ಅಮೆರಿಕದಲ್ಲಿ ಕನ್ನಡ ಕಲರವ..! ಮಕ್ಳನ್ನು ಕೂರಿಸಿ ಕನ್ನಡ ಕಲಿಸ್ತಾರೆ ಈ ದಂಪತಿ

By Kannadaprabha NewsFirst Published Dec 20, 2020, 1:24 PM IST
Highlights

ತಾಯ್ನಾಡಿನಲ್ಲಿ ಕನ್ನಡ ಕಲಿಸುವುದಕ್ಕೂ, ಹೊರದೇಶದಲ್ಲಿ ಕನ್ನಡ ಕಲಿಸುವುದಕ್ಕೂ ಸಾಕಷ್ಟುವ್ಯತ್ಯಾಸವಿರುತ್ತದೆ. ಸಂಪೂರ್ಣ ಕನ್ನಡದ ವಾತಾವರಣದಲ್ಲಿ ಬೆಳೆದು, ಊರಿನ ಶಾಲೆಯಲ್ಲಿ ಪ್ರತಿ ನಿತ್ಯವೂ ಕನ್ನಡ ಕಲಿಯುವ ಮಕ್ಕಳೆಲ್ಲಿ?

- ಸವಿತಾ ರವಿಶಂಕರ,‘ಕನ್ನಡ ಕಲಿ’ ತಂಡ, ನಾತ್‌ರ್‍ ಕೆರೋಲೈನ, ಅಮೇರಿಕ

ಹುಟ್ಟೂರಿನ ಸವಿ ನೆನಪುಗಳ ಜೊತೆಗೆ, ತಾಯ್ನಾಡಿನ ಭಾಷೆ ಸಂಸ್ಕೃತಿಗಳ ಅನುಭವವನ್ನು ಹೊತ್ತು, ಸಾಗರದಾಚೆಯ ಅಮೇರಿಕದಲ್ಲಿ ನೆಲೆನಿಂತು ಬದುಕನ್ನು ಕಂಡುಕೊಂಡವರು ಸಹಸ್ರಾರು ಅಮೇರಿಕನ್ನಡಿಗರು. ಆಂಗ್ಲಮಯವಾದ ಹೊರದೇಶದ ಪರಿಸರದಲ್ಲಿ ಕನ್ನಡ ಮಾತು ಕೇಳಿದಾಗ, ಕನ್ನಡದಲ್ಲಿ ಒಡನಾಡಿದಾಗ, ಕನ್ನಡದ ಹಾಡು ಗುನುಗುನಿಸಿದಾಗ ಸಿಗುವ ಆನಂದವನ್ನು ಅನುಭವಿಸಿದಲ್ಲಿ ಕನ್ನಡವು ಬರಿಯ ಭಾಷೆಯಷ್ಟೇ ಆಗದೆ, ಜೀವ ಮಿಡಿತವಾಗುತ್ತದೆ.

ಕಸ್ತೂರಿ ಕನ್ನಡದ ಕಂಪು ನಾವು ಅನುಭವಿಸಿದರಷ್ಟೇ ಸಾಲದು, ನಮ್ಮ ಮಕ್ಕಳೂ ನಮ್ಮ ಭಾಷೆಯ, ಸಂಸ್ಕೃತಿಯ ರಾಯಭಾರಿಗಳಾಗಬೇಕು ಎನ್ನುವ ಧ್ಯೇಯದೊಂದಿಗೆ ನಾರ್ತ್ ಕೆರೋಲೈನ ‘ಕೇರಿ’ ಎನ್ನುವ ಊರಿನಲ್ಲಿ 1996 ರಲ್ಲಿ ಕನ್ನಡ ಶಾಲೆ 10 ಮಕ್ಕಳನ್ನೊಳಗೊಂಡು ರವಿ ಮತ್ತು ಸವಿತಾ ದಂಪತಿಗಳ ಸ್ವಗೃಹದಲ್ಲಿ ಪ್ರಾರಂಭವಾಯಿತು. ನಂತರದ ವರುಷಗಳಲ್ಲಿ ಕನ್ನಡ ಪಾಠ, ಕಲಿಕೆ ಮುಂದುವರೆದಿದ್ದು, ಅಂದು ಬಿತ್ತಿದ ಕನ್ನಡದ ಬೀಜ ಮೊಳಕೆಯೊಡೆದು, 2012 ರಲ್ಲಿ ಹಿರಿದಾಗಿ ‘ಕನ್ನಡ ಕಲಿ’ ಶಾಲೆಯಾಗಿ ರೂಪುಗೊಂಡಿತು.

ರಜಿನಿಕಾಂತ್‌ ಹಾಗೂ ಪತ್ನಿ ಲತಾರ ಇಂಟರೆಸ್ಟಿಂಗ್‌ ಲವ್‌ಸ್ಟೋರಿ!

