"ಆ ಸಂದರ್ಭದಲ್ಲಿ ಭಾರತ-ಪಾಕ್ ಗಡಿಯಲ್ಲಿ ಕದನವಿರಾಮ ಜಾರಿಗೆ ತರಲಾಗಿತ್ತು. ಆಗಿನ ಗೃಹಸಚಿವ ಎಲ್.ಕೆ.ಆಡ್ವಾಣಿ ಕಾಶ್ಮೀರದಲ್ಲಿ ಮಾತುಕತೆ ನಡೆಸುತ್ತಿದ್ದರು. ಗಡಿನಿಯಂತ್ರಣ ರೇಖೆಯಲ್ಲಿ ರಸ್ತೆಗಳನ್ನು ಸಾರ್ವಜನಿಕರ ಪ್ರಯಾಣಕ್ಕಾಗಿ ಮುಕ್ತಗೊಳಿಸುವ ಯತ್ನಗಳಾಗಿದ್ದವು. ಉಗ್ರ ಚಟುವಟಿಕೆಗಳ ಪ್ರಮಾಣ ಗಮನಾರ್ಹ ಇಳಿಕೆ ಕಂಡಿತ್ತು. ಗಡಿಗಳಲ್ಲಿ ಶಾಂತಿ ನೆಲಸಿತ್ತು," ಎಂದು ಮೆಹಬೂಬ ವಿವರಿಸಿದ್ದಾರೆ.

ನವದೆಹಲಿ(ಮೇ 06): "ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಬಲ್ಲ ವ್ಯಕ್ತಿ ಇದ್ದರೆ ಅದು ಪ್ರಧಾನಿ ನರೇಂದ್ರ ಮೋದಿ ಮಾತ್ರ.... ಮನಮೋಹನ್ ಸಿಂಗ್ 10 ವರ್ಷ ಪ್ರಧಾನಿಯಾಗಿದ್ದಾಗ ಒಮ್ಮೆಯೂ ಪಾಕಿಸ್ತಾನಕ್ಕೆ ಕಾಲಿಡುವ ಧೈರ್ಯ ತೋರಲಿಲ್ಲ.." - ಈ ಹೇಳಿಕೆಯನ್ನು ನೀಡಿದ್ದು ಯಾರೋ ಬಿಜೆಪಿ ನಾಯಕನಲ್ಲ... ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ. ಫ್ಲೈವೋವರ್'ವೊಂದರ ಉದ್ಘಾಟನೆ ವೇಳೆ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುತ್ತಿದ್ದ ಮೆಹಬೂಬ ಮುಫ್ತಿ, ಕಾಶ್ಮೀರ ವಿಚಾರದಲ್ಲಿ ಪ್ರಧಾನಿ ಮೋದಿ ಏನೇ ನಿರ್ಧಾರ ಕೈಗೊಂಡರೂ ರಾಷ್ಟ್ರವು ಅವರಿಗೆ ಬೆಂಬಲ ನೀಡುತ್ತದೆ" ಎಂದು ಮುಫ್ತಿ ಹೇಳಿದರೆಂದು ಎಎನ್'ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

Add Asianetnews Kannada as a Preferred SourcegooglePreferred

ಗಟ್ಟಿಗ ಮೋದಿ:
2015ರ ಡಿಸೆಂಬರ್ 25ರಂದು ಪ್ರಧಾನಿ ಮೋದಿ ಲಾಹೋರ್'ಗೆ ಭೇಟಿ ನೀಡಿದ ಘಟನೆಯನ್ನು ವಿಪಕ್ಷಗಳು ಮಾಡುವ ಟೀಕೆಯನ್ನು ಮೆಹಬೂಬ ಮುಫ್ತಿ ಅಲ್ಲಗಳೆದಿದ್ದಾರೆ. "ಮೋದಿ ಪಾಕಿಸ್ತಾನಕ್ಕೆ ಹೋಗಿದ್ದು ಅವರ ದೌರ್ಬಲ್ಯದ ಸಂಕೇತವಲ್ಲ. ಅವರ ಶಕ್ತಿ ಮತ್ತು ಗಟ್ಟಿತನಕ್ಕೆ ಸಿಕ್ಕ ಕುರುಹಾಗಿದೆ," ಎಂದು ಪಿಡಿಪಿ ನಾಯಕಿ ಮೆಹಬೂಬ ಮುಫ್ತಿ ಅಭಿಪ್ರಾಯಪಟ್ಟಿದ್ದಾರೆ.

ದುರ್ಬಲ ಮನಮೋಹನ್:
ಮೋದಿಯೊಂದಿಗೆ ಮನಮೋಹನ್'ರನ್ನು ತುಲನೆ ಮಾಡಿದ ಮೆಹಬೂಬ ಮುಫ್ತಿ, ಮಾಜಿ ಪಿಎಂ ಮನಮೋಹನ್ ಸಿಂಗ್'ಗೆ ಪಾಕಿಸ್ತಾನಕ್ಕೆ ಹೋಗುವ ಧೈರ್ಯವೇ ಬರಲಿಲ್ಲ ಎಂದು ಟೀಕಿಸಿದ್ದಾರೆ. "ಮೋದಿಗೆ ಮುನ್ನ ಪ್ರಧಾನಿಯೊಬ್ಬರು 10 ವರ್ಷದ ಅಧಿಕಾರದಲ್ಲಿ ತಮ್ಮ ತವರಾದ ಪಾಕಿಸ್ತಾನವನ್ನು ನೋಡುವ ಬಯಕೆ ಹೊಂದಿದ್ದರು... ಅವರೂ ಕೂಡ ಎರಡೂ ದೇಶಗಳ ನಡುವಿನ ಸಂಘರ್ಷವನ್ನು ತಡೆಯಲು ಪ್ರಯತ್ನಿಸಬಹುದಿತ್ತು. ಆದರೆ, ಅವರಿಗೆ ಆ ಧೈರ್ಯವಿರಲಿಲ್ಲ" ಎಂದು ಮುಫ್ತಿ ಕುಟುಕಿದ್ದಾರೆ.

