ದೇಶದಲ್ಲಿ ಕ್ರೀಡೆಯ ಬೆಳವಣಿಗೆ ಅಗಾಧ: ಪುಲ್ಲೇಲ ಗೋಪಿಚಂದ್‌

By Kannadaprabha NewsFirst Published Oct 14, 2023, 11:59 AM IST
Highlights

ಹಾಂಗ್‌ಝೋನಲ್ಲಿ ನಡೆದ 19ನೇ ಏಷ್ಯನ್‌ ಗೇಮ್ಸ್‌ನ ಬ್ಯಾಡ್ಮಿಂಟನ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಎಚ್‌.ಎಸ್‌.ಪ್ರಣಯ್‌, ವಿಶ್ವ ನಂ.1 ಡಬಲ್ಸ್‌ ಜೋಡಿ ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿ, ರಾಷ್ಟ್ರೀಯ ಕೋಚ್‌ ಪುಲ್ಲೇಲ ಗೋಪಿಚಂದ್‌ ಅವರು ತಮ್ಮ ಏಷ್ಯಾಡ್‌ ಪಯಣದ ಅನುಭವಗಳನ್ನು, ಏಷ್ಯಾನೆಟ್‌ ನ್ಯೂಸ್‌ ಮಾಧ್ಯಮ ಸಮೂಹದ ಕಾರ್ಯಕಾರಿ ಮುಖ್ಯಸ್ಥ ರಾಜೇಶ್‌ ಕಾಲ್ರಾ ಅವರ ಜೊತೆ ವಿಶೇಷ ಸಂದರ್ಶನದಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ.

ಕನ್ನಡಪ್ರಭ ವಿಶೇಷ

ಇತ್ತೀಚೆಗೆ ಚೀನಾದ ಹಾಂಗ್‌ಝೋನಲ್ಲಿ ನಡೆದ 19ನೇ ಏಷ್ಯನ್‌ ಗೇಮ್ಸ್‌ನ ಬ್ಯಾಡ್ಮಿಂಟನ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಎಚ್‌.ಎಸ್‌.ಪ್ರಣಯ್‌, ವಿಶ್ವ ನಂ.1 ಡಬಲ್ಸ್‌ ಜೋಡಿ ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿ, ರಾಷ್ಟ್ರೀಯ ಕೋಚ್‌ ಪುಲ್ಲೇಲ ಗೋಪಿಚಂದ್‌ ಅವರು ತಮ್ಮ ಏಷ್ಯಾಡ್‌ ಪಯಣದ ಅನುಭವಗಳನ್ನು, ಏಷ್ಯಾನೆಟ್‌ ನ್ಯೂಸ್‌ ಮಾಧ್ಯಮ ಸಮೂಹದ ಕಾರ್ಯಕಾರಿ ಮುಖ್ಯಸ್ಥ ರಾಜೇಶ್‌ ಕಾಲ್ರಾ ಅವರ ಜೊತೆ ವಿಶೇಷ ಸಂದರ್ಶನದಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ.

- ನೀವು ಬ್ಯಾಡ್ಮಿಂಟನ್‌ ಪಯಣದ ಅತ್ಯುತ್ತಮ ಘಟ್ಟದಲ್ಲಿದ್ದೀರಿ. ನಿಮ್ಮ ಅಭ್ಯಾಸ, ಸಿದ್ಧತೆ ಬಗ್ಗೆ ವಿವರಿಸಿ.

(ಪ್ರಣಯ್‌): ಕಳೆದೆರಡು ವರ್ಷಗಳಲ್ಲಿ ತುಂಬಾ ಬದಲಾವಣೆಯಾಗಿದೆ. ಒತ್ತಡಗಳನ್ನು ನಿಭಾಯಿಸುವುದು ಪ್ರಮುಖ ಸವಾಲು. ಮೊದಲಿಗಿಂತ ಕಠಿಣ ಅಭ್ಯಾಸ ನಡೆಸುತ್ತಿದ್ದೇನೆ. ಪ್ರಾಕ್ಟೀಸ್‌ ಎಂಬುದು ಜೀವನದ ಪ್ರಮುಖ ಭಾಗ ಎಂಬಂತಾಗಿದೆ. ದೈಹಿಕವಾಗಿ ಸಮರ್ಥವಾಗಿರುವ ಜೊತೆಗೆ ಮಾನಸಿಕವಾಗಿಯೂ ಸಿದ್ಧಗೊಳ್ಳುವುದು ಪ್ರಮುಖ ಸವಾಲು.

