
ನವದೆಹಲಿ (ಫೆ.15): ಭಾರತ ಮತ್ತು ಪಾಕಿಸ್ತಾನದ ಪಡೆಗಳ ನಡುವಿನ ಭೂ ಗಡಿಯಲ್ಲಿನ ಕದನ ವಿರಾಮವು ಸದ್ಯಕ್ಕೆ ಫಲ ನೀಡಿದೆ. ಎರಡೂ ಕಡೆಗಳಿಂದ ಯಾವುದೇ ಘಟನೆಗಳು ನಡೆಯುತ್ತಿಲ್ಲ. ಆದರೆ, ಭಾರತ ಹಾಗೂ ಪಾಕಿಸ್ತಾನದ ಮಟ್ಟಿಗೆ ಆಯಕಟ್ಟಿನ ಅತೀಮುಖ್ಯ ಸ್ಥಳವಾದ ಸರ್ ಕ್ರೀಕ್ ಪ್ರದೇಶದಲ್ಲಿ ಭಾರತದ ಗಡಿ ಭದ್ರತಾ ಪಡೆ ಹಾಗೂ ಪಾಕಿಸ್ತಾನ ನೌಕಾಪಡೆಯ ಮರೀನ್ಸ್ ಸೈನಿಕರು ನೇರವಾಗಿ ಮುಖಾಮುಖಿಯಾಗಿದ್ದಾರೆ. ಸರ್ ಕ್ರೀಕ್ ಪ್ರದೇಶದ ಭಾರತದ ನೀರಿನ ವಲಯದಲ್ಲಿ ಭಾರತ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದರೆ, ಅದಕ್ಕೆ ಪಾಕಿಸ್ತಾನದ ಮರೀನ್ಸ್ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಇದೇ ನೀರಿನಲ್ಲಿ ಪಾಕಿಸ್ತಾನದ ಮರೀನ್ಸ್ ತನ್ನ ಮೀನುಗಾರರಿಗೆ ಮೀನುಗಾರಿಕೆ ನಡೆಸಲು ಅನುಮತಿ ನೀಡಿರುವುದಕ್ಕೆ ಭಾರತ ಕೂಡ ತಕ್ಕ ಉತ್ತರ ನೀಡಿದೆ. ಇದರಿಂದಾಗಿ ಒಂದು ವಾರದ ಹಿಂದೆ ಉಭಯ ದೇಶಗಳ ಸೇನೆಗಳು ತಮ್ಮ ಸೈನಿಕರು ಹಾಗೂ ಸೇನಾ ಸಂಪನ್ಮೂಲಗಳನ್ನು ಈ ವಲಯದಲ್ಲಿ ನಿಯೋಜಿಸಿದ್ದಾರೆ.
ಭಾರತದ ಆವಾಸಸ್ಥಾನ ಸುಧಾರಣೆ ಯೋಜನೆಗಳಿಗೆ ಪಾಕಿಸ್ತಾನಿ ನೌಕಾಪಡೆ ಆಕ್ಷೇಪ ವ್ಯಕ್ತಪಡಿಸಿದ ನಂತರ ಸರ್ ಕ್ರೀಕ್ ಪ್ರದೇಶದಲ್ಲಿ ಪರಿಸ್ಥಿತಿ ಬದಲಾಗಲು ಆರಂಭವಾಗಿದೆ ಎಂದು ಭದ್ರತಾ ಸಂಸ್ಥೆಯ ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಬಿಎಸ್ಎಫ್ ತನ್ನ ಸ್ವಂತ ಭಾಗದಲ್ಲಿ ಆವಾಸಸ್ಥಾನಗಳನ್ನು ಸುಧಾರಿಸಲು ಪ್ರಾರಂಭಿಸಿದಾಗ, ಪಾಕಿಸ್ತಾನಿ ನೌಕಾಪಡೆಯು ಅದನ್ನು ವಿರೋಧಿಸಿತು. ಅದರೊಂದಿಗೆ ತನ್ನ ವೇಗದ ದಾಳಿಗೆ ಅನುಕೂಲವಾಗಬಲ್ಲ ದೋಣಿ (ಎಎಫ್ಸಿ) ಮತ್ತು ಇತರ ಸಾಮಾನ್ಯ ದೋಣಿಗಳನ್ನು ಈ ವಲಯದಲ್ಲಿ ಸಜ್ಜುಗೊಳಿಸಿದೆ. ಪ್ರತಿಯಾಗಿ ಭಾರತ ಕೂಡ ಇದೇ ರೀತಿಯಲ್ಲಿ ಸೇನಾಪಡೆಯನ್ನು ಸಜ್ಜು ಮಾಡಿದ್ದರಿಂದ ಪಾಕಿಸ್ತಾನಕ್ಕೆ ಸೂಕ್ತ ಉತ್ತರ ನೀಡಿದೆ ಎಂದು ಮೂಲಗಳು ತಿಳಿಸಿವೆ. ಮರಿನ್ಸ್ ಎನ್ನುವುದು ಪಾಕಿಸ್ತಾನದ ನೌಕಾಪಡೆಯ ಭಾಗವಾಗಿರುವ ಸೇನಾಪಡೆಯಾಗಿದೆ.
