ಶೇಂದಿ ತೆಗೆಯಲು ಬಿಡಿ ಕುಲಕಸುಬಿಗೆ ಅವಕಾಶ ಕೊಡಿ

By Suvarna NewsFirst Published Apr 9, 2022, 5:02 PM IST
Highlights

ಕರಾವಳಿ ಜಿಲ್ಲೆಗಳಲ್ಲಿ ಮಾತ್ರ ಅವಕಾಶ

ರಾಜ್ಯಾದ್ಯಂತ ಮೂರ್ತೆಗಾರಿಕೆ ನಿಷೇಧಿತ

ನಿಗಮ ಮಂಡಳಿ ಸ್ಥಾಪಿಸಿ ಮೂರ್ತೆಗಾರಿಕೆ ಪ್ರೋತ್ಸಾಹಿಸಲು ಒತ್ತಾಯ
 

ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್ 

ಉಡುಪಿ (ಏ.9):  ಶೇಂದಿ (Shendhi ) ತೆಗೆಯುವುದು ಈಡಿಗ (Ediga) ಜನಾಂಗದ ಮೂಲ ಕುಲಕಸುಬು. ಕರಾವಳಿ ಜಿಲ್ಲೆಗಳನ್ನು (Costal District) ಹೊರತುಪಡಿಸಿದರೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಶೇಂದಿ ತೆಗೆಯುವುದು ನಿಷಿದ್ದ. ಕರಾವಳಿಯ ಮಾದರಿಯಲ್ಲೇ ರಾಜ್ಯದ ಇತರ ಜಿಲ್ಲೆಗಳಲ್ಲೂ ಶೇಂದಿ ತೆಗೆಯಲು ಅವಕಾಶ ಕೊಡಬೇಕು ಎಂಬ ಬೇಡಿಕೆ ಹೆಚ್ಚುತ್ತಿದೆ. ಈ ಮೂಲಕ ಕುಲಕಸುಬಿಗೆ ಮತ್ತೆ ಜೀವ ಕೊಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಯೋಗ್ಯರೀತಿಯಲ್ಲಿ ಸಂಸ್ಕರಿಸಿ ಬಳಸಿದರೆ ಶೇಂದಿ ಕೂಡ ಆರೋಗ್ಯಕರ ಪೇಯ ಆಗಬಹುದು. ಶತಮಾನಗಳಿಂದ ಒಂದು ಜನಾಂಗದ ಕುಲಕಸುಬಾಗಿ ಬೆಳೆದುಬಂದಿರುವ ಮೂರ್ತೆಗಾರಿಕೆ, ಈಗ ನಿಷೇಧಿತ ಉದ್ಯಮವಾಗಿದೆ. ಈ ಕುಲಕಸುಬನ್ನೇ ನಂಬಿ ಲಕ್ಷಾಂತರ ಜನ ರಾಜ್ಯದಲ್ಲಿ ಜೀವನೋಪಾಯ ಕಂಡುಕೊಂಡಿದ್ದರು. ಆದರೆ ವೀರೇಂದ್ರ ಪಾಟೀಲರ (Veerendra Patil) ಸರಕಾರ ಇದ್ದಾಗ ಶೇಂದಿ ತೆಗೆಯುವುದನ್ನು ನಿಷೇಧಿಸಲಾಯಿತು.

ಕರಾವಳಿಯ ಉಡುಪಿ (Udupi) ಹಾಗೂ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಗಳಲ್ಲಿ ಈ ಬಗ್ಗೆ ಗಂಭೀರ ಸ್ವರೂಪದ ಹೋರಾಟ ನಡೆದು, ಶೇಂದಿ ತೆಗೆಯಲು ಅವಕಾಶವನ್ನು ಕೂಡ ನೀಡಲಾಯಿತು. ಕರಾವಳಿಯ ಮಟ್ಟಿಗೆ ಮೂರ್ತೆದಾರರ ಚಳುವಳಿ ಐತಿಹಾಸಿಕ! ಈಗ ಮತ್ತೆ ಅದೇ ಐತಿಹಾಸಿಕ ಹೋರಾಟಕ್ಕೆ ಚಾಲನೆ ದೊರಕುವ ಲಕ್ಷಣಗಳು ಕಂಡುಬರುತ್ತಿವೆ. ರಾಜ್ಯಾದ್ಯಂತ ಇರುವ ನಿಷೇಧವನ್ನು ತೆರವುಗೊಳಿಸಿ ಎಲ್ಲಾ ಜಿಲ್ಲೆಗಳಲ್ಲೂ ತೆಗೆಯಲು ಅವಕಾಶ ಕೊಡಬೇಕು ಎಂಬ ಬೇಡಿಕೆ ಹೆಚ್ಚುತ್ತಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈಡಿಗ ಸಮುದಾಯದವರು ಬೇರೆಬೇರೆ ಹೆಸರುಗಳಲ್ಲಿ ಗುರುತಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಶೇಂದಿ ತೆಗೆಯುವುದನ್ನೇ ಪ್ರಮುಖ ಜೀವನೋಪಾಯವಾಗಿ ನಂಬಿದ ಕುಲ ಇದು. ಕರಾವಳಿಯ ಮಾದರಿಯಲ್ಲಿ ರಾಜ್ಯದ ಇತರ ಜಿಲ್ಲೆಗಳಲ್ಲೂ ಉದ್ಯಮವನ್ನು ಪ್ರೋತ್ಸಾಹಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಮೂರ್ತೆಗಾರಿಕೆ ವಿಚಾರದಲ್ಲಿ ಕರಾವಳಿಯಲ್ಲಿ ನಡೆದದ್ದು ಐತಿಹಾಸಿಕ ಹೋರಾಟ. ಬಂಗಾರಪ್ಪ (Bangarappa) ಮುಖ್ಯಮಂತ್ರಿಯಾಗಿದ್ದಾಗ ಕರಾವಳಿ ಜಿಲ್ಲೆಗಳಿಗೆ ನಿಷೇಧದಿಂದ ರಿಲಾಕ್ಸ್ ನೀಡಲಾಗಿತ್ತು. ಶೇಂದಿ ಉದ್ಯಮವೇನೋ ಕರಾವಳಿಯಲ್ಲಿ ಮುಂದುವರೆದಿದೆ; ಆದರೆ ಮೂರ್ತಿ ಗಾರಿಕೆಯಲ್ಲಿ ತೊಡಗಿಸಿಕೊಂಡವರ ಬದುಕು ಮಾತ್ರ ಇನ್ನೂ ನರಕವಾಗಿದೆ. ದಿನಕ್ಕೆ 3 ಬಾರಿ ತೆಂಗಿನ ಮರವನ್ನು ಹತ್ತಿ ಶೇಂದಿಯನ್ನು ಇಳಿಸಿದರೂ ಮೂರ್ತೆ ದಾರನಿಗೆ ಸಿಗುವುದು ಪ್ರತಿ ಲೀಟರಿಗೆ ಕೇವಲ ಮೂವತ್ತು ರೂಪಾಯಿ ಮಾತ್ರ ! ಆದರೆ ಆತ ಇಳಿಸಿದ ಶೇಂದಿ ಪ್ರತಿ ಲೀಟರ್ ಗೆ 150ರಿಂದ 180 ರೂಪಾಯಿವರೆಗೂ ಮಾರಾಟ ಆಗುವುದಿದೆ.

Costal Fishing Boats ಡೀಸೆಲ್ ದರ ಏರಿಕೆ , ಮೀನೂಟ ಪ್ರಿಯರ ಕಣ್ಣೀರು!

ಹಾಗಾಗಿ ರೈತರ ಬೆಳಗೆ ಪ್ರೋತ್ಸಾಹ ನೀಡುವ ರೀತಿಯಲ್ಲಿ ಶೇಂದಿ ಉದ್ಯಮಕ್ಕೂ ಸಹಾಯಧನ ನೀಡಬೇಕು, ಪ್ರತಿ ಲೀಟರ್ ಗೆ ನೂರು ರೂಪಾಯಿ ನಿಗದಿಪಡಿಸಿ ವಿತರಣೆಗೆ ಕೇಂದ್ರಗಳನ್ನು ತೆರೆಯಬೇಕು ಎಂಬ ಒತ್ತಾಯ ಕೇಳಿಬಂದಿದೆ. ಸಾವಿರಕ್ಕೂ ಅಧಿಕ ಕುಟುಂಬಗಳು ಇವತ್ತಿಗೂ ಶೇಂದಿ ಉದ್ಯಮದಲ್ಲಿ ತೊಡಗಿಸಿ ಕೊಂಡಿದ್ದಾರೆ. ರಾಜ್ಯದಲ್ಲಿ ಏನಿಲ್ಲವೆಂದರೂ ಸುಮಾರು 70ಲಕ್ಷ ಈಡಿಗ ಸಮುದಾಯದ ಜನಸಂಖ್ಯೆ ಇದೆ. ರಾಯಚೂರು, ಯಾದಗಿರಿ ,ಚಿಂಚೋಳಿ, ಸೇಡಂ, ರಾಯದುರ್ಗ ಮುಂತಾದ ಜಿಲ್ಲೆಗಳಲ್ಲಿ ಶೇಂದಿ ಉದ್ಯಮಕ್ಕೆ ಅನುಕೂಲಕರವಾಗಿ 35 ಲಕ್ಷಕ್ಕೂ ಅಧಿಕ ಗಿಡಗಳಿವೆ. ನಿಷೇಧ ತೆರವುಗೊಳಿಸಿದ್ದೇ ಆದರೆ ಮತ್ತೆ ಉದ್ಯಮ ಚೇತರಿಸಿಕೊಳ್ಳುವ ಅವಕಾಶ ಇದೆ.

ಬ್ಯಾರಿ ಅಕಾಡೆಮಿಯಿಂದ ರಹೀಂ ಪದಚ್ಯುತಿ: ಬಿಜೆಪಿ ಮುಸ್ಲಿಂ ಮುಖಂಡನ ವಿರುದ್ಧ ಕೇಸರಿ ಪಡೆಯ ಅಸಮಾಧಾನ?

ರಾಜಕೀಯ ವಲಯದಲ್ಲಿ ಎಲ್ಲಾ ಪಕ್ಷಗಳಲ್ಲೂ ಈಡಿಗ ಸಮುದಾಯದವರು ಇದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಶಿಷ್ಯ ಪರಂಪರೆಯಲ್ಲಿ ಬರುವ ಈ ಸಮುದಾಯ, ಪಕ್ಷಭೇದ ಮರೆತು ನಾವೆಲ್ಲರೂ  ಬ್ರಹ್ಮಶ್ರೀ ನಾರಾಯಣಗುರುಗಳ ಪಕ್ಷ ಎಂದು ಒಗ್ಗಟ್ಟಾದರೆ ಮಾತ್ರ ಮೂರ್ತೆದಾರಿಕೆ ಗೆ ಮತ್ತೆ ಜೀವ ಬರುವ ಅವಕಾಶವಿದೆ ಎಂದು ಹೇಳಲಾಗುತ್ತಿದೆ.

click me!