ಕೇಸರಿ ಶಾಲಿನ ಪೊಲೀಸರಿಗೆ ಗೃಹ ಮಂತ್ರಿ ಆರಗ ಬೆಂಬಲ

By Kannadaprabha NewsFirst Published Oct 20, 2021, 7:13 AM IST
Highlights

*    ಪ್ರತಿಪಕ್ಷಗಳಿಂದ ಕೋಮುಭಾವನೆ ಕೆರಳಿಸಲು ಪ್ರಯತ್ನ
*    ದೇಶದಲ್ಲಿ ಕೇಸರಿ ಬಣ್ಣಕ್ಕೆ ನಿಷೇಧವಿದೆಯೇ?
*    ರಾಷ್ಟ್ರಧ್ವಜದಲ್ಲಿ ಕೇಸರಿ ಬಣ್ಣವಿದೆ. ಅದನ್ನು ತೆಗೆಯಲು ಆಗುವುದೇ?
 

ಬೆಂಗಳೂರು(ಅ.20): ಪೊಲೀಸರು(Police) ಕೇಸರಿ ಶಾಲು ಧರಿಸಿರುವುದನ್ನು ಮತ ಬ್ಯಾಂಕ್‌(Vote Bank) ರಾಜಕೀಯಕ್ಕಾಗಿ(Politics) ಟೀಕಿಸಲಾಗುತ್ತಿದ್ದು, ಚುನಾವಣೆ(Election) ಹಿನ್ನೆಲೆಯಲ್ಲಿ ಕೋಮು ಭಾವನೆಯನ್ನು ಕೆರಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಆರೋಪಿಸಿದ್ದಾರೆ.

ಉಡುಪಿಯ(Udupi) ಕಾಪು ಮತ್ತು ವಿಜಯಪುರ(Vijayapura) ಗ್ರಾಮಾಂತರ ಪೊಲೀಸ್‌ ಠಾಣೆಯ ಸಿಬ್ಬಂದಿ ಆಯುಧ ಪೂಜೆಯ ಸಂದರ್ಭದಲ್ಲಿ ಕೇಸರಿ ಶಾಲು ಧರಿಸಿ ಪೋಟೋ ತೆಗೆಸಿಕೊಂಡಿದ್ದರು. ಈ ಬಗ್ಗೆ ವಿವಾದ ಹುಟ್ಟಿಕೊಂಡಿತ್ತು. ಮಂಗಳವಾರ ನಗರದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಆರಗ ಜ್ಞಾನೇಂದ್ರ ಪೊಲೀಸರ ನಡೆಯನ್ನು ಸಮರ್ಥಿಸಿಕೊಂಡಿದ್ದು, ಚುನಾವಣಾ ಕಾರಣಕ್ಕೆ ದುರುದ್ದೇಶದಿಂದ ಟೀಕೆ ಮಾಡಲಾಗುತ್ತಿದೆ ಎಂದರು.

ಈ ದೇಶದಲ್ಲಿ ಕೇಸರಿ ಬಣ್ಣ ನಿಷೇಧಕ್ಕೊಳಗಾಗಿದೆಯೇ? ರಾಷ್ಟ್ರಧ್ವಜದಲ್ಲಿ(National Flag) ಕೇಸರಿ(Saffron) ಬಣ್ಣವಿದೆ. ಅದನ್ನು ತೆಗೆದುಹಾಕಬೇಕು ಎಂದು ಕೆಲವರು ಹೇಳಿದರೆ ತೆಗೆದು ಹಾಕಲು ಸಾಧ್ಯವೇ? ನಾಳೆ ಕೇಸರಿ ಬಾತ್‌ ತಿನ್ನುವುದನ್ನು ಬ್ಯಾನ್‌ ಮಾಡಿ ಎಂದು ಕೆಲವರು ಕೇಳಬಹುದು. ಅದಕ್ಕೆ ಹಸಿರು ಬಣ್ಣ ಹಾಕಿ ಅಂತಲೋ ಬೇರೆ ಯಾವುದೋ ಬಣ್ಣ ಹಾಕಿ ಅಂತ ಹೇಳಬಹುದು. ಆ ರೀತಿ ಮಾಡಲು ಆಗುತ್ತದೆಯೇ ಎಂದು ಅವರು ಪ್ರಶ್ನಿಸಿದರು.

