ಮಹದಾಯಿ ನೀರು ಹಂಚಿಕೆ ಬಗ್ಗೆ ಕರ್ನಾಟಕ, ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿಗಳು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು| ಕೇಂದ್ರ ಸರ್ಕಾರ ಈ ಸಂಬಂಧ ಮಧ್ಯಸ್ಥಿಕೆ ವಹಿಸಿ ಗೋವಾ ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕು| ಮಹಾರಾಷ್ಟ್ರ, ಕರ್ನಾಟಕ ಒಂದಾದರೆ ಗೋವಾ ಒಪ್ಪಬೇಕಾಗುತ್ತದೆ| ಇದರಿಂದ ಮಹದಾಯಿ ಸಮಸ್ಯೆಗೆ ಪರಿಹಾರ ಸಿಗಲಿದೆ| 

ವಿಜಯಪುರ(ಅ.18): ಮಹದಾಯಿ ನೀರು ಹಂಚಿಕೆ ಬಗ್ಗೆ ಕರ್ನಾಟಕ, ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿಗಳು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಕೇಂದ್ರ ಸರ್ಕಾರ ಈ ಸಂಬಂಧ ಮಧ್ಯಸ್ಥಿಕೆ ವಹಿಸಿ ಗೋವಾ ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕು ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಒತ್ತಾ​ಯಿ​ಸಿ​ದ್ದಾರೆ.

Add Asianetnews Kannada as a Preferred SourcegooglePreferred

ಗುರುವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಮಹಾರಾಷ್ಟ್ರ, ಕರ್ನಾಟಕ ಒಂದಾದರೆ ಗೋವಾ ಒಪ್ಪಬೇಕಾಗುತ್ತದೆ. ಇದರಿಂದ ಮಹದಾಯಿ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಹೇಳಿದ್ದಾರೆ. 
ಕರ್ನಾಟಕ, ಮಹಾರಾಷ್ಟ್ರ ಸಹೋದರ ರಾಜ್ಯಗಳಾಗಿವೆ. ಆದರೆ ಮಹದಾಯಿ ವಿಷಯದಲ್ಲಿ ಗೋವಾ ಸರ್ಕಾರ ಮೊಂಡುತನ ಪ್ರದರ್ಶಿಸುತ್ತಿದೆ ಎಂದು ಯತ್ನಾಳ ಅಸಮಾಧಾನ ವ್ಯಕ್ತಪಾಡಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಹಾರಾಷ್ಟ್ರದ ಜತ್ತ ಭಾಗಕ್ಕೆ ನೀರು ಬಿಡುವುದರಲ್ಲಿ ತಪ್ಪೇನಿಲ್ಲ. ಕರ್ನಾಟಕ, ಮಹಾರಾಷ್ಟ್ರ ಬೇರೆಯಲ್ಲ. ಒಂದೇ ತಾಯಿ ಮಕ್ಕಳಿದ್ದಂತೆ. ಈ ರಾಜ್ಯಗಳೂ ದೇಶದ ಭಾಗಗಳಾಗಿವೆ. ಕಾಶ್ಮೀರದಂತಹ ಜಟಿಲ ಸಮಸ್ಯೆಗೆ ಪರಿಹಾರ ದೊರೆತಿದೆ. ಮಹದಾಯಿ ಸಮಸ್ಯೆಗೆ ಪರಿಹಾರ ಸಿಗಬೇಕು. ನಾವು ಪಾಕಿಸ್ತಾನಕ್ಕೆ ಮಾನವೀಯತೆಯಿಂದ ಈ ಹಿಂದೆ ನೀರು ಬಿಟ್ಟಿದ್ದೇವೆ. ಕರ್ನಾಟಕವು ಮಹಾರಾಷ್ಟ್ರಕ್ಕೆ ನೀರು ಬಿಡುವುದರಲ್ಲಿ ತಪ್ಪಿಲ್ಲ. ಈ ಹಿಂದೆ ಉತ್ತರ ಕರ್ನಾಟಕದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದಾಗ ಮಹಾರಾಷ್ಟ್ರ ಸರ್ಕಾರ ಕೃಷ್ಣಾ, ಭೀಮಾ ನದಿಗೆ ಹಣ ಪಡೆಯದೆ ಮಾನವೀಯತೆ ಆಧಾರದ ಮೇಲೆ ಸಾಕಷ್ಟುಸಲ ನೀರು ಬಿಡುಗಡೆ ಮಾಡಿದೆ ಎಂದಿದ್ದಾರೆ.

ಮಹಾರಾಷ್ಟ್ರದ ಗಡಿಭಾಗದ ಜತ್ತ ತಾಲೂಕಿನಲ್ಲಿ ಕನ್ನಡಿಗರೇ ಹೆಚ್ಚಿದ್ದಾರೆ. ಹೀಗಾಗಿ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ನೀರು ಬಿಡುವುದರಲ್ಲಿ ತಪ್ಪಾಗದು. ಮಹಾರಾಷ್ಟ್ರವೂ ಕರ್ನಾಟಕಕ್ಕೆ ನೀರು ಬಿಡಬೇಕು. ಕೊಡು ಕೊಳ್ಳುವ ನೀತಿಯಿಂದ ಉಭಯ ರಾಜ್ಯಗಳು ನೀರು ಬಿಟ್ಟರೆ ತಪ್ಪೇನಿಲ್ಲ ಎಂದೂ ಹೇಳಿದರು.

ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಂದಿನ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಹಾಗೂ ಮಹಾರಾಷ್ಟ್ರದ ಜಲ ಸಂಪನ್ಮೂಲ ಸಚಿವರು ಸೇರಿ ನೀರಿನ ವಿಷಯದಲ್ಲಿ ಕೊಡು ಕೊಳ್ಳುವ ವಿಚಾರವಾಗಿ ಚರ್ಚಿಸಿದ್ದರು. ಈ ವಿಷಯ ಇನ್ನೂ ಚರ್ಚೆಯ ಹಂತದಲ್ಲಿದೆ. ಮಹಾರಾಷ್ಟ್ರ ಚುನಾವಣೆ ಬಳಿಕ ಈ ವಿಷಯ ಬಗೆಹರಿಯಬೇಕು. ಈ ನಿಟ್ಟಿನಲ್ಲಿ ಕೇಂದ್ರ ಮಧ್ಯಸ್ಥಿಕೆ ವಹಿಸಬೇಕು ಎಂದು ಒತ್ತಾ​ಯಿ​ಸಿ​ದ್ದಾರೆ.