ಪಾಕ್ ಉಗ್ರರ ಸುರಂಗ ಪತ್ತೆಗೆ ಡ್ರೋನ್ ರಾಡಾರ್ ನಿಯೋಜಿಸಿದ ಬಿಎಸ್ಎಫ್
98 ಕಿಮೀ ಉದ್ದದ ಕಿರಿದಾದ ನೀರಿನ ಕಣಿವೆಯ ಉದ್ದಕ್ಕೂ ಉದ್ವಿಗ್ನ ಪರಿಸ್ಥಿತಿಯನ್ನು ಶಾಂತಗೊಳಿಸಲು ಸ್ಥಳೀಯ ಮಟ್ಟದಲ್ಲಿ ಎರಡು ಕಡೆಯ ನಡುವೆ ಹಲವಾರು ಸುತ್ತಿನ ಸಭೆಗಳನ್ನು ನಡೆಸಲಾಗಿದೆ. ಪ್ರಸ್ತುತ, ಬಿಎಸ್ಎಫ್ ಫ್ಲೋಟಿಂಗ್ ಬಾರ್ಡರ್ ಔಟ್ ಪೋಸ್ಟ್ಗಳು ಮತ್ತು ಸೀಮಿತ ಸಂಖ್ಯೆಯ ಎಫ್ಎಸಿಗಳೊಂದಿಗೆ ಈ ಪ್ರದೇಶವನ್ನು ನಿರ್ವಹಿಸುತ್ತದೆ. ತೇಲುವ ಅಥವಾ ಫ್ಲೋಟಿಂಗ್ ಬಾರ್ಡರ್ ಔಟ್ ಪೋಸ್ಟ್ಗಳು ಕಾರ್ಯಾಚರಣೆಯನ್ನು ಕೈಗೊಳ್ಳಲು ಉದ್ದೇಶಿಸಲಾದ ಹಡಗುಗಳಾಗಿವೆ. ಭೂಪ್ರದೇಶದ ಮೇಲಿದ್ದರೆ ಅದನ್ನು ಗಡಿ ಹೊರಠಾಣೆ ಎನ್ನಲಾಗುತ್ತದೆ.
ಬಿಎಸ್ಎಫ್ ಗುಜರಾತ್ ಸೆಕ್ಟರ್ ತನ್ನ ನೆಲೆಯನ್ನು ಹೆಚ್ಚಿಸುವ ಉದ್ದೇಶದಿಂದ ಸರ್ ಕ್ರೀಕ್ ಮತ್ತು ಹರಾಮಿ ನಲ್ಲಾ ಪ್ರದೇಶದ ಉದ್ದಕ್ಕೂ ಶಾಶ್ವತ ನೆಲೆಗಳನ್ನು ಈಗಾಗಲೇ ಸ್ಥಾಪನೆ ಮಾಡಿದೆ.
ಭಾರತದೊಳಗೆ ನುಗ್ಗಲು 30ರ ಉಗ್ರ ಸಂಚು: ಪಾಕ್ ನುಸುಳುಕೋರನನ್ನು ಹತ್ಯೆಗೈದ ಬಿಎಸ್ಎಫ್
ಬಿಎಸ್ಎಫ್ ಗುಜರಾತ್ ವಲಯವು ರಾಜಸ್ಥಾನದ ಬಾರ್ಮರ್ನಿಂದ ಗುಜರಾತ್ನ ರಣ್ ಆಫ್ ಕಚ್ ಮತ್ತು ಕ್ರೀಕ್ ಪ್ರದೇಶದ 862-ಕಿಮೀ ಉದ್ದದ ಭಾರತ-ಪಾಕ್ ಅಂತರಾಷ್ಟ್ರೀಯ ಗಡಿಯನ್ನು ಕಾಯುವ ಜವಾಬ್ದಾರಿಯನ್ನು ಹೊಂದಿದೆ. ಸ್ವಾತಂತ್ರ್ಯದ ನಂತರ ಪಾಕಿಸ್ತಾನದೊಂದಿಗೆ ಕಾಶ್ಮೀರ, ಸಿಯಾಚಿನ್ ಮತ್ತು ಸರ್ ಕ್ರೀಕ್ ವಿಚಾರದಲ್ಲಿ ಗಡಿ ವಿವಾದಗಳಿದ್ದೂ ಇನ್ನೂ ಬಗೆಹರಿದಿಲ್ಲ.
ಪಾಕಿಸ್ತಾನದ ಸಿಂಧ್ ಮತ್ತು ಭಾರತದ ಗುಜರಾತ್ ನಡುವಿನ ಗಡಿರೇಖೆಯ ಬಗ್ಗೆ ಉಭಯ ದೇಶಗಳು ವಿವಾದಗಳನ್ನು ಹೊಂದಿವೆ. ಕಠಿಣ ಹವಾಮಾನ ಮತ್ತು ಭೂಪ್ರದೇಶವನ್ನು ಹೊಂದಿರುವ ಈ ಪ್ರದೇಶವು 1965 ರಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಯುದ್ಧಕ್ಕೆ ಸಾಕ್ಷಿಯಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