ಮುಸ್ಲಿಂ ಮತಕ್ಕಾಗಿ ಆರೆಸ್ಸೆಸ್‌ ಟೀಕಿಸಲು ಸಿದ್ದು, ಎಚ್‌ಡಿಕೆ ಪೈಪೋಟಿ : ಆರಗ

ಪೊಲೀಸರು ಕೇಸರಿಯ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿಕೊಂಡಿದ್ದಾರೆ. ಪೊಲೀಸರ ಖಾಸಗಿತನವನ್ನು ನಾವು ಗೌರವಿಸಬೇಕು. ಅವರ ಧಾರ್ಮಿಕ ನಂಬಿಕೆ, ಉಡುಗೆ ತೊಡುಗೆಗಳ ವಿಷಯದಲ್ಲಿ ನಾವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಕರ್ತವ್ಯದಲ್ಲಿ ಇರುವಾಗಲೇ ಎಷ್ಟೋ ಸಂದರ್ಭದಲ್ಲಿ ಅವರು ಸಮವಸ್ತ್ರ(Uniform) ಧರಿಸಿರುವುದಿಲ್ಲ ಎಂದು ಹೇಳಿದರು.

ಮುಸ್ಲಿಂ(Muslim) ಸಿಬ್ಬಂದಿ ಕರ್ತವ್ಯದಲ್ಲಿ ಇರುವಾಗಲೇ ನಮಾಜ್‌ಗೆ(Namaz) ಹೋಗಿ ಬರುತ್ತಾರೆ. ಅದನ್ನು ನಾವು ಗೌರವಿಸುತ್ತೇವೆ. ಪಶ್ಚಿಮ ಬಂಗಾಳದ(West Bengal) ವಿಧಾನಸೌಧದಲ್ಲಿ ವಿಧಾನಸಭೆ ಪಕ್ಕದ ಕೊಠಡಿಯಲ್ಲಿ ನಮಾಜ್‌ ಮಾಡಲು ಅವಕಾಶ ನೀಡಿದ್ದಾರೆ. ಇದನ್ನು ಯಾರೂ ಟೀಕಿಸಿಲ್ಲ. ಆದರೆ, ರಾಜ್ಯದಲ್ಲಿ ಪ್ರತಿಪಕ್ಷಗಳು(Opposition Parties) ಒಂದು ವರ್ಗವನ್ನು ಓಲೈಸಲಿಕ್ಕಾಗಿ ಒಂದು ಪರಂಪರೆಯನ್ನು ಹೀಗಳೆಯುವ ಪ್ರಯತ್ನ ನಡೆಸುತ್ತಿವೆ. ಇದಕ್ಕೆ ಜನ ಉತ್ತರ ನೀಡುತ್ತಾರೆ ಎಂದು ಜ್ಞಾನೇಂದ್ರ ಹೇಳಿದರು.

ವಿಶ್ವ ಹಿಂದೂ ಪರಿಷತ್‌ನವರು(Vishwa Hindu Parishad) ಪ್ರತಿವರ್ಷ ತ್ರಿಶೂಲವನ್ನು ನೀಡುತ್ತಾರೆ. ಈ ವರ್ಷ ಚುನಾವಣೆಗೋಸ್ಕರ ಈ ಕಾರ್ಯಕ್ರಮಕ್ಕೆ ಪ್ರತಿಪಕ್ಷಗಳು ಹೆಚ್ಚಿನ ಒತ್ತು ನೀಡಿವೆ. ತ್ರಿಶೂಲ ಹಿಂದಿನ ಕಾಲದಲ್ಲಿ ಆಯುಧ ಆಗಿತ್ತು. ಈವತ್ತು ತ್ರಿಶೂಲ ಆಯುಧವಾಗಿ ಉಳಿದಿಲ್ಲ. ಅದ್ದರಿಂದ ಚುಚ್ಚಲು ಸಾಧ್ಯವಿಲ್ಲ. ಒಂದು ಸಣ್ಣ ವರ್ಗವನ್ನು ಮೆಚ್ಚಿಸಲು ಹೋಗಿ ದೊಡ್ಡ ವರ್ಗವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಪ್ರತಿಪಕ್ಷಗಳನ್ನು ಕುಟುಕಿದರು.

ಮುಂದಿನ ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆ:

ಮತಾಂತರ ನಿಷೇಧ ಕಾಯ್ದೆಯನ್ನು(Conversion Prohibition Act) ಸರ್ಕಾರ(Government) ರೂಪಿಸುತ್ತಿದೆ. ಮುಂದಿನ ಅಧಿವೇಶನದಲ್ಲಿ(Session) ಮಸೂದೆ(Bill) ಮಂಡಿಸುತ್ತೇವೆ. ಈ ಕಾಯ್ದೆ ಬಗ್ಗೆ ಯಾವುದೇ ಆತಂಕ ಪಡಬೇಕಿಲ್ಲ. ಯಾವುದೇ ಅಡ್ಡಿ ಆತಂಕವಿಲ್ಲದೆ ಜನರು ಅವರ ಧರ್ಮವನ್ನು ಪಾಲನೆ ಮಾಡಬಹುದು. ಈ ಕಾಯ್ದೆಯಿಂದ ಇತರ ಧರ್ಮಗಳಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಜ್ಞಾನೇಂದ್ರ ಹೇಳಿದರು.
 

click me!