ರಾಜ್ಯದಲ್ಲಿ ಒಂದೂ ಝೀಕಾ ವೈರಸ್‌ ಕೇಸು ಪತ್ತೆ ಇಲ್ಲ: ಕಟ್ಟೆಚ್ಚರ ಅಗತ್ಯ

By Kannadaprabha NewsFirst Published Nov 15, 2023, 7:43 AM IST
Highlights

ಬೆಂಗಳೂರು ನಗರದಲ್ಲಿ ಮೂವರು ಹಾಗೂ ಚಿಕ್ಕಬಳ್ಳಾಪುರದಲ್ಲಿ 27 ಮಂದಿಯ ಮಾದರಿಗಳನ್ನು ಪರೀಕ್ಷೆಗೆ ಪರಿಗಣಿಸಲಾಗಿತ್ತು. ಬೆಂಗಳೂರಿನ ಪೈಕಿ ಸುಬ್ರಮಣ್ಯಪುರ ಆಸ್ಪತ್ರೆಯಿಂದಲೇ ಮೂರು ಶಂಕಿತ ಪ್ರಕರಣ ವರದಿಯಾಗಿತ್ತು. ಇದೀಗ ಅಷ್ಟೂ ವರದಿ ಬಹಿರಂಗಗೊಂಡಿದ್ದು, ಯಾರಿಗೂ ಸೋಂಕು ದೃಢಪಟ್ಟಿಲ್ಲ.
 

ಬೆಂಗಳೂರು (ನ.15): ಚಿಕ್ಕಬಳ್ಳಾಪುರ ಜಿಲ್ಲೆ ದಿಬ್ಬೂರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಸೊಳ್ಳೆಯಲ್ಲಿ ಝೀಕಾ ವೈರಸ್‌ ಪತ್ತೆಯಾಗಿ ಆತಂಕ ಸೃಷ್ಟಿಸಿದ್ದ ಪ್ರಕರಣ ಸಂಬಂಧ ಬೆಂಗಳೂರು ನಗರ, ಚಿಕ್ಕಬಳ್ಳಾಪುರ ಜಿಲ್ಲೆ ವ್ಯಾಪ್ತಿಯ 30 ಮಂದಿ ಸೋಂಕು ಲಕ್ಷಣಗಳುಳ್ಳ ವ್ಯಕ್ತಿಗಳ ಮಾದರಿಗಳ ಎನ್ಐವಿ (ರಾಷ್ಟ್ರೀಯ ವೈರಾಣು ಸಂಸ್ಥೆ) ಪರೀಕ್ಷಾ ವರದಿ ಬಂದಿದ್ದು, ಅಷ್ಟೂ ಮಂದಿಗೂ ಝೀಕಾ ಸೋಂಕು ಪರೀಕ್ಷೆ ಫಲಿತಾಂಶ ನೆಗೆಟಿವ್‌ ಇದೆ. ನೆಗೆಟಿವ್‌ ಫಲಿತಾಂಶ ಬಂದಿರುವುದರಿಂದ ಝೀಕಾ ಭೀತಿಯಲ್ಲಿದ್ದ ರಾಜ್ಯದ ಜನತೆ ನಿಟ್ಟಿಸಿರು ಬಿಡುವಂತಾಗಿದೆ.

ಚಿಕ್ಕಬಳ್ಳಾಪುರದಲ್ಲಿ ಸೊಳ್ಳೆಯ ಮಾದರಿಗಳ ಸಂಗ್ರಹದ ವೇಳೆ ಈಡಿಸ್‌ ಸೊಳ್ಳೆಯಲ್ಲಿ ಝಿಕಾ ವೈರಸ್‌ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಝೀಕಾ ಲಕ್ಷಣಗಳಾದ ಜ್ವರದೊಂದಿಗೆ 2 ರಿಂದ 7 ದಿನಗಳವರೆಗೆ ಕಣ್ಣು ಕೆಂಪು, ತಲೆನೋವು, ಚರ್ಮದ ಮೇಲೆ ದದ್ದು, ಮೈಕೈ ಹಾಗೂ ಕೀಲು ನೋವು ಲಕ್ಷಣಗಳುಳ್ಳ ಪ್ರಕರಣಗಳಲ್ಲಿ ಸೀರಮ್‌ (ರಕ್ತ) ಮಾದರಿಯನ್ನು ಸಂಗ್ರಹಿಸಿ ಬೆಂಗಳೂರಿನ ರಾಷ್ಟ್ರೀಯ ವೈರಾಣು ಸಂಸ್ಥೆ (ಎನ್‌ಐವಿಗೆ) ಕಳುಹಿಸಲಾಗಿತ್ತು.