- ಏಷ್ಯನ್‌ ಗೇಮ್ಸ್‌ ವೇಳೆ ನೀವು ಗಾಯಗೊಂಡಿದ್ದಿರಿ. ಆದರೂ ಆಡಿ ಸಾಧನೆ ಮಾಡಿದ್ದೀರಿ.

-(ಪ್ರಣಯ್‌) ಗಾಯ ಎಂಬುದು ಕ್ರೀಡೆಯ ಭಾಗ. ಮೊದಲೆಲ್ಲಾ ತುಂಬಾ ಗಾಯಗಳಾಗುತ್ತಿತ್ತು. ಅದರಿಂದ ತುಂಬಾ ಪಾಠ ಕಲಿತೆ. ಯಾವುದೇ ಸಂದರ್ಭದಲ್ಲೂ ಹೋರಾಟದ ಮನೋಭಾವ ನಮ್ಮಲ್ಲಿರಬೇಕಾಗುತ್ತದೆ. ಹೀಗಾಗಿ ಏಷ್ಯಾಡ್‌ನಲ್ಲೂ ಗೆಲ್ಲಲು ಸಾಧ್ಯವಾಯಿತು. ಗೋಪಿಚಂದ್‌ ಸರ್‌ ಜೊತೆಗಿರುವುದು ಕೂಡಾ ಗಾಯಗಳನ್ನು ನಿಭಾಯಿಸಿ, ಉತ್ತಮ ಪ್ರದರ್ಶನ ನೀಡಲು ಸಹಾಯವಾಗುತ್ತಿದೆ.

Podcast: ಏಷ್ಯಾಡ್‌ನಲ್ಲಿ ಪದಕ ಬೇಟೆಯ ರೋಚಕ ಕಥೆ, ಏಷ್ಯಾನೆಟ್‌ ಜೊತೆ

- ಮದುವೆ ಬಳಿಕ ಉತ್ತಮ ಪ್ರದರ್ಶನ ನೀಡುತ್ತಿದ್ದೀರಿ. ಇದರ ಕ್ರೆಡಿಟ್‌ ಪತ್ನಿಗೆ ನೀಡುತ್ತೀರಾ?

-ಮದುವೆ ಬಳಿಕ ಮತ್ತಷ್ಟು ಬದಲಾವಣೆಯಾಗಿದೆ. ಪತ್ನಿ ಕೂಡಾ ನನಗೆ ಅದೃಷ್ಠ ತಂದಿದ್ದಾಳೆ. ಇದು ಮುಂದುವರಿಯುವ ವಿಶ್ವಾಸವಿದೆ.

- ಏಷ್ಯಾಡ್‌ ವೇಳೆ ನಿಮ್ಮ ಆರೋಗ್ಯ ಸರಿಯಿರಲಿಲ್ಲ. ಇದನ್ನು ನಿಭಾಯಿಸಿ ಪದಕ ಗೆಲ್ಲಲು ಹೇಗೆ ಸಾಧ್ಯವಾಯಿತು?

(ಚಿರಾಗ್‌)-ಮೊದಲ ಪಂದ್ಯದ ಬಳಿಕ ನಮಗೆ ಒಂದು ದಿನ ವಿರಾಮ ಸಿಕ್ಕಿತ್ತು. ತಂಡದ ಆಟಗಾರ ರೋಹನ್‌ ಕಪೂರ್‌ ಕೂಡಾ ಅನಾರೋಗ್ಯದಿಂದಿದ್ದರು. ಹೀಗಾಗಿ ಬೇರೆ ಆಯ್ಕೆ ಇರಲಿಲ್ಲ. 2ನೇ ಪಂದ್ಯಕ್ಕೂ ಮುನ್ನ ಸಿಕ್ಕ ವಿಶ್ರಾಂತಿ ಸಿದ್ಧಗೊಳ್ಳಲು ಸಾಧ್ಯವಾಯಿತು.

