Sindhutai Sapkal: ವಾತ್ಸಲ್ಯದ ಸಿಂಧು, ಅನಾಥರ ಬಂಧುವಾಗಿದ್ದ ಸಿಂಧುತಾಯಿ ಸಪ್ಕಾಲ್

By Suvarna NewsFirst Published Jan 5, 2022, 10:39 AM IST
Highlights

ಸಾಕು, ಈ ನಾಯಿ ಪಾಡು ಸತ್ತು ಬಿಡೋಣವೆಂದು ನಿರ್ಧರಿಸಿ, ಮರದ ಕೆಳಗೆ ನಿಂತಿದ್ದಳು. ಆ ಮರವೇ ಆಕೆಗೆ ಆದರ್ಶವಾಯಿತು. ಮರದಂತೆ ಆದಷ್ಟು ಜನರಿಗೆ ನೆರಳು ಕೊಡೋಣವೆಂದು ನಿರ್ಧರಿಸಿದಳು. ಸಾಯುವ ಯೋಚನೆಗೆ ಎಳ್ಳು ನೀರು ಬಿಟ್ಟಳು.

ಸಿಂಧುಗೆ ಬಾಲ್ಯ ವಿವಾಹ (Child Marriage)ವಾಗಿತ್ತು. ನಾಲ್ಕು ಮಕ್ಕಳ ತಾಯಿಯೂ ಆಗಿದ್ದಳು. ತುಂಬು ಗರ್ಭಿಣಿಯನ್ನೇ ಕಟುಕ ಗಂಡ ಶ್ರೀಹರಿ ಸಪ್ಕಾಲ್ ಹೊರ ಹಾಕಿದ್ದ. ಗರ್ಭಿಣಿ ಆ ಹೊಟ್ಟೆ ಹೊತ್ಕೊಂಡು ಹೋಗುವುದಾದರೂ ಎಲ್ಲಿಗೆ? ಮನೆಯ ಕೊಟ್ಟಿಗೆಯಲ್ಲಿಯೇ ಕೆಲ ಕಾಲ ಕಳೆದಳು. ಅಸಹನೀಯ ಬದುಕು ಕಷ್ಟವೆನಿಸಿತು. ಒಂದೆರಡು ದಿನ ಅಲ್ಲಿ ಇಲ್ಲಿ ಭಿಕ್ಷೆ ಬೇಡಿದಳು. ಬದುಕೋದು ಅಂದುಕೊಂಡಷ್ಟು ಸುಲಭವಿರಲಿಲ್ಲ. ಸಾಕು, ಈ ನಾಯಿ ಪಾಡು ಸತ್ತು ಬಿಡೋಣವೆಂದು ನಿರ್ಧರಿಸಿ, ಮರದ ಕೆಳಗೆ ನಿಂತಿದ್ದಳು. ಆ ಮರವೇ ಆಕೆಗೆ ಆದರ್ಶವಾಯಿತು.

ಕೋವಿಡ್‌ ಚಿಕಿತ್ಸೆ ಮಾತ್ರೆಗೆ 35 ರು. : ಮುಂದಿನ ವಾರ ಮಾರುಕಟ್ಟೆಗೆ

ಮರದಂತೆ ಆದಷ್ಟು ಜನರಿಗೆ ನೆರಳು ಕೊಡೋಣವೆಂದು ನಿರ್ಧರಿಸಿದಳು. ಸಾಯುವ ಯೋಚನೆಗೆ ಎಳ್ಳು ನೀರು ಬಿಟ್ಟಳು. ಅಲ್ಲಿಂದ ಆರಂಭವಾಯಿತು ಈ ತಾಯಿಯ ಯಶೋಗಾಥೆ (Success Story). ನಾಲ್ಕು ಮಕ್ಕಳಿಗೆ ಆಗಲೇ ತಾಯಿಯಾಗಿದ್ದ ಆ ಅಮ್ಮ ತನ್ನ ಮಾತೃತ್ವ(Motherhood)ಅನ್ನು ಜಾಗೃತಿಗೊಳಿಸಿದಳು. ನೆರಳು (Shadow) ಬಯಸಿ ಬಂದವರಿಗೆಲ್ಲಾ ಆಲದ ಮರದಂತೆ ತಂಪೆನ್ನೆರೆದಳು. ಇಡೀ ವಿಶ್ವವೇ ಅವಿದ್ಯಾವಂತ (illiterate) ಮಾಯಿಯ ಸಾಧನೆಯನ್ನು ನೋಡಿ ಬೆರಗಾಗುವಂತೆ ಬಾಳಿ, ಬದುಕಿದಳು. 

