ಹಿಂದುಗಳ ನಿಂದನೆ: ಗ್ರಾಮಸ್ಥರ ಪ್ರತಿಭಟನೆ
ಹಿಂದೂಗಳ ಬಗ್ಗೆ ಪಾದ್ರಿಗಳಿಂದ ಅವಹೇಳನ | ಗ್ರಾಮಸ್ಥರಿಂದ ಪ್ರತಿಭಟನೆ | ಕ್ಷಮೆಯಾಚಿಸುವಂತೆ ಪಟ್ಟು ಹಿಡಿದ ಯುವಕರು
ಕೊಪ್ಪಳ (ಡಿ. 28): ಹಿಂದೂ ಧರ್ಮದ ಬಗ್ಗೆ ಪಾದ್ರಿಗಳು ನಿಂದನೆ ನಡೆಸಿದ್ದು ಅವರನ್ನು ಕೂಡಿ ಹಾಕಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಕೊಪ್ಪಳದ ಗಂಗಾವತಿ ತಾಲೂಕಿನ ಹಣವಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಕೆಲಕಾಲ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಪ್ರತಿಭಟನಾಕಾರರ ಬಳಿ ಬಂದು ಪಾದ್ರಿಗಳು ಕ್ಷಮೆಯಾಚಿಸಿದ್ದಾರೆ.
ಮನೆ ಬಿಟ್ಟು ಜಾಗ ಖಾಲಿ ಮಾಡುವಂತೆ ಪಾದ್ರಿಗಳಿಗೆ ಗ್ರಾಮದ ಯುವಕರು ಪಟ್ಟು ಹಿಡಿದಿದ್ದಾರೆ. ಪೊಲೀಸರ ರಕ್ಷಣೆಯಲ್ಲಿ ಪಾದ್ರಿಗಳು ಹಾಗೂ ಬೆಂಬಲಿಗರು ಜಾಗ ಖಾಲಿ ಮಾಡಿದ್ದಾರೆ.
ಗ್ರಾಮದ ಮಂಜುನಾಥ ಎನ್ನುವವರ ಮನೆಯಲ್ಲಿ ಧರ್ಮ ಕಾರ್ಯಕ್ರಮ ನಡೆಯುತ್ತಿತ್ತು. ಈ ಕಾರ್ಯಕ್ರಮಕ್ಕೆ ಪಾದ್ರಿಗಳು ಆಗಮಿಸಿದ್ದರು. ಈ ವೇಳೆ ಹಿಂದೂ ಧರ್ಮದ ಸ್ತೋತ್ರ ತಿರುಚಿದ್ದಾರೆಂದು ಅಲ್ಲಿನ ಸ್ಥಳೀಯರು ಗಲಾಟೆ ಮಾಡಿದ್ದಾರೆ. ಧರ್ಮ ಗ್ರಂಥ ಬಗ್ಗೆ ಅವಹೇಳನ ಮಾಡಿದ್ದಾರೆಂದು ಆರೋಪಿಸಿ ಕ್ಷಮೆ ಕೇಳುವಂತೆ ಗೇಟ್ ಹಾಕಿ ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದಾರೆ.