ಬೇಸಿಗೆಯಲ್ಲಿ ಬೆಂಡಿಳಿಸೋ ಕಾಯಿಲೆಗಳು ಇವೇ ನೋಡಿ!

By Anusha ShettyFirst Published Mar 20, 2021, 4:29 PM IST
Highlights

ಬಿಸಿಲ ಝುಳ,ಅಶುದ್ಧನೀರಿನ ಕಾರಣಕ್ಕೆ ಬೇಸಿಗೆಯಲ್ಲಿ ಕೆಲವು ನಿರ್ದಿಷ್ಟ ಕಾಯಿಲೆಗಳು ಕಾಣಿಸಿಕೊಳ್ಳೋದು ಕಾಮನ್‌.ಬೇಸಿಗೆಯಲ್ಲಿ ಕಾಡೋ ಕಾಯಿಲೆಗಳು ಯಾವುವು? ಅವು ಬಾರದಂತೆ ಮುನ್ನೆಚ್ಚರಿಕೆ ವಹಿಸೋದು ಹೇಗೆ?

ಬೇಸಿಗೆ ಪ್ರಾರಂಭವಾದ ತಕ್ಷಣ ಒಂದಿಷ್ಟು ಕಾಯಿಲೆಗಳು ಕೂಡ ದಾಂಗುಡಿ ಇಡುತ್ತವೆ.ಕೆಲವೊಂದು ಕಾಯಿಲೆಗಳು ಈ ಋತುವಿನಲ್ಲಿ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತವೆ.ಇದಕ್ಕೆ ಕಾರಣ ಕಲುಷಿತ ನೀರು,ಸೂರ್ಯನ ತೀಕ್ಷ್ಣ ಕಿರಣಗಳು. ಹಾಗಾದ್ರೆ ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳೋ ರೋಗಗಳು ಯಾವುವು? ಅವು ಬಾರದಂತೆ ತಡೆಯಲು ಯಾವೆಲ್ಲ ಮುನ್ನೆಚ್ಚರಿಕೆ ವಹಿಸಬೇಕು?

ಪ್ರತಿದಿನ ಬೆಳಗ್ಗೆ ನೆನೆಸಿದ ಅಂಜೂರವನ್ನು ಏಕೆ ಸೇವಿಸಬೇಕು?