ಅಕಸ್ಮಾತ್ ಅವತ್ತೇ ಅವಳು ಆತ್ಮಹತ್ಯೆ (Suicide) ಮಾಡಿಕೊಂಡಿದ್ದರೆ ಸಾವಿರಾರು ಮಕ್ಕಳಿಗೆ ತಾಯಿಯಾಗುವ ಭಾಗ್ಯವನ್ನೇ ಕಳೆದುಕೊಳ್ಳುತ್ತಿದ್ದಳು ಈ ತಾಯಿ. ಈ ಅಮ್ಮನ ಜೀವನಾಧಾರಿತ ಕಥೆ 'ಮೀ ಸಿಂಧೂ ತಾಯಿ ಸಪ್ಕಾಲ್' 58ನೇ ಚಲನ ಚಿತ್ರೋತ್ಸವದಲ್ಲಿ(58th Film Festival) ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಮರಾಠಿ ಶೈಲಿಯಲ್ಲಿ ಒಂಬತ್ತು ಮೊಳದ ಸೀರೆಯುಟ್ಟು ಜನರ ಮುಂದೆ ಅನಾಥರ ರಕ್ಷಣೆಗಾಗಿ ದೇಣಿಗೆ ನೀಡಲು ಕೋರಿ ನಾಲ್ಕು ಮಾತನಾಡಿದರೆ ಸಾಕು, ಈಕೆಯ ಮಡಿಲ ತುಂಬಾ ಹಣ ಬಂದು ಬೀಳುತ್ತಿತ್ತು. ಇವಳ ಆಶ್ರಯದಲ್ಲಿ ಬೆಳೆದ ಮಕ್ಕಳೇ ನಂತರ ಅವರಿಗೆ ಬೆನ್ನೆಲುಬಾಗಿ ನಿಂತರು. ಅವರೇ ಮತ್ತಷ್ಟು ಮಕ್ಕಳಿಗೆ ಆಶ್ರಯ ನೀಡುವಂತಾಯಿತು. 

ತಂದೆಯ ಬೆಂಬಲ:

ಸಿಂಧೂ, ಅಭಿಮಾನ ಸಾಥೆ ಎಂಬ ಅನಕ್ಷರಸ್ಥ ದನ ಕಾಯುವವನ ಮಗಳು. ಮಗಳನ್ನು ವಿದ್ಯಾವಂತೆಯನ್ನಾಗಿಸುವ ಆಸೆ ತಂದೆಗಿತ್ತು. ಆದರೆ, ಹೆಂಡತಿಯೇ ಅದಕ್ಕೆ ಅಡ್ಡಿಯಾಗಿದ್ದಳು. ಆದರೂ, ಮಗಳನ್ನು ದನ ಕಾಯುವ ನೆಪದಲ್ಲಿ ಹೊರಗೆ ಕರೆದುಕೊಂಡು ಹೋಗಿ ನಾಲ್ಕನೇ ತರಗತಿಯವರಿಗೆ ಓದಿಸಿದ್ದ. ಆಸಕ್ತಿ ಇದ್ದ ಮಗಳೂ ದಪ್ಪದ ಸ್ಲೇಟ್, ಎಲೆಗಳ ಮೇಲೆಯೇ ಅಕ್ಷರ ಬರೆದು ಕಲಿತಳು. ಹತ್ತು ವರ್ಷಗಳಿರುವಾಗಲೇ ಶ್ರೀ ಹರಿ ಸಪ್ಕಾಲ್ ಎಂಬ ಗಂಡನೊಂದಿಗೆ ಮದುವೆಯೂ ಆಗಿದ್ದಳು. 

