ಅಗತ್ಯ ಬಿದ್ದರೆ ಸನಾತನ ಸಂಸ್ಥೆ ನಿಷೇಧ! ಕೇಂದ್ರ ಸಚಿವ ರಾಮದಾಸ್ ಅಠವಾಳೆ! ಹಿಂಸಾತ್ಮಕ ಮಾರ್ಗ ತ್ಯಜಿಸುವಂತೆ ಕರೆ! ಚಿಂತಕರ ಹತ್ಯೆಯಲ್ಲಿ ಸಂಘಟನೆ ಭಾಗಿ?! ಆರೋಪ ತಳ್ಳಿ ಹಾಕಿದ ಸನಾತನ ಸಂಸ್ಥೆ
ಮುಂಬೈ(ಆ.28): ಒಂದು ವೇಳೆ ಅಗತ್ಯ ಬಿದ್ದರೆ ಹಿಂದೂ ಬಲಪಂಥೀಯ ಸಂಘಟನೆ ಸನಾತನ ಸಂಸ್ಥೆಯನ್ನು ಶಾಶ್ವತವಾಗಿ ನಿಷೇಧಿಸಲಾಗುವುದು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಬಲವರ್ದನೆ ಖಾತೆ ರಾಜ್ಯ ಸಚಿವ ರಾಮ್ ದಾಸ್ ಅಠಾವಳೆ ತಿಳಿಸಿದ್ದಾರೆ.
ಸನಾತನ ಸಂಸ್ಥೆ ತನ್ನ ಹಿಂಸಾತ್ಮಕ ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿರುವ ಅಠವಾಳೆ, ಒಂದು ವೇಳೆ ಅದು ಪ್ರಗತಿಪರ ಚಿಂತಕರಾದ ಡಾ. ನರೇಂದ್ರ ದಾಬೊಲ್ಕರ್ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವುದು ಸಾಬೀತಾದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ನರೇಂದ್ರ ದಾಬೊಲ್ಕರ್ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ತನ್ನ ಕೈವಾಡ ಇಲ್ಲ ಎಂದು ಈಗಾಗಲೇ ಸನಾತನ ಸಂಸ್ಥೆ ನಿರಾಕರಿಸಿದೆ. ಆದರೆ ಬಂಧಿತರು ನೇರವಾಗಿ ಅಥವಾ ಪರೋಕ್ಷವಾಗಿ ಸಂಘಟನೆ ಜೊತೆಗೆ ಸಂಬಂಧ ಹೊಂದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸನಾತನ ಸಂಸ್ಥೆ ವಕ್ತಾರ ಚೇತನ್ ರಾಜಹನ್ಸ್, ಅನಗತ್ಯವಾಗಿ ಸಂಘಟನೆ ಹೆಸರನ್ನು ಎಳೆದು ತರಲಾಗುತ್ತಿದ್ದು, ಈ ಹತ್ಯೆಗಳಿಗೂ ಸಂಸ್ಥೆಗೂ ಏನು ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.