ಡಿಹೈಡ್ರೇಷನ್
ಯಾವಾಗ ನಮ್ಮ ಶರೀರದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತೋ ಆಗ ಡಿಹೈಡ್ರೇಷನ್‌ ಉಂಟಾಗುತ್ತೆ. ಬೇಸಿಗೆಯಲ್ಲಿ ದೇಹ ಬೆವರೋ ಕಾರಣ ದೇಹದಿಂದ ನೀರು ದೊಡ್ಡ ಪ್ರಮಾಣದಲ್ಲಿ ನಷ್ಟವಾಗುತ್ತೆ. ಇದ್ರಿಂದ ಡಿಹೈಡ್ರೇಷನ್‌ ಅಥವಾ ನಿರ್ಜಲೀಕರಣ ಕಾಡುತ್ತೆ.
ಲಕ್ಷಣಗಳು
-ಸದಾ ಬಾಯಾರಿಕೆ. ಎಷ್ಟು ನೀರು ಕುಡಿದ್ರೂ ಸಾಲದು.
-ಪದೇಪದೆ ಮೂತ್ರ ವಿಸರ್ಜನೆ.
-ತಲೆನೋವು
-ಗಮನ ಕೇಂದ್ರೀಕರಿಸಲು ಸಾಧ್ಯವಾಗದಿರೋದು
ತಡೆ ಹೇಗೆ?
ಕೆಲವರಿಗೆ ತುಂಬಾ ಬಾಯಾರಿಕೆಯಾದಾಗ ಮಾತ್ರ ನೀರು ಕುಡಿಯೋ ಅಭ್ಯಾಸವಿರುತ್ತೆ. ಆದ್ರೆ ಹೀಗೆ ಮಾಡೋದ್ರಿಂದ ಎಷ್ಟು ಬಾರಿ ದೇಹಕ್ಕೆ ಅಗತ್ಯವಿರುವಷ್ಟು ನೀರು ಪೂರೈಕೆಯಾಗೋದಿಲ್ಲ. ಆದಕಾರಣ ಬಾಯಾರಿಕೆ ಆಗಲಿ, ಬಿಡಲಿ ಗಂಟೆಗೋ, ಅರ್ಧಗಂಟೆಗೋ ಒಮ್ಮೆ ನೀರು ಕುಡಿಯಬೇಕು. ಜ್ಯೂಸ್‌, ಎಳನೀರು, ಮಜ್ಜಿಗೆ ಹೀಗೆ ದ್ರಾವಾಹಾರಗಳನ್ನು ಸೇವಿಸೋದ್ರಿಂದ ಕೂಡ ದೇಹಕ್ಕೆ ನೀರು ಲಭಿಸುತ್ತೆ. ಬೇಸಿಗೆಯಲ್ಲಿ ಹೇರಳವಾಗಿ ಸಿಗೋ ಕಲ್ಲಂಗಡಿ, ಮಾವಿನಹಣ್ಣು, ದ್ರಾಕ್ಷಿ ಮುಂತಾದ ಹಣ್ಣುಗಳು, ಸೌತೆಕಾಯಿ, ಸೊರೆಕಾಯಿಯಂತಹ ನೀರಿನಂಶ ಹೆಚ್ಚಿರೋ ತರಕಾರಿಗಳನ್ನು ಹೆಚ್ಚಾಗಿ ತಿನ್ನಿ. ಇದ್ರಿಂದ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಲಭಿಸುತ್ತೆ.

ಸನ್‌ ಸ್ಟ್ರೋಕ್
ತಾಪಮಾನ ೪೦ ಡಿಗ್ರಿ ದಾಟಿದ ಸಂದರ್ಭದಲ್ಲಿ ಸನ್‌ ಸ್ಟ್ರೋಕ್‌ಗೊಳಗಾಗೋ ಸಾಧ್ಯತೆ ಹೆಚ್ಚಿರುತ್ತೆ. ಹೀಗಾಗಿ ಬಿಸಿಲ ಬೇಗೆ ಹೆಚ್ಚಿರೋ ಸಮಯದಲ್ಲಿ ಜಾಸ್ತಿ ಹೊತ್ತು ಹೊರಗಡೆ ಕೆಲಸ ಮಾಡೋದ್ರಿಂದ ಡಿಹೈಡ್ರೇಷನ್‌ ಉಂಟಾಗೋ ಜೊತೆ ದೇಹದ ಒಳಗಿನ ತಾಪಮಾನ ನಿಯಂತ್ರಣಕ್ಕೆ ಬರೋದಿಲ್ಲ. ಇದ್ರಿಂದ ಸನ್‌ ಸ್ಟ್ರೋಕ್‌ ಉಂಟಾಗುತ್ತೆ. ಇದು ಮಿದುಳಿನ ಜೀವಕೋಶಗಳಿಗೆ ಹಾನಿ ಮಾಡುತ್ತೆ.
ಲಕ್ಷಣಗಳು
-ತೀಕ್ಷ್ಣ ತಲೆನೋವು
-ತಲೆ ಸುತ್ತೋದು
-ಸ್ನಾಯು ಸೆಳೆತ
-ಹೃದಯ ಬಡಿತದಲ್ಲಿ ಹೆಚ್ಚಳ
ತಡೆ ಹೇಗೆ?
ಸನ್‌ಸ್ಟ್ರೋಕ್‌ ಬಾರದಂತೆ ತಡೆಯಲು ಯಥೇಚ್ಛವಾಗಿ ನೀರು ಹಾಗೂ ದ್ರಾವಾಹಾರಗಳನ್ನು ಸೇವಿಸಬೇಕು. ಹೊರಗೆ ಹೋಗೋವಾಗ ಮರೆಯದೆ ಛತ್ರಿ ಬಳಸಿ. ಮಧ್ಯಾಹ್ನ ೧೧ರಿಂದ ೪ ಗಂಟೆ ನಡುವಿನಲ್ಲಿ ಹೊರಗೆ ಹೋಗೋದನ್ನು ಆದಷ್ಟು ತಪ್ಪಿಸಿ. ಈ ಸಮಯದಲ್ಲಿ ಸೂರ್ಯನ ಕಿರಣಗಳು ತೀಕ್ಷ್ಣವಾಗಿರುತ್ತವೆ. ಹತ್ತಿ ಬಟ್ಟೆಗಳನ್ನೇ ಧರಿಸಿ.

