ಸಣ್ಣದೆಂದು ನೋವನ್ನು ಕಡೆಗಣಿಸಬೇಡಿ!

By Suvarna Web DeskFirst Published Mar 20, 2018, 4:51 PM IST
Highlights

ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮತ್ತೆ ಮೆತ್ತೆಗೊರಗುವ ತನಕ ಹೆಚ್ಚು ಕಮ್ಮಿ ಹದಿನಾರು ತಾಸು ನಮ್ಮ ಮೈಮನಸ್ಸುಗಳು ದುಡಿಯುತ್ತವೆ ನಮಗಾಗಿ. ಇಂತಿರುವ ನಮ್ಮದೇ ದೇಹ, ಮನಸ್ಸುಗಳ ಆರೋಗ್ಯದ ಬಗ್ಗೆ ನಮಗದೆಷ್ಟು ಅಸಡ್ಡೆ! 

ಸಣ್ಣದೆಂದು ನೋವನ್ನು ಕಡೆಗಣಿಸಬೇಡಿ!

-  ಸುವರ್ಣಿನಿ ಕೊಣಾಲೆ 

ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮತ್ತೆ ಮೆತ್ತೆಗೊರಗುವ ತನಕ ಹೆಚ್ಚು ಕಮ್ಮಿ ಹದಿನಾರು ತಾಸು ನಮ್ಮ ಮೈಮನಸ್ಸುಗಳು ದುಡಿಯುತ್ತವೆ ನಮಗಾಗಿ. ಇಂತಿರುವ ನಮ್ಮದೇ ದೇಹ, ಮನಸ್ಸುಗಳ ಆರೋಗ್ಯದ ಬಗ್ಗೆ ನಮಗದೆಷ್ಟು ಅಸಡ್ಡೆ! 

ಏಳುವಾಗಲೇ ಕಾಡುವ ಸೊಂಟ ನೋವನ್ನೋ ಕಾಲುನೋವನ್ನೋ ಕಡೆಗಣಿಸಿ, ಹತ್ತಾರು ಕಿಲೋಮೀಟರ್ ಪಯಣಿಸಿ, ಆಫೀಸಿನ ಕುರ್ಚಿಯಲ್ಲಿ ಕುಳಿತು, ಬೇಕಾದ್ದೋ ಬೇಡದ್ದೋ ನೂರು ಒತ್ತಡಗಳನ್ನು ಹೊತ್ತು ಮತ್ತೆ ಮರಳುತ್ತೇವೆ. ಇನ್ನು ಸಹಿಸಲಾರೆ ಎಂದ ದಿನ ದೇಹಕ್ಕೊಂದಷ್ಟು ಮಾತ್ರೆಗಳು ಸೇರುತ್ತವೆ. ಮುಂದೇನೆಂಬ ಯೋಚನೆಯೆಲ್ಲ ಇಂದಿಗಿಲ್ಲ. ಹೇಗೂ ಅದು ಇಂದಿಗಲ್ಲವೆಂಬ ವೇದಾಂತ ನಮ್ಮದು. ದೇಹದ ಕರೆಯನ್ನು ನಿರ್ಲಕ್ಷಿಸಬೇಡಿ ಹೆಚ್ಚಿನ ಎಲ್ಲ ಆರೋಗ್ಯದ ಸಮಸ್ಯೆಗಳು ಹುಟ್ಟುವುದು ಮನಸ್ಸಿನಲ್ಲಿ. ಒತ್ತಡ, ಉದ್ವಿಗ್ನತೆ, ಬೇಸರಗಳಿಂದ ಸಮೃದ್ಧವಾದ ನೆಲ ದೊರೆತರೆ ಅನಾರೋಗ್ಯದ ಬೀಜ ಮೊಳಕೆಯೊಡೆಯುತ್ತದೆ. ತನ್ನ ಬೇರುಗಳನ್ನು ಗಟ್ಟಿಗೊಳಿಸುತ್ತಾ ದೇಹದ ಭಾಗಗಳಿಗೆ ಚಾಚುತ್ತಾ ನಿಧಾನಕ್ಕೆ ಸೊಂಪಾಗಿ ಬೆಳೆಯುತ್ತದೆ. ನಿರ್ನಾಳಗ್ರಂಥಿಗಳು, ಹೃದಯ, ರಕ್ತಸಂಚಲನೆ, ಸ್ನಾಯುಗಳು, ನರಮಂಡಲ ಹೀಗೆ ಎಲ್ಲೆಂದರಲ್ಲಿ ಹಬ್ಬುವ  ಬಂದಳಿಕೆ ಅದು. ಆದರೆ ಇದೆಲ್ಲ ಆಗುವ ಮೊದಲೇ ನಮ್ಮ ದೇಹ ನಮಗೆ ತಿಳಿಸುತ್ತದೆ. ಆದರೆ ನಾವು ಅಲಾರ್ಮ್ ಸ್ನೂಜ್ ಮಾಡಬಾರದು.

ಪುಟ್ಟ ಮಗುವಿಗೆ ತನಗೇನು ಬೇಕು ಎಂದು ಹೇಳಲು ತಿಳಿಯುವುದಿಲ್ಲ. ಅಮ್ಮ ಗಮನಿಸುತ್ತಾಳೆ, ಬೇಕಾದ್ದನ್ನುಬೇಕಾದಾಗ ಮಾಡುತ್ತಾಳೆ. ಇಲ್ಲೂ ಹಾಗೆ. ದೇಹಕ್ಕೆ 

ಸೂಕ್ತವಾದದ್ದನ್ನು ಕೊಡಬೇಕು, ಮಾಡಬೇಕು. ನಮ್ಮ ದೇಹದಲ್ಲಾಗುವ ಅತಿ ಸಣ್ಣ ಬದಲಾವಣೆಗಳನ್ನೂ ಗಮನಿಸಬೇಕು. ಅದು ಏನೋ ಹೇಳಲು

ಪ್ರಯತ್ನಿಸುತ್ತಿರಬಹುದು. 

ಏನೇನೆಲ್ಲ ಸೂಚನೆಗಳು? 

ಪದೇಪದೇ ಬರುವ ಸೊಂಟನೋವು ಮುಂದೆ ಸ್ಪಾಂಡಿಲೋಸಿಸ್‌ನಲ್ಲಿ ಕೊನೆಗೊಳ್ಳಬಹುದು. ಸಣ್ಣಗೆ ಕಾಡುವ ತಲೆನೋವು ರಕ್ತದೊತ್ತಡ ಹೆಚ್ಚುತ್ತಿರುವುದನ್ನು

ಹೇಳುತ್ತಿರಬಹುದಲ್ಲ? ಮೆಟ್ಟಿಲು ಹತ್ತುವಾಗ ಶಬ್ದ ಮಾಡುವ ಮಂಡಿ ಆರ್ಥ್ರೈಟಿಸ್ ದೂರವಿಲ್ಲ ಎಂದಿರಬಹುದೇ? 

ತಡೆಯಲಾರದ ಕುತ್ತಿಗೆ ನೋವು ಮನಸ್ಸಿನ ಒತ್ತಡ ಕಡಿಮೆ ಮಾಡಿಕೋ ಎನ್ನುತ್ತಿರಬಹುದು! ಹಾಗೆಂದು ಭಯಗೊಳ್ಳಬೇಕಿಲ್ಲ. ನಮ್ಮ ದೇಹಕ್ಕೆ ತನ್ನನ್ನು 

ತಾನು ಗುಣಪಡಿಸಿಕೊಳ್ಲುವ ಶಕ್ತಿಯೂ ಇದೆ. ನಾವೊಂದಷ್ಟು ಸಹಕರಿಸಬೇಕು ಅಷ್ಟೇ. Prevention is better than cure ಎಂಬುದು ನಮ್ಮ ಆರೋಗ್ಯಕ್ಕೆ ಸೂಕ್ತವಾಗಿ ಅನ್ವಯಿಸುವ ಮಾತು. ಸಮಸ್ಯೆಯುಂಟಾದ ಮೇಲೆ ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಅನಿವಾರ್ಯ. ಆದರೆ ಆ ಅನಿವಾರ್ಯತೆ ಉಂಟಾಗದಂತೆ ತಡೆಯುವ ಮಾರ್ಗವೊಂದಿದ್ದರೆ ಅದನ್ನೇಕೆ ಅನುಸರಿಸಬಾರದು? 'ಸ್ವಾಸ್ಥ್ಯ ಎಂದರೆ ರೋಗವಿಲ್ಲದಿರುವಿಕೆ ಮಾತ್ರವಲ್ಲ. ದೈಹಿಕ, ಮಾನಸಿಕ, ಬೌದ್ಧಿಕ, ಅಧ್ಯಾತ್ಮಿಕ ಸ್ತರಗಳಲ್ಲಿ ಉತ್ತಮ ಆರೋಗ್ಯವನ್ನು ಹೊಂದಿರುವುದು' ಎಂದು ವ್ಯಾಖ್ಯಾನಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆ. ಹಾಗಾದರೆ ಈ ಸ್ವಾಸ್ಥ್ಯವನ್ನು ಪಡೆಯುವುದು ಹೇಗೆ? ಸರಿಯಾದ ಆಹಾರ ಮತ್ತು ವಿಶ್ರಾಂತಿ, ಈ ಎರಡು ಅಂಶಗಳು ನಮ್ಮ ಆರೋಗ್ಯದ ಎಲ್ಲ ಆಯಾಮಗಳ ಯೋಗಕ್ಷೇಮವನ್ನೂ ನೋಡಿಕೊಳ್ಳುತ್ತದೆ. ಅದು ದೇಹಕ್ಕಿರಲಿ, ಮನಸ್ಸಿಗಿರಲಿ.  ನಿತ್ಯ ಒಂದಿಲ್ಲೊಂದು ನೋವು ಕಾಡುತ್ತಿರುತ್ತದೆ. ಒಂದು ಮಾತ್ರೆ ನುಂಗಿ ಆ ಸಮಸ್ಯೆಯನ್ನು ತಾತ್ಕಾಲಿಕವಾಗಿ ಮುಂದೂಡುತ್ತೇವೆ. ಆದರೆ, ಅವೇ ಮುಂದೆ ದೊಡ್ಡ ರೋಗಗಳಿಗೆ ಕಾರಣವಾಗಬಹುದು!

click me!