ಕಾಡಂಚಿನ ಹಳ್ಳಿಗಳಿಗೆ ಹಗಲಲ್ಲೇ 3 ಫೇಸ್‌ ವಿದ್ಯುತ್‌ ಕೊಡಿ: ಸಚಿವ ಈಶ್ವರ ಖಂಡ್ರೆ

ಬೆಂಗಳೂರು ನಗರದಲ್ಲಿ ಮೂವರು ಹಾಗೂ ಚಿಕ್ಕಬಳ್ಳಾಪುರದಲ್ಲಿ 27 ಮಂದಿಯ ಮಾದರಿಗಳನ್ನು ಪರೀಕ್ಷೆಗೆ ಪರಿಗಣಿಸಲಾಗಿತ್ತು. ಬೆಂಗಳೂರಿನ ಪೈಕಿ ಸುಬ್ರಮಣ್ಯಪುರ ಆಸ್ಪತ್ರೆಯಿಂದಲೇ ಮೂರು ಶಂಕಿತ ಪ್ರಕರಣ ವರದಿಯಾಗಿತ್ತು. ಇದೀಗ ಅಷ್ಟೂ ವರದಿ ಬಹಿರಂಗಗೊಂಡಿದ್ದು, ಯಾರಿಗೂ ಸೋಂಕು ದೃಢಪಟ್ಟಿಲ್ಲ.

ಕಟ್ಟೆಚ್ಚರ ಅಗತ್ಯ: ಝಿಕಾ ವೈರಸ್‌ ನವಜಾತ ಶಿಶುಗಳಲ್ಲಿ ಮೈಕ್ರೋಸೆಫಾಲಿ ಸೇರಿ ಇತರೆ ಗಂಭೀರ ಸಮಸ್ಯೆ ಉಂಟು ಮಾಡಬಹುದು. ಹೀಗಾಗಿ ಸೋಂಕಿನ ಬಗ್ಗೆ ಗರ್ಭಿಣಿಯರು ಎಚ್ಚರ ವಹಿಸಬೇಕು. ಸಾರ್ವಜನಿಕರು ಹಗಲಿನ ವೇಳೆಯ ಸೊಳ್ಳೆಯ ಕಡಿತದಿಂದ ರಕ್ಷಣೆ ಪಡೆಯಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮುಂಜಾಗ್ರತೆ: ಮನೆ ಪರಿಸರ, ಅಂಗಡಿ ಮುಂಗಟ್ಟುಗಳಲ್ಲಿ ಎಲ್ಲಿಯೂ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗದಂತೆ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು ಮತ್ತು ಆರೋಗ್ಯ ಸಿಬ್ಬಂದಿ/ಆಶಾ ಕಾರ್ಯಕರ್ತೆಯರು ನೀಡುವ ಸಲಹೆ-ಸೂಚನೆಗಳನ್ನು ಪಾಲಿಸಬೇಕು. ಸೊಳ್ಳೆಗಳು ಪ್ರವೇಶಿಸದಂತೆ ಮನೆಯ ಕಿಟಕಿ ಬಾಗಿಲುಗಳಿಗೆ ಜಾಲರಿ ಅಳವಡಿಸುವುದು. ಹೊರಾಂಗಣದಲ್ಲಿ ಮಲಗುವುದನ್ನು ಸಾಧ್ಯವಾದಷ್ಟು ತಪ್ಪಿಸುವುದು ಹಾಗೂ ವಿಶ್ರಾಂತಿ ಪಡೆಯುವಾಗ ಮತ್ತು ಮಲಗುವಾಗ ವಿಶೇಷವಾಗಿ ಗರ್ಭಿಣಿಯರು/ ವಯಸ್ಕರು ಮತ್ತು ಮಕ್ಕಳು ಕೀಟನಾಶಕ ಲೇಪಿತ ಸೊಳ್ಳೆ ಪರದೆಗಳನ್ನು ಉಪಯೋಗಿಸುವುದು. 

ತುಳು ಚಿತ್ರರಂಗದ ಸಮಸ್ಯೆಗಳ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಮನವಿ: ನಿರ್ಮಾಪಕರು

ನೀರಿನ ತೊಟ್ಟಿ/ ಟ್ಯಾಂಕ್‌ನ್ನು ಕನಿಷ್ಟ ಪಕ್ಷ ವಾರಕ್ಕೆ ಎರಡು ಸಲ ಪೂರ್ತಿ ಖಾಲಿ ಮಾಡಿ ಸ್ವಚ್ಛಗೊಳಿಸುವುದು. ಬಯಲಿನಲ್ಲಿ ತ್ಯಾಜ್ಯ ವಸ್ತುಗಳಾದ ಟೈರ್, ಎಳೆನೀರಿನ ಚಿಪ್ಪು, ಒಡೆದ ಬಾಟಲಿ ಮುಂತಾದವುಗಳಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರವಹಿಸಿವುದು ಅಥವಾ ಸೂಕ್ತ ವಿಲೇವಾರಿ ಮಾಡುವುದು. ಸಾಧ್ಯವಾದಷ್ಟು ಮೈಮುಚ್ಚುವಂತೆ ಬಟ್ಟೆಯನ್ನು ಧರಿಸುವುದು. ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು. ಸೊಳ್ಳೆ ಕಚ್ಚದಂತೆ ಎಲ್ಲಾ ರೀತಿಯ ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸುವುದು. ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ ಹಾಗೂ ನಗರಸಭೆಗಳು ಘನತ್ಯಾಜ್ಯ ವಸ್ತುಗಳ ವಿಲೇವಾರಿ ಮಾಡಲು ಸೂಕ್ತ ಕ್ರಮಗಳನ್ನು ವಹಿಸಬೇಕು.

click me!