ಅನಿಯಮಿತ ಋತುಸ್ರಾವಕ್ಕೆ ಈ ಮನೆಮದ್ದುಗಳೇ ಬೆಸ್ಟ್ ರೀ!

ವಾಂತಿ, ಭೇದಿ
ಬೇಸಿಗೆಯಲ್ಲಿ ವಾಂತಿ, ಭೇದಿ ಕಾಣಿಸಿಕೊಳೋದು ಸಾಮಾನ್ಯ. ಇದಕ್ಕೆ ಕಾರಣ ಕಲುಷಿತ ನೀರು ಮತ್ತು ಆಹಾರ ಸೇವನೆ. ಬೇಸಿಗೆಯಲ್ಲಿ ನೀರು ಕಲುಷಿತಗೊಂಡಿರೋ ಕಾರಣ ಕುದಿಸದ ನೀರನ್ನು ಕುಡಿಯೋದ್ರಿಂದ ವಾಂತಿ, ಭೇದಿ ಕಾಣಿಸಿಕೊಳ್ಳೋ ಸಾಧ್ಯತೆ ಹೆಚ್ಚಿರುತ್ತೆ. ಇನ್ನು ಬಿಸಿಲಿನ ಸಮಯದಲ್ಲಿ ಬ್ಯಾಕ್ಟೀರಿಯಾಗಳು ಬೇಗ ದ್ವಿಗುಣಗೊಳ್ಳೋ ಕಾರಣ ಬೇಯಿಸಿದ ಆಹಾರಗಳು ಬೇಗ ಹಾಳಾಗುತ್ತವೆ. ಶಾಖ ಹೆಚ್ಚಿರೋ ವಾತಾವರಣದಲ್ಲಿ ಬ್ಯಾಕ್ಟೀರಿಯಾಗಳು ಬೇಗ ಬೆಳವಣಿಗೆ ಹೊಂದುತ್ತವೆ. ಹೀಗಾಗಿ ಬೇಯಿಸಿ ಆಹಾರವನ್ನು ಫ್ರಿಜ್‌ನಲ್ಲಿ ಶೇಖರಿಸಿಡಬೇಕು. ಬೇಸಿಗೆಯಲ್ಲಿ ಆದಷ್ಟು ತಾಜಾವಾಗಿ ಸಿದ್ಧಪಡಿಸಿದ ಆಹಾರವನ್ನೇ ಸೇವಿಸಿ.

ದದ್ದು, ಕಜ್ಜಿ
ಬೇಸಿಗೆಯಲ್ಲಿ ಕಜ್ಜಿ, ದದ್ದು ಮುಂತಾದ ಚರ್ಮ ಸಮಸ್ಯೆಗಳು ಕಾಣಿಸಿಕೊಳ್ಳೋದು ಸಾಮಾನ್ಯ. ಇದಕ್ಕೆ ಕಾರಣ ಬೇಸಿಗೆಯಲ್ಲಿ ಚರ್ಮದಲ್ಲಿನ ಬೆವರಿನ ಗ್ರಂಥಿಗಳು ಕೊಳೆ ಅಥವಾ ಇನ್ಯಾವುದೋ ಕಾರಣಕ್ಕೆ ಮುಚ್ಚಿಕೊಂಡಿದ್ರೆ ಕಜ್ಜಿಗಳು ಕಾಣಿಸಿಕೊಳ್ಳುತ್ತವೆ. ಆದಕಾರಣ ಬೇಸಿಗೆಯಲ್ಲಿ ತೆಳ್ಳಗಿನ ಕಾಟನ್‌ ಬಟ್ಟೆ ಧರಿಸೋದ್ರ ಜೊತೆ ಪ್ರತಿದಿನ ತಪ್ಪದೆ ಒಂದು ಅಥವಾ ಎರಡು ಬಾರಿ ಸ್ನಾನ ಮಾಡೋದು ಒಳ್ಳೆಯದು.

