* ಬೆಮೆಲ್‌ ಖಾಸಗೀಕರಣಕ್ಕೆ ಕಾರ್ಮಿಕರ ವಿರೋಧ* ಕಾರ್ಖಾನೆಯ ಗೇಟ್‌ ಮುಂದೆ ಕಾರ್ಮಿಕರ ಪ್ರತಿಭಟನೆ* ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ 

ಕೆಜಿಎಫ್‌(ಫೆ. 05) ಇಲ್ಲಿಯ ಬೆಮೆಲ್‌ (BEML) ಕಾರ್ಖಾನೆಯನ್ನು ಖಾಸಗೀಕರಣ (Privatisation) ಮಾಡದಂತೆ ಒತ್ತಾಯಿಸಿ ಕಾರ್ಖಾನೆಯ ಎಲ್ಲ ಗೇಟ್‌ಗಳ ಮುಂಭಾಗ ಕಾರ್ಮಿಕರು ಪ್ರತಿಭಟನೆ (Protest) ನಡೆಸಿ ಕೇಂದ್ರ ಸರ್ಕಾರದ (Union Govt) ವಿರುದ್ಧ ಘೊಷಣೆಗಳನ್ನು ಕೂಗಿದರು.

Add Asianetnews Kannada as a Preferred SourcegooglePreferred

ಬೆಮೆಲ್‌ ಕಾರ್ಮಿಕರ ಸಂಘದ ಅಧ್ಯಕ್ಷ ಅಂಜೇನೆಯ ರೆಡ್ಡಿ ಮಾತನಾಡಿ, 2021-22 ನೇ ಸಾಲಿನಲ್ಲಿ ಕಾರ್ಖಾನೆ 4500 ಕೋಟಿ ರುಪಾಯಿಗಳ ಟಾರ್ಗೆಟ್‌ ನೀಡಿದ್ದು, ನಾವು 4000 ಕೋಟಿ ರೂಪಾಯಿಗಳ ಕೆಲಸವನ್ನು ಪೂರ್ಣಗೊಳಿಸಲಾಗುವುದು. ಅಲ್ಲದೆ ಈ ವರ್ಷ 200 ಕೋಟಿ ರೂಪಾಯಿಗಳ ಲಾಭವನ್ನು ಬೆಮೆಲ್‌ ಕಾರ್ಖಾನೆ ಪಡೆಯಲಿದೆ ಎಂದರು.

ಲಾಭದಲ್ಲಿರುವ ಕಾರ್ಖಾನೆ ಖಾಸಗೀಕರಣ: ಇಂತಹ ಲಾಭ ತರುವಂತಹ ಕಾರ್ಖಾನೆಯನ್ನು ಕೇಂದ್ರ ಸರಕಾರ ಖಾಸಗಿಯವರಿಗೆ ಮಾರಟ ಮಾಡಲು ಹೊರಟಿರುವುದು ಸರಿಯಲ್ಲ, ಯಾವುದೇ ಕಾರಣಕ್ಕೆ ಕಾರ್ಖಾನೆಯನ್ನು ಮಾರಾಟ ಮಾಡಲು ಬಿಡುವುದಿಲ್ಲ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದೆಂದು ಕಾರ್ಮಿಕ ಮುಖಂಡ ಅಂಜೇನೆಯ ರೆಡ್ಡಿ ಹೇಳಿದರು.

ಜನವರಿ 27 ರಂದು ಪೈನಾನ್ಸಿಯಲ್‌ ಬಿಡ್‌ಇತ್ತು, ಆದರೆ ಕಾರಣಾತಂರಗಳಿಂದ ಫೆಬ್ರವರಿ 27 ಕ್ಕೆ ಮುಂದೂಡಲಾಗಿದೆ. ಬಜೆಟ್‌ನಲ್ಲಿ ಪೈನಾನ್ಸಿಯಲ್‌ ಬಿಡ್‌ನ್ನು ಒಂದು ವರ್ಷಕಾಲ ಮುಂದೂಡುವಂತೆ ಕೇಂದ್ರ ಸರ್ಕಾರ ತಿಳಿಸಿದ್ದರೂ ಬೆಮೆಲ್‌ ಆಡಳಿತ ಮಂಡಳಿ ಒಂದು ತಿಂಗಳ ಕಾಲ ಮುಂದೂಡಿದೆ ಎಂದರು.

Temple Development: ಕರ್ನಾಟಕದ ದೇಗುಲ ಅಭಿವೃದ್ಧಿಗೆ ‘ದೈವ ಸಂಕಲ್ಪ’ ಯೋಜನೆ, ಏನು ವಿಶೇಷ?