-ನಿಮ್ಮ ಸಹ ಅಟಗಾರ ಅನಾರೋಗ್ಯಕ್ಕೆ ತುತ್ತಾದಾಗ ಒತ್ತಡವಿತ್ತೇ? ಹೇಗೆ ಅದರಿಂದ ಹೊರಬಂದಿರಿ?

(ಸಾತ್ವಿಕ್‌) ಚಿರಾಗ್‌ರ ಅನಾರೋಗ್ಯದ ಬಗ್ಗೆ ನಾನು ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಅವರು ಆಡಲು ಸಿದ್ಧವಾದರೆ ಶೇಕಡಾ ನೂರರಷ್ಟು ಪ್ರದರ್ಶನ ನೀಡುತ್ತಾರೆ ಎಂಬುದು ನನಗೆ ಗೊತ್ತಿತ್ತು. ಹೀಗಾಗಿ ಒತ್ತಡಕ್ಕೆ ಅವಕಾಶವಿರಲಿಲ್ಲ.

- ವಿಶ್ವದ ಬಲಿಷ್ಠ ಜೋಡಿಯಾಗಿರುವ ನಿಮ್ಮಿಬ್ಬರ ಕಾಂಬಿನೇಷನ್‌ ಬಗ್ಗೆ ಏನನ್ನುತ್ತೀರಿ. ನಿಮ್ಮ ಯಶಸ್ವಿ ಪಯಣದ ಸೀಕ್ರೆಟ್‌ ಏನು?

(ಚಿರಾಗ್‌)- ಮೊದಲಿಗೆ ನಾವಿಬ್ಬರು ಉತ್ತಮ ಸ್ನೇಹಿತರು. ಸಮಸ್ಯೆ, ಒತ್ತಡಗಳು ಎದುರಾದಾಗ ಮಾತುಕತೆ ಮೂಲಕ ಪರಿಹರಿಸಿಕೊಳ್ಳುತ್ತೇವೆ. ಇಬ್ಬರಲ್ಲಿ ಯಾರಲ್ಲೇ ತಪ್ಪುಗಳು ಸಂಭವಿಸಿದರೂ ಅದರ ಬಗ್ಗೆ ಹೆಚ್ಚಿನ ತಲೆ ಕೆಡಿಸಿಕೊಳ್ಳದೇ ಮುಂದಿನ ಟೂರ್ನಿಗೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತೇವೆ.

'ರೆಕಾರ್ಡ್ ಇರೋದೇ ಬ್ರೇಕ್ ಮಾಡೋಕೆ': ಭಾರತ ಎದುರಿನ ಪಂದ್ಯಕ್ಕೂ ಮುನ್ನ ಬಾಬರ್ ಅಜಂ ವಾರ್ನಿಂಗ್..!

- ಬ್ಯಾಡ್ಮಿಂಟನ್‌ನ ನಿಮ್ಮ ಯಶಸ್ವಿ ಪಯಣದ ಹಿಂದೆ ಕೋಚ್‌ ಪಾತ್ರವೇನು?

(ಪ್ರಣಯ್‌) ಆಟದಲ್ಲಿ ನಂಬಿಕೆ ಮುಖ್ಯ. ನಮಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದಿದ್ದಾಗ ಕೋಚ್‌ ನಮ್ಮ ತಪ್ಪು ಸರಿಪಡಿಸುತ್ತಾರೆ. ನಮ್ಮ ಯೋಚನೆಗಳಿಗಿಂತ ಕೋಚ್‌ ಯೋಚನೆ ಭಿನ್ನವಾಗಿರುತ್ತದೆ. ಅದರಿಂದಲೂ ಕಲಿಯಲು ಸಾಧ್ಯವಾಗುತ್ತದೆ. 15 ವರ್ಷದ ಬ್ಯಾಡ್ಮಿಂಟನ್‌ ಜೀವನದಲ್ಲಿ ಅವರು ಬೀರಿದ ಪ್ರಭಾವ ಪ್ರಮುಖವಾದದ್ದು.

