ಪ್ರಧಾನಿ ನರೇಂದ್ರ ಮೋದಿ ರೈತನ ಮಗನಲ್ಲ
ಪ್ರಧಾನಿ ನರೇಂದ್ರ ಮೋದಿ ಅವರೊಬ್ಬ ರೈತನ ಮಗ ಅಲ್ಲ, ಕಾರ್ಪೊರೇಟ್ ಮಗ ಆಗಿದ್ದಾರೆ. ನಾಲ್ಕು ವರ್ಷದಿಂದ ರೈತರ ರಾಷ್ಟ್ರೀಕೃತ ಬ್ಯಾಂಕ್ಗಳ ಸಾಲ ಮನ್ನಾದ ಬಗ್ಗೆ ಚಕಾರವೆತ್ತದ ಮೋದಿ ಈಗ ರೈತರ ಬಗ್ಗೆ ಅಪಾರ ಕಾಳಜಿ ತೋರುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಯಾದಗಿರಿ: ಪ್ರಧಾನಿ ನರೇಂದ್ರ ಮೋದಿ ರೈತರ ಸಾಲ ಮನ್ನಾ ಮಾಡದೇ ಇದೀಗ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ರೈತರ ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡಿರುವುದು ಚುನಾವಣೆ ಗಿಮಿಕ್ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನಾಲ್ಕು ವರ್ಷದಿಂದ ರೈತರ ರಾಷ್ಟ್ರೀಕೃತ ಬ್ಯಾಂಕ್ಗಳ ಸಾಲ ಮನ್ನಾದ ಬಗ್ಗೆ ಚಕಾರವೆತ್ತದ ಮೋದಿ ಈಗ ರೈತರ ಬಗ್ಗೆ ಅಪಾರ ಕಾಳಜಿ ತೋರುತ್ತಿದ್ದಾರೆ. ಅವರೊಬ್ಬ ರೈತನ ಮಗ ಅಲ್ಲ, ಕಾರ್ಪೊರೇಟ್ ಮಗ ಆಗಿದ್ದಾರೆ ಎಂದು ಟೀಕಿಸಿದರು.
ಮೋದಿ ದೇಶದಲ್ಲಿ ಎಷ್ಟೇ ಅಲೆ ಹೊಂದಿದ್ದರೂ ಈ ಬಾರಿ ಲೋಕಸಭೆ ಚುನಾವಣೆ ಫಲ ನೀಡುವುದಿಲ್ಲ ಎಂದ ಅವರು, ರಾಜ್ಯದಲ್ಲಿ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ವಿಚಾರ ಕಾಂಗ್ರೆಸ್ ಹೈಕಮಾಂಡ್ಗೆ ಬಿಟ್ಟಿದ್ದು ಎಂದರು.