50 ವರ್ಷದಿಂದ ಲಾಭದಲ್ಲಿ ಕಾರ್ಖಾನೆ: ಸತತ 50 ವರ್ಷಗಳಿಂದ ಬೆಮೆಲ್‌ ಕಾರ್ಖಾನೆ ಲಾಭಗಳಿಸುತ್ತಾ ಬಂದಿದೆ, ಸಾವಿರಾರು ಕುಂಟುಬಗಳು ಬೆಮೆಲ್‌ ಕಾರ್ಖಾನೆಯಿಂದ ಜೀವನ ನಡೆಸಿವೆ ಇಂತಹ ಕಾರ್ಖಾನೆಯನ್ನು ಖಾಸಗಿಕರಣಗೊಳಿಸುವ ಔಚಿತ್ಯವೇನು ಎಂದು ಪ್ರಶ್ನೆ ಮಾಡಿದರು, 500 ಕೋಟಿಯಲ್ಲಿ ಪ್ರಾರಂಭವಾದ ಕಾರ್ಖಾನೆ 7 ಸಾವಿರ ಕಾರ್ಮಿಕರು, 5 ಸಾವಿರ ದಿನಗೂಲಿ ಕಾರ್ಮಿಕರು ಕಾರ್ಖಾನೆಯಲ್ಲಿ ಕಾರ‍್ಯನಿರ್ವಹಿಸುತ್ತಿದ್ದಾರೆ, ಯಾವುದೇ ಕಾರಣಕ್ಕೂ ಬೆಮೆಲ್‌ ಕಾರ್ಖಾನೆಯನ್ನು ಖಾಸಗಿಕರಣಗೊಳಿಸಲು ಬಿಡುವುದಿಲ್ಲವೆಂದು ಕಾರ್ಮಿಕರು ಪ್ರತಿಭಟನೆಯಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಬಿಡ್ ಆಹ್ವಾನಿಸಲಾಗಿತ್ತು: ಕರ್ನಾಟಕದ ಕೆಜಿಎಫ್‌ನಲ್ಲಿ 1964ರಲ್ಲಿ ಸ್ಥಾಪನೆಯಾದ ಹಾಗೂ ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಬೆಮೆಲ್‌ (ಭಾರತ್‌ ಅಥ್‌ರ್‍ ಮೂವ​ರ್‍ಸ್) ಕಂಪನಿಯ ಸಂಪೂರ್ಣ ಖಾಸಗೀಕರಣಕ್ಕೆ ಕೇಂದ್ರ ಸರ್ಕಾರ ಸಿದ್ಧತೆ ಆರಂಭಿಸಿತ್ತು. ಈ ಕಂಪನಿಯಲ್ಲಿನ ಶೇ.26ರಷ್ಟುಷೇರುಗಳನ್ನು ಮಾರಾಟ ಮಾಡಲು ಹಾಗೂ ಕಂಪನಿಯ ಆಡಳಿತಾತ್ಮಕ ನಿಯಂತ್ರಣವನ್ನೂ ವರ್ಗಾವಣೆ ಮಾಡಲು ಕೇಂದ್ರ ಸರ್ಕಾರ ಪ್ರಾಥಮಿಕ ಬಿಡ್‌ಗಳನ್ನು ಆಹ್ವಾನಿಸಿತ್ತು.

ಬೆಮೆಲ್‌ನಲ್ಲಿ ಸದ್ಯ ಸರ್ಕಾರದ ಶೇ.54.03ರಷ್ಟುಷೇರುಗಳಿದ್ದು, ಸರ್ಕಾರವೇ ಮಾಲೀಕತ್ವ ಗಳಿಸಿದೆ. ಇದೀಗ ಶೇ.26ರಷ್ಟುಷೇರು ಮಾರಾಟವಾದರೆ ಸರ್ಕಾರದ ಪಾಲು ಶೇ.50ಕ್ಕಿಂತ ಕೆಳಕ್ಕೆ ಇಳಿಯಲಿದೆ. ಈ ಷೇರು ವಿಕ್ರಯದಿಂದ ಸರ್ಕಾರದ ಬೊಕ್ಕಸಕ್ಕೆ 1000 ಕೋಟಿ ರು. ಆದಾಯ ಹರಿದು ಬರುವ ನಿರೀಕ್ಷೆ ಇದೆ. ಶುಕ್ರವಾರ ಷೇರುಪೇಟೆಯಲ್ಲಿ ಬೆಮೆಲ್‌ ಕಂಪನಿಯ ಪ್ರತಿ ಷೇರು 974.25 ರು.ಗೆ ವಹಿವಾಟು ಮುಕ್ತಾಯಗೊಳಿಸಿದೆ.

ಷೇರು ವಿಕ್ರಯ ಎರಡು ಹಂತಗಳಲ್ಲಿ ನಡೆಯಲಿದೆ. ಮಾ.1ರೊಳಗೆ ಕಂಪನಿಯ ಷೇರು ಖರೀದಿಸಲು ಬಯಸುವವರು ಆಸಕ್ತಿ ವ್ಯಕ್ತಪಡಿಸುವಿಕೆ ಅರ್ಜಿಯನ್ನು ಸಲ್ಲಿಸಬೇಕು ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆಯ ಕಾರ್ಯದರ್ಶಿ ತುಹಿನ್‌ ಕಾಂತಾ ಪಾಂಡೆ ಅವರು ಟ್ವೀಟ್‌ ಮಾಡಿದ್ದಾರೆ. ಷೇರು ವಿಕ್ರಯಕ್ಕಾಗಿ ಕೇಂದ್ರ ಸರ್ಕಾರ ಎಸ್‌ಬಿಐ ಕ್ಯಾಪಿಟಲ್‌ ಮಾರ್ಕೆಟ್‌ ಸಂಸ್ಥೆಯನ್ನು ಸಲಹೆಗಾರ ಸಂಸ್ಥೆಯನ್ನಾಗಿ ನೇಮಕ ಮಾಡಿತ್ತು. ರಕ್ಷಣೆ, ರೈಲು, ವಿದ್ಯುತ್‌, ಗಣಿಗಾರಿಕೆ ಹಾಗೂ ಮೂಲಸೌಕರ್ಯದಂತಹ ಕ್ಷೇತ್ರಗಳಲ್ಲಿ ಬೆಮೆಲ್‌ ಕಂಪನಿ ತೊಡಗಿಸಿಕೊಂಡಿತ್ತು.