(ಸಾತ್ವಿಕ್‌) ಗೋಪಿಚಂದ್‌ರನ್ನು ನಾನು ಮಾಂತ್ರಿಕ ಎಂದೇ ಪರಿಗಣಿಸುತ್ತೇನೆ. ನಮ್ಮ ಆಟ, ರೋಲ್‌, ಪ್ರದರ್ಶನದ ಬಗ್ಗೆ ನಮಗೆ ತೃಪ್ತಿ ಇಲ್ಲದಿದ್ದಾಗ ಅದರ ಬಗ್ಗೆ ಮುಕ್ತವಾಗಿ ಚರ್ಚಿಸಿ ಸರಿಪಡಿಸುತ್ತಾರೆ. ನಮ್ಮ ಆಟದ ಬಗ್ಗೆ ನಂಬಿಕೆ ಇಟ್ಟು ಮತ್ತಷ್ಟು ಸಾಧನೆಗೆ ಪ್ರೋತ್ಸಾಹಿಸುತ್ತಾರೆ. ಸೋತರೂ ಕುಗ್ಗದಂತೆ ನೋಡಿಕೊಳ್ಳು ಕಲೆ ಅವರಲ್ಲಿದೆ.

- ಆಟಗಾರರ ಸಾಧನೆ ಹಿಂದೆ ನಿಮ್ಮ ಪಾತ್ರವೂ ಪ್ರಮುಖವಾದದ್ದು. ಇದರ ಬಗ್ಗೆ ವಿವರಿಸಿ

(ಗೋಪಿಚಂದ್) ನಮ್ಮ ಪಾತ್ರಕ್ಕಿಂತ ಆಟಗಾರರ ಶ್ರಮ ಇಲ್ಲಿ ಪ್ರಮುಖ. ಪ್ರಣಯ್‌, ಚಿರಾಗ್‌, ಸಾತ್ವಿಕ್‌ ಎಲ್ಲರೂ ಅವರ ಪ್ರತಿ ಗೇಮ್‌ಗೂ ಸಿದ್ಧಗೊಳ್ಳುವ ರೀತಿಯೇ ಅದ್ಭುತ. ಪ್ರತಿ ಟೂರ್ನಿಗೆ ತಕ್ಕಂತೆ ಸಿದ್ಧಗೊಳ್ಳುವ ಮನಸ್ಥಿತಿಯೂ ಆಟಗಾರರಿಗೆ ಅಗತ್ಯವಿದೆ. ಅವರ ಮೇಲೆ ನಾವು ಇಡುವ ನಂಬಿಕೆಯೂ ಆಟದ ಮೇಲೆ ಪರಿಣಾಮ ಬೀರುತ್ತದೆ.

-ಪ್ರಣಯ್‌, ಚಿರಾಗ್‌, ಸಾತ್ವಿಕ್‌ ಈ ಮೂವರಲ್ಲಿ ನಿಮಗೆ ತರಬೇತಿಗೆ ಕಷ್ಟವಾಗುವುದು ಯಾರ ಜೊತೆ?

(ಗೋಪಿಚಂದ್) ಸದ್ಯ ಪ್ರಣಯ್‌, ಚಿರಾಗ್‌, ಸಾತ್ವಿಕ್‌ ದೇಶದ ಶ್ರೇಷ್ಠ ಅಥ್ಲೀಟ್‌ಗಳು. ಅವರ ಬದ್ಧತೆ, ಕೌಶಲ್ಯ ನೋಡಿದರೆ ಭಾರತ ಈ ಮೊದಲು ಇಂತಹ ಮೌಲ್ಯಯುತ ಆಟಗಾರರನ್ನು ಪಡೆದಿರಲಿಲ್ಲ ಎಂದು ಭಾವಿಸುತ್ತೇನೆ.

- ನೀವು ಎದುರಿಸಲು ಕಠಿಣ ಎನಿಸುವ ಆಟಗಾರ ಯಾರು?

(ಸಾತ್ವಿಕ್‌) ಎಲ್ಲರೂ ಕಠಿಣ ಸ್ಪರ್ಧಿಗಳೇ. ಆದರೆ ಅದು ಪರಿಸ್ಥಿತಿ ಮೇಲೆ ಅವಲಂಬಿಸಿದೆ. ಅವರನ್ನು ಹೇಗೆ ಎದುರಿಸುವುದು, ಅವರ ಕೊರತೆಯೇನು ಎಂಬ ಸಿದ್ಧತೆಯೊಂದಿಗೇ ಕಣಕ್ಕಿಳಿಯುತ್ತೇವೆ.