ತಾಯ್ನಾಡಿನಲ್ಲಿ ಕನ್ನಡ ಕಲಿಸುವುದಕ್ಕೂ, ಹೊರದೇಶದಲ್ಲಿ ಕನ್ನಡ ಕಲಿಸುವುದಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಸಂಪೂರ್ಣ ಕನ್ನಡದ ವಾತಾವರಣದಲ್ಲಿ ಬೆಳೆದು, ಊರಿನ ಶಾಲೆಯಲ್ಲಿ ಪ್ರತಿ ನಿತ್ಯವೂ ಕನ್ನಡ ಕಲಿಯುವ ಮಕ್ಕಳೆಲ್ಲಿ? ಇಂಗ್ಲೀಷುಮಯವಾದ ದೇಶದಲ್ಲಿದ್ದು ವಾರಕ್ಕೊಮ್ಮೆ ಅ ಆ ಇ ಈ ತಿದ್ದುವ ಅಮೇರಿಕನ್ನಡ ಕಂದಮ್ಮಗಳೆಲ್ಲಿ? ಈ ನಿಟ್ಟಿನಲ್ಲಿ ಹೊರನಾಡ ಕನ್ನಡ ಮಕ್ಕಳಿಗೆ ಪಠ್ಯಕ್ರಮ, ಪಾಠ, ಪರೀಕ್ಷೆ ಎಲ್ಲವೂ ವಿಶೇಷ ರೀತಿಯಲ್ಲೇ ಹೊಂದಿಸಬೇಕು. ಅಮೇರಿಕನ್ನಡ ಕಂದಗಳ ಜೀವನಶೈಲಿಯನ್ನು ಗಮನದಲ್ಲಿಟ್ಟು ಕನ್ನಡ ಪಠ್ಯ ಪುಸ್ತಕಗಳನ್ನು ರಚಿಸುವ ಕಾರ್ಯ ಕೈಗೊಂಡವರು ಕ್ಯಾಲಿಫೋರ್ನಿಯಾದ ಶ್ರೀಯುತ ಶಿವು ಗೌಡರ್‌ ರವರು.

ಅವರು ಪ್ರಾರಂಭದಲ್ಲಿ 15 ಮಕ್ಕಳಿಗೆ ಪಾಠ ಕಲಿಸುವ ಜವಾಬ್ದಾರಿಯನ್ನು ಹೊತ್ತರು. ನಂತರದ ವರ್ಷಗಳಲ್ಲಿ ಶಿಕ್ಷಣದ ಜೊತೆಗೆ, ಸರಳವಾದ ಕನ್ನಡವನ್ನು ಬಳಸಿ ಪರಿಪೂರ್ಣವಾದ ಎಂಟು ಪುಸ್ತಕಗಳನ್ನೊಳಗೊಂಡ, ಪಠ್ಯಕ್ರಮವನ್ನು 13 ವರ್ಷಗಳ ಅವಧಿಯಲ್ಲಿ ಶಿವು ಅಭಿವೃದ್ಧಿ ಪಡಿಸಿದರು. ಈ ಪಠ್ಯಕ್ರಮವು ಮೈಸೂರು ವಿಶ್ವವಿದ್ಯಾನಿಲಯದಿಂದ, ಹೊರನಾಡಿನಲ್ಲಿ ಕನ್ನಡ ಶಿಕ್ಷಣಕ್ಕೆ ಅರ್ಹವಾದುದೆಂಬ ಮಾನ್ಯತೆಯನ್ನು ಪಡೆಯಿತು. ಈಗ ವಿಶ್ವದಾದ್ಯಂತ ‘ಕನ್ನಡ ಕಲಿ’ ಶಾಲೆಗಳಲ್ಲಿ ಈ ಪುಸ್ತಕಗಳು ಬಳಸಲ್ಪಡುತ್ತಿವೆ.

300 ರೂಪಾಯಿ ಸೋಪ್ ಕೇಳಿದ ಮಗಳಿಗೆ 30 ರೂಪಾಯಿದು ತಗೋ ಎಂದಿದ್ರು ವೀರೇಂದ್ರ ಹೆಗ್ಗಡೆ

‘ಮನೆಮನೆಗಳಲ್ಲಿ ಮನಮನಗಳಲ್ಲಿ ಹಚ್ಚೇವು ಕನ್ನಡದ ದೀಪ’ ಎನ್ನುವುದು ಕನ್ನಡ ಅಕಾಡೆಮಿಯ ಧ್ಯೇಯ ಮಂತ್ರ. ಜಾಗತಿಕ ಮಟ್ಟದಲ್ಲಿ ಕನ್ನಡ ಶಿಕ್ಷಣಕ್ಕೆ ಮಾನ್ಯತೆಯನ್ನು ಗಳಿಸುವ ಕನಸು ಕಂಡವರು ಮಲೆನಾಡಿನವರಾದ ಮಧು ರಂಗಪ್ಪ ಗೌಡರು. 2012 ರಿಂದ ‘ಕೇರಿ’ ನಾತ್‌ರ್‍ ಕೆರೋಲೈನದ ‘ಕನ್ನಡ ಕಲಿ’ ಶಾಲೆಯ ಸಾರಥ್ಯವನ್ನು ವಹಿಸಿಕೊಂಡ ಮಧು ಕನ್ನಡ ಅಕೆಡೆಮಿಯ ಡೈರೆಕ್ಟರ್‌ ಆಗಿ ಅಕ್ರೆಡಿಟೇಷನ್‌ ಮತ್ತು ರೆಕಗ್ನಿಷನ್‌ ವಿಭಾಗದಲ್ಲಿನ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ.

