
ಕಾರವಾರ (ಆ.4) : ಇಲ್ಲಿನ ಬೈತಖೋಲ್ ಬಂದರಿಗೆ ಮೀನುಗಾರಿಕಾ ಕೆಲಸಕ್ಕೆ ಬರುವ ಹೊರರಾಜ್ಯದ ಹೆಚ್ಚಿನ ಕಾರ್ಮಿಕರಲ್ಲಿ ಕಣ್ಣುಬೇನೆ ಸೋಂಕು ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿ ಮೀನುಗಾರಿಕಾ ಚಟುವಟಿಕೆಯ ಮೇಲೂ ಪರಿಣಾಮ ಬೀರುತ್ತಿದೆ.
ರಾಜ್ಯದಲ್ಲಿ 2 ತಿಂಗಳ ಯಾಂತ್ರೀಕೃತ ಮೀನುಗಾರಿಕೆ ಮೇಲಿನ ನಿಷೇಧ ಅವಧಿ ಮುಗಿದಿದ್ದು, ಪರ್ಸೈನ್ ಹಾಗೂ ಟ್ರಾಲ್ ಬೋಟುಗಳು ಆಳ ಸಮುದ್ರ ಮೀನುಗಾರಿಕೆಗೆ ತೆರಳಲು ಸನ್ನದ್ಧವಾಗಿವೆ. ಈ ಬೋಟ್ಗಳಿಗೆ ಓರಿಸ್ಸಾ, ಜಾಖಂರ್ಡ್, ಛತ್ತೀಸ್ಗಡ, ಉತ್ತರ ಪ್ರದೇಶ ಒಳಗೊಂಡು ಹೊರರಾಜ್ಯದ ಜನರು ಕಾರ್ಮಿಕರಾಗಿದ್ದಾರೆ. 2 ತಿಂಗಳ ರಜೆಯ ಬಳಿಕ ಪುನಃ ತಮ್ಮ ತಮ್ಮ ಊರುಗಳಿಂದ ಮೀನುಗಾರಿಕಾ ಕೆಲಸ ಕಾರ್ಯಗಳಿಗೆ ಕಾರ್ಮಿಕರು ಆಗಮಿಸಿದ್ದಾರೆ. ಆದರೆ ಹೊರರಾಜ್ಯದಿಂದ ಆಗಮಿಸಿದ ಹೆಚ್ಚಿನ ಕಾರ್ಮಿಕರಲ್ಲಿ ಕಣ್ಣುಬೇನೆ ಸೋಂಕು ಕಾಣಿಸಿಕೊಳ್ಳುತ್ತಿದೆ. ಟ್ರಾಲ್ ಹಾಗೂ ಪರ್ಸೈನ್ ಬೋಟುಗಳಲ್ಲಿ 20ರಿಂದ 30 ಜನ ಕಾರ್ಮಿಕರು ಒಟ್ಟಾಗಿ ಇರುವುದರಿಂದ ಕಣ್ಣುಬೇನೆ ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ವೇಗವಾಗಿ ಹರಡುತ್ತಿದೆ. ಇದರಿಂದಾಗಿ ಮೀನುಗಾರಿಕೆ ತೆರಳಲೂ ಆಗದಂತಾಗಿದೆ.
ಹವಾಮಾನ ವೈಪರಿತ್ಯ: ರಾಜ್ಯದ ಹಲವೆಡೆ Madras eye ಹಾವಳಿ
ಯಾಂತ್ರೀಕೃತ ಬೋಟ್ಗಳು ಆಳಸಮುದ್ರ ಮೀನುಗಾರಿಕೆಗೆ ಹೊರಟರೆ ವಾರಗಳ ಕಾಲ ಸಮುದ್ರದಲ್ಲೇ ಇರುತ್ತವೆ. ಕಾರ್ಮಿಕರಲ್ಲಿ ಕಣ್ಣುಬೇನೆ ಸೋಂಕು ಕಾಣಿಸಿಕೊಂಡಿರುವುದರಿಂದ ಕೆಲಸ ಮಾಡಲಾಗುತ್ತಿಲ್ಲ. ಎರಡು ತಿಂಗಳ ನಿಷೇಧದ ಬಳಿಕ ಮಂಗಳವಾರದಿಂದ ಬೋಟ್ಗಳು ಸಮುದ್ರಕ್ಕೆ ಇಳಿದಿದ್ದು, ಆರಂಭದಲ್ಲೇ ವಿಘ್ನ ಬಂದೊದಗಿದೆ.
ಕಣ್ಣುಬೇನೆ ಕಾಣಿಸಿಕೊಂಡಿರುವ ಬೈತಖೋಲ ಬಂದರಿನ ಬೋಟ್ ಕಾರ್ಮಿಕರನ್ನು ತಪಾಸಣೆಗೊಳಪಡಿಸಲು ಇಲಾಖೆಯ ಸಿಬ್ಬಂದಿಗೆ ಸೂಚಿಸಲಾಗಿದೆ. ಸೋಂಕು ಕಾಣಿಸಿಕೊಂಡವರು ಇತರರಿಂದ ಅಂತರ ಕಾಯ್ದುಕೊಳ್ಳಬೇಕು. ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕು.
ಡಾ. ನೀರಜ್ ಬಿ.ವಿ., ಡಿಎಚ್ಒ
ಕಣ್ಣಿನ ಸೋಂಕಿಗೆ ಮನೆ ಮದ್ದು: ಅನಾರೋಗ್ಯಕ್ಕೆ ಹೇಳಿ ಗುಡ್ ಬೈ
ಉತ್ತರ ಕರ್ನಾಟಕದಲ್ಲಿ ಹಾಗೂ ಜಿಲ್ಲೆಯಲ್ಲಿ ಬೇರೆ ಬೇರೆ ಭಾಗದಲ್ಲಿ ಕಣ್ಣುಬೇನೆ ಬಹುಬೇಗನೆ ಹರಡುತ್ತಿದ್ದು, ಆರೋಗ್ಯ ಇಲಾಖೆ ಹಾಗೂ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಿದೆ. ಸಾಂಕ್ರಾಮಿಕ ರೋಗವಾಗಿರುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಕಣ್ಣುಬೇನೆ ಬಂದವರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲು ವ್ಯವಸ್ಥೆ ಆಗಬೇಕು. ಮಳೆಗಾಲದಲ್ಲಿ ಸಾಮಾನ್ಯವಾಗಿ ಬರುವ ಕಾಯಿಲೆಯಾಗಿದ್ದು, ಮೂರರಿಂದ ಎಂಟು ದಿನಗಳವರೆಗೂ ಸೋಂಕು ಇರಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