(ಚಿರಾಗ್‌) ಮಲೇಷ್ಯಾದ ಆ್ಯರೊನ್ ಚಿಯಾ-ಸೊಹ್‌ ವೂಯ್‌. ಮೊದಲು ಅವರ ವಿರುದ್ಧ ಆಡಿದ 8 ಪಂದ್ಯದಲ್ಲೂ ಸೋತಿದ್ದೆವು. ಆದರೆ ಇಂಡೋನೇಷ್ಯಾ ಓಪನ್‌ ಫೈನಲ್‌ ಬಳಿಕ ಪರಿಸ್ಥಿತಿ ಬದಲಾಯಿತು.

- ಬ್ಯಾಡ್ಮಿಂಟನ್‌ ಹೊರತುಪಡಿಸಿ ನಿಮ್ಮಲ್ಲಿ ಹೆಚ್ಚಿನ ಪ್ರಭಾವ ಬೀರಿದ ಅಥ್ಲೀಟ್‌ಗಳು ಯಾರು?

(ಚಿರಾಗ್‌) ನನ್ನ ಪಾಲಿಗೆ ಉಸೇನ್‌ ಬೋಲ್ಟ್‌ ಮತ್ತು ರಾಫೆಲ್‌ ನಡಾಲ್‌.

(ಸಾತ್ವಿಕ್‌) ರೋಜರ್‌ ಫೆಡರರ್‌ ನನ್ನ ಫೇವರಿಟ್‌ ಆಟಗಾರ. ಪ್ರಣಯ್‌ ಕೂಡಾ ನನ್ನ ಪಾಲಿಗೆ ಸ್ಫೂರ್ತಿ.

(ಪ್ರಣಯ್‌) ಮೆಸ್ಸಿ ನನ್ನ ಪಾಲಿಗೆ ಶ್ರೇಷ್ಠ ಅಥ್ಲೀಟ್‌. ಫುಟ್ಬಾಲ್‌ ಜಗತ್ತಿನ ಮೇಲೆ ಅವರು ಬೀರಿದ ಪ್ರಭಾವ ಅಗಾಧವಾದದ್ದು.

(ಗೋಪಿಚಂದ್) ನಾನು ಇತರ ಕ್ರೀಡೆಗಳನ್ನು ಅಷ್ಟಾಗಿ ಫಾಲೋ ಮಾಡುವುದಿಲ್ಲ. ಆದರೆ ಪ್ರಣಯ್‌, ಚಿರಾಗ್‌, ಸಾತ್ವಿಕ್‌ರ ಸಾಧನೆ, ಒತ್ತಡ ಹಿಮ್ಮೆಟ್ಟಿಸಿ ಆಡುವ ಕೌಶಲ್ಯ ನೋಡಿದರೆ ಇವರು ಮೆಸ್ಸಿ, ರೊನಾಲ್ಡೋ, ನಡಾಲ್‌ಗೆ ಕಡಿಮೆಯೇನಲ್ಲ.

- ನೀವು ಒಲಿಂಪಿಕ್‌ ಟಾಸ್ಕ್‌ ಫೋರ್ಸ್‌ನಲ್ಲೂ ಇದ್ದವರು. ನೀವು ಎದುರಿಸುವ ಪ್ರಮುಖ ಸವಾಲುಗಳೇನು?

(ಗೋಪಿಚಂದ್‌) ಟಾಸ್ಕ್‌ ಫೋರ್ಸ್‌ ಒಂದು ಉತ್ತಮ ಯೋಚನೆ. ಕಳೆದ 10 ವರ್ಷಗಳಲ್ಲಿ ಸ್ವತಃ ಪ್ರಧಾನಿಯೇ ಕ್ರೀಡೆ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ದೇಶದಲ್ಲಿ ಕ್ರೀಡೆಯ ಬೆಳವಣಿಗೆ ಕೂಡಾ ಉತ್ತಮವಾಗಿದೆ. ಏಷ್ಯಾಡ್‌ ಸೇರಿದಂತೆ ಪ್ರಮುಖ ಕ್ರಿಡಾಕೂಟಗಳಲ್ಲೂ ದೇಶದ ಸಾಧನೆ ಗಮನಾರ್ಹ. ಮುಂದೆ ಇನ್ನಷ್ಟು ಸಾಧನೆ ನಮ್ಮಿಂದ ಸಾಧ್ಯವಾಗಬೇಕು.
 

click me!