ದಡಾರ
ಮೀಸಲ್ಸ್‌ ವೈರಸ್‌ನಿಂದ ಉಂಟಾಗೋ ಈ ಕಾಯಿಲೆ ಬೇಸಿಗೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತೆ. ಪ್ರಾರಂಭದಲ್ಲಿ ವಿಪರೀತ ಜ್ವರ, ಶೀತ, ಕೆಮ್ಮು, ಗಂಟಲು ನೋವು ಕಾಣಿಸಿಕೊಳ್ಳುತ್ತೆ. ೩-೪ ದಿನಗಳ ಬಳಿಕ ಮೈ ಮೇಲೆ ದದ್ದುಗಳೇಳುತ್ತವೆ. ಎಂಎಂಆರ್‌ ಲಸಿಕೆ ಪಡೆದುಕೊಳ್ಳೋ ಮೂಲಕ ಈ ರೋಗದಿಂದ ರಕ್ಷಣೆ ಪಡೆಯಬಹುದು. ಮಕ್ಕಳಿಗೆ ಈ ಲಸಿಕೆಯನ್ನು ತಪ್ಪದೆ ಕೊಡಿಸಬೇಕು.

ಸಿಡುಬು (ಚಿಕನ್‌ ಫಾಕ್ಸ್)
ಬೆಸಿಗೆಯಲ್ಲಿ ಇದು ಕಾಮನ್‌. ಮೈ ಮೇಲೆ ನೀರಿನಿಂದ ತುಂಬಿದ ಗುಳ್ಳೆಗಳು ಕಾಣಿಸಿಕೊಳ್ಳುವುದರ ಜೊತೆ ಜ್ವರ, ತಲೆನೋವು ಹಾಗೂ ಗಂಟಲು ನೋವಿರುತ್ತದೆ. ಈ ರೋಗ ವಾಸಿಯಾಗಲು ಕನಿಷ್ಠ ೧೦ ದಿನಗಳಾದ್ರೂ ಬೇಕು. ಇದು ವೈರಸ್‌ನಿಂದ ಬ ಕಾಯಿಲೆಯಾಗಿದ್ದು, ಸೋಂಕಿತ ವ್ಯಕ್ತಿಯ ಸೀನು ಹಾಗೂ ಕೆಮ್ಮುವಿನಿಂದ ಒಬ್ಬರಿಂದ ಒಬ್ಬರಿಗೆ ಹರಡಬಲ್ಲದು. ಆದಕಾರಣ ಮನೆಯಲ್ಲಿ ಯಾರಿಗಾದ್ರೂ ಚಿಕನ್ ಫಾಕ್ಸ್‌ ಕಾಣಿಸಿಕೊಂಡ್ರೆ ರೋಗ ಗುಣವಾಗೋ ತನಕ ಅವರನ್ನು ಐಸೋಲೇಷನ್‌ನಲ್ಲಿಡೋದು ಒಳ್ಳೆಯದು. ಆಗಾಗ ಕೈಗಳನ್ನು ಚೆನ್ನಾಗಿ ತೊಳೆಯೋದು ಹಾಗೂ ಲಸಿಕೆ ಪಡೆಯೋ ಮೂಲಕ ಈ ರೋಗ ಬಾರದಂತೆ ತಡೆಯಬಹುದು.

