ಪುಣೆ: 2012ರಲ್ಲಿ ಪುಣೆಯಲ್ಲಿ ಸಂಭವಿಸಿದ್ದ ಸರಣಿ ಸ್ಫೋಟ ಪ್ರಕರಣದಲ್ಲಿ ಆರೋಪಿಗಳಲ್ಲಿ ಒಬ್ಬನಾಗಿದ್ದ ಬಂಟಿ ಜಹಗೀರ್ ದಾರ್ ಅಲಿ ಯಾಸ್ ಅಸ್ಲಾಂ ಶಬ್ಬಿರ್ ಶೇಖ್ನನ್ನು ಅನಾಮಿಕ ವ್ಯಕ್ತಿಗಳು ಗುರುವಾರ ನಡು ರಸ್ತೆಯಲ್ಲೇ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. బంಟಿ ಜಹಗೀರ್ ದಾರ್ ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ರಾಜಕೀಯ ದ್ವೇಷ ಸೇರಿದಂತೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಇಬ್ಬರು ದಾಳಿಕೋರರನ್ನು ವಶಕ್ಕೆ ಪಡೆಯಲಾಗಿದೆ. ಕೊಲೆ, ಕ್ರಿಮಿನಲ್ ಸಂಚು, ಸುಲಿಗೆ, ಭಯೋತ್ಪಾದನೆ ಸೇರಿ 18 ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಶಬೀರ್, ಈ ಪ್ರಕರಣಗಳಲ್ಲಿ ಜಾಮೀನು ಪಡೆದು ಬಿಡುಗಡೆಯಾಗಿ ಬಂದಿದ್ದ ವೇಳೆ ಈ ಘಟನೆ ನಡೆದಿದೆ. ಶಿಕ್ಷೆಗೂ ಗುರಿಯಾಗಿದ್ದ ಶಬೀರ್, ಪುಣೆ ಸ್ಫೋಟ ಪ್ರಕರಣದಲ್ಲೂ 2023ರಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಗೆ ಬಂದಿದ್ದ. ಡಿ.31ರ ಬುಧವಾರ ಪುಣೆಯ ಅಹಿಲ್ಯಾನಗ ರದ ಬಳಿ ಸ್ಮಶಾನದಿಂದ ಬೈಕ್ನಲ್ಲಿ ಆಗಮಿಸುತ್ತಿದ್ದ ವೇಳೆ, ಮತ್ತೊಂದು ಬೈಕ್ನಲ್ಲಿ ಬಂದು ಇಬ್ಬರು ಅನಾಮಿಕರು ಶಬ್ಬಿರ್ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಈ ವೇಳೆ ಬಂಟಿ ದೇಹಕ್ಕೆ 2 ಗುಂಡುಗಳು ಹೊಕ್ಕಿವೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಆತ ಸಾವನ್ನಪ್ಪಿದ್ದಾನೆ.
