ನಿರುದ್ಯೋಗಿಗಳಿಗೆ ಸಂತಸದ ಸುದ್ದಿ ನೀಡಿದ ಆನಂದ ಸಿಂಗ್‌

By Kannadaprabha NewsFirst Published Sep 12, 2020, 12:28 PM IST
Highlights

ಅರಣ್ಯ ಇಲಾಖೆಗೆ 3085 ಹೊಸ ಹುದ್ದೆ: ಈ ವರ್ಷದಿಂದ ಭರ್ತಿ| ಅರಣ್ಯ ಹುತಾತ್ಮರ ದಿನದಲ್ಲಿ ಸಚಿವ ಆನಂದ ಸಿಂಗ್‌ ಹೇಳಿಕೆ| ದೇಶದ ಗಡಿಯಲ್ಲಿ ಸೈನಿಕರಂತೆ ಅರಣ್ಯಗಳ ಗಡಿಯಲ್ಲಿ ತಮ್ಮ ಪ್ರಾಣ ಪಣಕ್ಕಿಟ್ಟು ವನ್ಯ ಸಂಪತ್ತನ್ನು ಕಾಯುತ್ತಿರುವ ಅರಣ್ಯ ರಕ್ಷಣಾ ಸಿಬ್ಬಂದಿ ಕಾರ್ಯ ಅತ್ಯಂತ ಶ್ಲಾಘನೀಯ| 

ಬೆಂಗಳೂರು(ಸೆ.12): ಅರಣ್ಯ ಸಂಪತ್ತನ್ನು ಸಂರಕ್ಷಿಸಲು ಮತ್ತು ಇಲಾಖೆಯನ್ನು ಮತ್ತಷ್ಟು ಸದೃಢಗೊಳಿಸಲು ವಿವಿಧ ಹಂತದ 3085 ಹುದ್ದೆಗಳನ್ನು ಸೃಜನೆ ಮಾಡಿದ್ದು, ಪ್ರಸಕ್ತ ಸಾಲಿನಿಂದ ಭರ್ತಿ ಮಾಡಲು ಅನುಮತಿ ನೀಡಿರುವುದಾಗಿ ಅರಣ್ಯ ಸಚಿವ ಆನಂದ್‌ ಸಿಂಗ್‌ ತಿಳಿಸಿದ್ದಾರೆ.

ಮಲ್ಲೇಶ್ವರದ ಅರಣ್ಯ ಭವನದಲ್ಲಿ ಶುಕ್ರವಾರ ನಡೆದ ‘ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ’ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಅರಣ್ಯ ಸಂಪತ್ತು ರಕ್ಷಣೆ ಮಾಡುವುದಕ್ಕಾಗಿ ಇಲಾಖೆಗೆ ಮತ್ತಷ್ಟು ಸಿಬ್ಬಂದಿ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಹೆಚ್ಚು ಹುದ್ದೆಗಳನ್ನು ಸೃಷ್ಟಿಸಿದ್ದು, ನೇಮಕ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದರು. ಇದೇ ವೇಳೆ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಮೃತಪಟ್ಟಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಹಿಂದೆ ನೀಡಲಾಗುತ್ತಿದ್ದ 20 ಲಕ್ಷ ರು.ಗಳ ಪರಿಹಾರವನ್ನು 30 ಲಕ್ಷ ರು.ಗಳಿಗೆ ಹೆಚ್ಚಳ ಮಾಡಲಾಗಿದೆ ಎಂದರು.

ನಿರುದ್ಯೋಗಿಗಳಿಗೆ ಸಿಹಿ ಸುದ್ದಿ: ಭಾರತೀಯ ವಾಯುಸೇನೆ ನೇಮಕಾತಿ ರ‌್ಯಾಲಿ

ಶಾಶ್ವತ ಅಂಗವಿಕಲತೆಗೆ ಗುರಿಯಾಗದರೆ 10 ಲಕ್ಷ, ಗಂಭೀರ ಸ್ವರೂಪದ ಗಾಯವಾದಲ್ಲಿ 2 ಲಕ್ಷ ಮತ್ತು 10 ಲಕ್ಷ ರು.ಗಳ ವಿಶೇಷ ವಿಮೆ ನೀಡಲಾಗಿದೆ. ಹಂಗಾಮಿ ನೌಕರರಿಗೆ 5 ಲಕ್ಷ ರು.ಗಳ ವಿಮಾ ಪರಿಹಾರ ನೀಡಲಾಗುತ್ತಿದೆ. ಅಲ್ಲದೆ, ಹುತಾತ್ಮರ ಕುಟುಂಬಗಳಿಗೆ ನೆರವಾಗಲು ‘ಅರಣ್ಯ ಹುತಾತ್ಮರ ದಿನಾಚರಣೆ ಸಮಿತಿ’ ರಚಿಸಿದ್ದು, ಇಲ್ಲಿ ಸಂಗ್ರಹವಾಗುವ ಹಣವನ್ನು ಹುತಾತ್ಮರ ಮಕ್ಕಳ ವಿದ್ಯಾಭ್ಯಾಸ ಮತ್ತು ವಿದ್ಯಾರ್ಥಿವೇತನಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ದೇಶದ ಗಡಿಯಲ್ಲಿ ಸೈನಿಕರಂತೆ ಅರಣ್ಯಗಳ ಗಡಿಯಲ್ಲಿ ತಮ್ಮ ಪ್ರಾಣ ಪಣಕ್ಕಿಟ್ಟು ವನ್ಯ ಸಂಪತ್ತನ್ನು ಕಾಯುತ್ತಿರುವ ಅರಣ್ಯ ರಕ್ಷಣಾ ಸಿಬ್ಬಂದಿ ಕಾರ್ಯ ಅತ್ಯಂತ ಶ್ಲಾಘನೀಯ. ಸೈನಿಕರ ಮಾದರಿಯಲ್ಲಿ ಅರಣ್ಯ ಗಡಿಗಳಲ್ಲಿ ಅರಣ್ಯ ರಕ್ಷಕರು ಬಿಸಿಲು, ಮಳೆ, ಚಳಿ, ಪ್ರಾಣಿ ದಾಳಿ ಹಾಗೂ ಕಾಡುಗಳ್ಳರ ಕಾಟದ ನಡುವೆ ತಮ್ಮ ಪ್ರಾಣ ಮುಡಿಪಿಟ್ಟು ವನ್ಯಸಂಪತ್ತನ್ನು ಕಾಯುತ್ತಿದ್ದಾರೆ ಎಂದರು.
 

click me!