ಮೇಟಿ ಲೈಂಗಿಕ ಕೇಸ್‌ ಮುಚ್ಚಿ ಹಾಕಿದ ಕಾಂಗ್ರೆಸ್ಸಿಗರಿಂದ ನಾನು ಪಾಠ ಕಲಿಬೇಕಿಲ್ಲ: ಬೊಮ್ಮಾಯಿ

By Kannadaprabha NewsFirst Published May 29, 2021, 9:53 AM IST
Highlights

* ಜಾರಕಿಹೊಳಿ ಕೇಸಲ್ಲಿ ನನ್ನ ಮೇಲೆ ವೃಥಾ ಆರೋಪ: ಬೊಮ್ಮಾಯಿ ಕಿಡಿ
* ಕಾಂಗ್ರೆಸ್‌ ನಾಯಕರ ವಿರುದ್ಧ ಗುಡುಗಿದ ಗೃಹ ಸಚಿವ
* ಪೊಲೀಸರಿಂದ ಪಾರದರ್ಶಕ ಹಾಗೂ ನಿಷ್ಪಕ್ಷಪಾತ ತನಿಖೆ 

ಬೆಂಗಳೂರು(ಮೇ.29): ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ವಿರುದ್ಧದ ಅತ್ಯಾಚಾರ ಪ್ರಕರಣದ ಎಸ್‌ಐಟಿ ತನಿಖಾಧಿಕಾರಿಗಳ ಮೇಲೆ ಪ್ರಭಾವ ಬೀರುವ ದುರುದ್ದೇಶದಿಂದ ಕಾಂಗ್ರೆಸ್‌ ಮುಖಂಡರು ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಮಾಜಿ ಸಚಿವ ಎಚ್‌.ವೈ.ಮೇಟಿ ಅವರ ಲೈಂಗಿಕ ಹಗರಣವನ್ನೇ ಮುಚ್ಚಿ ಹಾಕಿದ ಕಾಂಗ್ರೆಸ್‌ ಮುಖಂಡರಿಂದ ನಾನು ನೈತಿಕತೆ ಪಾಠ ಕಲಿಯಬೇಕಿಲ್ಲ ಎಂದೂ ಅವರು ತೀಕ್ಷ್ಣವಾಗಿ ಹೇಳಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಪಾರದರ್ಶಕ ಹಾಗೂ ನಿಷ್ಪಕ್ಷಪಾತವಾಗಿ ತನಿಖೆ ಮಾಡುತ್ತಿದ್ದಾರೆ. ಇದರಲ್ಲಿ ಸರ್ಕಾರದ ಹಸ್ತಕ್ಷೇಪ ಮಾಡಿಲ್ಲ. ಯಾರೂ ಯಾರ ಮೇಲೂ ಪ್ರಭಾವವನ್ನು ಬೀರಿಲ್ಲ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ.

'ರಾಮನ ಬಗ್ಗೆ ಮಾತಾಡೋ ಪಕ್ಷ, ರೇಪ್ ಆರೋಪಿ ಹೋಂ ಮಿನಿಸ್ಟರ್ ಭೇಟಿ ಮಾಡ್ತಾರೆ'

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ ಮುಖಂಡರು ಇಷ್ಟು ದಿನ ಬಿಟ್ಟು ಈಗಲೇ ಯಾಕೆ ಈ ವಿಷಯವನ್ನು ಕೈಗೆತ್ತಿಕೊಂಡರು? ಹೈಕೋರ್ಟ್‌ನಲ್ಲಿ ದಾಖಲಾಗಿರುವ ಅರ್ಜಿ ಇದಕ್ಕೆ ಕಾರಣವೇ? ಈ ಪ್ರಕರಣದ ತನಿಖಾ ಪ್ರಗತಿ ಕುರಿತು ಹೈಕೋರ್ಟ್‌ಗೆ ತನಿಖಾಧಿಕಾರಿಗಳು ವರದಿ ಸಲ್ಲಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಕರಣದ ಬಗ್ಗೆ ಕಾಂಗ್ರೆಸ್‌ ನಾಯಕರು ವೃಥಾರೋಪ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ಈ ಹಿಂದೆ ಮಾಜಿ ಸಚಿವ ಮೇಟಿ ಪ್ರಕರಣದಲ್ಲಿ ಏನಾಯ್ತು? ಅಂದು ಸಂತ್ರಸ್ತೆ ದೂರು ನೀಡಿದ್ದರೂ ಮಾಜಿ ಸಚಿವರ ಹೆಸರನ್ನೇ ಎಫ್‌ಐಆರ್‌ನಲ್ಲಿ ಉಲ್ಲೇಖ ಮಾಡಲಿಲ್ಲ. ಮಾಜಿ ಸಚಿವರ ಹೆಸರಿಲ್ಲದೆ ಪ್ರಕರಣವನ್ನು ತನಿಖೆ ನಡೆಸಿ ಮುಚ್ಚಿ ಹಾಕಲಾಯಿತು. ಆಗ ವಿರೋಧ ಪಕ್ಷದ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದರು. ಅಂತಹವರಿಂದ ನಾವು ನೈತಿಕ ಪಾಠ ಕಲಿಯಬೇಕಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಆರೋಪಿ ಜಾರಕಿಹೊಳಿ ಅವರನ್ನು ಬೊಮ್ಮಾಯಿ ಭೇಟಿ ಮಾಡಿದ್ದಾರೆ. ಗೃಹ ಸಚಿವರೇ ಅತ್ಯಾಚಾರ ಆರೋಪಿಯನ್ನು ಭೇಟಿ ಮಾಡಿದ್ದು ಇದೇ ಮೊದಲು. ಬೊಮ್ಮಾಯಿ ರಾಜೀನಾಮೆ ನೀಡಬೇಕು’ ಎಂದು ಗುರುವಾರ ಸಿದ್ದರಾಮಯ್ಯ ಆಗ್ರಹಿಸಿದ್ದರು.
 

click me!