ವಾಜಪೇಯಿ ಬಗ್ಗೆ:
ಕೇಂದ್ರದಲ್ಲಿ ವಾಜಪೇಯಿ ಹಾಗೂ ಕಾಶ್ಮೀರದಲ್ಲಿ ತಮ್ಮ ತಂದೆ ಮುಫ್ತಿ ಸಯೀದ್ ಅವರು ಅಧಿಕಾರದಲ್ಲಿದ್ದಾಗ ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ಮಹತ್ವದ ಪ್ರಯತ್ನಗಳಾಗಿದ್ದವೆಂಬುದು ಮುಫ್ತಿ ಅನಿಸಿಕೆ. "ಆ ಸಂದರ್ಭದಲ್ಲಿ ಭಾರತ-ಪಾಕ್ ಗಡಿಯಲ್ಲಿ ಕದನವಿರಾಮ ಜಾರಿಗೆ ತರಲಾಗಿತ್ತು. ಆಗಿನ ಗೃಹಸಚಿವ ಎಲ್.ಕೆ.ಆಡ್ವಾಣಿ ಕಾಶ್ಮೀರದಲ್ಲಿ ಮಾತುಕತೆ ನಡೆಸುತ್ತಿದ್ದರು. ಗಡಿನಿಯಂತ್ರಣ ರೇಖೆಯಲ್ಲಿ ರಸ್ತೆಗಳನ್ನು ಸಾರ್ವಜನಿಕರ ಪ್ರಯಾಣಕ್ಕಾಗಿ ಮುಕ್ತಗೊಳಿಸುವ ಯತ್ನಗಳಾಗಿದ್ದವು. ಉಗ್ರ ಚಟುವಟಿಕೆಗಳ ಪ್ರಮಾಣ ಗಮನಾರ್ಹ ಇಳಿಕೆ ಕಂಡಿತ್ತು. ಗಡಿಗಳಲ್ಲಿ ಶಾಂತಿ ನೆಲಸಿತ್ತು," ಎಂದು ಮೆಹಬೂಬ ವಿವರಿಸಿದ್ದಾರೆ.

"ಅವ್ಯಾವುವೂ ಸಣ್ಣಪುಟ್ಟ ಬೆಳವಣಿಗೆಗಳಲ್ಲ. ದುರದೃಷ್ಟವಶಾತ್ ಮುಫ್ತಿಯವರು ಸರಕಾರದಿಂದ ಹೊರಬಿದ್ದರು. ವಾಜಪೇಯಿ ಸರಕಾರದ ಅವಧಿ ಮುಗಿಯಿತು. ಅಲ್ಲಿಗೆ ಕಾಶ್ಮೀರ ಸಮಸ್ಯೆ ಇತ್ಯರ್ಥದ ಪ್ರಕ್ರಿಯೆ ಕೂಡ ಅಂತ್ಯಗೊಂಡಿತು," ಎಂದು ಪಿಡಿಪಿ ನಾಯಕಿ ವಿಷಾದಿಸಿದ್ದಾರೆ.

ಅಪ್ರಯೋಜಕ ಯುಪಿಎ ಸರಕಾರ:
ಮುಫ್ತಿ ಸರಕಾರ ಮತ್ತು ಎನ್'ಡಿಎ ಸರಕಾರದ ಅವಧಿಯಲ್ಲಿ ಆಗಿದ್ದ ಸಕರಾತ್ಮಕ ಪ್ರಯತ್ನಗಳು ಯುಪಿಎ ಸರಕಾರದಲ್ಲಿ ಹಳ್ಳ ಹಿಡಿದವು. ಶಾಂತಿ ನೆಲಸಿರುವಾಗ ಬೇರಾವ ಯತ್ನಗಳನ್ನು ಮಾಡುವ ಅಗತ್ಯವಿಲ್ಲವೆಂದು ಕೈಕಟ್ಟಿ ಕೂತರು. ಜನರೊಳಗಿದ್ದ ಆಕ್ರೋಶ ಭುಗಿಲೇಳಲು ಶುರುವಾಯಿತು. 2008, 2009 ಮತ್ತು 2010ರಲ್ಲಿ ಕಾಶ್ಮೀರಿ ಯುವಕರು ಬೀದಿಗೆ ಬಂದು ಪ್ರತಿಭಟಿಸಿದರು. ಈಗ ಇದು ಕಾಶ್ಮೀರದಾದ್ಯಂತ ಲಾವಾರಸದಂತೆ ಹರಡಿಬಿಟ್ಟಿದೆ ಎಂದು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಹತಾಶೆ ವ್ಯಕ್ತಪಡಿಸಿದ್ದಾರೆ.

ಮಾಹಿತಿ: ಎಎನ್'ಐ ಸುದ್ದಿ ಸಂಸ್ಥೆ