ಮಗನ ಅಂತಿಮ ದರ್ಶನವನ್ನು ವಿಡಿಯೋ ಕಾಲ್‌ನಲ್ಲಿ ವೀಕ್ಷಿಸಿ ಕಣ್ಣೀರಿಟ್ಟ ಸುರೇಶ್ ಅಂಗಡಿ ತಾಯಿ

Sep 25, 2020, 4:14 PM IST

ಬೆಂಗಳೂರು (ಸೆ. 25): ಕೊರೊನಾ ಸೋಂಕಿಗೆ ತುತ್ತಾಗಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ , ಬೆಳಗಾವಿ ಸಂಸದ ಸುರೇಶ್ ಅಂಗಡಿ ವಿಧಿವಶರಾಗಿದ್ದಾರೆ. ಸುರೇಶ್ ಅಂಗಡಿಯವರಿಗೆ ಸೆ. 11 ರಂದು ಸೋಂಕು ದೃಡಪಟ್ಟಿತ್ತು. ಆರಂಭದಲ್ಲಿ ಕೋವಿಡ್‌ನ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದಿದ್ದರೂ ಆ ನಂತರ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ.

ಬಳಿಕ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೆ. 23 ರಂದು ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾದರು. ದೆಹಲಿಯ ದ್ವಾರಕಾ ಸೆಕ್ಟರ್‌- 24 ರಲ್ಲಿನ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು. ಅತ್ತ ಅಂತ್ಯಕ್ರಿಯೆ ನಡೆಯುತ್ತಿದ್ದರೆ ಇತ್ತ ಬೆಳಗಾವಿಯ ನಿವಾಸದಲ್ಲಿ ತಾಯಿ ಸೋಮವ್ವ ಅವರ ಸಂಕಟ, ವೇದನೆ ಹೇಳತೀರದ್ದಾಗಿತ್ತು. ಮಗನನ್ನು ಅಂತಿಮವಾಗಿ ನೋಡಲು ಆಗಲಿಲ್ಲವಲ್ಲ ಎಂದು ಕಣ್ಣೀರಿಡುತ್ತಿದ್ದರು. 

ಕೋವಿಡ್ ನಿಯಮಾನುಸಾರ ಅಂಗಡಿಯವರ ಪಾರ್ಥೀವ ಶರೀರವನ್ನು ಹುಟ್ಟೂರಿಗೆ ತರಲಾಗಲಿಲ್ಲ. ತಾಯಿ ಸೋಮವ್ವ ಮಗನ ಅಂತ್ಯಕ್ರಿಯೆಯನ್ನು ವಿಡಿಯೋ ಕಾಲ್‌ನಲ್ಲಿ ವೀಕ್ಷಿಸಿದರು. ಮಗನ ಅಂತಿಮ ದರ್ಶನವನ್ನು ವಿಡಿಯೋ ಕಾಲ್‌ನಲ್ಲಿ ವೀಕ್ಷಿಸಿ ಸುರೇಶ್ ಅಂಗಡಿ ತಾಯಿ ಕಣ್ಣೀರಿಟ್ಟಿದ್ದಾರೆ. ಈ ದೃಶ್ಯ ಮನಕಲಕುವಂತಿತ್ತು.