ಬೇಸಿಗೆ ಕಾಲದಲ್ಲಿ ಲಾವಂಚ ಇದ್ರೆ ಮನೆಯೆಲ್ಲಾ ಕೂಲ್ ಕೂಲ್

By Suvarna NewsFirst Published Mar 18, 2021, 5:04 PM IST
Highlights

ನೀವು ಮನೆಗೆ ಏರ್‌ಕಂಡಿಷನರ್ ಅಥವಾ ಏರ್ ಕೂಲರ್ ಹಾಕಿಸುವಷ್ಟು ಶಕ್ತರಲ್ಲವಾದರೆ ಲಾವಂಚ ಉಪಯೋಗಿಸಬಹುದು.

ಬೇಸಿಗೆ ಬಂತು. ಈ ಬಾರಿಯ ಬೇಸಿಗೆ ಹಿಂದೆಲ್ಲ ಸಲಕ್ಕಿಂತಲೂ ಹೆಚ್ಚು ಹಾಟ್, ಹೆಚ್ಚು ಬಿಸಿಯಾಗಿರುವ ಲಕ್ಷಣಗಳು ಕಾಣಿಸುತ್ತಿವೆ. ಯಾಕೆಂದರೆ ಮರಗಳು ಕಡಿಮೆಯಾಗಿವೆ. ನೆರಳೇ ಇಲ್ಲ. ಬಿಲ್ಡಿಂಗ್‌ಗಳು ಜಾಸ್ತಿಯಾಗಿವೆ. ಮಣ್ಣಿನ ನೆಲಗಳೆಲ್ಲಾ ಕಾಂಕ್ರೀಟ್ ಆಗಿವೆ. ಕಟ್ಟಡಗಳೂ ಗಾಜು ಹೊದ್ದಿವೆ. ಹೀಗಾಗಿ ವಾತಾವರಣವೆಲ್ಲ ಧಗೆ, ಧಗೆ.

ಅದು ಸರಿ, ಮನೆಯಲ್ಲಿ ನಿಮಗೆ ಏರ್ ಕಂಡಿಷನರ್ ಅಥವಾ ಏರ್ ಕೂಲರ್ ಬಳಸುವಷ್ಟು ಶಕ್ತಿ ಇಲ್ಲವೆಂದರೆ, ಲಾವಂಚ ಬಳಸಿ ಮನೆಯನ್ನು ಕೂಲ್ ಕೂಲ್ ಆಗಿ ಇಟ್ಟುಕೊಳ್ಳಬಹುದು. ಅದು ಹೇಗೆ ನಿಮಗೆ ಗೊತ್ತೇ?

ಹೀಗೆ ಮಾಡಿ:

- ಮನೆಯ ಕಿಟಕಿಗಳಿಗೆ ಲಾವಂಚದ ಹುಲ್ಲನ್ನು ಕಟ್ಟಿ. ದಿನಕ್ಕೆರಡು ಬಾರಿ ತಣ್ಣಿರನ್ನು ಅದಕ್ಕೆ ಸಿಂಪಡಿಸಿ. ಮನೆ ವಾತಾನುಕೂಲಕ್ಕಿಂತಲೂ ತಂಪಾಗಿರುತ್ತದೆ.

- ಕುಡಿಯುವ ನೀರಿನ ಪಾತ್ರೆ ಅಥವಾ ಹೂಜಿಗೆ, ಲಾವಂಚದ ಹುಲ್ಲು ಅಥವಾ ಬೇರನ್ನು ಹಾಕಿ ಅರ್ಧ ಗಂಟೆ ಇಡಿ. ತಂಪಾಗಿ, ಶುದ್ಧವಾಗಿ ರುಚಿಕರವಾಗಿಯೂ ಇರುತ್ತದೆ.

- ನೆನೆಸಿಟ್ಟ ಲಾವಂಚದ ಮೇಲೆ ತರಕಾರಿ, ಹಣ್ಣು ಇಟ್ಟರೆ ಪ್ರಜ್ಜೇ ಬೇಡ. ತಂಪಾಗಿ ಕೆಡದೇ ಇರುತ್ತದೆ.

- ದಣಿದ ಪಾದಗಳನ್ನು ನೆನೆಸಿದ ಲಾವಂಚದ ಮೇಲೆ ಐದು ನಿಮಿಷ ಇಟ್ಟರೆ, ಪಾದ ತಂಪಾಗಿ ಸುಖವೆನಿಸುತ್ತದೆ.

ಬೇಸಿಗೆ ಬಂತು, ಈಗ ಮುರುಗನ ಹುಳಿಯೇ ಅಮೃತ! ...

ಲಾವಂಚದ ಬಗ್ಗೆ ತಿಳಿಯಿರಿ

- ಸುಗಂಧ ತೈಲ ತಯಾರಿಕೆಯಲ್ಲಿ ಬಳಸುವ ಲಾವಂಚ ಅಗಾಧ ಔಷಧೀಯ ಗುಣಗಳನ್ನು ಹೊಂದಿದೆ. ಹೆಚ್ಚಾಗಿ ನದಿ, ಕೆರೆಗಳ ಬದಿಯಲ್ಲಿ ಹೇರಳವಾಗಿ ಬೆಳೆಯುವ ಲಾವಂಚಕ್ಕೆ ಮಣ್ಣಿನ ಸವಕಳಿಯನ್ನು ತಡೆಯುವ ಶಕ್ತಿಯಿದೆ. ಅವೆಲ್ಲದಕ್ಕಿಂತ ಮಿಗಿಲಾಗಿ ಇದರಲ್ಲಿ ನೀರಿಂಗಿಸುವ ಶಕ್ತಿ ಅಧಿಕವಾಗಿರುವುದರಿಂದ ಇದನ್ನು ಹೆಚ್ಚಾಗಿ ಇಳಿಜಾರು ಪ್ರದೇಶದಲ್ಲಿ ನೆಡುತ್ತಾರೆ. ಇದು ಮಳೆ ನೀರು ಹರಿದು ಹೋಗುವುದನ್ನು ತಡೆಯುತ್ತದೆ.

