುತ್ತಿದ್ದು, ಕರ್ನಾಟಕ ಆವಿಷ್ಕಾರ ಪ್ರಾಧಿಕಾರವೂ ರಚನೆಯಾಗಲಿದೆ. ಸಮ್ಮಿಟ್‌ನ ಸಮಾರೋಪದಲ್ಲಿ ಈ ಪ್ರಾಧಿಕಾರದ ಕಾರ್ಯ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುವುದು, ಎಂದರು. 

ಜ್ಞಾನ ವೃದ್ಧಿಗೆ ಒತ್ತು
ಈ ಸಮ್ಮೇಳನದಲ್ಲಿ ರೋಬೋಟೆಕ್ಸ್ ಸ್ಪರ್ಧೆ ನಡೆಯಲಿದೆ. ವಿದ್ಯಾರ್ಥಿಗಳಿಗಾಗಿ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲ್ಲಿದ್ದು, ವಿಶ್ವದೆಲ್ಲೆಡೆಯಿಂದ ಸುಮಾರು 200 ಮಂದಿ ಸ್ಪರ್ಧಿಸುವ ನಿರೀಕ್ಷೆ ಇದೆ. ಅಲ್ಲದೇ ಎಂದಿನಂತೆ ರೂರಲ್ ಐಟಿ ರಸಪ್ರಶ್ನೆ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗುವುದು, ಎಂದು ಐಟಿ, ಬಿಟಿ ಸಚಿವರೂ ಆದ ಅಶ್ವತ್ಥ ನಾರಾಯಣ್ ಹೇಳಿದರು. 

ಕನ್ನಡ ಸಾಫ್ಟ್‌ವೇರ್ ಅಭಿವೃದ್ಧಿಗೆ ಒತ್ತು:
ಬೆಂಗಳೂರಿನಲ್ಲಿಯೇ ಗೂಗಲ್, ಮೈಕ್ರೋಸಾಫ್ಟ್ ಸೇರಿ ಜಗತ್ತಿನ ಹಲವು ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಗಳೂ ಕಾರ್ಯ ನಿರ್ವಹಿಸುತ್ತಿವೆ. ಈ ಕಂಪನಿಗಳ ನೆರವಿನೊಂದಿಗೆ ಕನ್ನಡ ಸಾಫ್ಟ್‌ವೇರ್ ಅಭಿವೃದ್ಧಿಗೊಳಿಸಲು ಐಟಿ, ಬಿಟಿ ಇಲಾಖೆ ಮತ್ತಷ್ಟು ಕಾರ್ಯ ಪ್ರವೃತ್ತವಾಗಲಿದೆ. ಅಲ್ಲದೇ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಹೋಗಲಾಡಿಸಲು 12 ಕಾರಿಡಾರಿಗಳನ್ನು ಗುರುತಿಸಿದ್ದು, ಆದ್ಯತೆ ಮೇರೆಗೆ ಕಾರ್ಯರೂಪಕ್ಕೆ ತರಲಾಗುವುದು, ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.

ಬೆಂಗಳೂರು ಪ್ಯಾಲೇಸ್ ಇಲ್ಲಿದೆ
 

ಡಿಸಿಎಂ ಹೇಳಿದ್ದಿಷ್ಟು
"

ನವೆಂಬರ್ 15ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Follow Us:
Download App:
  • android
  • ios