ನಾರ್ತ್ ಕೆರೋಲೈನದಲ್ಲಿ ವೇಕ್‌ ಕೌಂಟಿಯು ಅತ್ಯಂತ ವಿಸ್ತಾರವಾದ ಶಾಲಾ ವ್ಯವಸ್ಥೆಯನ್ನು ಹೊಂದಿದ್ದು, 188 ಶಾಲೆಗಳನ್ನೊಳಗೊಂಡು ಅಮೇರಿಕದಲ್ಲಿ ಹದಿನಾರನೆಯ ಸ್ಥಾನದಲ್ಲಿದೆ. ವೇಕ್‌ ಕೌಂಟಿಯ ಶಾಲೆಗಳಲ್ಲಿ ಕನ್ನಡ ಭಾಷೆಗೆ ಮಾನ್ಯತೆ ಪಡೆಯುವ ಪ್ರಯತ್ನವನ್ನು ಕಳೆದ ವರ್ಷ ಮಧು ಕೈಗೊಂಡರು. ವಿದೇಶಿ ಭಾಷೆಯ ಮಾನ್ಯತೆಯ ಬಗ್ಗೆ ಪೂರ್ವಾನುಭವ ಹೊಂದಿದ್ದ ಅಮರ್‌ ಸೊಲಾಸ ಸಹಾಯವನ್ನು ಪಡೆದು ಮಧುರವರು ವೇಕ್‌ ಕೌಂಟಿ ವಲ್ಡ್‌ರ್‍ ಲಾಂಗ್ವೇಜ್‌ ಸಂಸ್ಥೆಯನ್ನು ಸಂಪರ್ಕಿಸಿದರು. ಕನ್ನಡ ಪಾಠ ಕಲಿಸುವ ವಿಧಾನ, ಪ್ರಾವೀಣ್ಯತೆ ಪರೀಕ್ಷೆ, ಜ್ಯೋತಿ ನಟರಾಜ್‌ ಮತ್ತು ಕನ್ನಡ ಅಕೆಡಮಿ ಡೈರೆಕ್ಟರ್‌ ಅರುಣ್‌ ಸಂಪತ್‌ ನಿರ್ಮಿಸಿದ ಕನ್ನಡ ಕೌಶಲ್ಯ ಪರೀಕ್ಷೆ ಇತ್ಯಾದಿ ಮಾಹಿತಿಗಳನ್ನು ಸಂಸ್ಥೆಗೆ ಒದಗಿಸಿದರು. ಸ್ಥಳೀಯ ಶೈಕ್ಷಣಿಕ ವ್ಯವಸ್ಥೆಯಲ್ಲಿ ಕನ್ನಡ ಭಾಷೆಯ ಕ್ರೆಡಿಟ್ಟುಗಳಿಗೆ, ಮಾನ್ಯತೆ ಪಡೆಯುವ ಕಾರ್ಯದಲ್ಲಿ ಸಫಲರಾದರು.

ಅಡಲ್ಟ್ ಪೇಜ್ ಜಾಯಿನ್ ಆದ ಭಾರತದ ಮೊಟ್ಟ ಮೊದಲ ನಟಿ, ಸಖತ್ ರೆಸ್ಪಾನ್ಸ್!

ಕನ್ನಡ ಭಾಷೆಯು ಭವ್ಯವಾದ ಇತಿಹಾಸ, ಪರಂಪರೆ, ಸಾಹಿತ್ಯ ಸಿರಿ ಹೊಂದಿದ ಸಾಗರ. ನಾವೆಲ್ಲರೂ ಈ ಶ್ರೇಷ್ಠ ಭಾಷೆಯ ವಾರಸುದಾರರು. ಕನ್ನಡ ಚಟುವಟಿಕೆಗಳು ನಮ್ಮ ದಿನನಿತ್ಯದಲ್ಲಿ ಹಾಸುಹೊಕ್ಕಾಗಬೇಕು. ನಮ್ಮ ಮಕ್ಕಳು ಕನ್ನಡದಲ್ಲಿ ಮಾತಾಡಿ, ಕನ್ನಡ ಓದಿ ಬರೆದು, ಕನ್ನಡ ಅಧ್ಯಯನಗಳಲ್ಲಿ ತೊಡಗಿಸಿಕೊಂಡಲ್ಲಿ ಕನ್ನಡ ಭಾಷೆ ಭವ್ಯವಾಗಿ ಬೆಳೆಯಲು ಸಾಧ್ಯ. ಕನ್ನಡದ ಕಂಪು ವಿಶ್ವದೆಲ್ಲೆಡೆ ಹರಡಬೇಕು ಎನ್ನುವುದು ನಮ್ಮ ಹೃದಯಾಂತರಾಳದ ಆಶಯ.

click me!