ಜೀವನ ಬದಲಾಗಿದ್ದು

1972ರಲ್ಲಿ ಆದಿವಾಸಿಗಳು (Tribal People) ಶೇಖರಿಸಿಟ್ಟಿದ್ದ ಸಗಣಿಯನ್ನು ಅರಣ್ಯ ಇಲಾಖೆ ಹರಾಜು ಮೂಲಕ ಭೂ ಮಾಲೀಕರಿಗೆ ಮಾರಿ ದುಡ್ಡು ಮಾಡಿಕೊಳ್ಳುತ್ತಿತ್ತು. ಆಗ, ಅದನ್ನು ಸಂಗ್ರಹಿಸಿದ ಹೆಣ್ಣು ಮಕ್ಕಳಿಗೆ ಹಣ ನೀಡುವಂತೆ ಸಿಂಧೂ ದನಿ ಎತ್ತಿದಳು. ಅದರಲ್ಲಿ ಯಶಸ್ವಿಯೂ ಆದಳು. ಇವತ್ತಿಗೂ ಈಕೆಯ ಹೋರಾಟದ ಫಲವಾಗಿ ಆದಿವಾಸಿಗಳು ಸಂಗ್ರಹಿಸಿದ ಸಗಣಿಗೆ ಸರಿಯಾಗಿ ಹಣ ಸಿಗುತ್ತಿದೆ. ಈ ಘಟನೆ ಕೆಲವು ಭೂ ಮಾಲೀಕರ (Land owners)ಕಣ್ಣನ್ನು ಕೆಂಪಾಗಿಸಿತು. ದಾಮ್ದಾಜಿ ಅಸತ್ಕರ್ ಎಂಬವನೊಬ್ಬ ಸಿಂಧೂ ಉದರದಲ್ಲಿ ಬೆಳೆಯುತ್ತಿರುವ ಭ್ರೂಣ ತನ್ನದೆಂದು ಗಾಳಿ ಸುದ್ದಿ ಹರಡಿಸಿದ. ಅಷ್ಟು ಸಾಕಾಯಿತು ಗಂಡ ಎಂಬ ಮಹಾಪುರುಷ ಆಕೆಯನ್ನು ಬೀದಿಗೆ ತಳ್ಳಲು. ಮಾನಸಿಕವಾಗಿ ಹಿಂಸಿಸಿ ಮನೆಯಿಂದ ಹೊರ ಹಾಕಿದ. ಕೆಲ ಕಾಲವಿದ್ದು ಕೊಟ್ಟಿಗೆಯಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಅಲ್ಲಿದ್ದ ಚೂಪಾದ ಕಲ್ಲಿನಿಂದಲೇ ಮಗುವಿನ ಹೊಕ್ಕಳ ಬಳ್ಳಿ ಕಟ್ ಮಾಡಿದ್ದಳು. ಒಟ್ಟಿನಲ್ಲಿ ಈ ತಾಯಿ ಶತಮಾನದ ಹೆಣ್ಣು ಮಗಳು. 

ಕರ್ನಾಟಕದಲ್ಲೂ ಈ ತಾಯಿ ಪಠ್ಯ

1998ರಲ್ಲಿ ಮಹಾರಾಷ್ಟ್ರ ಸರ್ಕಾರ (Maharashtra Government) ನೀಡಿರುವ ಸಾವಿತ್ರಬಾಯಿ ಫುಲೆ ಪ್ರಶಸ್ತಿ (Savitribai Phule Award) ಸೇರಿದಂತೆ ನೂರಾರು ಪ್ರಶಸ್ತಿ ಪುರಸ್ಕಾರಗಳು ಈ ಅಮ್ಮನ ಮಡಿಲು ಸೇರಿವೆ. ಈ ತಾಯಿಯ ಜೀವನ ಚರಿತ್ರೆ 'ಮೀ ವನವಾಸಿ'ಯಿಂದ ಆಯ್ತ ಭಾಗವನ್ನು ಕರ್ನಾಟಕ ಸರಕಾರದ 10ನೇ ತರಗತಿ ಮರಾಠಿ ಪಠ್ಯದಲ್ಲೂ ಸೇರಿಸಿತ್ತು. 'ಕೃಷ್ಣನನ್ನು ಹೆತ್ತ ದೇಕಿಯಂತಾಗಲು ಆಗದೇ ಹೋದರೂ, ಅವನನ್ನು ಸಾಕಿದ ಪರಿಪೂರ್ಣ ಯಶೋಧಾ ಆಗಲು ಬಯಸುತ್ತೇನೆ,' ಎಂದು ನಿಷ್ಕಲ್ಮಷ ಮನಸ್ಸಿನಿಂದ ಹೇಳುವುದಲ್ಲದೇ, ಎಷ್ಟೋ ಮಕ್ಕಳಿಗೆ ನೈಜ ತಾಯಿಯಾದ ಸಿಂಧೂ ತಾಯಿ ಆತ್ಮಕ್ಕೆ ಶಾಂತಿ ಸಿಗಲಿ.

click me!