ಮುಟ್ಟಿನ ಸಮಯದಲ್ಲಿ ಯುವತಿಯ ಕಣ್ಣಿನಿಂದ ಹರಿದ ರಕ್ತ..!

ಟೈಫಾಯ್ಡ್
ಬ್ಯಾಕ್ಟೀರಿಯಾ ಸೋಂಕಿನಿಂದ ಕಾಣಿಸಿಕೊಳ್ಳೋ ಈ ರೋಗದ ಪ್ರಮುಖ ಲಕ್ಷಣಗಳೆಂದ್ರೆ ಅಧಿಕ ಜ್ವರ, ಸುಸ್ತು, ವಾಂತಿ, ಭೇದಿ ಇತ್ಯಾದಿ. ಸಲ್ಮೋನೆಲ್ಲ ಟೈಫಿ ಎಂಬ ಬ್ಯಾಕ್ಟೀರಿಯಾದಿಂದ ಈ ರೋಗ ಕಾಣಿಸಿಕೊಳ್ಳುತ್ತೆ. ಈ ಬ್ಯಾಕ್ಟೀರಿಯಾಗಳು ಸಾಮಾನ್ಯವಾಗಿ ಅಶುದ್ಧ ಆಹಾರ ಹಾಗೂ ನೀರಿನಲ್ಲಿತ್ತವೆ. ಇದು ಕೂಡ ಅಂಟು ರೋಗವಾಗಿದ್ದು, ಸೋಂಕಿತ ವ್ಯಕ್ತಿಯಿಂದ ಇತರರಿಗೆ ಹರಡಬಲ್ಲದು. ಈ ರೋಗ ತಡೆಗೆ ಎರಡು ವಿಧದ ಲಸಿಕೆಗಳಿವೆ. ಒಂದು ಇಂಜೆಕ್ಷನ್‌ ರೂಪದಲ್ಲಿದ್ದು, ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಇನ್ನೊಂದು ಮಾತ್ರೆ ರೂಪದಲ್ಲಿದ್ದು, ಟೈಫಾಯ್ಡ್‌ ಬ್ಯಾಕ್ಟೀರಿಯಾವನ್ನು ದುರ್ಬಲಗೊಳಿಸುತ್ತೆ.

ಕಾಮಾಲೆ
ಇದು ನೀರಿನಿಂದ ಹರಡೋ ರೋಗ. ಅಶುದ್ಧ ನೀರು ಹಾಗೂ ಆಹಾರದ ಸೇವನೆಯಿಂದ ಕಾಣಿಸಿಕೊಳ್ಳುತ್ತದೆ. ಚರ್ಮ, ಕಣ್ಣು, ಮಲ ಮತ್ತು ಮೂತ್ರ ಹಳದಿ ಬಣ್ಣಕ್ಕೆ ತಿರುಗೋದು ಈ ರೋಗದ ಲಕ್ಷಣ. ಪಿತ್ತಕೋಶ ಉತ್ಪಾದಿಸೋ ಬಿಲಿರುಬಿನ್‌ ಎಂಬ ರಸದ ಮಟ್ಟ ಹೆಚ್ಚೋದ್ರಿಂದ ಹಳದಿ ಬಣ್ಣಉಂಟಾಗುತ್ತೆ. ಕಾಮಾಲೆಗೆ ಲಸಿಕೆ ಲಭ್ಯವಿದೆ. ಶುದ್ಧನೀರು ಮತ್ತು ಆಹಾರದ ಸೇವನೆ, ಮನೆಯಲ್ಲೇ ಸಿದ್ಧಪಡಿಸಿದ ಆಹಾರ ಸೇವನೆ, ಕುದಿಸಿ ಆರಿಸಿದ ನೀರನ್ನು ಕುಡಿಯೋದ್ರಿಂದ ಈ ರೋಗ ಬಾರದಂತೆ ತಡೆಯಬಹುದು. 


 

click me!