ಬೆಂಗಳೂರು: ಮದ್ಯದ ಅಮಲಿನಲ್ಲಿ ಮೈಕೈ ತಾಗಿಸಿದ್ದಕ್ಕೆ ನೇಪಾಳಿಯ ಹತ್ಯೆ

By Kannadaprabha NewsFirst Published Mar 29, 2023, 6:37 AM IST
Highlights

ಮಾಗಡಿ ರಸ್ತೆಯ ತಾವರೆಕೆರೆ ನಿವಾಸಿ ರಮೇಶ್‌ ಹತ್ಯೆಗೀಡಾದ ದುರ್ದೈವಿ. ತನ್ನ ಗೆಳೆಯ ಇಂದ್ರೇಶ್‌ ಜತೆ ನಗರ್ತಪೇಟೆಯಲ್ಲಿ ರಾತ್ರಿ ರಮೇಶ್‌ ತೆರಳುವಾಗ ಈ ಘಟನೆ ನಡೆದಿದೆ. ಕೃತ್ಯ ಎಸಗಿ ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರು(ಮಾ.29): ರಸ್ತೆಯಲ್ಲಿ ಮೈ ತಾಕಿದ ಕಾರಣಕ್ಕೆ ಕೋಪಗೊಂಡು ನೇಪಾಳ ಮೂಲದ ವ್ಯಕ್ತಿಯೊಬ್ಬನಿಗೆ ಕಿಡಿಗೇಡಿಗಳು ಚಾಕುವಿನಿಂದ ಇರಿದು ಹತ್ಯೆಗೈದು ಪರಾರಿಯಾಗಿರುವ ಘಟನೆ ವಿ.ವಿ.ಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ನಗರ್ತಪೇಟೆಯ 4ನೇ ಮುಖ್ಯರಸ್ತೆ ಬಳಿ ನಡೆದಿದೆ.

ಮಾಗಡಿ ರಸ್ತೆಯ ತಾವರೆಕೆರೆ ನಿವಾಸಿ ರಮೇಶ್‌ (27) ಹತ್ಯೆಗೀಡಾದ ದುರ್ದೈವಿ. ತನ್ನ ಗೆಳೆಯ ಇಂದ್ರೇಶ್‌ ಜತೆ ನಗರ್ತಪೇಟೆಯಲ್ಲಿ ಸೋಮವಾರ ರಾತ್ರಿ ರಮೇಶ್‌ ತೆರಳುವಾಗ ಈ ಘಟನೆ ನಡೆದಿದೆ. ಕೃತ್ಯ ಎಸಗಿ ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಲೈಂಗಿಕ ದೌರ್ಜನ್ಯ ನಡೆಸಿ 7 ವರ್ಷದ ಬಾಲಕಿ ಹತ್ಯೆ ಮಾಡಿದ ನೆರೆಮನೆಯ ಕಾಮುಕ: ಗೋಣಿಚೀಲದಲ್ಲಿ ಶವ ಪತ್ತೆ

ಮೃತ ರಮೇಶ್‌ ಮೂಲತಃ ನೇಪಾಳ ದೇಶದವನಾಗಿದ್ದು, ಹಲವು ವರ್ಷಗಳಿಂದ ಮಾಗಡಿ ರಸ್ತೆಯ ತಾವರೆಕೆರೆಯಲ್ಲಿ ತನ್ನ ಸೋದರಿ ಗೀತಾ ಕುಟುಂಬದ ಜತೆ ನೆಲೆಸಿದ್ದ. ತನ್ನ ಭಾವನ ಅಂಗಡಿಯಲ್ಲಿ ಆತ ಕೆಲಸ ಮಾಡುತ್ತಿದ್ದ. ನಗರದಲ್ಲಿ ಕೆಲಸವಿದೆ ಎಂದು ತನ್ನ ಅಕ್ಕನಿಗೆ ಹೇಳಿ ಸೋಮವಾರ ಮನೆಯಿಂದ ಹೊರಟ ರಮೇಶ್‌, ಬಳಿಕ ಗೆಳೆಯನ ಜತೆ ನಗರ್ತಪೇಟೆಗೆ ಬಂದಿದ್ದಾನೆ. ಆ ಪ್ರದೇಶದಲ್ಲಿ ರಾತ್ರಿ ಗೆಳೆಯರಿಬ್ಬರು ಮದ್ಯ ಸೇವಿಸಿ ಅಡ್ಡಾಡಿದ್ದಾರೆ. ಆಗ ರಾತ್ರಿ 9.30ರ ಸುಮಾರಿಗೆ ನಗರ್ತಪೇಟೆ 4ನೇ ಮುಖ್ಯರಸ್ತೆಯಲ್ಲಿ ಮುಂದೆ ಹೋಗುತ್ತಿದ್ದ ಮತ್ತಿಬ್ಬರಿಗೆ ಪರಸ್ಪರ ಮೈ ತಾಕಿದೆ. ಈ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಜಗಳವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. 

ಈ ಹಂತದಲ್ಲಿ ಕೆರಳಿದ ಆರೋಪಿಗಳು, ರಮೇಶ್‌ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಕೂಡಲೇ ಸಮೀಪದ ವಿಕ್ಟೋರಿಯಾ ಆಸ್ಪತ್ರೆಗೆ ಗಾಯಾಳುವನ್ನು ಆತನ ಸ್ನೇಹಿತ ಇಂದ್ರೇಶ್‌ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಿ ತೀವ್ರ ರಕ್ತಸ್ರಾವದಿಂದ ರಮೇಶ್‌ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

click me!