ಬೆಂಗಳೂರಿನಿಂದ ಸಂಪರ್ಕ ಕಳೆದುಕೊಂಡಿರುವ ಮಂಗಳೂರು ಪರ್ಯಾಯ ರಸ್ತೆಯಿಂದ ಪರಿಹಾರ ಸಿಕ್ಕಿಲ್ಲ; ಪ್ರಯಾಣವೆಂದರೆ ತಲೆನೋವು ಟ್ವಿಟರ್ನಲ್ಲಿ #ConnectUsToMangalore ಮನವಿಗಳ ಸುರಿಮಳೆ
ಬೆಂಗಳೂರು ಮಂಗಳೂರು ನಡುವೆ ಸರಿಯಾದ ಸಂಪರ್ಕವನ್ನು ಕಲ್ಪಿಸಿ ಎಂದು ಕರಾವಳಿ ಜನ ಆರಂಭಿಸಿರುವ #ConnectUsToMangalore ಎಂಬ ಅಭಿಯಾನ ಶುಕ್ರವಾರ ಟ್ವಿಟರ್ ನಲ್ಲಿ ಟ್ರೆಂಡ್ ಆಗುತ್ತಿದೆ.
ಕರ್ನಾಟಕ ಕರಾವಳಿಯು ರಾಜ್ಯ ರಾಜಧಾನಿಯಿಂದ ಬಹುತೇಕ ಸಂಪರ್ಕವನ್ನು ಕಳೆದುಕೊಂಡಿದೆ. ಕರಾವಳಿ ಭಾಗಕ್ಕೆ ತಲುಪಲು ಪಶ್ಚಿಮ ಘಟ್ಟದಿಂದ ಹಾದು ಹೋಗಲೇ ಬೇಕು. ಆದರೆ ರೈಲು ಮತ್ತು ರಸ್ತೆ ಮಾರ್ಗ ಮುಚ್ಚಿ ಹೋಗಿದ್ದು, ಪರ್ಯಾಯ ರಸ್ತೆಯನ್ನು ಅವಲಂಬಿಸೋಣವೆಂದರೆ, ಅವುಗಳು ಪ್ರಯಾಣಿಕರಿಗೆ ಸಿಂಹಸ್ವಪ್ನವಾಗಿದೆ.
ಮಂಗಳೂರಿನ ಜನರ ಬೇಡಿಕೆ ಶಾಸಕರುಗಳು ಕೂಡಾ ಸಾಥ್ ನೀಡಿದ್ದಾರೆ. ಟ್ವಿಟರ್ನಲ್ಲಿ ಯಾರ್ಯಾರು ಏನೇನು ಹೇಳ್ತಿದ್ದಾರೆ ಎಂದು ನೋಡುವುದಾದರೆ...
ಮಂಗಳೂರು ತಲುಪಲು ಪ್ರಮುಖವಾಗಿರುವ ರೈಲು ಮಾರ್ಗ ಹಾಗೂ ಶಿರಾಡಿ ಘಾಟ್ ಮೂಲಕ ಸಾಗುವ ರಾಷ್ಟ್ರೀಯ ಹೆದ್ದಾರಿಯು ಗುಡ್ಡಕುಸಿತದಿಂದ ಮುಚ್ಚಿಹೋಗಿದೆ. ಕೊಡಗಿನಿಂದ ಸಂಪಾಜೆ ಘಾಟಿಯ ಮೂಲಕ ಹಾದುಹೋಗುವ ಪರ್ಯಾಯ ರಸ್ತೆ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಬಾಕಿ ಉಳಿದಿರುವುದು ಚಾರ್ಮಾಡಿ ಘಾಟಿ ಕೂಡಾ ಬಹಳ ಕಿರಿದಾಗಿದ್ದು, ಗುಡ್ಡ ಕುಸಿತ ಭಯ ಯಾವತ್ತಿಗೂ ಇದ್ದದ್ದೇ. ಇತರ ಎಲ್ಲಾ ರಸ್ತೆಗಳು ಮುಚ್ಚಿಹೋಗಿರುವ ಹಿನ್ನೆಲೆಯಲ್ಲಿ ಈ ಕಿರಿದಾದ ರಸ್ತೆಯಲ್ಲಿ ವಾಹನ ದಟ್ಟಣೆ ಕೂಡಾ ಹೆಚ್ಚಾಗಿದೆ. ಅದ್ಯಾವಾಗ ಬ್ಲಾಕ್ ಆಗುತ್ತೋ, ಅಥವಾ ಮುಚ್ಚಿಹೋಗುತ್ತೋ ಎಂಬ ಭಯದಲ್ಲೇ ಪ್ರಯಾಣಿಕರು ಓಡಾಡುವ ಪರಿಸ್ಥಿತಿ. ಶೃಂಗೇರಿ -ಆಗುಂಬೆ ಘಾಟಿಯ ಮೂಲಕ ಉಡುಪಿ/ಮಂಗಳೂರು ತಲುಪಬಹುದಾದರೂ ಆಗುಂಬೆಯಲ್ಲಿ ದೊಡ್ಡವಾಹನಗಳಿಗೆ ಪ್ರವೇಶವಿಲ್ಲ.
ಬೆಂಗಳೂರಿನಲ್ಲಿ ನೆಲೆಸಿರುವ ಮಂಗಳೂರಿಗರು ಟ್ವಿಟರ್ ನಲ್ಲಿ #ConnectUsToMangalore ಎಂಬ ಅಭಿಯಾನವನ್ನೇ ಆರಂಭಿಸಿದ್ದಾರೆ. ಮಂಗಳೂರಿಗೆ ಸಮರ್ಪಕವಾದ ರಸ್ತೆ ಸಂಪರ್ಕವನ್ನು ಕಲ್ಪಿಸಬೇಕೆಂದು ಟ್ವೀಟರ್ ಮೂಲಕ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.