- ಮಡಿವಾಳ ಬೇರು, ರಾಮಂಚ ಎಂದೆಲ್ಲಾ ಕರೆಯಲ್ಪಡುವ ಲಾವಂಚದ ವೈಜ್ಞಾನಿಕ ಹೆಸರು ವೆಟಿವೇರಿಯಾ ಜಿಜನಿಯೋಡೆಸ್. ಲಾವಂಚದಲ್ಲಿ ನೀರನ್ನು ಶುದ್ದಗೊಳಿಸುವ ಗುಣವಿರುವುದರಿಂದ ಕುಡಿಯುವ ನೀರಿನ ಪಾತ್ರಕ್ಕೆ ಲಾವಂಚದ ಬೇರನ್ನು ಹಾಕುತ್ತಾರೆ. ಇದರಿಂದಾಗಿ ನೀರು ಸ್ವಚ್ಛವಾಗುವುದು ಮಾತ್ರವಲ್ಲ, ಪರಿಮಳದಿಂದ ಕೂಡುತ್ತದೆ. ತಂಪಾಗಿರುತ್ತದೆ.

- ಲಾವಂಚದ ಬೇರಿನಿಂದ ತಯಾರಿಸಿದ ಎಣ್ಣೆಯನ್ನು ಮೈ - ಕೈ ನೋವಿನ ನಿವಾರಣೆಗೆ ಬಳಸುತ್ತಾರೆ. ಮಾತ್ರವಲ್ಲ ಲಾವಂಚದ ಬೇರನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ, ಸೋಸಿ ಕುಡಿಯುವುದರಿಂದ ಜಂತುಹುಳ ಸಮಸ್ಯೆಯನ್ನು ತಡೆಗಟ್ಟಬಹುದು. ವಾತಕ್ಕೂ ಇದು ಒಳ್ಳೆಯ ಮದ್ದು. ನಂಜು ನಿರೋಧಕವಾದ ಲಾವಂಚಕ್ಕೆ ನೋವು ನಿವಾರಿಸುವ ಶಕ್ತಿಯಿದೆ.



- ಭಾರತದಲ್ಲಿ ಮಾತ್ರವಲ್ಲ, ಆಸ್ಟ್ರೇಲಿಯಾ. ಚೀನಾ, ಥಾಯ್ ಲ್ಯಾಂಡ್, ವಿಯೆಟ್ನಾಂಗಳಲ್ಲಿ ಲಾವಂಚದ ಬೇರನ್ನು ಬಳಸುತ್ತಾರೆ. ಆಯುರ್ವೇದ ಔಷಧ ತಯಾರಿಕೆಯಲ್ಲಿ ಬಳಕೆಯಾಗುತ್ತದೆ.೦

- ಇದಕ್ಕೆ ರಾಮಂಚ ಅನ್ನುವುದೇಕೆ? ಶ್ರೀರಾಮನು ವನವಾಸದ ಸಂದರ್ಭದಲ್ಲಿ ಕುಡಿಯುವ ನೀರನ್ನು ಶುದ್ದೀಕರಿಸಲು ಲಾವಂಚದ ಬೇರನ್ನು ಉಪಯೋಗಿಸಿದ ಕಾರಣ ರಾಮಂಚ ಹೆಸರು ಬಂದಿತು ಎನ್ನುತ್ತದೆ ಪುರಾಣ.

- ಲಾವಂಚದ ತೈಲವನ್ನು ಔಷಧಿಗೆ ಮಾತ್ರವಲ್ಲ, ಬದಲಿಗೆ ಸೋಪು, ಅತ್ತರ, ಸೌಂದರ್ಯ ಪ್ರಸಾಧನ, ಅಗರುಬತ್ತಿಯ ತಯಾರಿಕೆಯಲ್ಲಿ ಬಳಸುತ್ತಾರೆ. ಮಾತ್ರವಲ್ಲದೇ ಅದರ ಬೇರಿನಿಂದ ನಾನಾ ನಮೂನೆಯ ಗೃಹಾಲಂಕಾರದ ವಸ್ತುಗಳು, ಬೀಸಣಿಕೆ, ಟೋಪಿ ಇತ್ಯಾದಿಗಳನ್ನು ತಯಾರಿಸುತ್ತಾರೆ.

- ಹಿಂದೆ ರೇಷ್ಮೆ ಸೀರೆ ಹಾಳಾಗದಂತೆ, ಪೆಟ್ಟಿಗೆ ಅಥವಾ ಕಪಾಟಿನೊಳಗೆ ಜಿರಳೆ ಸೇರದಂತೆ ಲಾವಂಚದ ಬೇರನ್ನು ಗಂಟು ಕಟ್ಟಿ ಇಡುತ್ತಿದ್ದರು. ಅದರ ಸುವಾಸನೆಗೆ ಜಿರಳೆಯ ಕಾಟ ಇರುತ್ತಿರಲಿಲ್ಲ.

ಪ್ರತಿದಿನ ಬೆಳಗ್ಗೆ ನೆನೆಸಿದ ಅಂಜೂರವನ್ನು ಏಕೆ ಸೇವಿಸಬೇಕು? ...

click me!